Homeಕರ್ನಾಟಕಕನ್ನಡದ ಓದು ಕಟ್ಟಿಕೊಟ್ಟ ವೈವಿಧ್ಯತೆಯ, ಸಹನೆಯ, ಬಹುತ್ವದ ವಿವೇಕ

ಕನ್ನಡದ ಓದು ಕಟ್ಟಿಕೊಟ್ಟ ವೈವಿಧ್ಯತೆಯ, ಸಹನೆಯ, ಬಹುತ್ವದ ವಿವೇಕ

- Advertisement -
- Advertisement -

ತಮ್ಮ ಧರ್ಮದ ಪವಿತ್ರ ಗ್ರಂಥವನ್ನು ಮುಟ್ಟಿದ್ದಕ್ಕಾಗಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆಯಾಗುತ್ತದೆ. ಒಂದು ಧರ್ಮ ಅಥವಾ ಪಂಗಡಕ್ಕೆ ಸೇರಿದವರಿಗೆ ಮನೆ ಕೊಡುವುದಿಲ್ಲ ಎಂಬ ಬೋರ್ಡುಗಳು ಅಲಂಕಾರಿಕವಾಗಿ ಮನೆಬಾಗಿಲುಗಳಲ್ಲಿ ರಾರಾಜಿಸುತ್ತವೆ. ಯುವತಿಯೊಬ್ಬಳು ಅನ್ಯಧರ್ಮದ ಯುವಕರ ಜೊತೆ ಪ್ರಯಾಣಿಸುತ್ತಿರುವುದನ್ನು ಕಂಡು ತಡೆಹಿಡಿಯಲಾಗುತ್ತದೆ. NCERT ಪ್ರಮಾಣೀಕೃತ ಎರಡನೇ ತರಗತಿ ಶಾಲಾ ಪಠ್ಯದಲ್ಲಿ ಎರಡು ಭಿನ್ನ ಧರ್ಮಗಳ ಆಚಾರಗಳನ್ನು ವಿವರಿಸುವಾಗ “ನಾವು”, “ಅವರು” ಎಂದು ಬರೆಯಲಾಗುತ್ತದೆ. ಮನೆಮನೆಗಳಲ್ಲಿ ಕತ್ತಿ, ತಲ್ವಾರ್ ಇರಬೇಕೆಂದು ಬೋಧನೆಗಳಾಗುತ್ತವೆ. ಫ್ರಿಜ್ಜಿನಲ್ಲಿ ಒಂದು ಬಗೆಯ ಮಾಂಸವಿಟ್ಟಿದೆ ಎಂಬ ಕಾರಣಕ್ಕೆ ರಕ್ತಪಾತಗಳಾಗುತ್ತವೆ. ಒಂದು ಜಾತಿಯ ಜನರೇ ಅರ್ಚಕರಾಗುವಂತೆ ಕಾನೂನಾಗಬೇಕೆಂಬ ಪ್ರತಿಷ್ಠಿತ ಪೀಠಗಳಿಂದ ಬೇಡಿಕೆಗಳು ಬರುತ್ತವೆ, ಮೈಲಿಗಟ್ಟಲೆ ಮಾಂಸಾಹಾರ ನಿಷೇಧ ಕಾನೂನುಗಳು ಜಾರಿಯಾಗುತ್ತವೆ, ಹುಟ್ಟಿ, ಬೆಳೆದು, ಬದುಕು ಸಾಗಿಸಿದ ನೆಲದಲ್ಲೇ ಅಸ್ತಿತ್ವಕ್ಕಾಗಿ ಕಾಗದ ಪತ್ರಗಳನ್ನು ಕೊಡಬೇಕಾದ ಕಾನೂನುಗಳು ಜೀವತಳೆಯುತ್ತವೆ. ಎಲ್ಲಕ್ಕಿಂತ ಆತಂಕಕಾರಿಯಾದ ಅಂಶಗಳೆಂದರೆ ವೈವಿಧ್ಯತೆಯ ಅನ್ವರ್ಥವಾದ ಪ್ರಜಾಪ್ರಭುತ್ವದ ಈ ನೆಲೆಯಲ್ಲಿ ಪ್ರಶ್ನೆಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತವೆ, ಸುಳ್ಳು ಮಾಹಿತಿಗಳಿಂದ ಮನುಷ್ಯರ ಮನಸ್ಸುಗಳನ್ನು ಕಲುಷಿತಗೊಳಿಸುವ ವ್ಯವಸ್ಥಿತ ಹುನ್ನಾರಗಳು ನಡೆಯುತ್ತವೆ, ದನಿಗಳನ್ನು ದಮನಿಸುವ ಘಟನೆಗಳು ಜರುಗುತ್ತವೆ. ಕಣ್ಣಿಗೆ ರಾಚುವಂತಹ ಉದಾಹರಣೆಗಳು ತೇಲಿ ಬಂದರೆ ಪ್ರಭುತ್ವದಿಂದ “ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಅಂಡ್ ರಿಯಾಕ್ಷನ್” ಎಂಬ ಹಾರಿಕೆಯ ಉತ್ತರಗಳು ಬರುತ್ತವೆ.

