ಹಿಂದೆಂದೂ ಕೇಳದ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ರೈತ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸಿ ಮೂದಲಿಸುವ ಸಂಪ್ರದಾಯ ನಾವು ಕಾಣುತ್ತಿದ್ದೇವೆ. ಇವರು ಹೊಲಕ್ಕೆ ಬೆಂಕಿಹಚ್ಚಿ ನಮ್ಮ ನಗರಗಳನ್ನು ಮಾಲಿನ್ಯಗೊಳಿಸುವ ಅಪರಾಧಿಗಳು, ಬೇಡದ ಭತ್ತ, ಗೋಧಿ ಬೆಳೆದು ಮಣ್ಣಿನ ಫಲವತ್ತತೆ ಮತ್ತು ನೀರನ್ನು ಹಾಳುಗೆಡವುವವರು, ಸೋಮಾರಿ ಸಮುದಾಯದವರು, ಸ್ವಂತ ಬುದ್ಧಿ ಇಲ್ಲದೆ ಇತರರು ಹೇಳಿದ ಹಾಗೆ ನಡೆದುಕೊಳ್ಳುತ್ತಿರುವವರು, ಹೀಗೆಲ್ಲಾ ಕಳೆದ ಒಂದು ವರ್ಷದಿಂದ ನಾವು ಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ನೇರವಾಗಿ ನಿಂದಿಸುವವರನ್ನು ಗಮನಿಸುತ್ತಿದ್ದೇವೆ. ನೇರವಾಗಿ ಏಕೆಂದರೆ, ನಾಗರಿಕರೆನ್ನುವ ಪ್ರಜ್ಞಾವಂತರೆನ್ನುವ ಈ ಸಮುದಾಯಕ್ಕೆ ನೇಗಿಲಯೋಗಿಯ ಬಗ್ಗೆ ಕಿಂಚಿತ್ತಾದರೂ, ಒಳಗಿಂದೊಳಗಾದರೂ ಗೌರವ ಇರಲಿಲ್ಲವೇ ಎಂಬ ಪ್ರಶ್ನೆ ಇತ್ತೀಚೆಗೆ ಏಳುತ್ತಿದೆ. ಅಷ್ಟೇ ಏಕೆ? ಒಟ್ಟಾರೆ ದುಡಿಯುವ ವರ್ಗದ ಬಗ್ಗೆ ’ಅದು ಅವನ ಕರ್ಮ’ ಎಂದೇ ಪರಿಗಣಿಸುವಂತೆ ಈ ವರ್ಗ ಬೆಳೆದಿದೆ.
ಶ್ರೇಣೀಕೃತವರ್ಗದಲ್ಲಿ ಬೆವರಿನ ಹನಿ ಹೆಚ್ಚಾದಂತೆಲ್ಲಾ ಬೈಗುಳ ಮತ್ತು ನಿಂದನೆಗೆ ಒಳಪಟ್ಟಿರುವುದನ್ನು ಗಮನಿಸಬಹುದು. ಇದನ್ನು `ascendancy of respect and descendancy of disrespect in the ladder’ ಎಂದು ಅಂಬೇಡ್ಕರ್ ಗಮನಿಸಿದ್ದರು. ಮಹಾತ್ಮ ಗಾಂಧಿ ರೈತನನ್ನು ಒಬ್ಬ ಖಗೋಳಶಾಸ್ತ್ರಜ್ಞ, ಜೀವಶಾಸ್ತ್ರಜ್ಞ, ಹವಾಮಾನತಜ್ಞ, ಆಹಾರತಜ್ಞ, ಪರಿಸರತಜ್ಞ, ಭೂವಿಜ್ಞಾನಿ ಎಂದೆಲ್ಲಾ ಬಣ್ಣಿಸಿದ್ದರು. ಡಾ.ರಿಚಾರಿಯಾ ಹೇಳುವಂತೆ ನಮ್ಮೊಳಗಿನ ಅತ್ಯಂತ ಪ್ರಜ್ಞಾವಂತ ತಳಿವಿಜ್ಞಾನದ ತಜ್ಞ ಎಂದರೆ ರೈತ ಎಂಬ ಮಾತು ಗಮನಾರ್ಹವಾದದ್ದು. ಆಯುರ್ವೇದ ವೈದ್ಯ ಹಾಗೂ ಗ್ರಂಥಕರ್ತ ಚರಕ ತನ್ನ ’ಚರಕ ಸಂಹಿತ’ದಲ್ಲಿ ಕೆಲವು ಔಷಧೀಯ ಸಸ್ಯಗಳ ಬಗ್ಗೆ ವಿವರಿಸತ್ತಾ, “ಇನ್ನೂ ಹೆಚ್ಚು ತಿಳಿಯಬೇಕಿದ್ದರೆ ಕುರಿ ಮೇಯಿಸುವವರನ್ನು ಕೇಳಿ” ಎನ್ನುತ್ತಾನೆ.
