Homeಅಂಕಣಗಳುನಾಗಸುಧೆ ಜಗಲಿಯಿಂದಶೆಟಗೇರಿಯಿಂದ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನ ದಾರಿಗುಂಟ

ಶೆಟಗೇರಿಯಿಂದ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನ ದಾರಿಗುಂಟ

'ಮೀನುಪೇಟೆಯ ತಿರುವು' ಕವನ ಸಂಕಲನದ ಲೇಖಕಿ 'ರೇಣುಕಾ ರಮಾನಂದ'ರವರ ಕುರಿತು 'ಪ್ರಕಾಶ ಕಡಮೆ'ಯವರ ನಾಗಸುಧೆ ಜಗಲಿಯಿಂದ ಅಂಕಣ...

- Advertisement -
- Advertisement -

ಕಲಿವ ಮಗಳಿಗಿಂತ ಕಲಿಸುವ ಅಪ್ಪನಿಗೇ ಉಮೇದಿ
ಎಂದೇನೂ ಮುಸಿಮುಸಿ ನಗಬೇಡಿ
ಹಾಲುಗುಂಬಳದಂತಹ ಕರುಳುಕುಡಿಗೆ
ಒಳಪೆಡ್ಲು ಕಲಿಸುವುದನ್ನು
ನೀವೊಮ್ಮೆ ಅನುಭವಿಸಿಯೇ ತೀರಬೇಕು
ಅದಕ್ಕೇ ಹೇಳುವುದು
ಎಲ್ಲ ಅಪ್ಪಂದಿರಿಗೆ
ಕುಡಿಬಾಳೆ ಎಲೆಯಂತಹ
ಮುದ್ದಾದ
ಮಗಳೊಬ್ಬಳಿರಬೇಕು..

ಎಂಬ ಮಾನವೀಯ ಮನಸ್ಸಿನ, ಜನಪರ ನಿಲುವಿನ, ತಂದೆ-ಮಗಳ ನಿತ್ಯ ಬದುಕಿನ ಸತ್ಯವನ್ನು ಕಣ್ಣಾರೆ ಕಂಡು ಸಾಮಾನ್ಯ ಸಂಗತಿಗಳನ್ನೂ ಕಾವ್ಯವಾಗಿಸುವ ಶಾಲಾ ಮಕ್ಕಳೊಡನೆ ಬೆರೆತು ಮಗುಮನ-ನಗುಮನ ಪಡೆದ ರೇಣುಕಾ ರಮಾನಂದ, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೆಟಗೇರಿ ಎಂಬ ಸಣ್ಣ ಹಳ್ಳಿಯವರು. ರೇಣುಕಾ ಈಗ ಕನ್ನಡದಲ್ಲಿ ಬರೆಯುತ್ತಿರುವ ಸೂಕ್ಷ್ಮ ಸಂವೇದನೆಯ, ಮಣ್ಣಿನ ವಾಸನೆಯ, ಕಾಡೊಡಲು-ಕಡಲೊಡಲಿನ ಮತ್ತು ಮೀನು ಪೇಟೆಯ ತಿರುವಿನ ಬರಹಗಾರ್ತಿ. ಇವರ ಕವಿತೆಗಳೇ ಹೀಗೆ ; ಕಡಲಿನ ಅಬ್ಬರದ ತೆರೆಗಳಂತೇ ಕಂಡರೂ ಒಳಗೊಳಗೇ ಶಾಂತವಾಗುವ ನೊರೆಗಳಂತೆ ನೀರಲಿ ಬೆರೆತು ಮತ್ತೆ ಸಾಗರದಲೊಂದಾಗುವದು. ಇವರ ಕವಿತೆಗಳಲ್ಲಿ ಅಕ್ಷರದ ಸತ್ವಗಳಂತೇ ಮಾನವೀಯತೆ ಇದೆ, ಪ್ರೀತಿ-ಪ್ರೇಮಗಳಿವೆ, ಉತ್ಕಟವಾದ ಜೀವನಾನುಭವವಿದೆ, ಮಗು ಮನಸ್ಸಿನೊಂದಿಗೆ ಮಹಿಳಾ ಅಭಿವ್ಯಕ್ತಿಯ ಮುಕ್ತದಾರಿಯ ಮಗ್ಗುಲನ್ನು ಚಿಂತಿಸುವ ಕವಲು ದಾರಿಯಿದೆ. ಈ ಎಲ್ಲಾ ಸತ್ವಯುತವಾದ ಸಾಲುಗಳಿಂದಲೇ ಇವರ ಮೊದಲ ಕವನ ಸಂಕಲನ “ಮೀನುಪೇಟೆಯ ತಿರುವು” ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದುಕೊಂಡಿದೆ.

ತಮ್ಮ ಏಳನೆಯ ವಯಸ್ಸಿನಲ್ಲಿಯೇ ಆಕಸ್ಮಿಕ ಆಘಾತದಿಂದ ನಿಧನ ಹೊಂದಿದ ಅಣ್ಣ ಗಜಾನನನ ಅಗಲಿಕೆ ಅರಗಿಸಿಕೊಳ್ಳಲಾಗದ ರೇಣುಕಾ, ಮುಂದಿನ ದಿನಗಳಲ್ಲಿ ತಾನೋರ್ವ ಉತ್ತಮ ಶಿಕ್ಷಕಿ ಹಾಗೂ ಬರಹಗಾರ್ತಿ ಆಗುವೆ ಎಂದು, ಎಂದೂ ಕನಸು ಕಂಡವರಲ್ಲ. ಆದರೆ ಶಿಕ್ಷಕಿಯಾಗಿ ಮಕ್ಕಳ ಮನದೊಳಗೆ ನೆಲೆನಿಂತು, ಆ ಖುಷಿಯನ್ನು ತನ್ನದಾಗಿಸಿಕೊಳ್ಳಲು, ಅಂಕೋಲೆಯ ಪ್ರತಿಷ್ಠಿತ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಆ ವರ್ಷ ಪಿಯುಸಿಯಲ್ಲಿ ಕ್ಲಾಸಿಗೇ ಪ್ರಥಮರಾಗಿ ಉತ್ತೀರ್ಣರಾದ ರೇಣುಕಾ, ಇನ್ನಿತರ ಸ್ವ-ಹಿತಾಸಕ್ತಿಯ ಹತ್ತು ಹಲವು ಬದುಕುವ ಹಾದಿಗಳನ್ನು ಬದಿಗಿಟ್ಟು ಪ್ರಾಥಮಿಕ ಶಾಲಾ ಶಿಕ್ಷಕಿಯ ಹುದ್ದೆಯನ್ನು ಇಷ್ಟಪಟ್ಟು ಆಯ್ದುಕೊಂಡದ್ದಂತೂ ನೂರಕ್ಕೆ ನೂರು ಸತ್ಯ.