ಸರ್ವಜನಾಂಗದ ಶಾಂತಿಯ ತೋಟವಾದ ನಮ್ಮ ನಾಡು ಈ ರೀತಿಯಾದ ಅಸೂಕ್ಷ್ಮ, ಅಮಾನವೀಯ ಘಟನೆಗಳಿಗೆ ಮೂಕ ಸಾಕ್ಷಿಯಾಗುತ್ತಿದೆ ಎಂಬುದು ನೋವಿನ ಸಂಗತಿ. ಮೇಲೆ ಪಟ್ಟಿಮಾಡಿರುವ ಬೆರಳೆಣಿಕೆಯ ಉದಾಹರಣೆಗಳು ಬೊಗಸೆ ನೀರಷ್ಟೇ. ಸಾಮಾಜಿಕ, ಆರ್ಥಿಕ ಅಸಮಾನತೆ, ಅನೀತಿಗಳು ಉಂಟು ಮಾಡುತ್ತಿರುವ ದ್ವೇಷ, ಕ್ಲೀಷಗಳು ಕೌಟುಂಬಿಕ, ವೈಯಕ್ತಿಕ ಮಟ್ಟಗಳಲ್ಲಿ ಸೋಂಕಾಗಿ ಪಸರಿಸುತ್ತಿರುವುದು, ನಮ್ಮ ಬದುಕಿನ ದಿಕ್ಕುಗಳನ್ನೇ ಬದಲಾಯಿಸಿದ ಕೋವಿಡ್‌ಗಿಂತಲೂ ಭಯಾನಕವಾದ ವೈರಸ್ ಆಗಿ ಮಾರ್ಪಡುತ್ತಿದೆ. ಪಕ್ಕದಲ್ಲಿ ಕೂತಿರುವ ವ್ಯಕ್ತಿಯ ಪ್ರತಿ ಮಾತಿಗೂ ನಾವು ಇಸಮ್ಮುಗಳ ಬಣ್ಣಗಟ್ಟಿ ಅವರ ಯೋಗ್ಯಾಯೋಗ್ಯತೆಗಳ ತೂಕ ಹಾಕುವಂತಹ ಮನಸ್ಥಿತಿಗೆ ಒಳಗಾಗಿದ್ದೇವೆ. ಪಟ್ಟಭದ್ರಹಿತಾಸಕ್ತಿಗಳು, ಕುರುಡು ಮೌಢ್ಯಗಳು, ಆಫ್ಲೈನ್-ಆನ್ಲೈನ್ ಸಂವಹನಗಳು, ವಾಟ್ಸಾಪ್ ಯೂನಿವರ್ಸಿಟಿಗಳು ಎಲ್ಲವೂ ನಮಗೆ ಪದವಿಗಳು, ಡಾಕ್ಟರೇಟುಗಳನ್ನು ದಯಪಾಲಿಸುತ್ತಿವೆ.

