Homeಮುಖಪುಟಹಾಸ್ಯ ಪ್ರಬಂಧ; ಯಲಕ್ಷನ್ಗೆ ನಿಂತ್ರು ಕಾವಿಶೂರರು!

ಹಾಸ್ಯ ಪ್ರಬಂಧ; ಯಲಕ್ಷನ್ಗೆ ನಿಂತ್ರು ಕಾವಿಶೂರರು!

- Advertisement -
- Advertisement -

ಅದೆಷ್ಟೇ ಅಲವತ್ತುಕೊಂಡರೂ ತಮ್ಮ ಫೇವರೇಟ್ ಸಿ.ಎಂಅನ್ನು ಪದಚ್ಯುತಿಗೊಳಿಸಿಯೇಬಿಟ್ಟ ಕೇಂದ್ರ ಸರ್ಕಾರದವರ ಮೇಲೆ ಮಠಾಧೀಶರೆಲ್ಲಾ ಮುನಿಸಿಕೊಂಡಿದ್ದರು. ರಾಜಕೀಯವನ್ನು ತಾವೇ ಮುಷ್ಠಿಯಲ್ಲಿಟ್ಟುಕೊಂಡರೆ, ತಮಗೆ ಬೇಕಾದ ಮೆಡಿಕಲ್ಲು, ಡೆಂಟಲ್ಲು, ಎಂಜನಿಯರಿಂಗ್ ಕಾಲೇಜು, ಬಜೆಟ್ ಸ್ಯಾಂಕ್ಷನ್ಸ್, ಕ್ಯಾಪಿಟೇಶನ್, ಡೆವೆಲೆಪ್‌ಮೆಂಟ್ಸ್‌ಗೆಲ್ಲಾ ರಾಜಕಾರಣಿಗಳೆದರು ಹಲ್ಲುಗಿಂಜುವ ಪ್ರಮೇಯವೇ ಬಾರದಲ್ಲವೆಂಬಾಲೋಚನೆ ಮಿದುಳಲ್ಲಿ ಮಿಂಚುತ್ತಲೇ ಡಿಂಗಾಲೇಶರು ಪ್ರಸನ್ನವದನರಾದರು. ನಾವುಗಳು ಹೇಳಿದವರಿಗೇ ಮತಹಾಕುವ ಮಳ್ಳಮಂದಿ ಇರೋವಾಗ ನಾವುಗಳೇ ಚುನಾವಣೆಗೆ ನಿಂತರೆ ಮತಹಾಕಿ ಗೆಲ್ಲಿಸದೆ ಇದ್ದಾರೆಯೇ ಎಂಬ ಥಿಂಕಿಂಗ್ ತಲೆಗೆ ನುಸುಳುತ್ತಲೇ ಥ್ರಿಲ್ ಆಗಿ ತುರ್ತುಸಭೆ ಸೇರಲು ಸರ್ವ ಕಾವಿಶೀಲ್ಡ್‌ಗಳಿಗೂ ಕರೆಕೊಟ್ಟುಬಿಟ್ಟರು. ಹಿರಿಯ ಗಣಗಳಾದ ಗಿರಿಗೆರೆಶ್ರೀ ಆದಿಗಿರಿಶ್ರೀ ನಡೆದಾಡೋಗಾಡು, ಮತ್ತೂರುಸ್ವಾಮಿ, ಕಿತ್ತೂರುಸ್ವಾಮಿ ನಾಟಕದಸ್ವಾಮಿ, ದುರ್ಗದ ಅಭಿನಯ ಬಸವಣ್ಣೋರ ಜೊತೆಗೆ ಮರಿಕಿರಿ, ಕಿರಿಕಿರಿ ಸ್ವಾಮಿಗಳಾದ ಮಾದಾರೇಶ, ಮೇದಾರೇಶ ಭೋವಿವರ ಜೊತೆಗೆ ಉಡುಪಿವರ ಮುಂತಾದವರಿಗೆಲ್ಲಾ ಕಾಲ್‌ಹೋಯಿತು.