ಸಾಹಿತ್ಯವು ಇವರಿಗೆ ಕೌಟುಂಬಿಕವಾಗಿ ಬಂದ ಬಳುವಳಿ ಏನಲ್ಲಾ. ಬಡತನ ಇಲ್ಲದಿದ್ದರೂ ಸೀದಾ ಸಾದಾ ಮನೆಯಲ್ಲಿ ಹುಟ್ಟಿದ ರೇಣುಕಾ, ಓದಿನ ಹುಚ್ಚು ಮೊದಲಿನಿಂದಲೂ ರೂಢಿಸಿಕೊಂಡಿದ್ದರು. ಪಿಯುಸಿ ಹಂತದಲ್ಲಿ ಆಗಾಗ ಕವಿತೆ ಬರೆಯುತ್ತಿದ್ದ ಇವರಿಗೆ ಬರವಣಿಗೆಯ ಅಭಿರುಚಿ ಮತ್ತು ಪ್ರೋತ್ಸಾಹಕ್ಕೆ ಕಾರಣ ಕಾರವಾರದಿಂದ ಹೊರಡುವ “ಕರಾವಳಿ ಮುಂಜಾವು” ದಿನಪತ್ರಿಕೆ. ಒಂದು ದೃಷ್ಟಿಯಿಂದ ನೋಡಿದರೆ ಇವರು ಬರೆದದ್ದು ಕಡಿಮೆಯೇ ; “ವಿರಳ ಬರಹಗಾರ್ತಿ” ಎಂದೇ ಹೇಳಬಹುದು. ಆದರೆ ಬರೆದ ಅಕ್ಷರಗಳೆಲ್ಲವೂ ಕೀರ್ತಿ ತಂದುಕೊಟ್ಟಿತು ಎಂಬ ಪಿಸುಮಾತಿಗೆ ಇವರ ಮುಖದ ತುಂಬೆಲ್ಲಾ ಅಕ್ಷರಗಳೇ ಕುಣಿದಾಡುವುದು. 2017 ರಲ್ಲಿ ಮೊದಲ ಪುಸ್ತಕ “ಮೀನು ಪೇಟೆಯ ತಿರುವು” ಪ್ರಕಟವಾದರೂ ತಮ್ಮ ಬಿಡಿ-ಬಿಡಿಯಾದ ಕಥೆ-ಕವನಗಳ ಮುಖಾಂತರ ನಾಡಿನಾದ್ಯಂತ ಹೆಸರುಗಳಿಸಿ, ಕೀರ್ತಿಯು ನೆರೆಯ ರಾಜ್ಯಗಳ ಕನ್ನಡಾಭಿಮಾನಿಗಳ ಗಮನವನ್ನೂ ಸೆಳೆಯಿತು. ಮೈಸೂರು ಅಸೋಸಿಯೇಷನ್ ಮುಂಬೈ ನೇಸರು ಜಾಗತಿಕ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಜೀವನ ಪ್ರಕಾಶನ ಚಿಕ್ಕಬಳ್ಳಾಪುರ ಏರ್ಪಡಿಸಿದ್ದ ಯುಗಾದಿ ಕಾವ್ಯ ಸ್ಪರ್ಧೆಯಲ್ಲಿ ಮೊದಲನೆಯ ಬಹುಮಾನ, ಎರಡು ಸಾರಿ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ, ಸಂಕ್ರಮಣ ಕಾವ್ಯ ಬಹುಮಾನ ಹೀಗೆ ಹತ್ತು ಹಲವು. ಕವಿತೆಯಂತೆ ಕಥೆಯೂ ಇವರ ಕೈ ಹಿಡಿಯಿತು. ಕಾರವಾರದ ಕರಾವಳಿ ಮುಂಜಾವಿನ ಕಥೆಗೆ ಮೊದಲ ಬಹುಮಾನ, ತುಷಾರ ಮತ್ತು ಕಾವ್ಯಾಂಜಲಿ ಕ್ಯಾಲಿಫೋರ್ನಿಯಾ ಕಥಾ ಬಹುಮಾನ, ಮುಂಬೈನ ಗೋಕುಲ ವಾಣಿ ಕಥಾ ಬಹುಮಾನ, ಗುಲ್ಬರ್ಗ ವಿಶ್ವವಿದ್ಯಾಲಯದ ಕಥಾ ಬಹುಮಾನ.. ಹೀಗೇ.