ಇಂತಹ ಆತಂಕಕಾರಿ ಸಂದರ್ಭದಲ್ಲಿ ನಾವು ಸ್ವಲ್ಪ ನಿಧಾನಿಸಬೇಕು, ಬೆಂಕಿಯಂತೆ ಹೊತ್ತಿ ಉರಿಯುವ ಹುಸಿನುಡಿಗಳನ್ನು, ವಿಷಕಾರಿ ಬೀಜಗಳನ್ನು ಹರಡಿ ಹಬ್ಬಿಸುವ ನಮ್ಮ ಬಾಯ್ತುದಿಯ, ಬೆರಳಂಚಿನ ತೃಷೆಗೆ ಸ್ವಲ್ಪ ಕಡಿವಾಣ ಹಾಕಬೇಕು. ವೈಜ್ಞಾನಿಕ, ವೈಚಾರಿಕ, ಪ್ರಶ್ನಾಮನೋಭಾವಗಳನ್ನು ಪ್ರೋತ್ಸಾಹಿಸಬೇಕು. ಪ್ರಜಾಪ್ರಭುತ್ವವೆಂಬ ಸುಂದರ ಪರಿಕಲ್ಪನೆಯನ್ನು ಮುದುಡಿ ನಲುಗಿಸುವ ಬದಲು ಅರಳಿಸಬೇಕು. ಮತ್ತೆ ಎದೆಎದೆಯ ಕದಗಳನ್ನು ತಟ್ಟುವ ಹದ ನಮ್ಮಲ್ಲಿ ಮೈಗೂಡಬೇಕು. ಇದು ಸಾಧ್ಯವಾಗಬೇಕಾದರೆ ನಮ್ಮ ಸಾಕ್ಷಿಪ್ರಜ್ಞೆ ಜಾಗೃತಗೊಳ್ಳಬೇಕು. ಬುದ್ಧಿವಂತರಾದ ನಾವು ಪ್ರಜ್ಞಾವಂತರಾಗಬೇಕು. ವೈಚಾರಿಕವಾಗಿ, ವೈಜ್ಞಾನಿಕವಾಗಿ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಬೇಕು.

ಕನ್ನಡ ನಾಡು-ನುಡಿಯು ನಮ್ಮ ಮನೆಮನೆಯ ಉತ್ಸವವಾಗಿ ಬೆಳೆದು ನಿಂತು ಆರು ದಶಕಗಳನ್ನೂ ಮೀರಿ ಮುಂದುವರೆದಿರುವ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಹೆಮ್ಮೆಯ ಅಂಶವೆಂದರೆ ಕನ್ನಡ ಸಾಹಿತ್ಯವು ನಮ್ಮ ಪ್ರಜ್ಞಾವಂತಿಕೆಯ, ವೈಚಾರಿಕತೆಯ ಪೋಷಣೆಗೆ, ವೈಜ್ಞಾನಿಕ ಚಿಂತನೆಗೆ ಆದರದಿಂದ ನೀರೆರೆಯುತ್ತದೆ ಎಂಬುದು. ಜಾರ್ಗನ್ನುಗಳನ್ನು ಪಕ್ಕಕ್ಕಿಟ್ಟು ಸರಳ ಮಾತುಗಳಲ್ಲಿ ಹೇಳಬೇಕೆಂದರೆ; ಮನುಷ್ಯರಾದ ನಾವು ಮಾನವೀಯತೆಯನ್ನು, ಜೀವಂತಿಕೆಯನ್ನು, ಪರಾವಲಂಬನೆಯನ್ನು ಮೆರೆಯುವುದು. ದೈನಂದಿನ ಆಗುಹೋಗುಗಳನ್ನು ಮನುಷ್ಯಮಟ್ಟದಲ್ಲಿ ನಿಂತು ನೋಡುವುದು ಮತ್ತು ಮನುಷ್ಯರಿಂದಲೇ ಮನುಷ್ಯರಿಗಾಗಿಯೇ ನಡೆಸುವುದು. ನಮ್ಮ ಕನ್ನಡ ಸಾಹಿತ್ಯದಲ್ಲಿ ಇಂತಹ ಬದುಕಿನ ಪಾಠಗಳ, ಮಾನವೀಯ ಮೌಲ್ಯಗಳ ಅಣಿಮುತ್ತುಗಳಿವೆ. “ಎದೆ ಎದೆಗಳ ನಡುವೆ ಇರುವ ಮುರಿದ ಸೇತುವೆಗಳನ್ನು” ಎತ್ತಿ ತೋರಿ ಅದಕ್ಕೆ ಅಗತ್ಯ ಮರುಕಟ್ಟುವಿಕೆಯ ಆಕರಗಳನ್ನು ಕಲ್ಪಿಸಿಕೊಡುತ್ತದೆ. “ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?” ಎಂದು ಮುದ್ದಾದ, ಸರಳ ಮಾತುಗಳಲ್ಲಿ ಬದುಕಿನ ಅತಿದೊಡ್ಡ ಪಾಠವನ್ನು ಹೇಳಲು ಸಾಹಿತ್ಯದಲ್ಲಿ ಸಾಧ್ಯವಾಗಿದೆ. “ಜಾತಿ ಭಾಷೆ ಪಂಥ ಹಲವು ಅವುಗಳ ಹಿಂದೆ ಮಾತ್ರ ಒಂದೇ ಒಲವು”, “ಇವನಾರವ ಇವನಾರವ ಎಂದು ಎನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದು ಎನಿಸಯ್ಯ”, “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎನ್ನುವಂತ ಇಂಪೆನಿಸುವ, ತಂಪೆನಿಸುವ ವಿಚಾರಗಳ ದರ್ಶನವನ್ನು ನಮಗೆ ಒಡ್ಡಿ ಆಂತರಿಕ ಮಟ್ಟದಲ್ಲಿ ನಮ್ಮ ಆಲೋಚನಾ ಕ್ರಮವನ್ನು ಬದಲಾಯಿಸುವ ಶಕ್ತಿ ಸಾಹಿತ್ಯದ ಓದಿಗಿದೆ.

