Homeಕರ್ನಾಟಕವೈವಾಹಿಕ ಅತ್ಯಾಚಾರ ಅಪರಾಧವಲ್ಲ ತೀರ್ಪು; ಛತ್ತೀಸಗಡ ಹೈಕೋರ್ಟ್ ನ್ಯಾಯಾಂಗ ಸಮಾನತೆಯನ್ನು ಅರ್ಥಮಾಡಿಕೊಂಡಿದ್ದು ಇಷ್ಟೆಯೇ?

ವೈವಾಹಿಕ ಅತ್ಯಾಚಾರ ಅಪರಾಧವಲ್ಲ ತೀರ್ಪು; ಛತ್ತೀಸಗಡ ಹೈಕೋರ್ಟ್ ನ್ಯಾಯಾಂಗ ಸಮಾನತೆಯನ್ನು ಅರ್ಥಮಾಡಿಕೊಂಡಿದ್ದು ಇಷ್ಟೆಯೇ?

- Advertisement -
- Advertisement -

ಒಂದು ದೇಶದ ಪ್ರಗತಿಗೆ ಅನೇಕ ಅಂಶಗಳು ಕಾರಣವಾಗಿರಬಹುದು. ಪೆಟ್ರೋಲ್ ಮಾರಿ ಒಂದು ದೇಶ ಶ್ರೀಮಂತವಾದರೆ ಇನ್ನೊಂದು ತಂತ್ರಜ್ಞಾನ ಅಭಿವೃದ್ಧಿಯಿಂದ ಹಣ ಗಳಿಸಬಹುದು. ಆದರೆ ಯಾವ ದೇಶ ಲಿಂಗತಾರತಮ್ಯಗಳನ್ನು ’ಕಡಿಮೆ ಮಾಡಿ’ ಸಮಾನ, ಸಾಮಾಜಿಕ, ಆರ್ಥಿಕ, ರಾಜಕೀಯ ಅವಕಾಶಗಳನ್ನು ಕಲ್ಪಿಸಿದೆಯೋ ಅದು ಶ್ರೀಮಂತಿಕೆಯ ಜೊತೆ ಪ್ರಗತಿಯನ್ನೂ ಹೊಂದಿದೆ. ಇಲ್ಲಿ ಪ್ರಜ್ಞಾಪೂರ್ವಕವಾಗಿ ’ಕಡಿಮೆ ಮಾಡಿ’ ಎಂಬ ಪದ ಬಳಸಿದೆ, ಏಕೆಂದರೆ ಎಷ್ಟೇ ಪ್ರಬಲ ಅಥವಾ ಪ್ರಗತಿ ಹೊಂದಿದ ದೇಶವಿದ್ದರೂ ಸ್ತ್ರೀಯರ ವಿಷಯದಲ್ಲಿ ಸಂಪೂರ್ಣ ಸಮಾನತೆ ಸಾಧಿಸಿಲ್ಲ ಎನ್ನುವುದು ವಾಸ್ತವ. ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಎರಡು ಬಗೆಯ ಸಮಾನತೆ ಇದೆ. ಒಂದು ’ಸಂವಿಧಾನಾತ್ಮಕ’ ಸಮಾನತೆ – ಇದು ಸ್ತ್ರೀ ಪುರುಷರ ಮಧ್ಯೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಇನ್ನೊಂದು ’ಸಂವೇದನಾತ್ಮಕ’ ಸಮಾನತೆ – ಇದು ಮಹಿಳೆಯರ ನೋವುಗಳಿಗೆ ಸ್ಪಂದಿಸುವಲ್ಲಿಯೂ ಸಹ ಆ ಮಹಿಳೆಯ ಜಾತಿ, ಸ್ಥಾನಮಾನ, ಬಣ್ಣ ಮುಂತಾದ ಹಿನ್ನೆಲೆಯಲ್ಲಿ ತಾರತಮ್ಯ ಹೊಂದಿರುವಂಥದ್ದು. ವಿಪರ್ಯಾಸವೆಂದರೆ ಎರಡನೆಯದು ಮೊದಲಿನದ್ದಕ್ಕಿಂತ ಹೆಚ್ಚು ಶಕ್ತಿಶಾಲಿ.

