ಇದೇನು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರ ಹೇರಿರುವ ಅಘೋಷಿತ ಲಾಕ್ಡೌನ್ ಬಗ್ಗೆ ಗುರುವಾರ ಕಿಡಿ ಕಾರಿದ್ದಾರೆ. ರಾಜ್ಯ ಸರ್ಕಾರ ನಿನ್ನೆ ಏಕಾಏಕಿ ಕೊರೊನಾ ಮಾರ್ಗಸೂಚಿಗಳಲ್ಲಿ ಬದಲಾವಣೆ ತಂದು ಆದೇಶ ಹೊರಡಿಸಿತ್ತು. ಇದರಿಂದಾಗಿ ಸಾರ್ವಜನಿಕರು ಕಷ್ಟ ಪಡುವಂತಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಇದೇನು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ? ಕ್ಷಣ ಕ್ಷಣಕ್ಕೂ ಬದಲಾಗುವ ನಿರ್ಧಾರ- ಮಾರ್ಗಸೂಚಿಗಳು, ಅಘೋಷಿತ ಲಾಕ್ಡೌನ್, ಅಮಾಯಕ ಜನತೆ ಮೇಲೆ ದೌರ್ಜನ್ಯ..ಏನಿದು ಮುಖ್ಯಮಂತ್ರಿಗಳೇ, ಆಡಳಿತ ನಡೆಸಲಾಗದಿದ್ದರೆ ಕುರ್ಚಿಬಿಟ್ಟು ತೊಲಗಿ, ಜನರನ್ನು ಯಾಕೆ ಗೋಳು ಹೊಯ್ಕೊಳ್ತೀರಿ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಗತ್ಯ ಸೇವೆ ಬಿಟ್ಟು ಎಲ್ಲಾ ಬಂದ್: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
“ಕೊರೊನಾ ಉಲ್ಭಣಗೊಂಡಿರುವುದು ಸರ್ಕಾರದ ನಿರ್ಲಕ್ಷ್ಯ, ನಿಷ್ಕ್ರಿಯತೆ ಮತ್ತು ದುರಾಡಳಿತದಿಂದ. ತಮ್ಮ ವೈಫಲ್ಯ ಮುಚ್ಚಿಹಾಕಲು ಪೊಲೀಸರ ಕೈಗೆ ಲಾಠಿ ಕೊಟ್ಟು ಬೀದಿಗಿಳಿಸಿದರೆ ಕೊರೊನಾ ಓಡಿಹೋಗುವುದೇ ಯಡಿಯೂರಪ್ಪ ಅವರೇ?” ಎಂದು ಅವರು ಪ್ರಶ್ನಿಸಿದ್ದಾರೆ.
“ಲಾಕ್ಡೌನ್, ಬಂದ್, ಕರ್ಪ್ಯೂ…..ಇನ್ನೇನೋ, ಯಾವ ನಿರ್ಧಾರ ಕೈಗೊಳ್ಳುವುದಿದ್ದರೂ ಜನರಿಗೆ ಮನವರಿಕೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ವ ಸಿದ್ದತೆಯೊಡನೆ ಮಾಡಿ. ತಟ್ಟೆ ಬಡಿಯುವ, ಕ್ಯಾಂಡಲ್ ಹಚ್ಚುವ ಶೈಲಿಯ ಇಂತಹ ತುಘಲಕ್ ದರ್ಬಾರ್ ಪುನರಾವರ್ತನೆ ಮಾಡಬೇಡಿ” ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನ 25 ಸಾವಿರ ಗಡಿ ದಾಟಿದ ಕೊರೊನಾ ಪ್ರಕರಣಗಳು


