ಕಳೆದ ವರ್ಷ ಬೀದರ್ನ ಶಾಹೀನ್ ಎಜುಕೇಶನ್ ಸೊಸೈಟಿಯಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶಿಸಿದಕ್ಕೆ ದೇಶದ್ರೋಹದ ಪ್ರಕರಣಕ್ಕೆ ದಾಖಲಾಗಿತ್ತು. ಆಗ ಶಸ್ತ್ರಾಸ್ತ್ರಗಳನ್ನು ಒಳಗೊಂಡ ಸಮವಸ್ತ್ರಧಾರಿ ಪೊಲೀಸರು ಮಕ್ಕಳನ್ನು ವಿಚಾರಣೆ ನಡೆಸಿದ್ದನ್ನು ಗಮನಿಸಿದ ಕರ್ನಾಟಕ ಹೈಕೋರ್ಟ್, ಪ್ರಾಥಮಿಕ ಸಾಕ್ಷ್ಯಗಳ ಆಧಾರದಲ್ಲಿ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ರ ಅಡಿಯಲ್ಲಿನ ನಿಬಂಧನೆಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠವು, “ಉಪ ಅಧೀಕ್ಷಕರಾದ ಬಸವೇಶ್ವರವರು ಮಾರ್ಚ್ 16 ರಂದು ಸಲ್ಲಿಸಿದ ಅಫಿಡವಿಟ್ ನಲ್ಲಿ ಯಾವುದೇ ಫೋಟೊಗಳನ್ನು ಲಗತ್ತಿಸಿಲ್ಲ. ಅವರು IA 1, 2020 ರಲ್ಲಿ ಫೋಟೊಗಳನ್ನು ಲಗತ್ತಿಸಿದ್ದಾರೆ. ಏಪ್ರಿಲ್ 1, 2020 ರ ಎರಡನೇ ಫೋಟೋದಲ್ಲಿ ಈ ಶಾಲಾ ಮಕ್ಕಳನ್ನು (2 ಹುಡುಗರು, 1 ಹುಡುಗಿ) ಐದು ಪೋಲಿಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದು, ಅದರಲ್ಲಿ ನಾಲ್ವರು ಪೂರ್ಣ ಸಮವಸ್ತ್ರದಲ್ಲಿದ್ದಾರೆ ಮತ್ತು ಕನಿಷ್ಠ ಇಬ್ಬರು ಬಂದೂಕುಗಳನ್ನು ಹೊಂದಿದ್ದಾರೆ. ಇವು ಅಂದಿನ ವಿಚಾರಣೆಯ ಫೋಟೊಗಳು ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ಪ್ರಾಥಮಿಕ ಸಾಕ್ಷ್ಯಗಳು 2016ರ ಜೆಜೆ ಕಾಯ್ದೆಯ 86(5) ಅಡಿಯಲ್ಲಿ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೆಕ್ಷನ್ 86 ಅದರ ಉಪ-ಸೆಕ್ಷನ್ 5 ರಲ್ಲಿ ಮಕ್ಕಳಿಗಾಗಿ ವಿಶೇಷ ಬಾಲಾಪರಾಧ ಪೊಲೀಸ್ ಘಟಕದ ಸ್ಥಾಪನೆ ಬಗ್ಗೆ ಹೇಳುತ್ತದೆ. ಅದಂರಂತೆ “ಮಕ್ಕಳೊಂದಿಗೆ ಸಂವಹನ ನಡೆಸುವ ಪೋಲಿಸ್ ಅಧಿಕಾರಿ ಸಾಧ್ಯವಾದಷ್ಟು ಸರಳ ಬಟ್ಟೆಯಲ್ಲಿರಬೇಕು ಮತ್ತು ಸಮವಸ್ತ್ರದಲ್ಲಿರಬಾರದು ಮತ್ತು ಹೆಣ್ಣು ಮಗುವಿನೊಂದಿಗೆ ವ್ಯವಹರಿಸಲು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ತೊಡಗಿಸಿಕೊಳ್ಳಬೇಕು” ಎಂದಿದೆ.