ಇದೇ ವಾರ ಛತ್ತೀಸಗಡ ರಾಜ್ಯದ ಹೈಕೋರ್ಟ್ ತನ್ನ ಒಂದು ತೀರ್ಪಿನಲ್ಲಿ ವೈವಾಹಿಕ ಸಂಬಂಧದಲ್ಲಿ ಗಂಡನಾದವನು ಬಲವಂತದಿಂದ ಲೈಂಗಿಕ ಸಂಭೋಗ ಮಾಡಿದರೂ ಅದು ಅತ್ಯಾಚಾರವಲ್ಲ ಎಂದು ಹೇಳಿದೆ. ಆದರೆ ಇದೇ ತೀರ್ಪಿನಲ್ಲಿ ಮುಂದುವರೆದು “ಗಂಡಹೆಂಡತಿಯ ಜೊತೆ ಅನೈಸರ್ಗಿಕ ಸಂಭೋಗ ಮಾಡಿದ್ದು ಭಾರತೀಯ ದಂಡಸಂಹಿತೆಯ 377ನೇ ವಿಧಿ ಪ್ರಕಾರ ಅಪರಾಧ” ಎಂದಿದೆ. ಇಲ್ಲಿ ಒಂದು ಪ್ರಶ್ನೆ: ಒಂದೇ ಕೃತ್ಯದ ಒಂದು ಭಾಗ ಅಪರಾಧ, ಇನ್ನೊಂದು ಅಲ್ಲ, ಅದು ಹೇಗೆ? ಇಂಥ ಒಂದು ತೀರ್ಮಾನ ಕೊಡುವಾಗ ನ್ಯಾಯಾಧೀಶರು ಕೇವಲ ಕಾನೂನು ಪಾಲಿಸುವ ಯಂತ್ರಗಳಾಗಿರದೆ ಕಾನೂನನ್ನು ಪರಿಭಾಷಿಸುವ ಕಾಳಜಿ ಹೊಂದಿದ್ದರೆ ಇಂತಹ ಪ್ರತಿಗಾಮಿ ತೀರ್ಪು ಬರುತ್ತಿರಲಿಲ್ಲ. ಕಾಲಕಾಲಕ್ಕೆ ಬರುವ ವಿಶಾಲವಾದ ಪರಿಭಾಷೆಗಳಿಂದಲೇ ಅಲ್ಲವೆ ಸಾಮಾಜಿಕ ಮತ್ತು ವೈಚಾರಿಕ ಪ್ರಗತಿ ಆಗುವುದು!

ಭಾರತೀಯ ದಂಡಸಂಹಿತೆಯ 375ನೇ ವಿಧಿ ಪ್ರಕಾರ ಅತ್ಯಾಚಾರ ಎಂದರೆ ’ಯಾವುದೇ ಗಂಡಸು ಒಬ್ಬ ಹೆಂಗಸಿನ ಇಚ್ಛೆಗೆ ವಿರುದ್ಧವಾಗಿ, ಅವಳ ಒಪ್ಪಿಗೆ ಇಲ್ಲದೆ ಬಲವಂತದಿಂದ ಒಪ್ಪಿಗೆ ಪಡೆದು ನಡೆಸುವ ಲೈಂಗಿಕ ಸಂಭೋಗ’. ಇದರಲ್ಲಿ ಮುಂದುವರೆದು ’ಒಬ್ಬ ಗಂಡ ತನ್ನದೇ ಹೆಂಡತಿ ಇದ್ದರೂ ಹದಿನೈದು ವರ್ಷಕ್ಕಿಂತ ಚಿಕ್ಕವಳಿದ್ದರೆ ಅವಳ ಜೊತೆ ಲೈಂಗಿಕ ಸಂಪರ್ಕ ಹೊಂದುವುದು ಅಪರಾಧ’ ಎಂದಿದೆ. ಎಷ್ಟೋ ದಶಕಗಳಿಂದ ಈ ಕೊನೆಯ ಅಂಶ ವಿವಿಧ ಕಾರಣಗಳಿಂದ ಪ್ರಶ್ನೆಗೆ ಒಳಗಾಗುತ್ತಲೇ ಇದ್ದರೂ ಅದರಲ್ಲಿ ಯಾವುದೇ ಕ್ರಾಂತಿಕಾರಕ ಬದಲಾವಣೆಗಳು ಆಗಿಲ್ಲ.

18 ವರ್ಷಕ್ಕಿಂತ ಕಿರಿಯರನ್ನು ಮಕ್ಕಳು ಎಂದು ಕಾನೂನೇ ಪರಿಗಣಿಸುವಾಗ ಆ ಮಕ್ಕಳು ಕೊಡುವ ಸಮ್ಮತಿಯನ್ನು ಪರಿಗಣಿಸಬಹುದೇ?