ಸಾಮಾನ್ಯವಾಗಿ ಗ್ರಾಮಾಂತರದ ಉತ್ಪಾದಕ ಮತ್ತು ನಗರದ ಗ್ರಾಹಕ ಎನ್ನುವುದಾಗಿ ಹೇಳುವುದುಂಟು. ಆದರೆ ನೀವು ನಿಜವಾಗಿಯೂ ಆರೋಗ್ಯವಂತರಾಗಿ ಬದುಕಬೇಕಿದ್ದರೆ ನಿಮಗೆ ಒಬ್ಬ ರೈತ ಸ್ನೇಹಿತನಾಗಿರಬೇಕು ಎಂದು ಪರಿಗಣಿಸುತ್ತಾರೆ. ಇದು ಕೇವಲ ಹೊಲ-ಗದ್ದೆಗಳ ನೈಜ ಪರಿಸ್ಥಿತಿಯ ಅರಿವಷ್ಟೇ ಅಲ್ಲ, ತನ್ನ ಅನ್ನದ ಹಿಂದಿನ ದುಡಿದ ಕೈಗಳ ಪರಿಚಯ ಮತ್ತು ಆತ್ಮೀಯತೆ, ನಮ್ಮನ್ನು ಭೌತಿಕವಾಗಿ ಸದೃಢಗೊಳಿಸುವುದಲ್ಲದೆ, ಮಾನಸಿಕವಾಗಿಯೂ ಮತ್ತು ಆಧ್ಯಾತ್ಮಿಕವಾಗಿಯೂ ಕೂಡಾ ಗಟ್ಟಿಗೊಳಿಸಬಲ್ಲುದು. ಬುದ್ಧನ ಕರುಣೆ ಮತ್ತು ಮೈತ್ರಿಗೆ ಈ ಪ್ರಕ್ರಿಯೆಯಿಂದ ಅವಕಾಶವುಂಟು. ಅಮೆರಿಕದಲ್ಲಿ ಇತ್ತೀಚೆಗೆ ಪ್ರತಿಯೊಂದು ನಗರಗಳಲ್ಲಿಯೂ ರೈತರ ಮಾರುಕಟ್ಟೆಗಳಿವೆ. ವಾಷಿಂಗ್ಟನ್ನಲ್ಲಿ ಹೌಸ್ ಆಫ್ ಕಾಂಗ್ರೆಸ್ ಮತ್ತು ವೈಟ್ ಹೌಸ್ ಅಕ್ಕಪಕ್ಕದಲ್ಲಿಯೇ ರೈತರ ಮಾರುಕಟ್ಟೆಗಳನ್ನು ಗಮನಿಸಬಹುದು. ಇಡೀ ದೇಶದಲ್ಲಿ ಬಂಡವಾಳಶಾಹಿ ವಾಲ್ಮಾರ್ಟ್ನಂತಹ ದೈತ್ಯ ಸಗಟು ವ್ಯಾಪಾರಿಗಳಿದ್ದರೂ ಸಮುದಾಯ ರೈತರನ್ನು ಬೆಂಬಲಿಸಿ ನೇರವಾಗಿ ರೈತರೊಂದಿಗೆ ಮಾತುಕತೆಯಾಡಿ ತಮಗೆ ಬೇಕಾದ ಹಣ್ಣುಹಂಪಲನ್ನು ಅವರಿಂದ ಕೊಂಡುಕೊಳ್ಳುವುದನ್ನು ಗಮನಿಸಬೇಕಾಗಿರುವಂತದ್ದು. ನಮ್ಮಲ್ಲಿ ರೈತನಿಂದ ಅತ್ಯಂತ ಕಮ್ಮಿ ಬೆಲೆಯಲ್ಲಿ ಹೇಗಾದರೂ ಕೊಂಡು, ಹೆಚ್ಚು ಲಾಭಗಳಿಸುವ ಆಹಾರ ಉದ್ಯಮಗಳೇ ಹೆಚ್ಚು. ಕಡಿಮೆ ಬೆಲೆಯಲ್ಲಿ ಕೊಳ್ಳುವುದೇ ಲಾಭಕ್ಕೆ ಮೂಲ ಆಧಾರ. ಇದೇ ಹೊಸ ಕಾನೂನುಗಳನ್ನು ಸೃಷ್ಟಿಸಿರುವುದಕ್ಕೆ ಇರುವ ಮೂಲ ಉದ್ದೇಶ. ಇದನ್ನು ಇನ್ನೊಂದು ರೀತಿಯಲ್ಲಿ produce heap, sell cheap ಎನ್ನಲಾಗಿದೆ.
