ಕರ್ನಾಟಕದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚುತ್ತಿದ್ದು ಅವುಗಳನ್ನು ಸರ್ಕಾರ ನಿಗ್ರಹಿಸಬೇಕು ಎಂಬ ಹಕ್ಕೊತ್ತಾಯ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿರುವ ಹೊತ್ತಿನಲ್ಲಿಯೇ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿವಂತೆ ಮಾತಾನಾಡಿದ್ದಾರೆ.
ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗಾಗಿ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು “ಸಮಾಜದಲ್ಲಿ ಹಲವಾರು ಭಾವನೆಗಳಿವೆ. ಆ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕಾಗಿದೆ. ನೈತಿಕತೆ ಇಲ್ಲದೇ ನಾವು ಬದುಕಲು ಸಾಧ್ಯವೇ?” ಎಂದಿದ್ದಾರೆ.
ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ಸಮಾಜದಲ್ಲಿ ಹಲವಾರು ಭಾವನೆಗಳಿವೆ. ಆ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕಾಗಿದೆ. ಭಾವನೆಗಳಿಗೆ ಧಕ್ಕೆಯಾದಾಗ ಸಹಜವಾಗಿ ಕ್ರಿಯೆ-ಪ್ರತಿಕ್ರಿಯೆ ನಡೆಯುತ್ತವೆ. ಇಂಥ ಸಂದರ್ಭದಲ್ಲಿ ಒಂದು ಸರ್ಕಾರವಾಗಿ ನಮ್ಮ ಕರ್ತವ್ಯ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಾಮಾಜಿಕವಾಗಿಯೂ ಸಾಮರಸ್ಯ ಕಾಪಾಡಲು ನಾವೆಲ್ಲರೂ ಕ್ರಮ ಕೈಗೊಳ್ಳಬೇಕು. ಅದಕ್ಕೆ ಎಲ್ಲರೂ ಸಹಕಾರ ಕೊಡಬೇಕು” ಎಂದಿದ್ದಾರೆ.
ಮುಂದುವರಿದು ಕೆಲವು ಯುವಕರು ಏನಾದರೂ ಕೈಗೆತ್ತುಕೊಂಡು, ಈಗ ಅವರ ಒಂದು, ಈ ಸಮಾಜದ ಭಾವೆನೆಗಳಿಗೆ ಧಕ್ಕೆಯಾಗದಂತೆ ಅವರು ಕೂಡ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಇದೊಂದು ಸಮಾಜಿಕವಾಗಿರುವ ಪ್ರಶ್ನೆ ಇದೆ. ಸಮಾಜದಲ್ಲಿ ಮೊರಾಲಿಟಿ ಇರಬೇಕು. ನೈತಿಕತೆ ಇಲ್ಲದೇ ನಾವು ಬದಕಲು ಸಾಧ್ಯವೇ? ಎಂದಿದ್ದಾರೆ.
ನಿಮ್ಮ ಶಾಸಕರೆ ಎಂದು ಪತ್ರಕರ್ತರ ಪ್ರಶ್ನೆಯನ್ನು ತುಂಡರಿಸಿದ ಅವರು, ನೈತಿಕತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಇವತ್ತು ನಾವು ನಮ್ಮಲ್ಲ ಸಂಬಂಧಗಳು, ಶಾಂತಿ ಸುವ್ಯವಸ್ಥೇ ಇರುವುದು ನಮ್ಮ ಮೇಲೆ ನಾವು ನಿಯಂತ್ರಣವಿರುವುದರಿಂದ, ನೈತಿಕತೆಯಿಂದ. ನೈತಿಕತೆ ಇಲ್ಲದಾಗ ಎಲ್ಲಾ ಥರದ ಘಟನೆಗಳು ನಡೆಯುತ್ತವೆ ಎಂದಿದ್ದಾರೆ.
ಸಿಎಂರವರ ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹಲವಾರು ಜನ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸದ್ದಾರೆ.
ಮಾನ್ಯ ಬಸವರಾಜ ಬೊಮ್ಮಾಯಿಯವರೆ, ರಾಜ್ಯದ ಮುಖ್ಯಮಂತ್ರಿಯಾಗಿ ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿರುವುದು ಎಷ್ಟು ಸರಿ? ಜನರ ಭಾವನೆಗಳಿಗೆ ಧಕ್ಕೆಯಾದಾಗ ಅವರಿಗೆ ಕಾನೂನನ್ನು ಕೈಗೆತ್ತಿಕೊಳ್ಳುವ ಅವಕಾಶ ತಮ್ಮ ಆಡಳಿತದಲ್ಲಿಇದೆಯೇ? ಹಾಗಾದರೆ ಗೃಹ ಇಲಾಖೆ ಇರುವುದಾದರೂ ಯಾಕಾಗಿ? ಎಂದು ಸಾಮಾಜಿಕ ಕಾರ್ಯಕರ್ತ ಫೈಜಲ್ ಪಿರಾಜೆ ಪ್ರಶ್ನಿಸಿದ್ದಾರೆ.
ಮಾನ್ಯ @BSBommai ಅವರೇ, ರಾಜ್ಯದ ಮುಖ್ಯಮಂತ್ರಿಯಾಗಿ ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿರುವುದು ಎಷ್ಟು ಸರಿ?