ಸಾವಿರಾರು ಸ್ವಾಮಿಗಳು ದೌಡು ಬಂದು ನೆರೆವಾಗ ಪೆಂಡಾಲ್ ಬಿರಿಯಿತು. ಹೆಂಗೆಲ್ಲಾರಾ ಆಗ್ಲಿ ಅಂತ ಕಾರ್ಯಕ್ರಮದ ಬಂದೋಬಸ್ತ್‌ಗೆ ಪೊಲೀಸ್‌ಪಡೆಯನ್ನೇ ಕರೆಸಲಾಯಿತು. ಸಭಾದ್ಯಕ್ಷತೆಗೆ ಹಿರಿಯರೂ, ರಾಜಕಾರಣಿಗಳ ಪರಮಾಪ್ತರೂ ಆದ ಗಿರಿಗೆರೆ ಹೈಟೆಕ್ ಸ್ವಾಮಿಗಳೆ ಪಸಂದು ಎಂಬ ತೀರ್ಮಾನಕ್ಕೆ ಬರಲಾಯಿತು. ಒಪ್ಪದವರೂ ಇದ್ದರಾದರೂ ಬಿಗಿನಿಂಗಲ್ಲೇ ಕಡ್ಡಿ ಆಡಿಸೋದೇಕೆಂದು ಗಪ್‌ಕುಂತರು. ಮೊದಲ ಮಾತು ಗಿರಿಗೆರೆಯೋರಿಂದ್ಲೆ ಶುರುವಾತು. ’ನೋಡಿ, ಈ ವೀರಸಾಧಿಕ್ ರಾಜಕಾರಣಿಗಳು ಚುನಾವಣೆ ಹತ್ತಿರ ಬಂದಾಗ ಮಠಕ್ಕೆ ನುಗ್ಗಿ ಕಾಲು ಹಿಡ್ಕೋತಾವೆ. ಆಮೇಲೆ ’ಕ್ಯಾರೆ’ ಅಂಬೋಲ್ಲ. ಮಠಕ್ಕೆ ಅನುದಾನ ಕೊಡೋಕೆ ಇವರಪ್ಪನ ಮನೆರೊಕ್ಕ ತಂದು ಕೊಡೋರ್‍ಹಂಗ ಪಿರಿಪಿರಿಮಾಡ್ತವೆ.

ನಮ್ಮ ಸಮಾಜದ ಜನ ಎಪ್ಪತ್ತು ವರ್ಷದಿಂದ ಮೀಸಲಾತಿನೂ ಸಿಗ್ದೆ ಇದ್ದಲ್ಲೇ ಅವೆ. ಇವರುಗಳು ಇಂಡಿಯಾನು ಶೈನಿಂಗೂ ಮಾಡಲಿಲ್ಲ, ಸಿಂಗಾಪುರ್‍ನೂ ಮಾಡಲಿಲ್ಲ. ಚಿನ್ನದ ದಾರಿನೂ ಇಲ್ಲ. ಆದರೆ ಇವು ಮಾತ್ರ ಮೈ ತುಂಬಾ ಚಿನ್ನ ಮನೆ ತುಂಬಾ ರೊಕ್ಕ ಮಾಡ್ಕೊಂಡು ಎಕ್ಸಟ್ರಾ ರೊಕ್ಕನಾ ಸ್ವಿಸ್ನಾಗೆ ಮಡಗ್ತಾ ಅವೆ! ಇನ್ನು ಮುಂದೆ ನಮ್ಮ ಆಶೀರ್ವಾದ ಇವರಿಗಿಲ್ಲ, ನಾವೆಯಾ ಯಲ್ಲಕ್ಕಸನ್ನಾಗೆ ನಿಂತು ಗೆಲ್ಲೋಣ್ರಿ. ಅಧಿಕಾರವಿಲ್ಲದೆ ಅಣುರೇಣು ತೃಣಕಾಷ್ಠವೂ ಚಲಿಸೋಲ್ರಪಾ… ತಿಳಿತ್ರಾ’ ಅನ್ನುತ್ಲೂವೆ ಆದಿಗಿರಿಶ್ರೀ ತಟಾರನೆ ಅನುಮೋದಿಸಿಯೇ ಬಿಟ್ಟರು. ’ನೋಡಿ ಸ್ವಾಮ್ಗುಳೆ, ಚುನಾವಣೆಗೆ ಮಠದ ರೊಕ್ಕ ಖರ್ಚು ಮಾಡಬಾರದೆಂಬುದೇ ನನ್ನ ಏಕೈಕ ಕಂಡೀಸನ್ನು’ ಎಂದು ಕ್ಯಾತೆ ತೆಗೆದವರು ಅಭಿನಯ ಬಸವಣ್ಣ.

