ಕೊರೊನಾ ಎರಡನೇ ಅಲೆಯ ಸಮಯ ದೆಹಲಿಯಲ್ಲಿ ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಬಗ್ಗೆ ತನಿಖೆ ಮಾಡಲು, ಉನ್ನತ ಮಟ್ಟದ ಸಮಿತಿಯ ರಚನೆಯ ಕುರಿತ ಕಡತವನ್ನು ದೆಹಲಿ ಸರ್ಕಾರ ಮತ್ತೊಮ್ಮೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಕಳುಹಿಸಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆಯ ಸಮಯದಲ್ಲಿ ದೆಹಲಿಯ ಆಮ್ಲಜನಕದ ಬಿಕ್ಕಟ್ಟಿನ ಬಗ್ಗೆ ತಾನು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ ಮತ್ತು ಸಮಿತಿಯ ರಚನೆಯನ್ನು ಅನುಮೋದಿಸಲು ಲೆಫ್ಟಿನೆಂಟ್ ಗವರ್ನರ್ಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದೇನೆ ಎಂದು ಸಿಸೋಡಿಯಾ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ನಿಯಮಗಳ ಉಲ್ಲಂಘನೆ, 3ನೇ ಅಲೆಗೆ ಕಾರಣವಾಗಬಹುದು: ದೆಹಲಿ ಹೈಕೋರ್ಟ್
“ಒಕ್ಕೂಟ ಸರ್ಕಾರ ಮತ್ತು ನ್ಯಾಯಾಲಯಗಳು ಆಮ್ಲಜನಕ ಕೊರತೆಯಿಂದಾಗಿ ಉಂಟಾದ ಸಾವಿನ ಸಂಖ್ಯೆಯನ್ನು ತಿಳಿಯಲು ಬಯಸುತ್ತವೆ. ಆದರೆ ಎರಡನೇ ಅಲೆಯ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ ಜನರ ನಿಖರವಾದ ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯವಿಲ್ಲ.
ಆದ್ದರಿಂದ, ನಾನು ಮತ್ತೊಮ್ಮೆ ಲೆಫ್ಟಿನೆಂಟ್ ಗವರ್ನರ್ಗೆ ಆಮ್ಲಜನಕ ಬಿಕ್ಕಟ್ಟಿನಿಂದ ಉಂಟಾದ ಸಾವುಗಳನ್ನು ತನಿಖೆ ಮಾಡಲು ಸಮಿತಿಯ ರಚನೆಗೆ ಸಂಬಂಧಿಸಿದ ಕಡತಗಳನ್ನು ಕಳುಹಿಸಿದ್ದೇನೆ” ಎಂದು ಸಿಸೋಡಿಯಾ ತಿಳಿಸಿದ್ದಾರೆ.
“ಇದಕ್ಕೆ ಶೀಘ್ರದಲ್ಲೇ ಅನುಮತಿ ನೀಡಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಆಮ್ಲಜನಕ ಸಂಬಂಧಿತ ಸಾವುಗಳ ತನಿಖೆ ಮಾಡಲು ಸಮಿತಿಯ ರಚನೆಗೆ ಮತ್ತು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅನುಮೋದನೆ ನೀಡಿಲ್ಲ ಎಂದು ಸಿಸೋಡಿಯಾ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ಕೊರೊನಾ 3ನೇ ಅಲೆ ಎದುರಿಸಲು ದೆಹಲಿ ಸಿದ್ಧತೆ: 5,000 ಯುವಜನರಿಗೆ ವೈದ್ಯಕೀಯ ತರಬೇತಿ