“ಕರ್ನಾಟಕ ಸಿಎಂ ಬದಲಾವಣೆಯಾಗಲಿದ್ದಾರೆ – ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮಾತು” ಎಂಬ ಆಡಿಯೋ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು ಹೊಸ ಚರ್ಚೆಗಳಿಗೆ ದಾರಿಮಾಡಿಕೊಟ್ಟಿದೆ. ಕರ್ನಾಟಕದ ಹೊಸ ಸಿಎಂ ದೆಹಲಿಯಿಂದ ಬರುತ್ತಾರೆ ಎಂದು ಆಡಿಯೋದಲ್ಲಿ ಹೇಳಿರುವುದರಿಂದ ಅವರು ಯಾರು ಯಾರು ಎಂಬ ಪ್ರಶ್ನೆ ಹಲವೆಡೆ ಸುಳಿದಾಡುತ್ತಿದೆ. ಆದರೆ ತಡರಾತ್ರಿ ಸ್ಪಷ್ಟೀಕರಣ ನೀಡಿರುವ ನಳಿನ್ ಕುಮಾರ್ ಕಟೀಲ್, ‘ಆ ಆಡಿಯೋ ನನ್ನದಲ್ಲ, ನಕಲಿ’ ಎಂದಿದ್ದಾರೆ.
ವೈರಲ್ ಆಗಿರುವ ಆಡಿಯೋದಲ್ಲಿ ತುಳು ಭಾಷೆಯಲ್ಲಿ “ಯಾರಿಗೆ ಹೇಳೋಕೆ ಹೋಗಬೇಡಿ, ಈಶ್ವರಪ್ಪ ಜಗದೀಶ್ ಶೆಟ್ಟರ್ ಟೀಮ್ ಅನ್ನೆ ತೆಗೆಯುತ್ತೇವೆ. ಎಲ್ಲ ಹೊಸ ಟೀಮ್ ಮಾಡುತ್ತಿದ್ದೇವೆ. ಯಾರಲ್ಲೂ ಹೇಳಲು ಹೋಗಬೇಡಿ, ಈಗ ಸಧ್ಯಕ್ಕೆ ಯಾರಿಗೂ ಕೊಡಬೇಡಿ ಎಂದು ಹೇಳಿದ್ದಾರೆ. ಇಲ್ಲ, ಯಾರಿಗೂ ಹೇಳಬೇಡಿ, ಏನು ತೊಂದರೆ ಇಲ್ಲ, ಹೆದರಬೇಡಿ ನಾವಿದ್ದೇವೆ, ಇನ್ನು ಯಾರಾದರೂ ನಮ್ಮ ಕೈಯಲ್ಲೆ ಎಲ್ಲಾ. ಮೂರು ಹೆಸರು ಉಂಟು, ಅದರಲ್ಲಿ ಯಾವುದಾದರೂ ಆಗುವ ಚಾನ್ಸ್ ಉಂಟು. ಇಲ್ಲ, ಇಲ್ಲಿಯವರನ್ನು ಯಾರನ್ನು ಮಾಡೋದಿಲ್ಲ. ದೆಹಲಿಯಿಂದಲೇ ಮಾಡುತ್ತಾರೆ” ಎಂದು ಹೇಳಲಾಗಿದೆ. ಸಣ್ಣ ದನಿಯಲ್ಲಿ ಮಾತನಾಡಿದ್ದು ನಡು ನಡುವೆ ನಗುವುದು ಕೇಳಿಬಂದಿದೆ.
ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಇತ್ತೀಚೆಗೆ ತಾನೇ ಹಾಲಿ ಸಿಎಂ ಯಡಿಯೂರಪ್ಪನವರು ದೆಹಲಿಗೆ ತೆರಳಿದ್ದಾಗ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆ ಹಿನ್ನೆಲೆಯಲ್ಲಿ ಈ ಆಡಿಯೋಗೆ ಮನ್ನಣೆ ದೊರೆತ್ತಿದ್ದು ನಿಜವಿರಬಹುದು ಎಂದು ಹಲವರು ನಂಬಿದ್ದಾರೆ. ಅಲ್ಲದೆ ಆಡಿಯೋದಲ್ಲಿನ ದನಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ರವರ ದನಿಯನ್ನೆ ಹೋಲುವುದರಿಂದ ಬಹಳಷ್ಟು ಜನ ಆಡಿಯೋವನ್ನು ಹಂಚಿಕೊಂಡಿದ್ದಾರೆ.
ಯಾರು ಹೊಸ ಮುಖ್ಯಮಂತ್ರಿ?