ಸರಿಸುಮಾರು ಒಂಭತ್ತನೆಯ ಶತಮಾನದಷ್ಟರ ಹೊತ್ತಿಗೇ ಕವಿರಾಜಮಾರ್ಗದಲ್ಲಿ “ಕಸವರಮೆಂಬುದು ನೆರೆ ಸೈರಿಸಲಾರ್ಪೆಡೆ ಪರವಿಚಾರಮುಮಂ, ಧರ್ಮಮುಮಂ” ಎಂಬ ಮಾತಿದೆ. ಅಂದರೆ, ನಿಜವಾದ ಸಂಪತ್ತೆಂಬುದು ಅನ್ಯರ ವಿಚಾರಗಳನ್ನು, ಅನ್ಯಧರ್ಮವನ್ನು ತಾಳಿಕೊಳ್ಳುವುದು, ಗೌರವಿಸುವುದು ಎಂಬುದಾಗಿದೆ. ಕನ್ನಡದ ಮೊಟ್ಟಮೊದಲ ಕೃತಿಯಲ್ಲಿ ಇಂತಹ ವಿಚಾರವನ್ನು ಉಲ್ಲೇಖಿಸಲಾಗಿದೆ. ಇದು ಇಂದಿಗೂ ಅತ್ಯಂತ ಪ್ರಸ್ತುತವಾದ ಮಾತು ಎಂಬುದನ್ನು ನಾವೆಲ್ಲರೂ ಗಮನಿಸಬೇಕು. ಆದಿಕವಿ ಪಂಪ, ಒಬ್ಬ ಆಸ್ಥಾನಕವಿಯಾಗಿದ್ದರೂ ತನ್ನೆಲ್ಲ ಮಿತಿಗಳ ನಡುವೆಯೇ ತನ್ನ ವೈಚಾರಿಕ ಪ್ರಜ್ಞೆಯನ್ನು ಎತ್ತಿ ಹಿಡಿಯುತ್ತಾ “ಕುಲಂ ಕುಲಮಲ್ತು ಚಲಂ ಕುಲಂಗುಣಂ ಕುಲಮಭಿಮಾನಮೊಂದೆ ಕುಲಮಣ್ಮುಕುಲಂ” ಎಂದು ಜಾತಿ-ಕುಲಗಳ ಅಸ್ತಿತ್ವವನ್ನೇ ನಿವಾಳಿಸಿಬಿಡುತ್ತಾನೆ. ಗದಾಯುದ್ಧದಲ್ಲಿ ರನ್ನಕವಿಯು, ಯುದ್ಧವನ್ನು ವೈಭವೀಕರಿಸಿ ಅದರ ಭೀಭತ್ಸತೆ, ಭಯಾನಕತೆಯನ್ನು ತೋರುತ್ತಲೇ ಆ ರುದ್ರ ಹಿಂಸೆಯ ಬಗೆಗೆ ನೋವನ್ನು ವ್ಯಕ್ತಪಡಿಸುತ್ತಾನೆ. ಕುಮಾರವ್ಯಾಸನೂ ತನ್ನ ಕೃಷ್ಣಕಥೆಯಲ್ಲಿ, ದ್ವೇಷಕ್ಕೆ ಯುದ್ಧವೊಂದೇ ಪರಿಹಾರವಲ್ಲ ಎಂಬ ಅಂಶವನ್ನೂ ಎತ್ತಿತೋರುತ್ತಾನೆ.