’ಅದಕ್ಕೆ ಎದಕ್ರಿ ಮಠದ ರೊಕ್ಕ? ನೋಟು ಹೆಂಡ ಖಂಡ ಸೀರಿಪಂಚಿ ಹಂಚೋಕೆ ನಾವೇನ್ ತತ್ರಾಪಿ ಖಾದಿಗಳೆ? ಜಗದ್ಗುರುಗೋಳು….. ನಾವು ನಿಂತ್ರ ಭಕ್ತಾದಿಗಳೇ ಕಾಣಿಕೆ ಕೊಟ್ಟು ಕಾಲಿಗೂ ಬಿದ್ದು, ಓಟ್ನೂ ಹಾಕ್ತವೆ’ ಗಿರಿಗೆರೆಯೋರ ಮಾತಿಗೆ ಸರ್ವರೂ ಆನಂದ ತುಂಬಿದವರಂತಾದರೂ ಅಭಿನಯ ಬಸವಣ್ಣ ಅಬ್ಜಕ್ಶನ್ ರೈಸ್ ಮಾಡಿದರು. ’ಅಲ್ರಿ, ಈಗ ನಮ್ಮ ಜಾತಿಯೋನೇ ಸಿಎಂ ಆಗಿರೋವಾಗ ಇದೆಲ್ಲಾ ಬೇಕಾ?’ ಎಂದು ಮಾರಿ ಸೊಟ್ಟ ಮಾಡಿದರು ’ಆಫ್‌ಕೋರ್ಸ್. ನಾವೆ ಸಿಯಮ್ಮು, ಮಿನಿಸ್ಟರ್‌ಗಳಾದ್ರೆ ಬೆಟರಲ್ರಾ? ಇವರಿಗೆ ಬಟರ್ ಹಚ್ಚೋದೇ ತಪ್ಪುತ್ತಲ್ರಪಾ’ ಅಂದ ಗಿರಿಗೆರೆಶ್ರೀ ಒಳಗೇ ಕುಪಿತರಾಗಿ, ’ನಿಮಗೇನಾರ ಗೆಲ್ಲೋದ್ರಾಗೆ ಅನುಮಾನ ಐತ್ರೇನಿ’ ಎಂದು ದುರುಗುಟ್ಟಿದರು.

