ಉತ್ತರಪ್ರದೇಶದಲ್ಲಿ ಕಳೆದ ತಿಂಗಳಿನಿಂದ ಮಕ್ಕಳನ್ನು ಕಾಡುತ್ತಿರುವ ವೈರಲ್ ಜ್ವರ ರಾಜ್ಯದಲ್ಲೂ ಕಾಣಿಸಿಕೊಂಡಿದೆ. ವಿವಿಧ ಜಿಲ್ಲೆಗಳಲ್ಲಿ ನೂರಾರು ಮಕ್ಕಳು ಈ ವೈರಾಣು ಸೋಂಕು ಮತ್ತು ಡೆಂಗ್ಯೂನಿಂದ ಬಳಲುತ್ತಿವೆ ಎಂದು ವರದಿಯಾಗಿದೆ.
ಯಾದಗಿರಿ, ಬಳ್ಳಾರಿ, ವಿಜಯಪುರ, ಕೊಪ್ಪಳ, ಬೆಂಗಳೂರು, ಗದಗ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಮಂಗಳೂರಿನ ಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಂಡಿದೆ. ಯಾದಗಿರಿ ಮತ್ತು ಗದಗದಲ್ಲಿ ಹೆಚ್ಚಿನ ಮಕ್ಕಳು ಈ ಸೋಂಕಿಗೆ ತುತ್ತಾಗಿದ್ದಾರೆ.
ಇದು ಮಳೆಗಾಲವಾದ್ದರಿಂದ ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ, ನೆಗಡಿ ಕಣಿಸಿಕೊಳ್ಳುತ್ತದೆ. ಸಣ್ಣ ಜ್ವರ ಕೂಡ ಹೆಚ್ಚು ದಿನ ಇರುತ್ತದೆ. ಜ್ವರ ಉಲ್ಬಣಿಸಿದರೆ ಗುಣವಾಗುವಾಗುವುದು ತಡವಾಗುತ್ತದೆ. ವೈರಲ್ ನ್ಯುಮೊನಿಯಾಗೆ ತಿರುಗುತ್ತದೆ. ಆಗ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ‘ಒಂದು ಮಗುವಿನಲ್ಲಿ ವೈರಾಣು ಸೋಂಕು ಕಾಣಿಸಿಕೊಂಡರೆ ಆ ಮಗುವಿನೊಂದಿಗೆ ಇನ್ನೊಂದು ಮಗು ಬೆರೆಯಲು ಬಿಡಬಾರದು. ವೈರಾಣು ಜ್ವರಕ್ಕೆ ನಿರ್ದಿಷ್ಟ ಔಷಧ ಇರುವುದಿಲ್ಲ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ- ಹಸಿವಿನಿಂದ ಹಸುಗೂಸು ಸಾವು, ಬದುಕುಳಿದ 3 ವರ್ಷದ ಮಗು
ವೈರಲ್ ಸೋಂಕಿನ ಲಕ್ಷಣ ಇರುವ ಬಹಳಷ್ಟು ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಯಾರಲ್ಲೂ ಸೋಂಕು ದೃಢಪಟ್ಟಿಲ್ಲ. ಹಾಗಾಗಿ, ಕೋವಿಡ್ ಸೋಂಕಿನ ಭಯ ಬೇಡ ಎಂದಿದ್ದಾರೆ.
ಕಳೆದೊಂದು ವಾರದಿಂದ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯ ಮಕ್ಕಳ ವಾರ್ಡ್ನ 30 ಹಾಸಿಗೆಗಳಲ್ಲಿ 26 ಹಾಸಿಗೆಗಳು ಭರ್ತಿಯಾಗಿವೆ. ಆರು ಮಕ್ಕಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಯಾದಗಿರಿಯಲ್ಲಿ ಒಂದೇ ದಿನ 750 ಮಕ್ಕಳಿಗೆ ಜ್ವರ, ಕೆಮ್ಮು,ನೆಗಡಿ ಕಾಣಿಸಿಕೊಂಡಿದೆ.
ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ವೈರಲ್ ಜ್ವರದಿಂದ ಹಾಸಿಗೆ ಸಿಗದೆ ಮಕ್ಳಳು, ಪೋಷಕರು ಪರದಾಡಿದ ಘಟನೆಗಳು ನಡೆದಿವೆ. ಗದಗ ಜಿಲ್ಲೆಯಲ್ಲಿ 327 ಕ್ಕೂ ಹೆಚ್ಚು ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಆರೋಗ್ಯ ಸಮಸ್ಯೆ ಎದುರಾಗಿದೆ. ಧಾರವಾಡ ಜಿಲ್ಲೆಯಲ್ಲಿ 200 ಕ್ಕಿಂತ ಹೆಚ್ಚು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆಯಾ ಜಿಲ್ಲೆಗಳ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಮಯದಲ್ಲಿ ಮಕ್ಕಳ ಬಗ್ಗೆ ಪೋಷಕರು ತೀವ್ರ ನಿಗಾ ವಹಿಸಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಕುದಿಸಿ ಆರಿಸಿದ ನೀರು ನೀಡುವುದು, ಪೌಷ್ಠಿಕ ಆಹಾರ, ಸ್ವಚ್ಛತೆ, ರಸ್ತೆ ಬದಿಯ ತಿಂಡಿಗಳಿಮದ ಮಕ್ಕಳನ್ನೂ ದೂರವಿರಿಸುವುದು, ಮಕ್ಕಳನ್ನು ಮನೆಯಲ್ಲಿ ನೆನೆಯಲು ಬಿಡದೆ ಇರುವುದಂತಹ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ.
ಇನ್ನು, ಮಕ್ಕಳು ಬೆಡ್, ಚಿಕಿತ್ಸೆ ದೊರೆಯದೆ ಪರದಾಡುತ್ತಿರುವುದಕ್ಕೆ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. “ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಹಾಗೂ ವೈರಲ್ ಜ್ವರ ಮಕ್ಕಳನ್ನು ಕಾಡುತ್ತಿದೆ, ಪುಟ್ಟ ಮಕ್ಕಳ ಚಿಕಿತ್ಸೆಗೆ ಬೆಡ್, ಚಿಕಿತ್ಸೆ ಸಿಗುತ್ತಿಲ್ಲ. ಕೊರೊನಾ ಕ್ಲಿಷ್ಟ ಪರಿಸ್ಥಿತಿಯಿಂದ ಬಿಜೆಪಿ ಸರ್ಕಾರ ಪಾಠ ಕಲಿತಿಲ್ಲ, ವೈದ್ಯಕೀಯ ವ್ಯವಸ್ಥೆ ಬಲಗೊಳಿಸಿಲ್ಲ. ಮಕ್ಕಳ ಜೀವ ಮತ್ತು ಜೀವನದ ಜೊತೆ ಆಟವಾಡುತ್ತಿದೆ ಭ್ರಷ್ಟ ಸರ್ಕಾರ” ಎಂದು ಟ್ವೀಟ್ ಮಾಡಿದೆ.
ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಹಾಗೂ ವೈರಲ್ ಜ್ವರ ಮಕ್ಕಳನ್ನು ಕಾಡುತ್ತಿದೆ, ಪುಟ್ಟ ಮಕ್ಕಳ ಚಿಕಿತ್ಸೆಗೆ ಬೆಡ್, ಚಿಕಿತ್ಸೆ ಸಿಗುತ್ತಿಲ್ಲ.
ಕರೋನಾ ಕ್ಲಿಷ್ಟ ಪರಿಸ್ಥಿತಿಯಿಂದ @BJP4Karnataka ಸರ್ಕಾರ ಪಾಠ ಕಲಿತಿಲ್ಲ, ವೈದ್ಯಕೀಯ ವ್ಯವಸ್ಥೆ ಬಲಗೊಳಿಸಿಲ್ಲ.
ಮಕ್ಕಳ ಜೀವ & ಜೀವನದ ಜೊತೆ ಆಟವಾಡುತ್ತಿದೆ ಭ್ರಷ್ಟ ಸರ್ಕಾರ.#MakkaligeMosa
— Karnataka Congress (@INCKarnataka) September 18, 2021
ಇದನ್ನೂ ಓದಿ: ಉತ್ತರ ಪ್ರದೇಶ: ಫಿರೋಜಾಬಾದ್ನಲ್ಲಿ ಶಂಕಿತ ಡೆಂಗ್ಯೂಗೆ 45 ಮಕ್ಕಳು ಸೇರಿ 53 ಮಂದಿ ಬಲಿ