ವಚನಕಾಲವು ಒಂದು ಸಾಮಾಜಿಕ ಚಳವಳಿಯಾಗಿಯೇ ಸಂಚಲನ ಮೂಡಿಸಿತ್ತು. ಆಸ್ಥಾನದ ಓದಿಗೆ ಮಿತಿಯಾಗಿದ್ದ ಸಾಹಿತ್ಯವು ರಸ್ತೆಗಿಳಿದು ಮನೆಮನೆ ತಲುಪಿತ್ತು. “ದೇವಲೋಕ ಮರ್ತ್ಯಲೋಕ ಎಂಬುದು ಬೇರಿಲ್ಲ ಕಾಣಿರೋ, ಸತ್ಯವ ನುಡಿಯುವುದೇ ದೇವಲೋಕ, ಮಿಥ್ಯವ ನುಡಿಯುವುದೇ ಮರ್ತ್ಯಲೋಕ, ಆಚಾರವೆ
ಸ್ವರ್ಗ, ಅನಾಚಾರವೆ ನರಕ”, “ದೇಹವೇ ದೇಗುಲ” ಎನ್ನುತ್ತಾರೆ ಬಸವಣ್ಣ ಕವಿ. “ಅಯ್ಯಾ, ತನ್ನ ತಾನರಿಯಬೇಕಲ್ಲದೆ, ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ ಕೇಳಲುಂಟೆ” ಎನ್ನುತ್ತಾಳೆ ಅಕ್ಕಮಹಾದೇವಿ. ನಮ್ಮೆಲ್ಲಾ ಆತಂಕಗಳಿಗೆ, ತಲ್ಲಣಗಳಿಗೆ, ನೋವು-ದುಃಖಗಳಿಗೆ ನಮ್ಮ ನಾಲಿಗೆ ಮತ್ತು ವಿಚಾರ ಕ್ರಮವೇ ಕಾರಣ ಎನ್ನುತ್ತಾನೆ ಸರ್ವಜ್ಞ ಕವಿ. ದಾಸಸಾಹಿತ್ಯದಲ್ಲಿ ಭಕ್ತಿಯೊಂದಿಗೆ ಉಕ್ಕಿದ ಮತ್ತೊಂದು ರಸವೆಂದರೆ ಚಿಂತನೆ. “ಮೋಸಮಾಡುವವನ ಹೆಸರು ಮಗನಿಗಿಡಬೇಕು” ಎಂದು ಹಾಡುವಷ್ಟು ಸಜ್ಜನಿಕೆ, ವಿನಯ ಪುರಂದರದಾಸರಿಗಿದೆ. “ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನು ಬಲ್ಲಿರಾ?” ಎನ್ನುವ ಕನಕದಾಸರು ವಿಚಾರವಾದವನ್ನು ತಮ್ಮ ಪದಗಳಲ್ಲೇ ಹಾಡಿ ಮೆರೆಸುತ್ತಾರೆ.

ನವೋದಯ ಕಾಲವು ವೈಚಾರಿಕ ಪ್ರಜ್ಞೆಯನ್ನು ಹೊತ್ತ ಬಹುದೊಡ್ಡ ಬುತ್ತಿಯನ್ನೇ ನಮಗೆ ಕೊಡುತ್ತದೆ ಎಂದರೆ ತಪ್ಪಿಲ್ಲ. ವಿಜ್ಞಾನಸಂಪನ್ನರಾದ ಬ್ರಿಟಿಷರು ಸುಮಾರು 200 ವರ್ಷಗಳು ನಮ್ಮನ್ನು ಆಳಿದರೂ ವೈಜ್ಞಾನಿಕ ದೃಷ್ಟಿಕೋನವನ್ನು ನಾವು ಬೆಳೆಸಿಕೊಳ್ಳಲಿಲ್ಲ ಎನ್ನುವ ಕವಿ ಕುವೆಂಪು ನಮಗೆ ವೈಚಾರಿಕ ಸಾಹಿತ್ಯದ ರಸದೌತಣವನ್ನೇ ಉಣಬಡಿಸುತ್ತಾರೆ. “ಸಿಲುಕದಿರಿ ಮತವೆಂಬ ಮೋಹದ ಜಾಲಕ್ಕೆ, ಮತಿಯಿಂದ ದುಡಿಯಿರೈ ಲೋಕದ ಹಿತಕ್ಕೆ” ಎನ್ನುವ ಕುವೆಂಪು ವೈಜ್ಞಾನಿಕ ದೃಷ್ಟಿಗೆ ವೈಚಾರಿಕತೆ ತಾಯಿ ಬೇರು ಎನ್ನುತ್ತಾರೆ. ಪ್ರಜಾಪ್ರಭುತ್ವದ ಸಾರಾಂಶವನ್ನು ಒಂದೇ ಸರಳ ಸಾಲಿನಲ್ಲಿ “ಹಿಂದಾಯಿತು ಗರ್ವರ ಕಾಲ, ಈಗ ಸರ್ವರ ಕಾಲ” ಎನ್ನುತ್ತಾರೆ. ಈ ಒಂದು ಸಣ್ಣ ಸಾಲು ಎಷ್ಟು ಸಶಕ್ತವಾಗಿ, ಸಮರ್ಥವಾಗಿದೆ ಎಂಬುದನ್ನು ಮನಗಾಣಬಹುದು. ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಓದದೆ ಹೋದರೆ ಬದುಕಿನಲ್ಲಿ ನಾವು ಕಳೆದುಕೊಳ್ಳುವುದು ಖಂಡಿತ. ಒಂದು ಮಗು ಹುಟ್ಟುತ್ತಲೇ ವಿಶ್ವಮಾನವನಾಗಿರುತ್ತದೆ, ನಾವು ಮತ, ಧರ್ಮ, ಜಾತಿ ಮುಂತಾದ ಶೃಂಖಲೆಗಳಲ್ಲಿ ಬಿಗಿದು ಆ ಮಗುವನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ ಎನ್ನುತ್ತಾರೆ ಕವಿ. ಇದು ಬಹಳ ಮುಖ್ಯವಾದ, ಮನವರಿಕೆ ಮಾಡಿಕೊಳ್ಳಲೇಬೇಕಾದ ಅರಿವು. ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ಮಾತು ಈ ಕವಿನುಡಿಗೆ ಪೂರಕವಾಗಿದೆ.

