ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬರೆದ ಪತ್ರದ ಬಗ್ಗೆ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ. ರೈತ ಆಂದೋಲನದ ಹೆಸರಿನಲ್ಲಿ ಚುನಾವಣಾ ರಾಜಕಾರಣ ಮಾಡುವುದು ಘೋರ ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.
“ಪಂಜಾಬಿನ ಕಾಂಗ್ರೆಸ್ ಮುಖ್ಯಮಂತ್ರಿ ರೈತರ ಆಂದೋಲನದ ಬಗ್ಗೆ ವಿವಿಧ ಆತಂಕಗಳನ್ನು ವ್ಯಕ್ತಪಡಿಸುತ್ತಾ ಪ್ರಧಾನಿಗೆ ಬರೆದಿರುವ ಪತ್ರವು, ಹೊಸ ಕಾನೂನನ್ನು ರದ್ದು ಮಾಡಲು ತಮ್ಮ ಜೀವವನ್ನೇ ತ್ಯಾಗ ಮಾಡುತ್ತಿರುವ ರೈತರ ಆಂದೋಲನವನ್ನು ಕೆಣಕುವ ಸಂಚಾಗಿದೆ. ರೈತ ಆಂದೋಲನದ ಹೆಸರಿನಲ್ಲಿ ಚುನಾವಣಾ ರಾಜಕಾರಣ ಮಾಡುವುದು ಘೋರ ಅನ್ಯಾಯವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜುಲೈ 19 ರಿಂದ ಮಾನ್ಸುನ್ ಅಧಿವೇಶನ; ಸಂಸತ್ ಬಳಿ ಪ್ರತಿಭಟನೆಗೆ ರೈತರು ಸಜ್ಜು!
“ಗಡಿ ರಾಜ್ಯವಾದ ಪಂಜಾಬ್ ಸರ್ಕಾರವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಂಭೀರವಾಗಿರುವ ಮೂಲಕ ಒಕ್ಕೂಟ ಸರ್ಕಾರದ ಸಹಕಾರವನ್ನು ತೆಗೆದುಕೊಳ್ಳುವುದು ಅಸಮಂಜಸವಲ್ಲ. ಆದರೆ ಇದರ ಸೋಗಿನಲ್ಲಿ, ರೈತರ ಚಳವಳಿಯ ಅಪಖ್ಯಾತಿ ಮಾಡುವ ಮತ್ತು ಚುನಾವಣಾ ಹಿತಾಸಕ್ತಿಯ ರಾಜಕೀಯದ ಬಗ್ಗೆ ಜನರಿಗೆ ಅರ್ಥವಾಗುತ್ತದೆ. ಇದನ್ನು ಮಾಡುವುದರಿಂದ ಕಾಂಗ್ರೆಸ್ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅಮರಿಂದರ್ ಅವರು, ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಐಎಸ್ಐ ಬೆಂಬಲಿತ ಗುಂಪುಗಳ ಗಡಿಯಾಚೆಗಿನ ಬೆದರಿಕೆಯನ್ನು ಉಲ್ಲೇಖಿಸಿ ತಕ್ಷಣವೇ ರೈತರೊಂದಿಗೆ ಮಾತುಕತೆ ಪುನರಾರಂಭಿಸಬೇಕೆಂದು ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದರು.
ಅಮರಿಂದರ್ ಅವರು ಪತ್ರದಲ್ಲಿ, ಗಡಿಯಾಚೆ ಹೆಚ್ಚುತ್ತಿರುವ ಬೆದರಿಕೆ ಮತ್ತು ಐಎಸ್ಐ ಬೆಂಬಲಿತ ಗುಂಪುಗಳಿಂದ ಹೆಚ್ಚಿದ ಡ್ರೋನ್ ಮತ್ತು ಇತರ ಭಯೋತ್ಪಾದಕ ಚಟುವಟಿಕೆಗಳನ್ನು ಉಲ್ಲೇಖಿಸಿದ್ದರು. ಜೊತೆಗೆ ಅವರೊಂದಿಗೆ ಕೆಲವು ರೈತ ಮುಖಂಡರನ್ನು ಗುರಿಯಾಗಿಸಿ ಖಾಲಿಸ್ತಾನಿ ಸಂಘಟನೆಗಳೂ ಸೇರಿವೆ ಎಂದು ಹೇಳಿದ್ದರು.
ಈ ಶಕ್ತಿಗಳು ಗಡಿಯುದ್ದಕ್ಕೂ ಇರುವ ನಮ್ಮ ಹೆಮ್ಮೆಯ, ಪ್ರಾಮಾಣಿಕ ಮತ್ತು ಕಷ್ಟಪಟ್ಟು ದುಡಿಯುವ ರೈತರ ಭಾವನೆಗಳೊಂದಿಗೆ ಆಟವಾಡಲು ಪ್ರಯತ್ನಿಸಬಹುದು ಎಂದು ಅವರು ಪ್ರಧಾನಿಗೆ ಎಚ್ಚರಿಸಿದ್ದರು.
ಇದನ್ನೂ ಓದಿ: ಹರಿಯಾಣ: 100ಕ್ಕೂ ಹೆಚ್ಚು ರೈತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ ಪೊಲೀಸರು


