“ಕರಾಳ ಯುಎಪಿಎ ವಿರೋಧಿ ಸಮಾನ ಮನಸ್ಕರ ವೇದಿಕೆ” ಆಶ್ರಯದಲ್ಲಿ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿಯವರ ಶ್ರದ್ಧಾಂಜಲಿ ಹಾಗೂ ಸಾರ್ವಜನಿಕ ಹಕ್ಕೊತ್ತಾಯದ ಬಹಿರಂಗ ಸಭೆ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಬುಧವಾರ ನಡೆಯಿತು. ವಿವಿಧ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಹಾಗೂ ನೂರಾರು ಮಂದಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ಕರಾಳ UAPA, NIA ರದ್ದಾಗಬೇಕು ಮತ್ತು ಬಂಧಿತ ಹೋರಾಟಗಾರರ ಬಿಡುಗಡೆಯಾಗಬೇಕು ಎಂದು ಆಗ್ರಹಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ವಕೀಲ ಕೆ. ಬಾಲನ್, “ಯುಎಪಿಎ ಮತ್ತು ಎನ್ಐಎ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿಯೇ ಕಾಯ್ದೆಯಾಗಿ ಬಂದಿತ್ತು. ಅದರೊಳಗೆ ಜಗತ್ತಿನ ಎಲ್ಲೂ ಇಲ್ಲದ ಅತಿ ಕ್ರೂರವೂ, ಮಾನವೀಯತೆಗೆ ವಿರುದ್ಧವೂ ಆದ ಮತ್ತಷ್ಟು ಕಲಂಗಳನ್ನು ಕಾಲಕಾಲಕ್ಕೆ ಸೇರಿಸಿದ್ದಲ್ಲದೆ, ಅದರ ನಿರಾತಂಕ ಜಾರಿಗಾಗಿ ಎನ್ಐಎ ತನಿಖಾ ಸಂಸ್ಥೆಯನ್ನೂ ಸ್ಥಾಪಿಸಲಾಯಿತು. ನಂತರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಇವುಗಳ ವ್ಯಾಪ್ತಿ ಮತ್ತು ಅಧಿಕಾರಗಳನ್ನು ಮತ್ತಷ್ಟು ಹಿಗ್ಗಿಸಿ ಇವತ್ತಿನ ಅಕರಾಳ ವಿಕರಾಳ ಸ್ವರೂಪಕ್ಕೆ ತಂದಿಟ್ಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಫಾದರ್ ಸ್ಟಾನ್ ಸ್ವಾಮಿಯವರನ್ನು ಕೊಲ್ಲಲಾಗಿದೆ: ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪ
“ಈ ಎಲ್ಲ ಪಕ್ಷಗಳಿಗೂ ನೆಲ-ಜಲ-ಖನಿಜ ಮೊದಲ್ಗೊಂಡು ದೇಶದ ಸಕಲ ಸಂಪತ್ತನ್ನೂ ದೊಡ್ಡ ಬಂಡವಾಳಿಗ ಕಾರ್ಪೊರೇಟ್ ಶಕ್ತಿಗಳಿಗೆ ಬಿಡಿಗಾಸಿಗೆ ಧಾರೆ ಎರೆಯುವುದು ಹಾಗೂ ಅದನ್ನು ವಿರೋಧಿಸುವ ಆದಿವಾಸಿ-ದಲಿತ-ಅಲ್ಪಸಂಖ್ಯಾತ ಮತ್ತಿತರ ಸಮುದಾಯಗಳು ಮತ್ತು ಪ್ರಜಾತಾಂತ್ರಿಕ ಸಂಘಟನೆಗಳನ್ನು ಬಗ್ಗುಬಡಿಯುವುದಕ್ಕಾಗಿ ಇಂತಹ ಘೋರ ಕಾಯಿದೆ ಅಗತ್ಯವಾಗಿದೆ” ಎಂದು ಬಾಲನ್ ಹೇಳಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ‘‘ಸ್ಟಾನ್ ಸ್ವಾಮಿಯಂತಹ ಧೀಮಂತ ಸಂತನ ಕ್ರೂರ ಕೊಲೆಗೆ ಶ್ರದ್ಧಾಂಜಲಿ ಸಲ್ಲಿಸುವುದು ಮತ್ತು ಇಂತಹ ಕಾಯ್ದೆಗಳ ವಿರುದ್ಧ ಮಾತನಾಡುವುದು ಕೂಡ ದೇಶದ್ರೋಹ ಎಂಬ ರೀತಿಯ ಪ್ರಚಾರವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಈಗಾಗಲೇ ಅದರ ವಿವಿಧ ರೂಪಗಳಲ್ಲಿ ರದ್ದಾಗಿರುವ ಯುಎಪಿಎಯನ್ನು ಕೂಡಲೇ ರದ್ದು ಮಾಡುವಂತೆ ನಾವೆಲ್ಲರೂ ನಿರಂತರ ಹೋರಾಟ ಮಾಡದಿದ್ದರೆ ಈ ದೇಶದಲ್ಲಿ ಜನಸಾಮಾನ್ಯರಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಈ ಲಾಭಬಡುಕರು ಏನನ್ನೂ ಉಳಿಸುವುದಿಲ್ಲ. ಯುಎಪಿಎ ಮತ್ತು ಎನ್ಐಎ ರದ್ದಾಗಲೇಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಸ್ಟಾನ್ ಸ್ವಾಮಿ ಬಂಧನ: ದಸ್ತಗಿರಿಯಾದದ್ದು ಆದಿವಾಸಿಗಳ ಕೊರಳ ದನಿ
ಪಿಯುಸಿಎಲ್ನ ಪ್ರೊ.ವೈ.ಜೆ.ರಾಜೇಂದ್ರ ಮಾತನಾಡಿ, “ವಿಚಾರಣೆಯಾಗಲಿ ಜಾಮೀನಾಗಲಿ ಇಲ್ಲದೆ, ಚಿಕಿತ್ಸೆಗೆ ಅವಕಾಶವನ್ನೂ ನೀಡದೆ, ಸ್ಟಾನ್ ಸ್ವಾಮಿ ಅವರನ್ನು ಅಮಾನುಷ ಹಿಂಸೆಗೆ ಈಡುಮಾಡಿ ಕೊಂದಿದ್ದರಲ್ಲಿ, ಎನ್ಐಎ ಅಧಿಕಾರಿಗಳು ಮತ್ತು ಸ್ಥಳೀಯ ಕೋರ್ಟುಗಳು ಮಾತ್ರವಲ್ಲ, ಹೈಕೋರ್ಟಿನಂತಹ ಉನ್ನತ ನ್ಯಾಯಾಲಯ ಕೂಡ ಭಾಗೀದಾರನಾಗಿದೆ. ಹೀಗಾಗಿ ಈ ಕುರಿತು ಉನ್ನತ ವಿಚಾರಣೆ ನಡೆದು ಎಲ್ಲ ತಪ್ಪಿತಸ್ಥರಿಗೂ ಶಿಕ್ಷೆಯಾಗಬೇಕು. ಯುಎಪಿಎ ಮತ್ತು ಎನ್ಐಎ ರದ್ದಾಗಬೇಕು, ಎಲ್ಲ ರಾಜಕೀಯ ಕೈದಿಗಳನ್ನೂ ಬೇಷರತ್ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
“ನಮ್ಮ ಹಕ್ಕೊತ್ತಾಯಗಳು ಈಡೇರುವವರೆಗೂ ಹೋರಾಟ ರಾಜ್ಯದಾದ್ಯಂತ ನಡೆಯಬೇಕಿದೆ. ಅದಕ್ಕಾಗಿ ಇನ್ನೂ ವಿಸ್ತೃತವಾದ ಸಮಾಲೋಚನಾ ಸಭೆ ನಡೆಸಿ, ಬೃಹತ್ ಪ್ರತಿಭಟನಾ ಹೋರಾಟ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಸಮಾನ ಮನಸ್ಕ ಸಂಘಟನೆಗಳೂ ಒಗ್ಗೂಡಬೇಕಿದೆ. ಜನಸಾಮಾನ್ಯರೂ ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗವಹಿಸಬೇಕಿದೆ” ಎಂದು ಹೋರಾಟಗಾರ ಸಿರಿಮನೆ ನಾಗರಾಜ್ ಮನವಿ ಮಾಡಿದರು.
ದಲಿತ ಹಕ್ಕುಗಳ ಹೋರಾಟಗಾರ ಎಸ್. ಗೋಪಾಲ್, ಪ್ರೊ. ಎನ್.ವಿ. ನರಸಿಂಹಯ್ಯ ಮಾತನಾಡಿ ಸ್ಟಾನ್ ಸ್ವಾಮಿಯವರ ಹತ್ಯೆಯನ್ನು ಖಂಡಿಸಿ, ಯುಎಪಿಎ ಮತ್ತು ಎನ್ಐಎ ರದ್ದತಿಗಾಗಿ ಒತ್ತಾಯಿಸಿದರು. ಮಾನವ ಹಕ್ಕು ಕಾರ್ಯಕರ್ತ ಟಿ. ನರಸಿಂಹ ಮೂರ್ತಿ ಸ್ವಾಗತಿಸಿ ವಂದಿಸಿದರು.
ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ಶ್ರದ್ಧಾಂಜಲಿ; ವಿಚಾರಣಾಧೀನ ಕೈದಿಯಾಗಿ ಭಾರತರತ್ನವೊಂದರ ಸಾವು



