ಬಿಹಾರದ ಪ್ರಮುಖ ಪಕ್ಷವಾದ ಲೋಕ ಜನಶಕ್ತಿ ಪಕ್ಷ(ಎಲ್ಜೆಪಿ)ವು ಒಡೆದು ಹೋಗಿದ್ದು ಇದರ ಲಾಭವನ್ನು ರಾಜ್ಯದ ವಿರೋಧ ಪಕ್ಷವಾದ ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಪಡೆಯಲು ಮುಂದಾಗಿದ್ದಾರೆ. ಅವರು ಎಲ್ಜೆಪಿಯ ನಾಯಕ ಚಿರಾಗ್ ಪಾಸ್ವಾನ್ ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ಯತ್ನಿಸಿದ್ದು, “ಪಾಸ್ವಾನ್ ಅವರ ಮುಂದೆ ಎರಡು ಆಯ್ಕೆಗಳಿವೆ, ಅವರು ಆರೆಸ್ಸೆಸ್ ಆಯ್ಕೆ ಮಾಡುತ್ತಾರೋ ಅಥವಾ ಅಂಬೇಡ್ಕರ್ ರಚಿಸಿದ ಶ್ರೇಷ್ಠ ಸಂವಿಧಾನವನ್ನು ಆಯ್ಕೆ ಮಾಡುತ್ತಾರೋ ನಿರ್ಧರಿಸಬೇಕು” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಕಳೆದ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿಶ್ ಕುಮಾರ್ ವಿರುದ್ದ ದಂಗೆ ಎದ್ದಿದ್ದ ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದಿಂದ ಹೊರ ನಡೆದಿತ್ತು. ನಂತರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಲ್ಜೆಪಿ, ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ತೀವ್ರ ಹೊಡೆತ ನೀಡಿತ್ತು.
ಇತ್ತೀಚೆಗೆ ಎಲ್ಜೆಪಿ ಒಳಗಿನ ಆಂತರಿಕ ದಂಗೆಯಿಂದ ಪಕ್ಷ ಒಡೆದು ವಿಭಜನೆಯಾಗಿದೆ. ಇದಕ್ಕೆ ನಿತೀಶ್ ಕುಮಾರ್ ಕಾರಣವಾಗಿದ್ದು, ಅವರು ವಿಧಾನಸಭಾ ಚುನಾವಣೆಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಲಾಗಿದೆ.
ಇದನ್ನೂ ಓದಿ: ಕೊರೊನಾ ಟೆಸ್ಟ್ ತಪ್ಪಿಸಿಕೊಳ್ಳಲು ರೈಲು ನಿಲ್ದಾಣಗಳಿಂದ ಎದ್ದು ಬಿದ್ದು ಓಡಿದ ಪ್ರಯಾಣಿಕರು: ಬಿಹಾರದಲ್ಲಿ ಇದು ನಿತ್ಯದ ವಿದ್ಯಮಾನ!
ಈ ನಡುವೆ, ಚಿರಾಗ್ ಪಾಸ್ವಾನ್ ಅವರ ತಂದೆ, ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಜನ್ಮದಿನವಾದ ಜುಲೈ 5 ರಂದು ಗೌರವ ಸಲ್ಲಿಸಲು ತೇಜಸ್ವಿ ಯಾದವ್ ಯೋಜಿಸುತ್ತಿದ್ದಾರೆ. ಅದೇ ದಿನ ತೇಜಸ್ವಿ ಯಾದವ್ ಅವರ ಪಕ್ಷವಾದ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಪಕ್ಷದ ಸಂಸ್ಥಾಪನಾ ದಿನವೂ ಆಗಿದ್ದು, ಅಂದಿನ ಕಾರ್ಯಕ್ರಮದಲ್ಲಿ ಕಳೆದ ವರ್ಷ ಅಕ್ಟೋಬರ್ನಲ್ಲಿ ನಿಧನರಾದ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ.
ಚಿರಾಗ್ ಪಾಸ್ವಾನ್ ಕೂಡಾ ಅಂದೇ ಬಿಹಾರದಲ್ಲಿ ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಹಾಜಿಪುರದಿಂದ ರಾಜ್ಯವ್ಯಾಪಿ ರೋಡ್ ಶೋ ಪ್ರಾರಂಭಿಸಲು ಯೋಜಿಸಿದ್ದಾರೆ.
ತಮ್ಮ ತಂದೆಯ ನಿಧನ ನಂತರ, ನಾಯಕತ್ವಕ್ಕಾಗಿ ದಂಗೆ ಎದ್ದಿದ್ದ ಚಿರಾಗ್ ಅವರ ಚಿಕ್ಕಪ್ಪ ಪಶುಪತಿ ಪರಾಸ್ ಅವರು ಐದು ಸಂಸದರ ಬೆಂಬಲ ಪಡೆದು, ಚಿರಾಗ್ ಅವರನ್ನು ಪಕ್ಷದ ಉನ್ನತ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಅಲ್ಲದೆ, ಎಲ್ಜೆಪಿಯ ನಾಯಕರಾಗಿ ಅಧಿಕಾರ ಕಸಿದುಕೊಂಡಿದ್ದಾರೆ. ಇದರಿಂದ ವಿಚಲಿತರಾಗಿದರುವ ಚಿರಾಗ್ ತಮ್ಮ ವರ್ಚಸ್ಸು ತೋರಿಸಲು ರಾಜ್ಯಾದ್ಯಂತ ರೋಡ್ ಶೋ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೋವಿಡ್ ಸಾವುಗಳ ಸಂಖ್ಯೆ ಮುಚ್ಚಿಟ್ಟ ಬಿಹಾರ: ಅತಿ ಹೆಚ್ಚು ಏಕದಿನ ಸಾವುಗಳನ್ನು ದಾಖಲಿಸಿದ ಭಾರತ
ಎಲ್ಜೆಪಿಯಲ್ಲಾಗಿರುವ ಎಲ್ಲಾ ಬೆಳವಣಿಗೆಗಳಿಗೆ, ಮುಖ್ಯವಾಗಿ ಎಲ್ಜೆಪಿ ವಿಭಜನೆಯ ಹಿಂದೆ ಬಿಹಾರ ಸಿಎಂ ನಿತೀಶ್ ಕುಮಾರ್ ಮಾಸ್ಟರ್ ಮೈಂಡ್ ಕೆಲಸ ಮಾಡಿದೆ. ಈ ಹಿಂದೆ 2005 ಮತ್ತು 2010 ರಲ್ಲಿ ಎಲ್ಜೆಪಿ ಇದೇ ರೀತಿ ವಿಭಜನೆಯಾಗಲು ನಿತೀಶ್ ಕುಮಾರ್ ಅವರ ಜೆಡಿಯು ಅನುಕೂಲ ಮಾಡಿಕೊಟ್ಟಿತ್ತು ಎಂಬುದನ್ನು ಚಿರಾಗ್ ಪಾಸ್ವಾನ್ ಅವರಿಗೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ನೆನಪಿಸಿದ್ದಾರೆ.
ಮತ್ತೊಂದೆಡೆ, ರಾಮ್ ವಿಲಾಸ್ ಪಾಸ್ವಾನ್ ಅವರು ಲೋಕಸಭಾ ಚುನಾವಣೆಯಲ್ಲಿ ಸೋತಾಗ, ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ತಮ್ಮ ತಂದೆ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಹಾಯ ಮಾಡಿದ್ದಾರೆ. ಅಲ್ಲದೆ, ಪಾಸ್ವಾನ್ ಅವರು ಎನ್ಡಿಎ ಮೇಲಿನ ಏಕಪಕ್ಷೀಯ ಪ್ರೀತಿಯ ಬಗ್ಗೆ ಯೋಚಿಸಬೇಕು. ಅವರು ಯಾರೊಂದಿಗೆ ನಿಲ್ಲಲು ಬಯಸುತ್ತಾರೆ ಎದು ನಿರ್ಧರಿಸುವ ಕಾಲ ಇದಾಗಿದೆ ಎಂದೂ ತೇಜಸ್ವಿ ಯಾದವ್ ಹೇಳಿದ್ದಾರೆ
“ಚಿರಾಗ್ ಮುಂದೆ ಎರಡು ಆಯ್ಕೆಗಳಿವೆ ಒಂದು ಆರೆಸ್ಸೆಸ್ ಮುಖಂಡ ಎಂ.ಎಸ್. ಗೋಲ್ವಾಲ್ಕರ್ ಬರೆದ ಬಂಚ್ ಆಫ್ ಥಾಟ್, ಇನ್ನೊಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ. ಇದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅವರು ನಿರ್ಧರಿಸಬೇಕು” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಇದು ರಾಹುಲ್ ಗಾಂಧಿಯ ವಯನಾಡ್ ಕ್ಷೇತ್ರವಲ್ಲ – ಬಿಹಾರದ ಹಳೆಯ ರಸ್ತೆಯ ಚಿತ್ರ
ತೇಜಸ್ವಿ ಯಾದವ್ ಮತ್ತು ಚಿರಾಗ್ ಪಾಸ್ವಾನ್ ಒಂದುಗೂಡಿ ಮನುವಾದಿಗಳನ್ನು ಎದುರಿಸಬೇಕು.