ಕೇರಳ ರಾಜ್ಯದಲ್ಲಿನ ಭೂರಹಿತ, ದನಿ ಇಲ್ಲದ ಜನರಿಗೆ ಭೂಮಿ ಹಾಗೂ ವಸತಿಯನ್ನು ಒದಗಿಸುವ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕೇರಳ ಸರ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಭೂಮಿ ಹಂಚಿಕೆಗಾಗಿ ‘ಪಟ್ಟಾಯಮ್ ಮೇಳ’ವನ್ನು ರಾಜ್ಯದ 14 ಜಿಲ್ಲಾ ಕೇಂದ್ರಗಳಲ್ಲಿ ಹಾಗೂ 77 ತಾಲ್ಲೂಕು ಕೇಂದ್ರಗಳಲ್ಲಿ ಮಂಗಳವಾರ (ನಾಳೆ) ಹಮ್ಮಿಕೊಳ್ಳಲಾಗಿದೆ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಐದು ವರ್ಷಗಳ ಒಳಗೆ ಅರ್ಹ ಫಲಾನುಭವಿಗಳಿಗೆಲ್ಲರಿಗೂ ಭೂಮಿಯನ್ನು ಒದಗಿಸುವುದು, ಎಲ್ಲ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಡುವುದು ಸರ್ಕಾರದ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಮನೆ ಇಲ್ಲದವರಿಗೆ 10 ಲಕ್ಷ ರೂ. ಹಾಗೂ ನಿವೇಶನ ಇಲ್ಲದವರಿಗೆ ಭೂಮಿಯನ್ನೂ ನೀಡಲಾಗುವುದು. ಎಲ್ಲಾ ಬುಡಕಟ್ಟು ಕುಟುಂಬಗಳಿಗೆ ಒಂದು ಎಕರೆ ಕೃಷಿ ಭೂಮಿಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಾಲ್ತಿಯಲ್ಲಿರುವ ವಿವಾಹ ವ್ಯವಸ್ಥೆ ಸುಧಾರಿಸಬೇಕು: ವರದಕ್ಷಿಣೆ ಹತ್ಯೆಗಳ ಬಗ್ಗೆ ಪಿಣರಾಯಿ ವಿಜಯನ್
ಬುಡಕಟ್ಟು ಜನರಿಗೆ ಭೂಮಿಯನ್ನು ಒದಗಿಸಲು ಬರಡು ಭೂಮಿ, ಹೆಚ್ಚುವರಿ ಭೂಮಿ ಹಾಗೂ ಗುತ್ತಿಗೆ ತೋಟಗಳನ್ನು ಬಳಸಿಕೊಳ್ಳಲಾಗುವುದು. ಶೋಷಿತ ವರ್ಗಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
12,000 ಕುಟುಂಬಗಳಿಗೆ ಭೂಮಿ ನೀಡುವ ಯೋಜನೆ ರೂಪಿಸಲಾಗಿತ್ತು. ತಾಂತ್ರಿಕ ತೊಡಕುಗಳನ್ನು ಸರಳೀಕರಣಗೊಳಿಸಿರುವುದರಿಂದ 13,500 ಮಂದಿಗೆ ಭೂಮಿ ನೀಡಲು ಸಾಧ್ಯವಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ದನಿ ಇಲ್ಲದ ಹಾಗೂ ಭೂ ರಹಿತರಿಗೆ ಭೂಮಿಯನ್ನು ವರ್ಗಾಹಿಸಲು ವಿಶೇಷ ಭೂ ಬ್ಯಾಂಕ್ ಸ್ಥಾಪಿಸಿ ಡಿಜಿಟಲ್ ಸಮೀಕ್ಷೆಯ ಮೂಲಕ ಫಲಾನುಭವಿಗಳನ್ನು ಗುರುತಿಸಲಾಗುವುದು. ಮೊದಲ ಹಂತದ ಸಮೀಕ್ಷೆ ನಡೆಸುವುದಕ್ಕಾಗಿ 339 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ‘ಕೇರಳ ಮರುನಿರ್ಮಾಣ’ ಹೆಸರಲ್ಲಿ ನಾಲ್ಕು ವರ್ಷಗಳೊಳಗೆ ಸಮೀಕ್ಷೆ ನಡೆಸಲಾಗುವುದು ಎಂದು ವಿಜಯನ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ರೂ. ಆರ್ಥಿಕ ನೆರವು