ಸದ್ಯ ಅಂಕೋಲಾ ತಾಲೂಕಿನ ಬೆಳಸೆ ಎಂಬಲ್ಲಿ ಆಗೇರ ಕೇರಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿರುವ ರೇಣುಕಾ ರಮಾನಂದ, ಈಗಾಗಲೇ ತಮ್ಮ ಸೇವೆಯನ್ನು ಮುಂಡಗೋಡಿನ ಅತ್ತೀವೇರಿ, ಅಂಕೋಲಾದ ಸರಳೇಬೈಲ್, ಹಡಾವ, ಮರಕಾಲ್‌ಗಳಲ್ಲಿ ಸಲ್ಲಿಸಿರುವರು. ಈ ಎಲ್ಲವೂ ಉತ್ತರಕನ್ನಡ ಜಿಲ್ಲೆಯ ಕಾಡು ಮತ್ತು ಹಳ್ಳಿಗಾಡು ಪ್ರದೇಶಗಳೇ. ವಿದ್ಯಾರ್ಥಿಗಳಂತೂ ತೀರಾ ಹಿಂದುಳಿದ ಹಾಲಕ್ಕಿ ಒಕ್ಕಲಿಗರು ಮತ್ತು ಆಗೇರರೇ. ಪಾಲಕರ ದೈನಂದಿನ ಬದುಕೇ ತತ್ವಾರವಾದ ಮೇಲೆ ಮಕ್ಕಳಿಗೆ ಎಲ್ಲಿಯ ಶಿಕ್ಷಣ ? ಪಾಲಕರೊಂದಿಗೆ ಮಕ್ಕಳೂ ಕೂಲಿನಾಲಿಗೆ ಹೋಗಲೇಬೇಕಾದ ಪರಿಸ್ಥಿತಿ. ಇಂತಹ ಸಂದರ್ಭಗಳಲ್ಲಿ ಪಾಲಕರ ಮನ ಒಲಿಸಿ ಮಕ್ಕಳನ್ನು ಶಾಲೆಗೆ ಕರೆ ತರುವುದೇ ಸಮಸ್ಯೆಯಾಗಿರುತ್ತದೆ. ಇಂತಹ ಹಳ್ಳಿಗಾಡಿನ ಶಾಲೆಗೆ ಬಂದರೂ ಅಲ್ಲಿ ಮೂಲಭೂತ ಸೌಕರ್ಯಗಳದೇ ಕೊರತೆ. ಇವರು ಕಾರ್ಯ ನಿರ್ವಹಿಸಿದ ಬಹುತೇಕ ಎಲ್ಲಾ ಶಾಲೆಯ ಪರಿಸ್ಥಿತಿ ಒಂದೇ. ಮಕ್ಕಳ ಮೆದು ಮನಸಿಗೆ ಮುದ ನೀಡಿದ ರೇಣುಕಾ ತನ್ನ ಅಪಾರ ಸ್ನೇಹಿತರೊಂದಿಗೆ ಜಾಲತಾಣದ ಮೂಲಕ ಕೆಲ ವಿಷಯವನ್ನು ಹಂಚಿಕೊಂಡಾಗ ಕೆಲ ಸುಂದರ ಮನಸ್ಸುಗಳು ತಾವಾಗಿಯೇ ಮುಂದೆ ಬಂದು ಈ ಬೆಳೆಯುವ ಎಳೆಯ ಮಕ್ಕಳಿಗೆ / ಶಾಲೆಗೆ ಸಹಾಯದ ಅಭಯ ನೀಡಿದರು.