ಹಾಗದರೆ 15 ರಿಂದ 18ರ ಒಳಗಿನ ಮದುವೆ ಆದ ಮಕ್ಕಳ ಮೇಲೆ ಅವಳ ಗಂಡ ಮಾಡುವ ಲೈಂಗಿಕ ಶೋಷಣೆಯನ್ನು ಯಾವ ರೀತಿ ಅರ್ಥೈಸಬೇಕು ಮುಂತಾದ ಅನೇಕ ಪ್ರಶ್ನೆಗಳಿಗೆ ಒಂದು ಸಣ್ಣ ಸಮಾಧಾನ ಸಿಕ್ಕಿದ್ದು ಇತ್ತೀಚೆಗೆ 2017ರಲ್ಲಿ ಜಸ್ಟೀಸ್ ಮದನ್ ಲೋಕೂರ್ ಮತ್ತು ಜಸ್ಟೀಸ್ ದೀಪಕ್ ಗುಪ್ತಾ ಅವರ ತೀರ್ಪು. ಅವರು 15 ವರ್ಷದ ಮಿತಿಯನ್ನು 18ಕ್ಕೆ ಏರಿಸಿದರು, ಆದರೆ ವೈವಾಹಿಕ ಅತ್ಯಾಚಾರ ಅಪರಾಧ ಹೌದೋ ಅಲ್ಲವೋ ಎಂಬ ಪ್ರಶ್ನೆಯನ್ನು ಮುಟ್ಟಲಿಲ್ಲ.

ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಮತ್ತು ಖಾಸಗಿತನವನ್ನು ವ್ಯಾಖ್ಯಾನಿಸಿ ಎಷ್ಟೋ ತೀರ್ಪುಗಳು ಬಂದರೂ ಹೆಂಡತಿಯ ವೈಯಕ್ತಿಕತೆ ಮತ್ತು ಖಾಸಗಿತನದ ಪ್ರಶ್ನೆಗಳು ಹಾಗೇ ಇವೆ. ಈ ಪುರುಷಾಧಿಪತ್ಯ ಮತ್ತು ಪ್ರಗತಿಗಾಮಿ ಧೋರಣೆಗಳು ನ್ಯಾಯಾಂಗದಲ್ಲೂ ಸಹ ಆಳವಾಗಿ ಬೇರೂರಿವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಮಹಿಳಾ ಸಮಾನ ಅವಕಾಶಗಳ ಕೆಲ ತೀರ್ಪುಗಳು ’ಸೇನೆಯಲ್ಲಿ ಮಹಿಳೆಯ ಸೇರ್ಪಡೆ’, ’ಶಬರಿಮಲೈ ದೇವಸ್ಥಾನ ಪ್ರವೇಶ’ದ ರೂಪದಲ್ಲಿ ಬಂದರೂ ವೈವಾಹಿಕ ಸಂಬಂಧದ ಒಳಗೆ ಇಣುಕುವ ಧೈರ್ಯ ಇನ್ನೂ ನ್ಯಾಯಾಂಗಕ್ಕೆ ಬಂದಂತಿಲ್ಲ.

ದೆಹಲಿ ಹೈಕೋರ್ಟಿನಲ್ಲಿ ’ವೈವಾಹಿಕ ಅತ್ಯಾಚಾರವನ್ನು ಅಪರಾಧ’ ಎಂದು ಪರಿಗಣಿಸಲು ಕೋರಿ ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರಸ್ತುತ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ತಿಳಿಸಿ, “ಇಂತಹ ನಡೆ ವಿವಾಹ ಎಂಬ ವ್ಯವಸ್ಥೆ ಕುಸಿಯಲು ದಾರಿ ಮಾಡಿಕೊಡುತ್ತದೆ” ಎಂದು ಹೇಳಿದೆ.

ಅಂದರೆ ಈ ವ್ಯವಸ್ಥೆ ಜೀವವಿಲ್ಲದ ಅಸ್ತಿಪಂಜರವಾಗಿದ್ದರೂ ಚಿಂತೆಯಿಲ್ಲ, ಅದನ್ನು ಬಲವಂತದಿಂದ ಉಳಿಸಬೇಕು ಎಂಬುದು ಸರ್ಕಾರದ ನಿಲುವು ಮಹಿಳೆಯರ ಬಗ್ಗೆ ಇರುವ ಧೋರಣೆಯನ್ನು ತೋರಿಸುತ್ತದೆ. ವಿವಾಹ ಎಂಬ ವ್ಯವಸ್ಥೆ ಸದೃಢವಾಗಿ ನಿಲ್ಲಬೇಕಾದರೆ ಅದರ ನೆಲೆಯನ್ನು ಗಟ್ಟಿಗೊಳಿಸಿ, ಸಂಬಂಧಗಳನ್ನು ಸದೃಢಗೊಳಿಸುವ ಪ್ರಯತ್ನಗಳಾಗಬೇಕು. ಇದೇ ಸಂದರ್ಭದಲ್ಲಿ ಒಂದು ಆಶಾಕಿರಣದಂತೆ ಕೇರಳ ಹೈಕೋರ್ಟ್ ’ವೈವಾಹಿಕ ಅತ್ಯಾಚಾರವೂ ಅಪರಾಧವಾಗಿದೆ’ ಎಂದು ಹೇಳಿದೆ. ಈ ಎಲ್ಲ ತೀರ್ಪುಗಳೂ ಬೇರೆ ಬೇರೆ ಹಿನ್ನೆಲೆಯಲ್ಲಿ ಬಂದಿದ್ದರೂ ಕೂಡ ಈ ಒಂದು ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟತೆಯನ್ನು ಕೊಡುವ ತುರ್ತು ಅಗತ್ಯ ಇದೆ.

