ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ತಿಗಳರಪಾಳ್ಯದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಐದು ದಿನಗಳ ನಂತರ ಬೆಳಕಿಗೆ ಬಂದಿದೆ. ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.
9 ತಿಂಗಳ ಹಸುಗೂಸು ಹಸಿವಿನಿಂದ ಮೃತಪಟ್ಟಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ವರ್ಷದ ಬಾಲಕಿ ಕಳೆದ ಐದು ದಿನಗಳಿಂದ ಮೃತದೇಹಗಳ ಮಧ್ಯೆಯಿದ್ದು ಬದುಕಿದೆ. ಆಹಾರವಿಲ್ಲದೆ ಅಸ್ವಸ್ಥವಾಗಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಭಾರತಿ (50), ಸಿಂಚನ (33), ಸಿಂಧುರಾಣಿ (30), ಮಧುಸಾಗರ್ (26) ಮತ್ತು ಒಂಭತ್ತು ತಿಂಗಳ ಮಗು ಎಂದು ಗುರುತಿಸಲಾಗಿದೆ. ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಗುತ್ತದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯಲಹಂಕ – ತಮ್ಮ ‘ನೆಲದ ಹಕ್ಕು’ಗಳಿಗಾಗಿ ಬಿಡಿಎ ವಿರುದ್ದ 17 ಹಳ್ಳಿಗಳ ರೈತರಿಂದ ಬೃಹತ್ ಪ್ರತಿಭಟನೆ
ಮನೆಯಲ್ಲಿ ನಡೆದ ಜಗಳದಿಂದಾಗಿ ಮನೆಬಿಟ್ಟು ಹೋಗಿದ್ದ ಮನೆಯ ಯಜಮಾನ ಹುಲಗೆರೆ ಶಂಕರ್, ಐದು ದಿನಗಳ ನಂತರ ಮನೆಗೆ ಹಿಂದಿರುಗಿದಾಗ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದು, ಮನೆಯ ಯಜಮಾನ ಹುಲಗೆರೆ ಶಂಕರ್ನಿಂದ ಮಾಹಿತಿ ಪಡೆಯುತ್ತಿದ್ದಾರೆ.
ಹುಲಗೆರೆ ಶಂಕರ್ ಅವರ ಇಬ್ಬರು ಹೆಣ್ಣು ಮಕ್ಕಳು ಗಂಡನ ಮನೆ ತೊರೆದು ತವರು ಮನೆ ಸೇರಿದ್ದರು. ಇದರಿಂದ ಮನೆಯಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳುಹಿಸಲು ತಂದೆ ಶಂಕರ್ ತುಂಬಾ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೊರ ಹೋಗಿದ್ದರು. ಇದಾದ ಮೇಲೆ ಹಲವು ಬಾರಿ ಮನೆಗೆ ಕರೆ ಮಾಡಿದರೂ ಯಾರು ಉತ್ತರಿಸಿಲ್ಲ. ಮನೆ ಬಳಿ ಬಂದು ನೋಡಿದಾಗ, ಮನೆ ಬಾಗಿಲು ಹಾಕಲಾಗಿತ್ತು. ಇದರಿಂದ ಭಯಗೊಂಡ ಶಂಕರ್ ಅವರು ಬಾಗಿಲು ಒಡೆದು ಒಳ ಹೋಗಿದ್ದಾರೆ ಆಗ ಎಲ್ಲರೂ ಮೃತಪಟ್ಟಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಮನೆಯೊಳಗೆ ಕುಟುಂಬದ ಐದು ಮೃತ ದೇಹಗಳು ಕಂಡು ಬಂದಿವೆ. ಒಂದು ಮಗು ಬದುಕಿದೆ. ಸಾವಿನ ಹಿಂದಿನ ನಿಖರ ಕಾರಣ ನಮಗೆ ತಿಳಿದಿಲ್ಲ. ನಾವು ಮಗುವನ್ನು ರಕ್ಷಿಸಿದ್ದೇವೆ. ಆಸ್ಪತ್ರೆಗೆ ದಾಖಲಿಸಿದ್ದೇವೆ. ಮಗು ಆಘಾತಕ್ಕೆ ಒಳಗಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ‘ಬಾಲ್ಯ ವಿವಾಹ ನೋಂದಣಿ ಮಸೂದೆ’ ಅಂಗೀಕರಿಸಿದ ರಾಜಸ್ಥಾನ ವಿಧಾನಸಭೆ!