ಇನ್ನು ಹೊಸ ಮುಖ್ಯಮಂತ್ರಿ ದೆಹಲಿಯಿಂದ ಬರುತ್ತಾರೆ ಎಂಬ ವಿಷಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಆಡಿಯೋದಲ್ಲಿರುವಂತೆ ಮೂರು ಜನರ ಹೆಸರಿದೆ, ಯಾರಾದರೂ ಆಗಬಹುದು ಎಂಬುದನ್ನು ಜನ ತಮಗೆ ಬೇಕಾದಂತೆ ಅರ್ಥೈಸಿಕೊಳ್ಳುತ್ತಿದ್ದರೂ ಅವರ ಊಹೆಯ ಮೊದಲ ಹೆಸರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ರವರದ್ದು ಆಗಿದೆ. ಕರ್ನಾಟಕ ಮೂಲದ ಸಂತೋಷ್ರವರು ಆರ್ಎಸ್ಎಸ್ನ ಪ್ರಭಾವಿ ಮುಖಂಡರಾಗಿದ್ದು ಕೆಲಸ ಮಾಡಿದವರು. ಬಹಳ ಹಿಂದಿನಿಂದಲೂ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಅವರು 2019 ರಲ್ಲಿ ನೇರವಾಗಿ ಬಿಜೆಪಿ ಪಕ್ಷ ಸಂಘಟನೆಗಿಳಿದಿದ್ದು ಸದ್ಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ಹಲವು ಬಾರಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಬಂದಾಗಲೆಲ್ಲಾ ಆರ್ಎಸ್ಎಸ್ ಹಿನ್ನೆಲೆಯ ಸಂತೋಷ್ ಹೆಸರು ಮುನ್ನೆಲೆಗೆ ಬಂದಿದೆ. ಸದ್ಯ ಅವರು ದೆಹಲಿಯಲ್ಲಿರುವುದರಿಂದ ಆಡಿಯೋದಲ್ಲಿನ ಮೂರು ಹೆಸರುಗಳಲ್ಲಿ ಅವರ ಹೆಸರು ಮುಂಚೂಣಿಯಲ್ಲಿದೆ.
ಕಳೆದ ಕೆಲ ತಿಂಗಳುಗಳಿಂದ ಸಂತೋಷ್ ಬಿಜೆಪಿಯ ಟ್ರಬಲ್ ಶೂಟರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ನೇತೃತ್ವದ ಆಡಳಿತದಲ್ಲಿ ಉಂಟಾದ ಬಿಕ್ಕಟ್ಟು ನಿಭಾಯಿಸುವಲ್ಲಿ ಅವರು ಪಾತ್ರ ವಹಿಸಿದ್ದರು. ಹಾಗಾಗಿ ಅವರಿಗೆ ಕರ್ನಾಟಕದ ಸಿಎಂ ಸ್ಥಾನ ಕೊಡುವ ಮೂಲಕ ಆರ್ಎಸ್ಎಸ್ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವ ಸಂಘಪರಿವಾರದ ಬೇಡಿಕೆ ಈಡೇರಿಸಲು ಬಿಜೆಪಿ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಎರಡನೇ ಆಯ್ಕೆಯಾಗಿ ಪ್ರಹ್ಲಾದ್ ಜೋಶಿ ಇದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಸದ್ಯಕ್ಕೆ ಕೇಂದ್ರ ಮಂತ್ರಿಯಾಗಿರುವ ಅವರು ಕರ್ನಾಟಕ ಸಿಎಂ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಆಡಿಯೋ ನಕಲಿ, ತನಿಖೆಯಾಗಬೇಕು – ಕಟೀಲ್
ಆಡಿಯೋ ವೈರಲ್ ಆಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ನಳಿನ್ ಕುಮಾರ್ ಕಟೀಲ್, ಆ ಆಡಿಯೋ ನನ್ನದಲ್ಲ. ನನಗೆ ಕಳಂಕ ತರಲು ನಕಲಿ ಆಡಿಯೋ ಸೃಷ್ಟಿಸಲಾಗಿದೆ. ನನ್ನ ದನಿಯನ್ನು ಅನುಕರಿಸಿ ಯಾರೋ ಆಡಿಯೋ ತಯಾರು ಮಾಡಿದ್ದಾರೆ. ಅದನ್ನು ಕಿಡಿಗೇಡಿಗಳು ವಾಟ್ಸಾಪ್ನಲ್ಲಿ ಷೇರ್ ಮಾಡಿ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದೇ ಜುಲೈ 26ಕ್ಕೆ ಯಡಿಯೂರಪ್ಪನವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿ 2 ವರ್ಷ ತುಂಬುತ್ತಿದೆ. ಆ ಸಂದರ್ಭದಲ್ಲಿಯೇ ಅವರು ಪದತ್ಯಾಗ ಮಾಡಲಿದ್ದಾರೆ ಎಂಬ ಚರ್ಚೆಗಳ ನಡುವೆ ಈ ಆಡಿಯೋ ವೈರಲ್ ಆಗಿರುವುದು ಕಾಕತಾಳಿಯವೇ? ಅಥವಾ ಉದ್ದೇಶ ಪೂರ್ವಕವೇ? ಈ ಎಲ್ಲಾ ಪ್ರಶ್ನೆಗಳಿಗೆ ಇನ್ನೊಂದು ವಾರದಲ್ಲಿ ಉತ್ತರ ದೊರೆಯಲಿದೆ.
ಇದನ್ನೂ ಓದಿ: ಬಿಜೆಪಿ ಸೇರುತ್ತಿರುವ ಕೊಳ್ಳೇಗಾಲ ಶಾಸಕ ಎನ್. ಮಹೇಶ್; ಆಪ್ತರ ಹೇಳಿಕೆ