’ಕೃಷ್ಣನಾಣೆ ಇಲ್ಲಬಿಡಿ, ನಾವೆಲ್ಲಾ ಗೆದ್ದು ಸರ್ಕಾರ ರಚಿಸೋದುಂಟು, ರಾಮನಾಣೆ ಸತ್ಯಸ್ಯಸತ್ಯ’ ಎಂದು ಬಡಕಲು ದೇಹದಿಂದ ಕೀಂಚರ ದನಿ ತೆಗೆದ ಉಡುಪಿವರರು, ’ಅಂದ್ಹಾಗೆ ತರವಾಯ ಸಿಎಂ ಯಾರಾಗಬೇಕು? ಯಾರಾರಿಗೆ ಯಾವ ಖಾತೆ, ಈಗ್ಲೆ ಪಕ್ಕಾ ಆದಲ್ಲಿ ಮುಂದ ತ್ರಾಸಿರೋದಿಲ್ರಿ’ ಎಂದೂ ತಮ್ಮ ಮನದಿಂಗಿತನವನ್ನೂ ತೆರೆದಿಟ್ಟರು ನಡೆದಾಡೋಗಾಡು. ಈ ಮಾತು ಕೇಳಿದ್ದೇ ಸೆಂಟ್‌ಪರ್ಸೆಂಟ್ ಕಾವಿಗಳಾಗಲೇ ಪವರ್‌ಡ್ರೀಮ್ಗೆ ಜಾರಿದರು. ನಡೆದಾಡೋಗಾಡಿನ ಮಾತಿನ ಹಿಂದಿರೋ ಮಸಲತ್ತನ್ನು ಗ್ರಹಿಸಿದ ಗಿರಿಗೆರೆಯೋರು, ’ಕೇಳ್ರಿಲ್ಲೀ ಅಂತ ಗೊಗ್ಗರು ದನಿ ತೆಗೆದು ಡ್ರೀಮ್ಗೆ ಜಾರಿದವರನ್ನು ಡಿಸ್‌ಕನೆಕ್ಟ್ ಮಾಡಿದರಲ್ಲದೆ, ’ಮೊದಲು ಸಿಎಂ ಯಾರಾಗಬೇಕು ಅಂಬೋದ್ನ ನಮ್ಮಲ್ಲಿ ಗೆದ್ದ ಶಾಸಕರು ನಿರ್ಧರಿಸಲಿ. ಪ್ರಜಾಹಿತ, ಪ್ರಜಾಸತ್ತೆ ನಮಗೆ ಮುಖ್ಯ’ ಎಂದು ಅಡ್ಡಗೋಡೆಯ ಮೇಲೆ ಟಾರ್ಚ್ ಇಟ್ಟರು.

ಹಾಗೆ ನೋಡಿದರೆ ಉಳಿದೆಲ್ಲರಿಗಿಂತ ಧನಕನಕ, ವಸ್ತುವಾಹನ ಈವನ್ ಹೆಲಿಕ್ಯಾಪ್ಟರ್ ಮಡಗಿರೋರಾದ್ರೂ ತಮ್ಮ ಕೋಮು ವೀರಶೈವರಷ್ಟಿಲ್ಲವೆಂಬ ತರ್ಕಕ್ಕೆ ಬಿದ್ದ ಆದಿಗಿರೀಶ ’ಸದ್ಯಕ್ಕೆ ನಮ್ಮ ಗಿರಿಗೆರೆಯೋರೇ ಸಿಎಂ
ಅಂದ್ಕೋಂಡ್ರಾತೇಳ್ರಿ’ ಎಂದು ದಾಳ ಉರುಳಿಸಿ, ತಮ್ಮನ್ನು ಯಾರಾರ ನಾಮಿನೇಟ್ ಮಾಡಿಯಾರೇನೋ ಅಂತ ಪಿಳಿಪಿಳಿಸುವಾಗ ಮತ್ತೂರುಸ್ವಾಮಿಗೆ ತಲೆಸುತ್ತು ಬಂತು.

’ಕೇಳ್ರಿಲ್ಲಿ. ಆಗೋದಾದ್ರೆ ಒಬಿಸಿಗಳೋ ದಲಿತರೋ ಸಿಎಂ ಆಗ್ಲಿ’ ಕೊಕ್ಕೆ ಜಡಿದರು ಅಭಿನಯ ಬಸಣ್ಣೋರು.

’ಅವಿನ್ನೂ ಈಗಿನ್ನ ನಿಮ್ಮ ವರದಿಂದ ಹುಟ್ಟಿಬೆಳಿತಾ ಅವೆ. ಸದ್ಯಕ್ಕೆ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ದುಡೀಲಿ ಬಿಡ್ರಿ’ ರಾಂಗ್ ಆಗಿಬಿಟ್ಟರು ಡಿಂಗಾಲೇಶ.

’ಆತಾತು, ಯಾರಿಗೆ ಯಾವ ಖಾತೆ? ಅದಾರಯೋಳ್ರಿ’ ಚಡಪಡಿಸಿದರು ಬಸಣ್ಣೋರು.

’ಅಡ್ಡಿಯಿಲ್ಲ’ ಎಂದು ನಿಮೀಲನೇತ್ರರಾದ ಭಾವಿ ಸಿಎಂ ಗಿರಿಗೆರೆಯೋರು ಮಾತು ಮುಂದುವರೆಸಿದರು.

