ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಿಗೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಬಹಿರಂಗ ಬೆದರಿಕೆ ಹಾಕಿದ್ದರ ವಿರುದ್ಧ ಪ್ರತಿಭಟನೆ ನಡೆಸಿರುವ ರೈತರು, ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಹೆಲಿಪ್ಯಾಡ್ ಅನ್ನು ಆಕ್ರಮಿಸಿಕೊಂಡಿದ್ದಾರೆ.
ವಿವಾದಿತ ಕೃಷಿ ಕಾನೂನುಗಳ ವಿರುದ್ಧದ ಹೋರಾಟದ ನೇತೃತ್ವ ವಹಿಸಿರುವ ರೈತ ಒಕ್ಕೂಟಗಳ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾದ ರೈತ ನಾಯಕರಿಗೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಇತ್ತಿಚೆಗೆ ಸಾರ್ವಜನಿಕ ಸಭೆಯಲ್ಲಿ ಬಹಿರಂಗ ಬೆದರಿಕೆ ಹಾಕಿದ್ದರು.
ಇಂದು ಉತ್ತರ ಪ್ರದೇಶದ ಟಿಕುನಿಯಾದಲ್ಲಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಅವರ ಕಾರ್ಯಕ್ರಮ ಆಯೋಜನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಟಿಕುನಿಯಾದ ಮಹಾರಾಜ ಅಗ್ರಾಸೆನ್ ಮೈದಾನದಲ್ಲಿನ ಹೆಲಿಪ್ಯಾಡ್ ಅನ್ನು ರೈತರು ಆಕ್ರಮಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್ ಯಶಸ್ವಿಯಾಗಿದೆ: ರೈತ ಮುಖಂಡ ರಾಕೇಶ್ ಟಿಕಾಯತ್
The farmers have taken over the helipad in Teekuniya, Tehsil Nighasan, Kheri, UP where the Deputy CM of UP was about to land. https://t.co/h3Mz7mAdVt pic.twitter.com/k0bE7zQDep
— Kisan Ekta Morcha (@Kisanektamorcha) October 3, 2021
ಕಾರ್ಯಕ್ರಮ ನಡೆಸುವುದಿದ್ದರೇ ಇಲ್ಲಿಯೇ ಬನ್ನಿ, ನಿಮ್ಮ ಬೆದರಿಕೆಗೆ ಬೆದರದೆ ನಾವು ಇಲ್ಲಿಗೆ ಬಂದಿದ್ದೇವೆ ಎಂದು ರೈತರು ಹೇಳಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ರೈತರು, ಕಪ್ಪು ಧ್ವಜಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ರೈತ ಮುಖಂಡ ತೇಜಿಂದರ್ ಸಿಂಗ್ ವಿರ್ಕ್ ಮತ್ತು ಇತರ ರೈತ ಮುಖಂಡರ ನೇತೃತ್ವದಲ್ಲಿ, ಸಾವಿರಾರು ರೈತರು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಅವರ ಹೆಲಿಪ್ಯಾಡ್ ತಲುಪಿ, ಇಲ್ಲಿಯೇ ಕಾರ್ಯಕ್ರಮವನ್ನು ನಡೆಸುವಂತೆ ಪಟ್ಟು ಹಿಡಿದು ಧರಣಿ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಈ ಹಿಂದೆಯೂ ನೇರವಾಗಿಯೇ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಅವಹೇಳನಕಾರಿ ವ್ಯಂಗ್ಯಚಿತ್ರ ಹಂಚಿಕೊಂಡಿತ್ತು. ಜೊತೆಗೆ ಉತ್ತರ ಪ್ರದೇಶಕ್ಕೆ ಬರದಂತೆ ಬೆದರಿಕೆ ಹಾಕಿತ್ತು. ಇದಕ್ಕೆ ಅಂಜದ ರೈತರು ಮುಜಾಫರ್ನಗರದಲ್ಲಿ ಕಿಸಾನ್ ಮಹಾಪಂಚಾಯತ್ ಮೂಲಕ ಉತ್ತರ ನೀಡಿದ್ದರು. ಈಗ ಮತ್ತೆ ಹೆಲಿಪ್ಯಾಡ್ ಆಕ್ರಮಿಸಿಕೊಳ್ಳೂವ ಮೂಲಕ ಉಪಮುಖ್ಯಮಂತ್ರಿಗೆ ಸೆಡ್ಡು ಹೊಡೆದಿದ್ದಾರೆ.
ಇದನ್ನೂ ಓದಿ: ಹರಿಯಾಣ: ಪ್ರತಿಭಟನಾನಿರತ ರೈತರ ಮೇಲೆ ಮತ್ತೆ ಜಲ ಫಿರಂಗಿ ಬಳಸಿದ ಪೊಲೀಸರು