ಜನರ ಭಾವನೆಗಳಿಗೆ ಧಕ್ಕೆಯಾದಾಗ ಅವರಿಗೆ ಕಾನೂನನ್ನು ಕೈಗೆತ್ತಿಕೊಳ್ಳುವ ಅವಕಾಶ ತಮ್ಮ ಆಡಳಿತದಲ್ಲಿಇದೆಯೇ? ಹಾಗಾದರೆ ಗೃಹ ಇಲಾಖೆ ಇರುವುದಾದರೂ ಯಾಕಾಗಿ?#Karnataka #Mangaluru #MoralPolicing #BommaiStopMoralPolicing pic.twitter.com/0C0RXkKH3R
— Faizal Peraje ?? (@FaizalPeraje) October 13, 2021
ಬೆಂಗಳೂರಿನಲ್ಲಿ ಮುಸಲ್ಮಾನ ಅನೈತಿಕ ಗೂಂಡಾಗಳು ಭಿನ್ನ ಧರ್ಮದ ಗಂಡು ಹೆಣ್ಣಿನ ಮೇಲೆ ಹಲ್ಲೆ ನಡೆಸಿದಾಗ ಸಿಡಿದೆದ್ದು ಕಾನೂನಿನ ಪಾಠ ಮಾಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಮಂಗಳೂರಿನ ಸಂಘಪರಿವಾರದ ಅನೈತಿಕ ಗೂಂಡಾಗಿರಿಯ ವಿಷಯದಲ್ಲಿ ಉಲ್ಟಾ ಹೊಡೆದಿದ್ದಾರೆ. ಭಾವನೆಗಳಿಗೆ ಧಕ್ಕೆ, ಕ್ರಿಯೆಗೆ ಪ್ರತಿಕ್ರಿಯೆ ಎಂಬುದು ಎಲ್ಲಾ ಮತೀಯವಾದಿಗಳ ರೆಡಿಮೇಡ್ ಡೈಲಾಗ್. ಸಂವಿಧಾನದ ಮೇಲೆ ಪ್ರತಿಜ್ಞೆ ಮಾಡಿ ಅಧಿಕಾರ ಸ್ವೀಕರಿಸಿರುವ ಮುಖ್ಯಮಂತ್ರಿಯೊಬ್ಬ ಅದೇ ಡೈಲಾಗ್ ಹೊಡೆಯುತ್ತಾರೆ, ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸುತ್ತಾರೆ ಅಂತಾದರೆ ಗತಿಯೇನು? ಎಂದು ಡಿವೈಎಫ್ಐ ರಾಜ್ಯಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಯ ಈ ಮಾತಿನಿಂದ ಈಗಾಗಲೇ ಹೆಂಡ ಕುಡಿದ ಕಪಿಗಳಂತೆ ಆಡುತ್ತಿರುವ ಮತೀಯವಾದಿ ಸಂಘಟನೆಗಳ ಕಾರ್ಯಕರ್ತರು ಮತ್ತಷ್ಟು ಪ್ರಚೋದಿತರಾಗಿ ಬೀದಿಗಿಳಿಯುವುದು ಖಂಡಿತ. ಕ್ರಿಯೆಗೆ ಪ್ರತಿಕ್ರಿಯೆ ಎಂದು ಮತ್ತೊಂದು ಕೋಮಿನ ಅನೈತಿಕ ಪೊಲೀಸರೂ ಸ್ಪರ್ಧೆಗೆ ಬಿದ್ದರೆ ಪರಿಸ್ಥಿತಿ ಎಲ್ಲಿಗೆ ತಲುಪುತ್ತದೆ ? ಮುಖ್ಯಮಂತ್ರಿಯೊಬ್ಬ ಇಷ್ಟು ಬೇಜವಾಬ್ದಾರಿತನ ಮೆರೆಯುವುದು ನಾಚಿಕೆಗೇಡು. ಪ್ರಜಾಪ್ರಭುತ್ವ ದೇಶದ ದುರಂತ. ತನ್ನ ಈ ನಾಚಿಕೆಗೇಡಿನ ಮಾತಿಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಜನತೆಯ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಯೋಜಕಿ ಲಾವಣ್ಯ ಬಲ್ಲಾಳ್, “ನಿಮ್ಮ ಮಾತಿನ ಅರ್ಥವೇನು ಬೊಮ್ಮಾಯಿಯವರೆ, ರಾಜ್ಯದ ಮುಖ್ಯಮಂತ್ರಿಗಳೆ ಮಾರಲ್ ಪೊಲೀಸಿಂಗ್ ಅನ್ನು ಬೆಂಬಲಿಸಿದರೆ ಇನ್ನು ಗುಲಾಮರಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ? ದಯವಿಟ್ಟು ಕರ್ನಾಟಕದ ನಾಗರಿಕರು ತಮ್ಮ ಸುರಕ್ಷತೆಯನ್ನು ತಾವೇ ಕಾಪಾಡಿಕೊಳ್ಳಬೇಕು ಹೊರತು ಸರ್ಕಾರದಿಂದ ಏನನ್ನು ನಿರೀಕ್ಷಿಸಬೇಡಿ ಎಂದಿದ್ದಾರೆ.
What does this even mean @BSBommai ?
When the CM of the state supports moral policing what more can be expected from the minions?
Citizens of Karnataka please stay safe, don’t expect the government to keep you safe.#BommaiStopMoralPolicing pic.twitter.com/Xv7M70HbA7— Lavanya Ballal (@LavanyaBallal) October 13, 2021
ಇದನ್ನೂ ಓದಿ: ಮಂಗಳೂರು: ಮತ್ತೊಂದು ಅನೈತಿಕ ಪೊಲೀಸ್ಗಿರಿ; ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