“ಸಮವಸ್ತ್ರ ಧರಿಸಿ ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಶಾಲಾ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಸರ್ಕಾರದ ಅತ್ಯಂತ ಹಿರಿಯ ಅಧಿಕಾರಿಯು ಅಫಿಡವಿಟ್ ಸಲ್ಲಿಸುವ ಮೂಲಕ ಪ್ರತಿಕ್ರಿಯಿಸಲು ನಾವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುತ್ತೇವೆ. ಈ ಕ್ರಮದ ಆಧಾರದಲ್ಲಿ ಸರ್ಕಾರವು ಮುಂದೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ತಡೆಯಲು ರಾಜ್ಯದಾದ್ಯಂತ ಪೊಲೀಸರಿಗೆ ನಿರ್ದೇಶನಗಳನ್ನು ನೀಡುವುದನ್ನು ಪರಿಗಣಿಸಬಹುದು” ಎಂದು ಕೋರ್ಟ್ ಹೇಳಿದೆ.
“ನಾವು ಇದನ್ನು ಕ್ಷಮಿಸಿದರೆ ಇದು ಪುನಾರಾವರ್ತನೆಯಾಗುತ್ತದೆ. ಇಂತಹ ಕ್ರಮವನ್ನು ಕ್ಷಮಿಸಲು ಸಾಧ್ಯವಿಲ್ಲ. ಮಕ್ಕಳನ್ನು ಹೀಗೆ ಏಕೆ ನಡೆಸಿಕೊಳ್ಳಲಾಗುತ್ತದೆ? ಇದು ಸರಿಯಾಗಬೇಕು. ಇದು ಹೀಗೆ ಮುಂದುವರೆಯಲು ಸಾಧ್ಯವಿಲ್ಲ” ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕಳೆದ ವರ್ಷದ ಶಾಹಿನ್ ಸಂಸ್ಥೆಯ ಮಕ್ಕಳು ಸಿಎಎ ವಿರೋಧಿ ನಾಟಕ ಮಾಡಿದರೆಂಬ ಕಾರಣಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ನಾಟಕದಲ್ಲಿ ಭಾಗವಹಿಸಿದ್ದ ಮಗುವಿನ ತಾಯಿಯನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಹಲವರ ಮೇಲೆ ಎಫ್ಐಆರ್ ದಾಖಲಾಗಿತ್ತು. ಪೊಲೀಸರು ಶಾಲೆಗೆ ನುಗ್ಗಿ ಚಿಕ್ಕಮಕ್ಕಳನ್ನು ವಿಚಾರಣೆಗೊಳಪಡಿಸಲಾಗಿತ್ತು. ತದನಂತರ ಹಲವರು ಇಡೀ ಸಂಸ್ಥೆ ವಿರುದ್ಧ ಅಪಪ್ರಚಾರ ಮಾಡಿದ್ದರು. ಹಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಬಿಡಿಸಿ ಬೇರೆಡೆಗೆ ವರ್ಗಾಹಿಸುವಂತೆ ಮಾಡಲಾಗಿತ್ತು. ಕೋರ್ಟ್ ದೇಶದ್ರೋಹ ನಡೆದಿಲ್ಲ ಎಂದು ತೀರ್ಪಿತ್ತಿತ್ತು.
ಇದನ್ನೂ ಓದಿ: CAA ವಿರೋಧಿ ನಾಟಕಕ್ಕೆ ದೇಶದ್ರೋಹದ ಪ್ರಕರಣ ಎದುರಿಸಿದ್ದ ಶಾಹೀನ್ ಸಂಸ್ಥೆ ವಿದ್ಯಾರ್ಥಿ ಕರ್ನಾಟಕ NEET ಟಾಪರ್!