ಬ್ರಾಂಡೆಡ್ ಆಹಾರ ಜಗತ್ತಿನಲ್ಲಿ ಬ್ರಾಂಡ್ ವಾಷಿಂಗ್ ಮುಖ್ಯವಾಗುತ್ತದೆ ಹೊರತು, ಜನರ ಸಾಮಾನ್ಯ ಒಳಿತಿನ ಹಿಂದೆ ಮುಂದೆ ಗಮನಿಸುವುದಿಲ್ಲ. ಒಂದು ತೆಂಗಿನ ಎಣ್ಣೆಯ ಬ್ರಾಂಡ್ನ ಮೌಲ್ಯ ಭಾರತದಲ್ಲಿ ಇಡೀ ತೆಂಗಿನ ಉದ್ಯಮಕ್ಕಿಂತ ಹೆಚ್ಚಾಗಿರುವುದನ್ನು ಗಮನಿಸಿದರೆ ಇದರ ಅರಿವು ಉಂಟಾಗಬಹುದು. ಅಥವಾ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮೌಲ್ಯಭರಿತ ಬ್ರಾಂಡ್ ಆರೋಗ್ಯಕ್ಕೆ ಮಾರಕವಾದ ಒಂದು ಲಘುಪೇಯ ಎನ್ನುವುದು ನಮ್ಮಕಾಲದ ವಾಸ್ತವ. ಅದಕ್ಕೆ ಬರುವ ಸಕ್ಕರೆ ರೈತನ ಕಬ್ಬಿನದಲ್ಲ, ಅದು ಮೆಕ್ಕೆ ಜೋಳ ಹಾಗೂ ಕೃತಕವಾಗಿ ರಾಸಾಯನಿಕಗಳ ಬಳಕೆಯಿಂದ ತಯಾರಾದ ಸಕ್ಕರೆ.
ನಾವು ಬಳಸುವ ಹಾಲು, ನಾವು ಬಳಸುವ ಬ್ರಾಂಡ್ ಮೂಲಕವೇ ತಿಳಿದಿರುತ್ತದೆಯೇ ಹೊರತು ಅದು ಯಾವ ಜಾತಿಯ ಹಸುವಿನಿಂದ ಬಂತು, ಎಮ್ಮೆಯದೋ ಹಸುವಿನದೋ, ವಿದೇಶೀ ತಳಿಯೋ ಅಥವಾ ಸ್ಥಳೀಯ ತಳಿಯೋ, ಒಂದೂ ತಿಳಿಯದು. ನಮ್ಮದೇ ತಳಿಗಳಾದ ಮಲೆನಾಡು ಗಿಡ್ಡ, ಹಳಿಕರ್, ಅಮೃತ್ ಮಹಲ್ ಹೆಸರನ್ನು ನಾವು ಎಲ್ಲಿಯೂ ಗಮನಿಸುವುದಿಲ್ಲ. ಹಾಗಾಗಿ ಗುಣಕ್ಕಿಂತ ಗಾತ್ರವೇ ಹೆಚ್ಚು ಮುಖ್ಯವಾಗಿದೆ. ರೈತ ಸಮುದಾಯಕ್ಕಿಂತ ಬ್ರಾಂಡ್ ಮುಖ್ಯವಾಗಿವೆ. ಅದಕ್ಕಾಗಿಯೇ ಕೆಲವರು ಹೇಳುವುದು ‘we are going from self-reliance to total Reliance.’
ಈ ಹಿನ್ನೆಲೆಯಲ್ಲಿ ರೈತ ಹೋರಾಟ ಮತ್ತು ಈಗ ಜಾರಿಯಾಗಿರುವ ಕರಾಳ ಕೃಷಿ ಕಾಯ್ದೆಗಳು ವಜಾ ಆಗಬೇಕಿರುವ ಪ್ರಾಮುಖ್ಯತೆಯನ್ನು ನಾವು ಅರಿಯಬಹುದಾಗಿದೆ. ಮುಂದಿನ ದಿನಗಳಲ್ಲಿ ಬಳಕೆದಾರ ರೈತನ ಜೊತೆಗೆ ನೇರ ಸಂಬಂಧ ಹೊಂದಿ ಎಲ್ಲರ ಸಾಮಾನ್ಯ ಒಳಿತಿನ ಕಡೆಗೆ ಹೆಜ್ಜೆ ಹಾಕುವುದಕ್ಕೆ ಸಾಧ್ಯವಿದೆ.

ಕೆ. ಸಿ. ರಘು
ಆಹಾರ ತಜ್ಞರು
ಇದನ್ನೂ ಓದಿ: ಮೊದಲು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ, ಕುಸ್ತಿಗೆ ಬರುತ್ತಾರೆ, ನೀನು ಗೆಲ್ಲುತ್ತೀಯ: ರೈತ ಹೋರಾಟದ ಪಾಠ


