ಇತ್ತೀಚೆಗೆ ತಮ್ಮ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಬೊಮ್ಮನ ಹಳ್ಳಿ ಶಾಸಕ ಸತೀಶ್ ರೆಡ್ಡಿ ಕೋಮುಬಣ್ಣ ಹಚ್ಚಲು ಪ್ರಯತ್ನಿಸಿದ್ದರು. ಆದರೆ ಶುಕ್ರವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರು ಮೂವರನ್ನು ಬಂಧಿಸಿ ವಾಸ್ತವಾಂಶವನ್ನು ಬಯಲಿಗೆಳೆದಿದ್ದಾರೆ. ‘ಶಾಸಕ ಸತೀಶ್ ರೆಡ್ಡಿ ಅವರನ್ನು ಭೇಟಿಯಾಗಲು ಅವಕಾಶ ಸಿಗದೆ ಇರುವುದರಿಂದ ಸಿಟ್ಟಾಗಿದ್ದ ಆರೋಪಿಗಳು ಅವರ ಕಾರಿಗೆ ಬೆಂಕಿ ಹಚ್ಚಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಕೋಮು ಬಣ್ಣ ಹಚ್ಚುವ ಪ್ರಯತ್ನವನ್ನು ಸ್ವತಃ ಶಾಸಕ ಸತೀಶ್ ರೆಡ್ಡಿ ಅವರೇ ಮಾಡಿದ್ದರು. ಅಲ್ಲದೆ ಬಿಜೆಪಿ ಪರವಿರುವ ಸಂಘಪರಿವಾರದ ಕಾರ್ಯಕರ್ತರು ಬೇಗೂರು ಕೆರೆಯ ಶಿವನ ಪ್ರತಿಮೆಯ ವಿವಾದದ ಭಾಗವಾಗಿ ಅವರ ಕಾರಿಗೆ ಬೆಂಕಿ ಹಾಕಲಾಗಿದೆ ಎಂದು ಕೂಡಾ ಆರೋಪಿಸಿದ್ದರು. ಇದರ ಜೊತೆಗೆ ಹಲವು ಮಾಧ್ಯಮಗಳೂ ಕೋಮು ಬಣ್ಣ ಹಚ್ಚಿಯೆ ವರದಿ ಮಾಡಿದ್ದವು. ಆದರೆ ಕೊನೆಗೂ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಬೇಗೂರು ಕೆರೆ ಅಭಿವೃದ್ಧಿಗೆ 2018 ರ ಮಾರ್ಚ್ 17 ರಂದು ಅಂದಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದರು. ಆದರೆ ಬಿಬಿಎಂಪಿ ಕೆರೆ ಅಭಿವೃದ್ದಿ ಬದಲು ಕೆರೆಯ ಮಧ್ಯದಲ್ಲಿ ಕೃತಕ ದ್ವೀಪ ನಿರ್ಮಾಣ ಮಾಡಿ ಅಲ್ಲಿ ಶಿವನ ವಿಗ್ರಹ ಸ್ಥಾಪಿಸಲು ಮುಂದಾಗಿತ್ತು. ಇದು ಕೆರೆಯ ಸ್ವರೂಪವನ್ನು ಹಾಳು ಮಾಡುವುದಲ್ಲದೆ, ಕೆರೆಯ ವಿಸ್ತೀರ್ಣ ಮತ್ತು ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂಬ ಆತಂಕದಿಂದ ಕೆಲ ಪರಿಸರ ಹೋರಾಟಗಾರರು ಹೈಕೋರ್ಟ್ನಲ್ಲಿ ಬಿಬಿಎಂಪಿಯ ಕೆಲಸವನ್ನು ಪ್ರಶ್ನಿಸಿದ್ದರು. ಪ್ರಕರಣವನ್ನು ಆಲಿಸಿದ್ದ ಹೈಕೋರ್ಟ್ ಕೆರೆ ಪಾತ್ರವನ್ನು ಕಡಿಮೆ ಮಾಡುವ ಹಕ್ಕು ಯಾರಿಗೂ ಇಲ್ಲವೆಂದು ಸ್ಪಷ್ಟವಾಗಿ ತಿಳಿಸಿ, ಶಿವನ ವಿಗ್ರಹ ಮತ್ತು ಕೃತಕ ದ್ವೀಪ ನಿರ್ಮಾಣಕ್ಕೆ ತಡೆ ನೀಡಿತ್ತು.