ಮಕ್ಕಳಿಗೆ ಸ್ಕೂಲ್ ಬ್ಯಾಗ್, ಛತ್ರಿ, ನೋಟಬುಕ್, ಕಂಪಾಸ್, ನೀರಿನ ಫಿಲ್ಟರ್, ಕಪಾಟು, ಪೀಠೋಪಕರಣ, ದೊಡ್ಡ ಪ್ರಮಾಣದ ಆಟಿಕೆ ಸಾಮಗ್ರಿಗಳು ಇವುಗಳಲ್ಲಿ ಅತೀ ಮುಖ್ಯವಾದುದು. ಪುಣೆಯ ನಂದಿತಾ ಕಾಮತ್, ಸೌದಿ ಅರೇಬಿಯಾದ ರಫಿಕ್ ಶೇಖ್, ಅಂಜಲಿ ರಾಮಣ್ಣ, ಸುನಂದಾ ಮತ್ತು ಪ್ರಕಾಶ್ ಕಡಮೆ, ಅಮೇರಿಕೆಯ ಸರಿತಾ ನವಲಿ, ಮಣಿಪಾಲದ ಜ್ಯೋತಿ ಗುರುಪ್ರಸಾದ್ ಉಡುಪಿಯ ವನಿತಾ ಡಿ.ಎಸ್. ಹಾಗೂ ಹೆಸರು ಹೇಳಲಿಚ್ಚಿಸದ ಇನ್ನೂ ಕೆಲ ದಾನಿಗಳ ಉಪಕಾರವನ್ನು ನೆನೆವಾಗಲಂತೂ ರೇಣುಕಾ ರಮಾನಂದರ ಕಣ್ಣಂಚು ತುಂಬುವುದು ; ಇದೆಲ್ಲಾ ಬಡ ಮುದ್ದು ಮಕ್ಕಳಿಗಾಗಿ ಮತ್ತು ಶಾಲೆಯ ಅಭಿವೃದ್ಧಿಗೆ. ಒಮ್ಮೊಮ್ಮೆ ಆರಾಮಾಗಿ ಕುಳಿತು ಸರಕಾರೀ ವೇತನ ಪಡೆಯುವ ನನಗೆ ಇಷ್ಟೆಲ್ಲಾ ಬೇಕಾಗಿತ್ತೇ ಎನಿಸಿದರೂ ಬದುಕಿನಲಿ ಎಲ್ಲರಂತೆ ಜೀವಿಸುವ ಬದಲು ಏನಾದರೂ ವೈಶಿಷ್ಟ್ಯ ಪೂರ್ಣ ಕೆಲಸ ಮಾಡುವ ದೃಢ ನಿರ್ಧಾರದ ರೇಣುಕಾರು ನಿಜವಾಗಿಯೂ ಅಭಿನಂದನಾರ್ಹರೇ.

ಚನ್ನಪಟ್ಟಣದ ಪಲ್ಲವ ಪ್ರಕಾಶನದಿಂದ ಹೊರಬಂದ ‘ಮೀನು ಪೇಟೆಯ ತಿರುವು’ ಇದು ಇವರ ಪ್ರಥಮ ಮತ್ತು ಮಹತ್ವಾಕಾಂಕ್ಷೆಯ ಕವನ ಸಂಕಲನ. 124 ಪುಟಗಳ ಈ ಹೊತ್ತಿಗೆಯಲ್ಲಿ ಲವಲವಿಕೆಯ ತಾಜಾತನದಿಂದ ಕೂಡಿದ 47 ಕವಿತೆಗಳಿವೆ. ಜಯಂತ್ ಕಾಯ್ಕಿಣಿಯವರು ‘ಒಳಪೆಡ್ಲಿನಿಂದ ಸೀಟಿಗೆ’ ಎಂದು ಮುನ್ನುಡಿ ಬರೆಯುತ್ತಾ “ಕವಿತೆ ಕೇವಲ ಪ್ರತಿಸ್ಪಂದನವಾಗದೇ ಇಲ್ಲಿಯ ಅನೇಕ ಸಾಲುಗಳು, ಅಸಂಖ್ಯ ಬಟ್ಟೆ ಒಗೆಸಿಕೊಂಡ ದೋಭಿಘಾಟಿನ ಹಾಗೆ ಫಳಫಳ ಹೊಳೆಯುತ್ತದೆ. ಅಪ್ಪಟ ದೇಸಿ ಕವಿ ರೇಣುಕಾ ಮಳೆ ನೀರು ತುಂಬಿ ನಿಂತ ಗದ್ದೆಗಳಲ್ಲಿ ಸಸಿಗಳನ್ನು ನೆಟ್ಟಿಮಾಡಿದಂತೆ ಸಹಜವಾಗಿಯೂ, ಶಿಸ್ತುಬದ್ಧವಾಗಿಯೂ, ಗೊಂಚಲಾಗಿಯೂ, ನಾಜೂಕಾಗಿಯೂ, ಹಸಿರುಕ್ಕುವಂತೆಯೂ, ಫಲವತ್ತಾಗಿಯೂ ಕಾವ್ಯ ಕೃಷಿ ಮಾಡುವ ಹಸನಾದ ಮನಸ್ಸುಳ್ಳವರು. ಇದಕ್ಕೆಲ್ಲಾ ಮೂಲ ಕಾರಣ ರೇಣುಕಾರ ಅದಮ್ಯ ಉಮೇದಿಯೇ ಆಗಿದೆ. ಒಳಪ್ಯಾಡ್ಲಿನಿಂದ ಮೆಲ್ಲನೆ ಸೀಟಿಗೇರೆತ್ತಿರುವ ಇವರ ಕಾವ್ಯ ಪಯಣದ ಉಮೇದಿಗೆ ಹೊಸ ಹೊಸ ತಿರುವುಗಳನ್ನು, ಸೇತುವೆಗಳನ್ನು, ಘಟ್ಟಗಳನ್ನು ಹಾರೈಸುತ್ತೇನೆ” ಎಂದು ಮನದಾಳದಿಂದ ಹರಿಸಿರುವರು.