ಹೀಗೆ ಕುವೆಂಪು, ಕಾರಂತರು, ಬಿ.ಎಂ.ಶ್ರೀ, ಗೌರೀಶ ಕಾಯ್ಕಿಣಿ, ಎಚ್.ನರಸಿಂಹಯ್ಯ, ಜಿ.ರಾಮಕೃಷ್ಣ, ಡಿ.ವಿ.ಜಿ, ಶಂ.ಬಾ.ಜೋಶಿ, ಪಾ.ಪು, ಲಂಕೇಶರು, ತೇಜಸ್ವಿ, ಜವರೇಗೌಡರು, ರಹಮತ್ ತರೀಕೆರೆ ಮುಂತಾದ ಅನೇಕ ಪ್ರಮುಖರು ತಮ್ಮ ಮೌಲ್ಯಯುತ ಕೃತಿಗಳ ಮೂಲಕ ಸಾಮಾಜಿಕ ಪ್ರಜ್ಞೆಯನ್ನು, ಕಳಕಳಿಯನ್ನು ಎತ್ತಿಹಿಡಿಯಲು ಪ್ರಯತ್ನಿಸಿದ್ದಾರೆ. ಎಚ್.ನರಸಿಂಹಯ್ಯನವರು “ದೇವರು, ಧರ್ಮ, ಜ್ಯೋತಿಷ್ಯ, ಪವಾಡ ಮುಂತಾದವು ವಾಣಿಜ್ಯ ಕೇಂದ್ರಗಳಾಗಿವೆ” ಎನ್ನುತ್ತಾರೆ. ಗೌರೀಶ ಕಾಯ್ಕಿಣಿಯವರು “ಯಾವ ಕ್ರಾಂತಿಗೂ ಮೊದಲು ವಿಚಾರ ಕ್ರಾಂತಿ” ಎಂದಿದ್ದಾರೆ. ಕಾರಂತರು “ಇಂದಿನ ಅಗತ್ಯತೆ ದೇವರಲ್ಲ, ಮಾನವೀಯತೆ” ಎನ್ನುತ್ತಾರೆ. ತಮ್ಮ ಸಣ್ಣ ಕಥೆಗಳ ಜೀವಂತ ಪಾತ್ರಗಳ ಮೂಲಕ ಮನುಷ್ಯತ್ವವನ್ನು ತುಂಬಿಬಿಡುವ ಮಾಸ್ತಿ, “ಕಸವನೆಸೆ, ರಸವಬೆಳೆ, ನಿಜವ ತಿಳಿ, ಅದನು ಸಾರು” ಎಂದು ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖನೀಯ. ಯು.ಆರ್.ಅನಂತಮೂರ್ತಿ ಅವರ ಕಾದಂಬರಿ, ಕಥೆಗಳು ಗಂಭೀರ ಚಿಂತನೆಗಳನ್ನು ನಮ್ಮಲ್ಲಿ ಹುಟ್ಟಿಸುತ್ತವೆ. “ಏನಾದರೂ ಆಗು, ನಿನ್ನೊಲವಿನಂತಾಗು, ಏನಾದರೂ ಸರಿಯೆ, ಮೊದಲು ಮಾನವನಾಗು” ಎನ್ನುತ್ತಾ ಬದುಕಿನ ಬಹುದೊಡ್ಡ ಪಾಠವನ್ನು ಅತಿ ಸರಳ ಬೋಧನೆಯಾಗಿಸುತ್ತಾರೆ ಕವಿ ಸಿದ್ಧಯ್ಯ ಪುರಾಣಿಕರು. ತಮ್ಮ ವಿಜ್ಞಾನ ಬರಹಗಳ ಮೂಲಕ ಮಾನವೀಯ ಮೌಲ್ಯಗಳನ್ನು, ಮನುಷ್ಯತ್ವವನ್ನು ಸಾರುವ ನಾಗೇಶ್ ಹೆಗಡೆ ಅವರು ಸಹ
ವೈಚಾರಿಕತೆಯ ಅರಿವು ಮೂಡಿಸುವ ಅತಿ ಮುಖ್ಯರಲ್ಲಿ ಒಬ್ಬರು.

