ಈ ವರ್ಷದ ಆಗಸ್ಟ್ನಲ್ಲಿ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಪುರುಷರ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ವೇಳೆ ನರೇಂದ್ರ ಮೋದಿ ಸರ್ಕಾರವು ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಲಾಗುವುದು ಎಂದು ಘೋಷಿಸಿತು. ಈ ಸುದ್ದಿಯನ್ನು ಎಲ್ಲರಿಗಿಂತ ಮೊದಲು ಬ್ರೇಕ್ ಮಾಡಿದವರು ಬೇರ್ಯಾರು ಅಲ್ಲ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಆಗಿದ್ದರು.
ಆದರೆ ಕೂಡಲೇ ಈ ನಿರ್ಧಾರವು ವಿವಾದ ಹುಟ್ಟುಹಾಕಿತು. ಇದು ಕಾಂಗ್ರೆಸ್ಗೆ ಮಾಡುವ ಅವಮಾನ ಮತ್ತು ಕಾಂಗ್ರೆಸ್ ಸಾಧನೆಗಳನ್ನು ಅಳಿಸುವ ಗಿಮಿಕ್ ಎಂದು ಕೆಲವರು ಆರೋಪಿಸಿದರೆ, ಇನ್ನು ಕೆಲವರು ಇದನ್ನು ಕ್ರೀಡಾಪಟುವಿನ ಗೌರವಾರ್ಥವಾಗಿ ಸ್ವಾಗತಿಸಿದ್ದರು. ಇದೇ ಸಂದರ್ಭದಲ್ಲಿ ಮರುನಾಮಕರಣಕ್ಕಾಗಿ ಅನುಸರಿಸಿದ ಅಧಿಕೃತ ವಿಧಾನ ಮತ್ತು ನಿರ್ಧಾರವನ್ನು ಯಾವ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ಪ್ರಶ್ನೆಗಳು ಕೇಳಿಬಂದಿದ್ದವು.
I have been getting many requests from citizens across India to name the Khel Ratna Award after Major Dhyan Chand. I thank them for their views.
Respecting their sentiment, the Khel Ratna Award will hereby be called the Major Dhyan Chand Khel Ratna Award!
Jai Hind! pic.twitter.com/zbStlMNHdq
— Narendra Modi (@narendramodi) August 6, 2021
ಆಗಸ್ಟ್ 6 ರಂದು ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು “ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಎಂದು ಮರುನಾಮಕರಣ ಮಾಡಲು ಭಾರತದಾದ್ಯಂತ ಅನೇಕರಿಂದ ಮನವಿಗಳನ್ನು ಪಡೆದಿದ್ದೇನೆ. ಅವರ ಭಾವನೆಯನ್ನು ಗೌರವಿಸಿ, ಈ ಮೂಲಕ ಖೇಲ್ ರತ್ನ ಪ್ರಶಸ್ತಿಯನ್ನು ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತದೆ” ಎಂದಿದ್ದರು.
ಆದರೆ ನರೇಂದ್ರ ಮೋದಿಯವರ ಪ್ರತಿಪಾದನೆಯಂತೆ ಪ್ರಶಸ್ತಿಯ ಹೆಸರು ಬದಲಾಯಿಸಲು ಬಂದ ಮನವಿಗಳ ಕುರಿತು ಒಂದೇ ಒಂದು ದಾಖಲೆಗಳನ್ನು ಒದಗಿಸಲು ಕ್ರೀಡಾ ಮತ್ತು ಯುವಜನ ಇಲಾಖೆಯು ವಿಫಲವಾಗಿದೆ ಎಂದು ದಿ ವೈರ್ ವರದಿ ಮಾಡಿದೆ. ಬದಲಿಗೆ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ ನಂತರವೇ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮರುನಾಮಕರಣ ಮಾಡಲು ಸಚಿವಾಲಯ ನಿರ್ಧರಿಸಿದೆ ಮತ್ತು ಅಧಿಕಾರಿಗಳು ತರಾತುರಿಯಲ್ಲಿ ಸುತ್ತೋಲೆ ಹೊರಡಿಸಿದ್ದಾರೆ ಎಂದು ವೈರ್ ಆರೋಪಿಸಿದೆ.
ಈ ಕುರಿತು ಎಷ್ಟು ಜನರು ಮನವಿ ಸಲ್ಲಿಸಿದ್ದಾರೆ? ಅದರ ಪ್ರತಿಗಳನ್ನು ನೀಡಿ ಎಂದು ದಿ ವೈರ್ ಸಲ್ಲಿಸಿದ ಆರ್ಟಿಐ ಪ್ರಶ್ನೆಗೆ ಉತ್ತರಿಸಿರುವ ಸಚಿವಾಲಯವು ಪ್ರಶಸ್ತಿಯ ಹೆಸರು ಬದಲಾಯಿಸುವಂತೆ ಸಾರ್ವಜನಿಕರಿಂದ ಯಾವುದೇ ಮನವಿಗಳು ಬಂದಿಲ್ಲ ಎಂಬುದನ್ನು ಒಪ್ಪಿಕೊಂಡಿದೆ. ಪ್ರಧಾನ ಮಂತ್ರಿಗೆ ಬರೆಯಲಾದ ಯಾವುದೇ ಪತ್ರವನ್ನು ಅದರ ವಿಷಯದ ಆಧಾರದ ಮೇಲೆ ವಿಲೇವಾರಿ ಮಾಡಲು ಸಂಬಂಧಿಸಿದ ಸಚಿವಾಲಯ ಅಥವಾ ಇಲಾಖೆಗೆ ವರ್ಗಾಯಿಸಲಾಗುತ್ತದೆ.
ಅಲ್ಲದೇ ಸಚಿವಾಲಯವು ನಿರ್ಧಾರಕ್ಕೆ ಬರವು ಮೊದಲು ಈ ವಿಷಯಕ್ಕೆ ಸಂಬಂಧಿಸಿದ್ದ ಪಾಲುದಾರರ ಜೊತೆ ಚರ್ಚಿಸಿಲ್ಲ. ಕೇವಲ ಪ್ರಧಾನಿಯವರ ಟ್ವೀಟ್ ನಂತರ ಹೆಸರು ಬದಲಿಸಿದೆ. ಇನ್ನು ಸರಳವಾಗಿ ಹೇಳಬೇಕೆಂದರೆ ಮೊದಲು ಟ್ವೀಟ್ ಮಾಡಿದ ನಂತರವೆ ಪ್ರಶಸ್ತಿಯ ಹೆಸರು ಬದಲಿಸಲಾಗಿದೆ!
ಮೂರು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ, ಮೇಜರ್ ಧ್ಯಾನ್ ಚಂದ್ ಅವರು ದೇಶದ ಶ್ರೇಷ್ಠ ಹಾಕಿ ಆಟಗಾರ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ಜನ್ಮದಿನವಾದ ಆಗಸ್ಟ್ 29 ರಂದು ಭಾರತದ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಈ ದಿನದಂದು ದೇಶದ ಅತ್ಯುನ್ನತ ಕ್ರೀಡಾ ಗೌರವಗಳಾದ ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ರಾಯಚೂರಿನಲ್ಲಿ ಮಸೀದಿ ಕೆಡವಿದಾಗ ದೇವಾಲಯ ಪತ್ತೆಯಾಯಿತೆ?