ಅನುಪಮಾ ಎಂಬ ಲೇಖಕಿ ತನ್ನ ‘Gendered Citizenship’ ಎಂಬ ಪುಸ್ತಕದಲ್ಲಿ ಈ ಜಗತ್ತು ಸಾರ್ವಜನಿಕ ಮತ್ತು ಖಾಸಗಿ ಎಂಬ ವಲಯದಲ್ಲಿ ವಿಭಜನೆ ಆಗಿದೆ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ನೋಡಿದರೆ ಸಮಾಜದಲ್ಲಿ ಅದರಲ್ಲೂ ಪುರುಷಪ್ರಧಾನ ಸಮಾಜದಲ್ಲಿ ಸಾರ್ವಜನಿಕ ವಲಯ ಗಂಡಸರಿಗೆ, ಕೌಟುಂಬಿಕ ಅಥವಾ ಖಾಸಗಿ ವಲಯ ಹೆಂಗಸರಿಗೆ ಎಂದು ಸಾರಾಸಗಟಾಗಿ ನಿರ್ಧರಿಸಿದ ಮೇಲೆ, ತನ್ನ ಖಾಸಗಿ ವಲಯದಿಂದ ಹೊರಬರಲು ಪ್ರಯತ್ನಿಸುವ ಪ್ರತಿಯೊಬ್ಬ ಮಹಿಳೆಯೂ ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾಳೆ. ಮೈಸೂರಿನಲ್ಲಿ ಮೊನ್ನೆ ನಡೆದ ಕಾಲೇಜು ವಿದ್ಯಾರ್ಥಿನಿಯ ರೇಪ್ ಕೇಸಿನಲ್ಲಿ ಆ ವಿದ್ಯಾರ್ಥಿನಿಯನ್ನೆ ದೂಷಿಸಿದವರು ಎಷ್ಟೋ ಜನ. ಈ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯಾ ಕೇಸಿನಲ್ಲಿ ಕೂಡ ಇಂತಹದೇ ಮಾತುಗಳು ಕೇಳಿಬಂದಿದ್ದವು.

ಬಿಜೆಪಿ ನಾಯಕರೊಬ್ಬರು ಸಂತ್ರಸ್ತೆ, ’ಅಣ್ಣಾ ನನ್ನನ್ನು ಬಿಟ್ಟುಬಿಡು’ ಎಂದು ಕೇಳಿಕೊಳ್ಳಬೇಕಾಗಿತ್ತು ಎಂದರೆ, ಇನ್ನೊಬ್ಬರು ’ಹನುಮಾನ್ ಚಾಲೀಸಾ’ ಹೇಳಬೇಕಾಗಿತ್ತು ಎಂದರು. ಈ ಮನೋರೋಗಕ್ಕೆ ಚಿಕಿತ್ಸೆ ಇದೆಯೇ? ಹೆಣ್ಣು ತಿರುಗಾಡುವ ಸಮಯ, ಉಟ್ಟುಕೊಳ್ಳುವ ಬಟ್ಟೆ, ಯಾರ ಜೊತೆ ತಿರುಗಾಡುತ್ತಾಳೆ, ಎಂತಹ ಸ್ಥಳಕ್ಕೆ ಹೋಗುತ್ತಾಳೆ, ಕೆಲವೊಮ್ಮೆಯಂತೂ ಏನು ತಿನ್ನುತ್ತಾಳೆ ಎಂಬುದು ಕೂಡ ಸಾರ್ವಜನಿಕ ಚರ್ಚೆಯ ವಸ್ತುವಾಗುತ್ತದೆ. ಹಿಂದಿ ಭಾಷೆಯ ’ಪಿಂಕ್ ಎಂಬ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್‌ರ ಒಂದು ಮಾತಿದೆ – “ಈ ದೇಶದಲ್ಲಿ ಸ್ಥಳ ಹೆಣ್ಣುಮಕ್ಕಳ ನಡತೆಯನ್ನು ನಿರ್ಧರಿಸುತ್ತದೆ; ದೇವಸ್ಥಾನ ಅಥವಾ ಲೈಬ್ರರಿಯಲ್ಲಿ ಪರಿಚಯವಾದರೆ ಒಳ್ಳೆ ಹುಡುಗಿ, ಪಬ್ ಅಥವಾ ಡಿಸ್ಕೊದಲ್ಲಿ ಸಿಕ್ಕರೆ ಪ್ರಶ್ನಾರ್ಹ ನಡತೆ ಹೊಂದಿದವಳು” ಎಂದು. ಮೈಸೂರು ಘಟನೆ ನಂತರ ರಾಜ್ಯದ ಗೃಹಮಂತ್ರಿ, ಸಂತ್ರಸ್ತೆ ಏಳು ಗಂಟೆ ನಂತರ ಅಂತಹ ಸ್ಥಳಕ್ಕೆ ಹೋಗಿದ್ದು ತಪ್ಪು ಎಂದಾಗ ಈ ಮೇಲಿನ ಮಾತು ನೆನಪಾಯ್ತು.