ಸಾಮಾಜಿಕ ನ್ಯಾಯಪಾಲನೆಯನ್ನು ಎತ್ತಿ ಹಿಡಿಯುವ, ಮನುಷ್ಯನ ಪ್ರಗತಿಗೆ ವಿಚಾರ ಊರುಗೋಲು ಎಂದು ಸಾರುವ, ಆರೋಗ್ಯಕರ ಬದುಕಿಗೆ ವಿಚಾರ ಸಾಹಿತ್ಯ ಅನಿವಾರ್ಯ ಎಂದು ಅನುಭವದಿಂದ ಸಾರುವ ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವ, ಚೆನ್ನಣ್ಣ ವಾಲೀಕಾರ, ಚಂಪಾ, ಸಿದ್ಧಲಿಂಗಯ್ಯ ಮುಂತಾದ ಪ್ರಮುಖರು ಬಂಡಾಯ ಮತ್ತು ದಲಿತ ಸಾಹಿತ್ಯದ ಮೂಲಕ ನಮ್ಮನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ.

ಅಕ್ಕ ಮಹಾದೇವಿಯಿಂದ ಹಿಡಿದು ಸಂಚಿ ಹೊನ್ನಮ್ಮ, ರುಕ್ಮಿಣೀಬಾಯಿ, ಶಾಂತಾಬಾಯಿ, ತಿರುಮಲಾಂಬಾ, ಕೊಡಗಿನ ಗೌರಮ್ಮ, ಬೆಳಗೆರೆ ಜಾನಕಮ್ಮ, ತ್ರಿವೇಣಿ, ಎಂ.ಕೆ.ಇಂದಿರಾ, ಸರ್ವಮಂಗಳಾ, ಗೀತಾ ನಾಗಭೂಷಣ, ಬಿ.ಟಿ.ಲಲಿತಾನಾಯಕ್, ವೈದೇಹಿ, ವೀಣಾ ಶಾಂತೇಶ್ವರ, ಎಚ್.ಎಲ್.ಪುಷ್ಪ, ಹೇಮಾ ಪಟ್ಟಣ ಶೆಟ್ಟಿ, ಪ್ರತಿಭಾ ನಂದಕುಮಾರ್, ಸಾರಾ ಅಬೂಬಕರ್, ವಿಜಯಾ ದಬ್ಬೆ, ಹೆಚ್.ಎಸ್.ಪಾರ್ವತಿ, ಗಾಯತ್ರಿ ನಾವಡ, ಕಮಲಾ ಹಂಪನಾ, ಎಚ್.ಎಸ್.ಶ್ರೀಮತಿ, ಎಂ.ಎಸ್.ಆಶಾದೇವಿ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬಹಳ ದೊಡ್ಡದು. ಈ ಪಟ್ಟಿಯಲ್ಲಿರುವ ಎಲ್ಲರೂ ಮತ್ತು ಉಳಿದ ಇನ್ನೂ ಹಲವರು ವೈಚಾರಿಕತೆಯ, ಮಾನವೀಯತೆಯ ಬದುಕಿನ ಪಾಠಗಳನ್ನು ಹೇಳಿರುವಲ್ಲಿ ಮುಖ್ಯರಾಗುತ್ತಾರೆ. ಪ್ರತಿ ದಿನ ಬದುಕಿನ ಹೋರಾಟಗಳನ್ನು ವಿವಿಧ ಮಜಲುಗಳಲ್ಲಿ, ರೂಪಗಳಲ್ಲಿ ಅನುಭವಿಸುತ್ತಾ, ಎದುರಿಸಿ ಗೆಲ್ಲುವ ಎಲ್ಲ ಮಹಿಳೆಯರ ಅನುಭವಗಳು ಈ ಮಹಿಳಾ ಸಾಹಿತಿಗಳ ಬರಹಗಳಲ್ಲಿ ಅಕ್ಷರಗಳಾಗಿ ಹರಳುಗಟ್ಟಿ ಮೂಡಿಬಂದಿವೆ.