’ನಮ್ಮ ಆದಿಗಿರಿಯೋರ್‍ಗೆ ಫಿನಾನ್ಸ್’ ಅಂದರು.

’ಬ್ಯಾಡ್ರಿ, ನಮಗೆ ಹೋಮೇ ಬೇಕ್ರಿ’ ತಟ್ಟನಂದರು ಆದಿಗಿರೀಶ.

’ಇಲಿಲ್ಲ, ನಮ್ಮ ಸ್ವಾಮ್ಗುಳ್ಗೆ ಡಿಸಿಯಮ್ಮೇ ಮಾಡಬೇಕ್ರಿ’ ವಕ್ಕಲಿಗ ಭಕ್ತರು ಸಡನ್ನಾಗಿ ಆಕ್ರೋಶ ತೋರಿದರು. ದಿಗಿಲುಗೊಂಡ ಗಿರಿಗೆರೆಯೋರು, ’ಭಕ್ತರೂ ಬಂದಾರೇನ್ರಪ್ಪಾ. ಅಡ್ಡಿಯಿಲ್ಲ. ಗದ್ದಲಮಾಡ್ದೆ ಗಪ್‌ಕುಂದಿರ್ರಿ. ಹಂಗಾರೆ ನಮ್ಮ ಮತ್ತೂರಶ್ರೀಗಳಿಗೇ ಫಿನಾನ್ಸ್’ ತಿದ್ದುಪಡಿ ಮಾಡಿದರು.

’ನಮ್ಮ ಡಿಂಗಾಲೇಶರಿಗೆ ರೆವಿನ್ಯೂ ಕೊಟ್ಟರೆ ಹೆಂಗ್ ಬುದ್ದಿ’ ಗೊಣಗಿತವರ ಭಕ್ತಗಣ.

’ಭಕ್ತರೂ ಬಂದಿರೇನ್ರಿ! ಅಡ್ಡಿಯಿಲ್ಲ’ ಎಂದು ಹುಳ್ಳಗೆ ನಕ್ಕರು, ಗಿರಿಗೆರೆಯೋರು, ’ಅಂದಂಗೆ ನಮ್ಮ ಉಡುಪಿವರರಿಗೆ ಟೆಂಪಲ್‌ಗಳೆಂದ್ರೆ ಅಗದಿ ಪ್ರೇಮ. ಅವರಿಗೆ ಮುಜರಾಯಿ’ ಅಂದರು,

’ಶಟಪ್, ಅವರು ಸಿಯಮ್ಮು ಮೆಟೀರಿಯಲ್ಲು, ಯುನೊ? ಶ್ರೀಗಳಿಗೆ ಸ್ಟ್ರಾಂಗ್ ಖಾತೆ ಬೇಕ್ರಿ’ ಪರಕ್ಕೆ ನಿಂತರು ಕರ್ಮಸ್ಥಳದೋರು.

’ಹಂಗಾರೆ ಅಬ್ಕಾರಿ ಕೊಡ್ರಿ’ ನಕ್ಕರು ಭೋವಿವರ.

’ಅದು ನೀವೇ ಇಕ್ಕಳಿ. ಉಡುಪಿವರರಿಗೆ ರೆವಿನ್ಯೂ ಕೊಡಿ. ದಪ್ಪಗಾರೇ ಆದಾರು’ ಕರ್ಮಸ್ಥಳದೋರು ಪ್ಯಾರ್ ತೋರಿದರು.

’ಮತ್ತೆ, ರಾಗಾಪುರದ ಗೋಸ್ವಾಮ್ಗುಳ್ಗೆ?’ ಕೊಶ್ಚನ್ ಮಾಡಿದ್ದು ಗದಗಿನ ಮಠದೋರು.

’ಅವರಿಗೆ ಪಶುಸಂಗೋಪನಾನೇ ಖಾಯಂ’ ನಕ್ಕರು ಡಿಂಗಾಲೇಶ.

