ನಾನು ಎಂ.ಕೆ ಸ್ಟಾಲಿನ್. ತುರ್ತು ಪರಿಸ್ಥಿತಿಯನ್ನು ಎದುರಿಸಿದವನು. ನಿಮ್ಮ ಈ ಐಟಿ ದಾಳಿಗೆ ಬೆದರುವವನಲ್ಲ, ನಾವು ಎಐಎಡಿಎಂಕೆ ನಾಯಕರಲ್ಲ ಎಂಬುದನ್ನು ನರೇಂದ್ರ ಮೋದಿಯವರು ಮರೆಯಬಾರದು ಎಂದು ಡಿಎಂಕೆ ಮುಖಂಡ ಸ್ಟಾಲಿನ್ ತಮ್ಮ ಅಳಿಯ ಮತ್ತು ಮಗಳ ಮನೆ ಮೇಲಿನ ಐಟಿ ದಾಳಿಗೆ ಪ್ರತಿಕ್ರಿಯಿಸಿದ್ದಾರೆ.
ಪೆರಂಬಲೂರ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, “ನಾನು ಇಂದು ಬೆಳಿಗ್ಗೆ ಚನ್ನೈನಿಂದ ತಿರುಚಿಗೆ ಬಂದಿದ್ದೇನೆ. ಚನ್ನೈನಲ್ಲಿನ ನನ್ನ ಮಗಳ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂಬ ಸುದ್ದಿ ತಿಳಿಯಿತು. ನರೇಂದ್ರ ಮೋದಿ ಸರ್ಕಾರ ತಮಿಳುನಾಡಿನಲ್ಲಿ ಎಐಎಡಿಎಂಕೆ ಸರ್ಕಾರವನ್ನು ಉಳಿಸಲು ಶತಪ್ರಯತ್ನ ಮಾಡುತ್ತಿದೆ. ನಾನು ನರೇಂದ್ರ ಮೋದಿಯವರಿಗೆ ಹೇಳಲು ಬಯಸುತ್ತೇನೆ, ಇದು ಡಿಎಂಕೆ ಪಕ್ಷ ಎಂಬುದನ್ನು ಮರೆಯಬೇಡಿ. ನಾನು ಕಲೈಜ್ಞರ್ (ಕರುಣಾನಿಧಿ)ಯವರ ಮಗ. ನಾನು ಯಾವುದಕ್ಕೂ ಹೆದರುವುದಿಲ್ಲ” ಎಂದು ಸ್ಟಾಲಿನ್ ಸವಾಲು ಹಾಕಿದ್ದಾರೆ.
ತಮಿಳುನಾಡು ಚುನಾವಣೆಗೆ 4 ದಿನ ಬಾಕಿ ಇರುವಂತೆ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಮಗಳು ಸೆಂಥಮರಾಯ್, ಅಳಿಯ ಸಬರೀಸನ್ ವಾಸಿಸುತ್ತಿರುವ ನೀಲಂಗರೈನಲ್ಲಿರುವ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ನಾಲ್ಕು ಮನೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಏಪ್ರಿಲ್ 06 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಈ ಐಟಿ ದಾಳಿ ನಡೆದಿರುವುದು ಹಲವರು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ತಿಂಗಳಷ್ಟೇ ಡಿಎಂಕೆ ಹಿರಿಯ ಮುಖಂಡ ಮತ್ತು ಅಭ್ಯರ್ಥಿ ಇ.ವಿ ವೇಲುರವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು.
ಚುನಾವಣೆ ಹತ್ತಿರದಲ್ಲಿ ನಡೆದ ಐಟಿ ದಾಳಿಯನ್ನು ಖಂಡಿಸಿರುವ ಡಿಎಂಕೆ, “ಐಟಿ ಇಲಾಖೆಯು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ತೆರಿಗೆ ಅಧಿಕಾರಿಗಳು “ಎಐಎಡಿಎಂಕೆ-ಬಿಜೆಪಿಯ ಚುನಾವಣಾ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಡಿಎಂಕೆ ಆರೋಪಿಸಿದ್ದು, ತೆರಿಗೆ ಇಲಾಖೆಯನ್ನು ಉನ್ನತ ಸ್ಥಾನಕ್ಕೆ ತರಲು ಚುನಾವಣಾ ಸಂಸ್ಥೆಯನ್ನು ಒತ್ತಾಯಿಸಿದೆ.
ಇನ್ನು ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್, “ನಾನು ನನ್ನ ಹೆಸರಿನಲ್ಲಿರುವ ಎಲ್ಲಾ ಆಸ್ತಿಯನ್ನು ಅಮಿತ್ ಶಾರವರ ಮಗ ಜಯ್ಶಾರವರ ಹೆಸರಿಗೆ ಬರೆದುಕೊಡುತ್ತೇನೆ. ಅವರು ಅದೇ ರೀತಿ ಮಾಡಲು ಸಿದ್ದರಿದ್ದಾರ?” ಎಂದು ಸವಾಲು ಹಾಕಿದ್ದಾರೆ.
“ಅಮಿತ್ ಷಾ ಅವರ ಕೆಲಸವೆಂದರೆ ಇತರರನ್ನು ಬೆದರಿಸುವುದು ಮತ್ತು ಚುನಾಯಿತ ಸರ್ಕಾರಗಳನ್ನು ಉರುಳಿಸುವುದು… ನಾನು ಅವರಿಗೆ ಹೆದರುವುದಿಲ್ಲ, ನಾನು ಕಲೈಜ್ಞರ್ (ಕರುಣಾನಿಧಿ) ಯವರ ಮೊಮ್ಮಗ” ಎಂದು ಉದಯನಿಧಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅಳಿಯನ ಮನೆ ಮೇಲೆ ಐಟಿ ದಾಳಿ