ಇದೇ ದಂಡಸಂಹಿತೆಯ 497 ವಿಧಿಯಾದ “ವ್ಯಭಿಚಾರ ಒಂದು ದಂಡನಾರ್ಹ ಅಪರಾಧ” ಎಂಬುದನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಿದಾಗ ಆ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ತಿಳಿವಳಿಕೆ ಕೊಡುವ ಪ್ರಯತ್ನಗಳಾಗಲಿಲ್ಲ. ಹೇಗೆ ಈ ಕಾನೂನು ಹೆಣ್ಣನ್ನು ಕೊಟ್ಟಿಗೆಯಲ್ಲಿ ಕಟ್ಟಿದ ಹಸುವಿನಂತೆ ಪರಿಗಣಿಸುತ್ತದೆ ಎಂಬುದು ಇಂದಿಗೂ ಗೊಂದಲವಾಗಿ ಉಳಿದಿದೆ.

ಇಂದೂ ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸದ 36 ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದಕ್ಕೆ ಒಂದು ಮುಖ್ಯಕಾರಣ “ಮದುವೆ ಎಂಬುದು ಲೈಂಗಿಕ ಸಂಪರ್ಕಕ್ಕೆ ಅಪರೋಕ್ಷ ಸಮ್ಮತಿ” ಎಂಬ ಕಲ್ಪನೆ. ಜೊತೆಗೆ ಮದುವೆ ಎಂಬ ವ್ಯವಸ್ಥೆ, ಸಾಮಾಜಿಕ ಚಲನೆಯಲ್ಲಿ ಮನುಷ್ಯ ಕಂಡುಕೊಂಡ ಒಂದು ವ್ಯವಸ್ಥೆ ಎಂದು ತಿಳಿಯದೆ ಧಾರ್ಮಿಕ ಸಂಸ್ಕಾರಗಳ ಭಾಗವಾಗಿಸಿದ್ದು ಕೂಡ ಕಾರಣ. ಸುಳ್ಳು ಕೇಸುಗಳು ದಾಖಲಾಗಬಹುದು, ಹೆಂಗಸರು ಇದರ ದುರುಪಯೋಗ ಮಾಡಿಕೊಳ್ಳಬಹುದು ಎಂಬುದು ಕಾನೂನು ತರದೇ ಇರಲು ಸಮರ್ಥನೆ
ಅಲ್ಲ. ಬದಲಾವಣೆ ಕಾಲದ ನಿಯಮ, ಅದು ಆರೋಗ್ಯಪೂರ್ಣವಾಗಿದ್ದರೆ ಸಮಾಜ ಸ್ವಸ್ಥವಾಗಿರುತ್ತದೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: 200 ಹಲ್ಲಾ ಹೋ: ಪ್ರತೀಕಾರ ಹತ್ಯೆಯ ಸುತ್ತ ಮಹತ್ವದ ಜಾತಿ ದೌರ್ಜನ್ಯದ ಪ್ರಶ್ನೆಗಳು

ಇದನ್ನೂ ಓದಿ: ಮಹಿಳಾ ಮುಖ್ಯ ನ್ಯಾಯಮೂರ್ತಿ: ತನ್ನ ಪೂರ್ವಾಗ್ರಹಗಳಿಂದ ಬಿಡುಗಡೆ ಹೊಂದುವುದೇ ಸುಪ್ರೀಂಕೋರ್ಟ್?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...