ಅಷ್ಟೇ ಅಲ್ಲದೆ, ವಿಗ್ರಹವನ್ನು ಅಲ್ಲಿಂದ ತೆರವುಗೊಳಿಸಲು ಬಿಬಿಎಂಪಿ ನಿರ್ಣಯ ಕೈಗೊಳ್ಳುವಂತೆ ಆದೇಶಿಸಿರುವ ನ್ಯಾಯಾಲಯ ಎರಡು ವಾರಗಳ ಸಮಯ ನೀಡಿದೆ. ಆದರೆ, ಕಾನೂನಾತ್ಮಕ ತೊಡಕು ಮತ್ತು ಪರಿಸರ ಸಮಸ್ಯೆಯನ್ನು ಸಂಘಪರಿವಾರದ ಕಾರ್ಯಕರ್ತರು ಕೋಮುದ್ವೇಷಕ್ಕೆ ಬಳಸಿಕೊಂಡಿದ್ದು, ಪ್ರಕರಣವನ್ನು ಕೋಮು ವಿವಾದವನ್ನಾಗಿ ಮಾಡಿದ್ದರು.
ಇದರ ಮದ್ಯೆ ಶಾಸಕ ಸತೀಶ್ ರೆಡ್ಡಿ ಅವರ ಕಾರಿಗೆ ಬೆಂಕಿ ಹಚ್ಚಿದ್ದು, ಇದನ್ನೂ ಬೇಗೂರು ಕೆರೆಯ ವಿವಾದಕ್ಕೆ ತಗಲುಹಾಕಿಕೊಂಡು ಪ್ರಕರಣವನ್ನು ಮತ್ತಷ್ಟು ಸಿಕ್ಕುಸಿಕ್ಕನ್ನಾಗಿ ಮಾಡಲಾಗಿತ್ತು. ಆದರೆ ಪೊಲೀಸರು ಪ್ರಕರಣವನ್ನು ಭೇದಿಸಿ ವಿವಾದವನ್ನು ಸ್ವಲ್ಪ ಮಟ್ಟಿಗೆ ತಣ್ಣಗಾಗಿಸಿದ್ದಾರೆ.
ಇದನ್ನೂ ಓದಿ: ಬೇಗೂರು ಕೆರೆ ಉಳಿಸಿ ಹೋರಾಟಕ್ಕೆ ಕೋಮು ಬಣ್ಣ: ಹೈಕೋರ್ಟ್ ಆದೇಶ ಧಿಕ್ಕರಿಸಿ ಕೆರೆ ಮಧ್ಯೆ ಶಿವ ವಿಗ್ರಹ ಅನಾವರಣ

“ಶಾಸಕ ಸತೀಶ್ ರೆಡ್ಡಿ ಶ್ರೀಮಂತರು. ನಮ್ಮಂಥ ಬಡವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನಮ್ಮ ಸಮಸ್ಯೆಗಳನ್ನೂ ಆಲಿಸಲು ಅವರ ಬಳಿ ಸಮಯವಿಲ್ಲ. ಮನೆ ಬಳಿ ಹೋದರೂ ಅವರನ್ನು ಭೇಟಿಯಾಗಲು ಅವಕಾಶ ಸಿಗಲಿಲ್ಲ. ಇದರಿಂದ ಸಿಟ್ಟಾಗಿ, ಅವರ ಕಾರುಗಳಿಗೆ ಬೆಂಕಿ ಹಚ್ಚಿದೆವು” ಎಂದು ಆರೋಪಿಗಳು ಹೇಳಿದ್ದಾರೆಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪ್ರಜಾವಾಣಿ ವರದಿ ಮಾಡಿದೆ.
ಗಾರ್ವೆಬಾವಿಪಾಳ್ಯದ ನಿವಾಸಿ ಸಾಗರ್ (19), ಬೇಗೂರಿನ ಶ್ರೀಧರ್ (20) ಹಾಗೂ ನವೀನ್ ಅಲಿಯಾಸ್ ಕಾಳಪ್ಪ (22) ಬಂಧಿತರಾಗಿದ್ದು, ಆಗಸ್ಟ್ 11 ರ ಬುಧವಾರ ತಡರಾತ್ರಿ ಸತೀಶ್ ರೆಡ್ಡಿ ಅವರ ಮನೆ ಆವರಣಕ್ಕೆ ನುಗ್ಗಿದ್ದ ಆರೋಪಿಗಳು, ಅವರ ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಸುಳಿವು ಪತ್ತೆ ಮಾಡಿ ಶುಕ್ರವಾರ ಸಂಜೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆಂದು ಪ್ರಜಾವಾಣಿ ವರದಿ ಹೇಳಿದೆ.
ಇದನ್ನೂ ಓದಿ: ನಿಮ್ಮ ಮೆದುಳಲ್ಲಿರುವ ಕೋಮು ವೈರಸ್ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ
ವಿಡಿಯೊ ನೋಡಿ: ಬೇಗೂರು ಕೆರೆ ಉಳಿಸುವಂತೆ ಹೈಕೋರ್ಟ್ ಆದೇಶ. ಅಕ್ರಮವಾಗಿ ಶಿವ ವಿಗ್ರಹ ಅನಾವರಣಗೊಳಿಸಿದವರ ವಿರುದ್ಧ ಕ್ರಮಕ್ಕೆ ತಾಕೀತು.



ಸತ್ಯಾಂಶವನ್ನು ಬಯಲಿಗೆಳೆದ ಪೊಲೀಸರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.