ಮೇಲೆ ಹೇಳಿರುವ ಪಟ್ಟಿಯಲ್ಲಿ ಹಲವರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ತಮ್ಮ ಬರಹಗಳ ಮೂಲಕ, ವಿಚಾರಗಳ ಮೂಲಕ ನಮ್ಮೊಂದಿಗೆ ಸದಾ ಒಂದು ಪ್ರಜ್ಞೆಯಾಗಿ ಇರುತ್ತಾರೆ. ಆದ್ದರಿಂದಲೇ ಸಾಹಿತ್ಯಕ್ಕೆ ಸಾವಿಲ್ಲ ಎಂಬ ಮಾತು ಹುಟ್ಟಿಬಂದಿದೆ. ಇನ್ನುಳಿದವರು ಇಂದಿಗೂ ನಮ್ಮೊಂದಿಗೆ ಕೈಜೋಡಿಸುತ್ತಾ, ಕಾಲಕಾಲಕ್ಕೂ ಎಚ್ಚರಿಸುತ್ತಾ ತಮ್ಮ ಬರಹಗಳನ್ನು ಮುಂದುವರೆಸುತ್ತಿರುವುದು ನಮ್ಮ ಅದೃಷ್ಟವಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಅನೇಕ ಯುವ (ಅಥವಾ ಹೊಸ) ಬರಹಗಾರರು ವೈಚಾರಿಕ ಪ್ರಜ್ಞೆಯ ದಾರಿದೀವಿಗೆಗಳಾಗಿ ಚಿಗುರಿ, ಅರಳುತ್ತಿರುವುದು ಕನ್ನಡ ನಾಡು-ನುಡಿಯ ಬಹುದೊಡ್ಡ ಭರವಸೆಯಾಗಿದೆ. “ಉತ್ತಮ ಸಾಹಿತ್ಯ ಕೃತಿಯೊಂದು ನಮ್ಮನ್ನು ಅಲುಗಾಡಿಸಿ, ನಮ್ಮೊಳಗಿನ ಅರಿವನ್ನು ಎಚ್ಚರಿಸುವಂತಿರಬೇಕು” ಎಂಬ ಮಾತಿದೆ. ಈ ಮಾತನ್ನು ಸಮರ್ಥಿಸಲು ನಮ್ಮ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಭಂಡಾರವೇ ಇದೆ. ಅದನ್ನು ಹೆಕ್ಕಿ ತೆಗೆದು ಜೋಳಿಗೆಗೆ ತುಂಬಿಸಿಕೊಳ್ಳುವುದಷ್ಟೇ ನಮ್ಮ ಕೆಲಸವಾಗಿದೆ.

ಸಂಯುಕ್ತಾ ಪುಲಿಗಲ್

ಸಂಯುಕ್ತಾ ಪುಲಿಗಲ್
ಐಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಯುಕ್ತಾ ಬರಹಗಾರ್ತಿ-ಅನುವಾದಕಿ. ’ಪರ್ವತದಲ್ಲಿ ಪವಾಡ’ ಮತ್ತು ’ರೆಬೆಲ್ ಸುಲ್ತಾನರು’ ಅವರ ಅನುವಾದಿತ ಕೃತಿಗಳು. ’ಲ್ಯಾಪ್‌ಟಾಪ್ ಪರದೆಯಾಚೆಗೆ’ ಅಂಕಣ ಸಂಗ್ರಹ. ’ಆಪರೇಷನ್ ಬೆಳಕಿನ ಕಿಂಡಿಗಳು’ ಅವರ ಇತ್ತೀಚಿನ ಕಾದಂಬರಿ.


ಇದನ್ನೂ ಓದಿ: 66ನೇ ಕನ್ನಡ ರಾಜ್ಯೋತ್ಸವ; ಹಿಂದೆಂದೂ ಕಾಣದ ದೆಹಲಿ ದಾಸ್ಯದ ಸುಳಿಯಲ್ಲಿ ಕರ್ನಾಟಕ!

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ಒಂದು ವಾರ ’ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...