ಜಯಂತ್ ಕಾಯ್ಕಿಣಿಯವರೊಂದಿಗೆ ರೇಣುಕಾರವರು

ಹೋಗುತ್ತಿದ್ದಾರೆ ಹುಡುಗರು ಕಾಲೇಜಿಗೆ
ಮತ್ತಿವರು ಹುಡುಗಿಯರು ಬೆಟ್ಟಕ್ಕೆ
ಅವರು ತೂಗಿದ್ದಾರೆ ಪುಸ್ತಕದ ಬ್ಯಾಗು
ಜೊತೆಗೆ ಐಡೆಂಟಿಟಿ ಕಾರ್ಡು
ಇವರಲ್ಲೂ ಇದೆ ಸಾಣೆ ಹಿಡಿಯದೆಯೂ
ಬರೀ ಕೊಯ್ತಕ್ಕೆ ಫಳಗುಡುವ ಕತ್ತಿ
ಬಿಗಿತಕ್ಕೊಂದು ಬಳ್ಳಿ
ಹಿಂದೆಯೂ ಇದ್ದದ್ದು
ಮುಂದೆಯೂ ಬರುವದು
ಬಲು ಮಂಜೂರು ಮಜಬೂತು ಆಸ್ತಿ

ಎನ್ನುತ್ತಾ ಗಂಡು ಮತ್ತು ಹೆಣ್ಣಿನ, ಕೂಲಿಯಾಳು ಮತ್ತು ವೈಟ್ ಕಾಲರಿನ ತಾರತಮ್ಯವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ, ಇದು ಅನಾದಿಕಾಲದಿಂದಲೂ ನಡೆದು ಬಂದಿರುವ ದುಷ್ಟ ಪದ್ಧತಿಯಾಗಿದ್ದು, ಎರಡೂ ಕೆಲಸ ಕಾರ್ಯಗಳೂ ಒಂದೇ ನಾಣ್ಯದ ಎರಡು ಮುಖಗಳು. ಜಗದಲಿ, ಬದುಕಿನಲಿ ಸಮಾನ ಮನೋಭಾವನೆ ಬೆಳೆಯಬೇಕು. ಹೆಣ್ಣಿನ ಹಾಗೂ ಕೂಲಿಯಾಳಿನ ಕೆಲಸಗಳ ಮೆಲೇಯೇ ಜಗದ ನೆಲೆಗಟ್ಟು ನಿಂತಿದೆ, ಎನ್ನುತ್ತಾ,

ಉಪ್ಪು ಹುಳಿ ಖಾರ ಒಗ್ಗೂಡಿಸಲು
ಹೋಗಬೇಕಿದೆ
ಮತ್ತೆ ಮತ್ತೆ ಬೆಟ್ಟಕ್ಕೆ

ಎಂದು ದೈನಂದಿನ ಬದುಕಿನ ದಾರುಣ ಸ್ಥಿತಿಗತಿ, ತಲ್ಲಣಗಳ ಚಿತ್ರಗಳನ್ನು ರೇಣುಕಾ ಮನದಾಳದಿ ಚಿತ್ರಿಸಿರುವರು.

