ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಪುನರುಚ್ಚರಿಸಿದ್ದಾರೆ. ಕಾರ್ಯಕ್ರಮವೊಂದರ ಉದ್ಘಾಟನಾ ಸಮಾರಂಭದ ನಂತರ ಮಾತನಾಡಿದ ಸಿಎಂ, ರಾಜ್ಯದ ಎಡಪಂಥೀಯ ಸರ್ಕಾರವು ಮೊದಲಿನಿಂದಲೂ ಈ ವಿಷಯದಲ್ಲಿ ತನ್ನ ನಿಲುವನ್ನು ಹಾಗೆ ಉಳಿಸಿಕೊಂಡಿದೆ ಎಂದು ಒತ್ತಿ ಹೇಳಿದ್ದಾರೆ.
“ನಿರ್ದಿಷ್ಟ ಧರ್ಮಗಳಿಗೆ ಸೇರಿರುವುದು ದೇಶದ ಪೌರತ್ವ ಪಡೆಯುವ ಮಾನದಂಡವಲ್ಲ. ಜನರಿಗೆ ಯಾವುದೇ ಧರ್ಮವನ್ನು ನಂಬುವ ಅಥವಾ ಯಾವುದೇ ಧರ್ಮವನ್ನು ನಂಬದೇ ಬದುಕುವ ಹಕ್ಕಿದೆ” ಎಂದು ಪಿಣರಾಯಿ ಹೇಳಿದ್ದಾರೆ.
ಇದನ್ನೂ ಓದಿ: ಸಿಎಎ ಹಿಂಪಡೆಯುವಂತೆ ನಿರ್ಣಯ ಅಂಗೀಕರಿಸಿದ ತಮಿಳುನಾಡು ಅಸೆಂಬ್ಲಿ: ಬಿಜೆಪಿ ಮಿತ್ರ ಪಕ್ಷದ ಬೆಂಬಲ
ಇದೇ ವೇಳೆ, ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಸಿಎಎ ಜಾರಿಗೆ ತಂದಿರುವುದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು, “ಕಾಯ್ದೆಯು ನಿರ್ದಿಷ್ಟ ಧರ್ಮದ ಆಧಾರದ ಮೇಲೆ ಜನರನ್ನು ಪ್ರತ್ಯೇಕಿಸುತ್ತದೆ ಮತ್ತು ಅವರ ಪೌರತ್ವದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ವಿಚಾರಗಳಲ್ಲಿ ಎಡಪಂಥೀಯರು ಯಾವಾಗಲೂ ಸ್ಪಷ್ಟ ಮತ್ತು ಗಟ್ಟಿಯಾದ ನಿಲುವನ್ನು ತೆಗೆದುಕೊಂಡಿದ್ದಾರೆ” ಎಂದು ಹೇಳಿದ್ದಾರೆ.
“ನಾವು ಪೌರತ್ವ ಕಾಯ್ದೆಯನ್ನು ಜಾರಿಗೆ ತರಲು ಸಿದ್ಧರಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ನಿಯಮವನ್ನು, ರಾಜ್ಯ ಸರ್ಕಾರ ಜಾರಿಗೊಳಿಸದೆ ಇರಲು ಹೇಗೆ ಸಾಧ್ಯ ಎಂದು ಅನೇಕರು ನಮ್ಮನ್ನು ಗೇಲಿ ಮಾಡಿದ್ದರು. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಇಲ್ಲಿ ಜಾರಿಗೆ ತರಲಾಗುವುದಿಲ್ಲ ಎಂಬುದು ನಾವು ಅಂದು ತೆಗೆದುಕೊಂಡ ನಿಲುವುವಾಗಿದೆ. ಈ ನಿಲುವು ಇಂದು ಮತ್ತು ಮುಂದೆಯೂ ಅದೇ ಆಗಿರುತ್ತದೆ” ಎಂದು ಸಿಎಂ ಹೇಳಿದ್ದಾರೆ.
ಸಿಎಎಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದು, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ಪಡೆಯಲು ಅವಕಾಶ ನೀಡುತ್ತದೆ. ಈ ಶಾಸನಕ್ಕೆ ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಡಿಸೆಂಬರ್ 12, 2019 ರಂದು ಸಹಿ ಹಾಕಿದ್ದರು.
ವಿರೋಧ ಪಕ್ಷಗಳು ಸೇರಿದಂತೆ ದೇಶದ ಬಹುತೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಕಾಯ್ದೆಯನ್ನು ವಿರೋಧಿಸಿ ಐತಿಹಾಸಿ ಪ್ರತಿಭಟನೆಗಳು ನಡೆದಿದ್ದವು.
ಇದನ್ನೂ ಓದಿ: ಸರಕಾರಿ ಜಾಹೀರಾತು 100% ಕಡಿತ: ಸಿಎಎ ಪ್ರತಿಭಟನೆಗಳ ವರದಿ ಮಾಡಿದ್ದಕ್ಕೆ ಬೆಲೆ ತೆರುತ್ತಿದೆಯೇ ವಾರ್ತಾಭಾರತಿ ಕನ್ನಡ ದೈನಿಕ?