ಗುಜರಾತ್ನ ವಡೋದರಾದಲ್ಲಿ ಬೀದಿ ಬದಿ ವ್ಯಾಪಾರಿಗಳು ಮಾಂಸಾಹಾರವನ್ನು ಪ್ರದರ್ಶಿಸದಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ಹಾಗೇನಾದರೂ ಬಹಿರಂಗವಾಗಿ ಮಾಂಸಾಹಾರ ಮಾರಾಟ ಮಾಡಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಆಹಾರ ಮಳಿಗೆಗಳು ಮಾಂಸಾಹಾರವನ್ನು ಪ್ರದರ್ಶಿಸಿ ಮಾರಾಟ ಮಾಡದಂತೆ ನೋಡಿಕೊಳ್ಳಲು ವಡೋದರಾದ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಸೂಚಿಸಿದ್ದಾರೆ. ಮಳಿಗೆಗಳಲ್ಲಿ ಹಾಗೂ ಬೀದಿಬದಿ ಗಾಡಿಗಳಲ್ಲಿ ಮಾಂಸಾಹಾರವನ್ನು ತೆರೆದು ಮಾರಾಟ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೊಟ್ಟೆಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಗಾಡಿಗಳಿಗೂ ಈ ನಿರ್ದೇಶನ ಅನ್ವಯವಾಗಲಿದೆ.
“ಮಾಂಸಾಹಾರ ಮಾರಾಟ ಮಾಡುವ ಸ್ಟಾಲ್ಗಳನ್ನು ಗೊತ್ತುಪಡಿಸಿದ ಹಾಕಿಂಗ್ ವಲಯಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಅಂತಹ ಮಳಿಗೆಗಳನ್ನು ಮುಖ್ಯ ರಸ್ತೆಗಳಿಂದ ದೂರವಿಡಬೇಕು” ಎಂದು ಗುಜರಾತ್ ರಾಜ್ಯದ ರಾಜ್ಕೋಟ್ನ ಮೇಯರ್ ಸೂಚನೆಗಳನ್ನು ನೀಡಿದ ನಂತರ ವಡೋದರದಲ್ಲಿಯೂ ಇದೇ ಕ್ರಮ ಜರುಗಿಸಲಾಗಿದೆ.
ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಹಿತೇಂದ್ರ ಪಟೇಲ್ ಅವರು ಮೌಖಿಕವಾಗಿ ಸೂಚನೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಪಟೇಲ್ ಅವರ ಸೂಚನೆಗಳನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಕೆಲವು ಗೊಂದಲಗಳಿವೆ ಎಂದು ಸ್ಥಳೀಯ ವರದಿಗಳು ಸೂಚಿಸಿದರೆ, ಮತ್ತೊಂದು ವರದಿ ಹಿತೇಂದ್ರ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.
“ಎಲ್ಲಾ ಆಹಾರ ಮಳಿಗೆಗಳು, ವಿಶೇಷವಾಗಿ ಮೀನು, ಮಾಂಸ ಮತ್ತು ಮೊಟ್ಟೆಗಳಂತಹ ಮಾಂಸದ ಆಹಾರವನ್ನು ಮಾರಾಟ ಮಾಡುವ ಅಂಗಡಿಗಳಿಗೆ ನಾನು ಸೂಚನೆ ನೀಡಿದ್ದೇನೆ. ನೈರ್ಮಲ್ಯದ ಕಾರಣಗಳಿಗಾಗಿ ಆಹಾರವನ್ನು ಸರಿಯಾಗಿ ಮುಚ್ಚಿಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಅವುಗಳನ್ನು ಮುಖ್ಯ ರಸ್ತೆಗಳಿಂದ ತೆಗೆದುಹಾಕಬೇಕು. ಏಕೆಂದರೆ ಈ ಮಳಿಗೆಗಳು ಸಂಚಾರ ದಟ್ಟಣೆಯನ್ನು ಉಂಟುಮಾಡಬಹುದು” ಎಂದು ತಿಳಿಸಿದ್ದಾರೆ.
“ಇದು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ್ದು, ಮಾಂಸಾಹಾರವು ಪ್ರದರ್ಶನವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಮಾಂಸಾಹಾರವನ್ನು ತೆರೆದಿಟ್ಟು ಮಾರಾಟ ಮಾಡುವುದು ವರ್ಷಗಳಿಂದ ಅಭ್ಯಾಸವಾಗಿದೆ. ಆದರೆ ಅದನ್ನು ಸರಿಪಡಿಸುವ ಸಮಯ ಬಂದಿದೆ” ಎಂದು ಹಿತೇಂದ್ರ ಹೇಳಿದ್ದಾರೆ.
ಇದನ್ನೂ ಓದಿರಿ: ಯುಪಿ ವಿಧಾನಸಭೆ ಚುನಾವಣೆ ಗೆಲುವು 2024ರ ಲೋಕಸಭೆಗೆ ದಾರಿ: ಅಮಿತ್ ಶಾ