ಇಂತಹ ಸಾಲುಗಳಿಂದಾಗಿಯೇ ರೇಣುಕಾರ ಈ ಸಂಕಲನದ ಕವಿತೆಗಳು, ಹಸ್ತಪ್ರತಿಯಲ್ಲಿರುವಾಗಲೇ ಮುಂಬೈನ ಸುಶೀಲಾ ಶೆಟ್ಟಿ ಕಾವ್ಯ ಪುರಸ್ಕಾರಕ್ಕೆ ಆಯ್ಕೆಯಾದ ನಂತರ, ಪುಸ್ತಕ ರೂಪಕ್ಕೆ ಬಂದ ಮೇಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಸೇಡಂ ನ ‘ಅಮ್ಮ’ ಪ್ರಶಸ್ತಿ, ಹಾಸನದ ಕಾವ್ಯ ಮಾಣಿಕ್ಯ ಪುರಸ್ಕಾರ, ಹರಿಹರದ ಹರಿಹರ ಶ್ರೀ ಪ್ರಶಸ್ತಿ, ಕ.ಸಾ.ಪ ದ ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿ ಹಾಗೂ ಇನ್ನಿತರ ಕೆಲ ಪುರಸ್ಕಾರಗಳೂ ಇವರ ಪುಸ್ತಕವನ್ನು ಹುಡುಕಿಕೊಂಡು ಬಂದಿರುತ್ತದೆ.

ಪ್ರಕಾಶ ಕಡಮೆ, ಸುನಂದಾ ಕಡಮೆ ಮತ್ತು ರೇಣುಕಾರವರು

ಕೋವಿಡ್‌ನ ದುರಿತ ಸಂದರ್ಭದಲ್ಲಿ ರೇಣುಕಾ ರಮಾನಂದ “ವಿಜಯ ಕರ್ನಾಟಕ” ದಿನ ಪತ್ರಿಕೆಯಲ್ಲಿ, ವಿದ್ಯಾರ್ಥಿಗಳೊಂದಿಗಿನ ಪ್ರೀತಿಯ ಸಂಪರ್ಕದ ಕುರಿತಾಗಿ ಬರೆದ ಲೇಖನ ‘ಖಾಲಿ ಶಾಲೆಯ ಅಂಗಳದಿಂದ’ ಓದಿದ ಅಂದಿನ ಶಿಕ್ಷಣ ಸಚಿವರಾದ ಮಾನ್ಯಶ್ರೀ ಸುರೇಶ ಕುಮಾರ, ತಕ್ಷಣ ರೇಣುಕಾರಿಗೆ ಫೋನ್ ಮಾಡಿ ಖುಷಿಯನ್ನು ವ್ಯಕ್ತಪಡಿಸಿ ತಮ್ಮ ಫೇಸ್ಬುಕ್ ಮತ್ತು ಟ್ವಿಟರ್‌ನಲ್ಲಿ ಅದನ್ನು ಹಂಚಿ ಕೊಂಡಾಗ ‘ಅಕ್ಷರಗಳಿಗೂ ಇಷ್ಟೊಂದು ಶಕ್ತಿ ಇದೆಯೆ’ ಎಂದು ಆಶ್ಚರ್ಯ ಚಕಿತರಾಗಿ, ಕಾಲೇಜಿನ ದಿನಗಳಲ್ಲಿ ಅಕ್ಷರದ ದೀಕ್ಷೆ ಕೊಟ್ಟ ಗುರುಗಳನ್ನು ಮನಸಾ ವಂದಿಸಿದೆ ಎನ್ನುವಾಗ ಇವರಲ್ಲಿ ಕೃತಜ್ಞತಾ ಭಾವ ತುಂಬಿ ತುಳುಕುತ್ತಿತ್ತು. ಆ ಕ್ಷಣ ಅವರ ವೃತ್ತಿ ಜೀವನದಲ್ಲಿ ಮರೆಯಲಾರದ ಸಂದರ್ಭವಾದ್ದರಿಂದ, ತನಗೆ ವೃತ್ತಿ ಮತ್ತು ಪ್ರವೃತ್ತಿ ಒಂದೇ ನಾಣ್ಯದ ಎರಡು ಮುಖಗಳಂತೆ ಎಂದು ಕಣ್ಣರಳಿಸುವರು.