’ವಾರ್ತಾ ಮತ್ತು ಪ್ರಚಾರ?’ ಕೂಗಿದರು ಮಾದಾರೇಶ

’ಅದು ನಿಮ್ಮ ಪಿತೃಗಳಿಗೇ ಮೀಸಲು’ ನಕ್ಕರು ನಾಟಕದಸಾಮಿ.

’ಮತ್ತೆ ನಿಮಗೆ?’ ಅಣುಕಿಸಿದರು ಅಭಿನಯ ಬಸವಣ್ಣ.

’ಅವರಿಗೆ ಸಂಸ್ಕೃತಿ ಇಲಾಖೆ, ನಾಟ್ಕ ಮಾಡ್ಕೊಂಡಿರ್ತಾರೆ’ ಕಣ್ಣು ಮಿಟುಕಿಸಿದರು ಸೈಜಗಲ್ಲುಸಾಮಿ.

’ಅಷ್ಟಮಸಾಲಿ ಅಷ್ಟಮಠದೋರ್‍ಗೇನ್ರಿ?’ ಸಿಡಿದೆದ್ದರು ಭಕ್ತರು.

’ಅವರು ಸಭೆಗೇ ಬಂದಿಲ್ಲವಲ್ರೀ’ ಕಾಲೆಳೆದರು ಮತ್ತೂರುಸಾಮಿ.

’ಅವರು ನಿಂತ್ರೂ ಗೆಲ್ಲೋದಿಲ್ ಬಿಡ್ರಿ. ಎಂಎಲ್ಸಿ ಮಾಡಿದ್ರಾತು’, ತಿಪ್ಪೆಸಾರಿದರು ಹದಿಮೂರು ಸಾವಿರ ಮಠದೋರು.

’ರಾಜಕಾರಣಿಗೋಳು ಯಲಕ್ಷನ್ಗೆ ನಿಲ್ತಾರಲ್ರೀ?’ ಚಿಂತಿಸಿದರು ಸಂತೆಲಾಲ್. ’ಮೆಜಾರ್‍ಟಿನಾಗೆ ಗೆಲ್ಲೋರು ನಾವೆಯಾ. ಅವರುಗಳು ವಿರೋಧಪಕ್ಷದೋರ ಸಾಲ್ನಾಗೆ ಬಿದ್ದಿರ್ತಾರೆ’ ಹೂಂಕರಿಸಿದರು ಗಿರಿಗೆರೆಶ್ರೀ. ಅಭಿನಯಬಸಣ್ಣೋರೀಗ ಮೂಲಭೂತ ಸಮಸ್ಯೆ ಮುಂದಿಟ್ಟರು. ’ನಮ್ಮ ಕಾವಿಪಕ್ಷಕ್ಕೊಂದು ಚಿನ್ಹೆ ಬೇಕಲ್ರೀ…?’

’ನಮ್ಮ ಬಸವಣ್ಣನೇ ಸಿಂಬಲಾದ್ರೆ ಹೆಂಗೆ?’ ಕೊಶ್ಚನ್ ಮಾಡಿ ಆನ್ಸರ್ರೂ ಮುಂದಿಟ್ಟ ಅವರು ಪೇಟ ತೆಗೆದು ಗಾಳಿ ಹಾಕ್ಕೊಂಡ್ರು.

’ಬ್ಯಾಡ್ರಪ್ಪೋರೆ, ಲಿಂಗವೇ ನಮ್ಮ ಚಿಹ್ನೆ’ ಕೆಲವು ಕಾವಿಶೀಲ್ಡ್‌ಗಳು ಕೊಡವಿಕೊಂಡೆದ್ದರು. ’ಆಪದಿಲ್ಲೆ, ಅದು ಜಾತಿ ಸಂಕೇತ ಮಾರ್ರೆ’ ಕನಲಿದರು ಉಡುಪಿವರ. ’ಅದು ಸಮಾನತೆಯ ಸಂಕೇತಾರೀ’ ಮತ್ತೂರರು ಗುಡುಗಿದರು.

’ಹೋಗ್ಲಿ ಈಬತ್ತಿಗಟ್ಟಿ ಚಿನ್ಹೆ ಹೆಂಗೆ?’ ಡಿಂಗಾಲೇಶ್ವರರ ಹಪಾಹಪಿ.

’ಮೂರುನಾಮ ಯಾಕಾಗಬಾರ್‍ದು ಸ್ವಾಮ್ಗುಳೆ?’ ಕೊಲ್ಲೂರಸಾಮಿ ಕೊಲ್ಲುವವರಂತೆ ಮುನ್ನುಗಿದರು.

’ಹೌದ್ರಪಾ, ಶ್ರೀರಾಮನ ಹಣೆಯ ಮೇಲುಂಟು. ಅದೇ ಬೆಸ್ಟು, ಅಯೋಧ್ಯಾನಾಗೆ ರಾಮಮಂದಿರ ಆಗ್ತಿದೆ. ಗೊತ್ತುಂಟಾ’ ಉಡುಪಿವರ ಬೀಗಿ ಇತರರ ಹೊಟ್ಟಿ ಉರಿಸಿದರು.

’ನಾವು ಅಧಿಕಾರಕ್ಕೆ ಬಂದ್ವೋ ಅದರ ಅಪೋಸಿಟ್ನಾಗೆ ಬಸವಮಂದಿರ ಕಟ್ತೀವಿ…’ ಅಭಿನಯ ಬಸಣ್ಣೋರು ಚಾಲೆಂಜಿಂಗ್ ಸ್ಟಾರ್‌ನಂತಾಡಿದರು.

’ಹಂಗಾರೆ, ನಾವು ವಾಲ್ಮೀಕಿ ಸ್ಟಾಚ್ಯು ನಿಲ್ಲಿಸ್ತೀವಿ ಕಣ್ರಿ’ ಬೇಡರಸ್ವಾಮಿ ಶಪಥವನ್ನೇ ಮಾಡಿಬಿಟ್ಟರು.

’ಹಂಗಾರೆ ನಮ್ಮ ಕನಕಂದು ಯಾಕೆ ಆಗಬಾರ್‍ದರೀ?’ ಕೆಲವರು ಕಂಬಳಿ ಕೊಡವಿಕೊಂಡೆದ್ದರು. ಕಾವಿಶೀಲ್ಡ್‌ಗಳೆಲ್ಲಾ ಟೋಟಲ್ಲಾಗಿ ಕೂಗಾಡಿ ಕೈಕೈ ಮಿಲಾಯಿಸೋವಾಗ, ಲಾಠಿಚಾರ್ಜ್ ಮಾಡಲಾಗದೆ, ಒದ್ದು ಬಿಡಿಸಲಾಗದೆ ಪೋಲಿಸಪ್ಪಗಳು ಪರದೇಶಿಗಳಂತಾದರು. ಕಾವಿಗಳೆಲ್ಲಾ ಕರೆಂಟ್ ಬಡಿದವರಂತಾಡುತ್ತಾ ಕೈಗೆ ಸಿಕ್ಕಿದ್ದನ್ನು ಎತ್ತಿ ಎಸೆದಾಡುವಾಗ ಧಿಡೀರನೆ ವೇದಿಕೆ ಧಡಾರನೆ ಕುಸಿಯಿತು.

***

ನಿದ್ದೆಗಣ್ಣಿನಲ್ಲಿ ಮಂಚದಿಂದ ಬುಡಕ್ಕನುರಳಿ ನೆಲಕ್ಕೆ ಬಿದ್ದು, ನರಳಾಡುತ್ತಾ ಕಿಟಕಿಯತ್ತ ನೋಡಿದೆ. ಬೆಳಗಾಗುತ್ತಿದೆ! ಬೆಳಗಿನ ಜಾವದ ಕನಸು ನಿಜವಾಗುತ್ತಂತೆ ಹೌದ್ರಾ!?

ಡಾ. ಬಿ. ಎಲ್. ವೇಣು

ಬಿ.ಎಲ್. ವೇಣು
ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ.


ಇದನ್ನೂ ಓದಿ: ರಾಜಶೇಖರ ಹಳೆಮನೆ ಅವರ ಹೊಸ ಸಣ್ಣ ಕಥೆ ‘ಸೂತಕ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...