ಕವಿತೆಯ ಕಾರಣಕ್ಕೆ ಕೇರಳದ ಚೆಂಗಾನೂರಿನಲ್ಲಿ ನಡೆದ ಸೌತ್ ಇಂಡಿಯನ್ ರೈಟರ್ಸ ಎನ್ಸೆಂಬಲ್ (ಎಸ್ ಐ ಡಬ್ಲೂ ಇ) ಪಂಪಾ ಲಿಟರೇಚರ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಕವಿತೆ ಓದಿದ ಆ ಕ್ಷಣ ಮತ್ತು, ಭಾರತದ ಹದಿನೈದು ಭಾಷೆಗಳ ಇಪ್ಪತ್ತೆಂಟು ಕವಿಗಳ 250 ಕವಿತೆಗಳು ಕವಿಯ ಮೂಲ ಭಾಷೆಯ ಕೈಬರಹ, ಅವರದ್ದೇ ವಾಚನದ ವೀಡಿಯೋ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ, ಶೆಟಗೇರಿಯ ರೇಣುಕಾ ರಮಾನಂದರ ಕನ್ನಡ ಕವಿತೆಗಳೂ ಸೇರ್ಪಡೆಯಾಗಿದ್ದು ಇವರ ಕಾವ್ಯ ಬದುಕಿನ ಮರೆಯಲಾಗದ ಸಂಗತಿ. ಇವರ ಕೆಲ ಕವಿತೆಗಳು ತೆಲಗು, ಮರಾಠಿ, ಕೊಂಕಣಿ ಮತ್ತು ಇಂಗ್ಲೀಷ್‌ಗೂ ಅನುವಾದ ಕಂಡಿದ್ದು ಕಥೆ ಕವಿತೆಗಳಂತೆ ಪ್ರಬಂಧ ಬರಹಗಳೂ ರೇಣುಕಾಗೆ ಸಿದ್ಧಿಸಿದೆ.

ರೇಣುಕಾ ರಮಾನಂದ್‌ರವರ ಕುಟುಂಬ

ಹೆಸರಿಗೇ ಅಂಟಿಕೊಂಡ ರಮಾನಂದ, ಮಗಳು ಪ್ರಾರ್ಥನಾ ಮತ್ತು ಮಗ ತ್ರಿಭುವನರೊಂದಿಗಿನ ತುಂಬು ಸಂಸಾರದ ರೇಣುಕಾರನ್ನು ಶುಭ ಕೋರಿ ಅಭಿನಂದಿಸಿ, ಮುಂದಿನ ದಿನಗಳಲ್ಲಿ ಹೊಸ ಹೊಸ ಪುಸ್ತಕಗಳೂ ಬರಲಿ ಹಾಗೂ ನಿಮ್ಮ ಶೈಕ್ಷಣಿಕ ಸೇವೆಯನ್ನು ಘನ ಸರ್ಕಾರ ಗಮನಿಸಲಿ ಎಂದು ಹಾರೈಸುವೆ.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಮಮತೆಯ ಮಮತಾಗೆ ‘ಮಯೂರ’ ನ ಮನ್ನಣೆ: ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಇಂದಿಗೂ ನಾನು ರೇಣುಕಾರವರ ಕವನಗಳನ್ನು ಓದುತ್ತಿದ್ದೇನೆ. ಪ್ರತೀ ಬಾರಿ ಓದಿದಾಗಲೂ ಏನೋ ಹೊಸತನ ಕವಿತೆಯಲ್ಲಿ. ಅವರ ಕವಿತೆಗಳು ಅಂದು ಇಂದು ಮುಂದೂ ಜನಮಾನಸದಲ್ಲಿ ಅಜರಾಮರ.

    ತಾವು ತುಂಬಾ ಚೆಂದ ವಿಮರ್ಶೆ ಮಾಡಿದ್ದೀರಿ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...