ಕಳೆದ ವರ್ಷ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರುದ್ಧ ಪೋಸ್ಟರ್ಗಳನ್ನು ಹಾಕಿದ್ದಕ್ಕಾಗಿ ಪ್ರಕರಣ ದಾಖಲಿಸಲು ಉತ್ತರ ಪ್ರದೇಶ ಸರಕಾರವು ಪೊಲೀಸರಿಗೆ ಅನುಮತಿ ನೀಡಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ನಾಲ್ವರಿಗೂ ಜಾಮೀನು ದೊರೆತಿದೆ.
ಪೊಲೀಸರು ಆರೋಪಿಗಳ ವಿರುದ್ಧ ಸೆಕ್ಷನ್ 153-ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು), 505(2) (ವರ್ಗಗಳ ನಡುವೆ ದ್ವೇಷ ಸೃಷ್ಟಿಸುವುದು) ಅಡಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ಈ ಪ್ರಕರಣವು ಜನವರಿ 26, 2020ರ ಹಿಂದಿನದು. ಸಿಎಎ ಮತ್ತು ಎನ್ಆರ್ಸಿ ಹೋರಾಟದಲ್ಲಿ ಆಕ್ಷೇಪಾರ್ಹ ಪೋಸ್ಟರ್ಗಳನ್ನು ಅಂಟಿಸಲಾಗಿದೆ ಎಂದು ಆರೋಪಿಸಲಾಯಿತು. ಪೊಲೀಸರು ಮರುದಿನ ಮೀರತ್ನ ಓಂ ವೀರ್ (35), ಕಾನ್ಪುರ ನಗರದ ಓಂ ಕರ್ ನಾಥ್ ಕುಶ್ವಾಹ (57), ಇಟಾವಾಹ್ನ ರಾಹುಲ್ (21) ಮತ್ತು ಜಗ್ಸೀರ್ (21) ವಿರುದ್ಧ ಎಫ್ಐಆರ್ ದಾಖಲಿಸಿದರು. ಪೋಸ್ಟರ್ಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳಿವೆ ಎಂದು ಪೊಲೀಸರು ಆರೋಪಿಸಿದ್ದಾರೆ.
2019ರಿಂದಲೂ ಉತ್ತರ ಪ್ರದೇಶ ಸರ್ಕಾರ ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸುತ್ತಿರುವುದು ನಡೆಯುತ್ತಿದೆ. ಈ ವರ್ಷದ ಮಾರ್ಚ್ನಲ್ಲಿ, ಉತ್ತರ ಪ್ರದೇಶ ವಿಧಾನಸಭೆಯು ಎರಡು ಮಸೂದೆಗಳನ್ನು ಅಂಗೀಕರಿಸಿತು. ಪ್ರತಿಭಟನಾಕಾರರಿಂದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯನ್ನು ವಸೂಲಿ ಮಾಡುವ ಮಸೂದೆಯೂ ಇತ್ತು. ಇದನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು.
ಸಿಎಎ ವಿರುದ್ಧ ಪ್ರತಿಭಟಿಸುವವರ ಮೇಲೆ, ವಿಶೇಷವಾಗಿ ಮುಸ್ಲಿಮರ ಮೇಲೆ ಪೊಲೀಸರು ಅತಿಯಾದ ಕ್ರಮ ಜರುಗಿಸಿದ್ದಾರೆ ಎಂದು ದಿ ವೈರ್ ಜಾಲತಾಣ ಹೇಳಿದೆ. ಪ್ರತಿಭಟನೆ ವೇಳೆ 22 ಮಂದಿ ಸಾವನ್ನಪ್ಪಿದ್ದರು. ಅದರಲ್ಲಿ ಬಹುತೇಕರು ಗೋಲಿಬಾರ್ ನಲ್ಲಿ ಸಾವಿಗೀಡಾಗಿದ್ದಾರೆ ಎಂದು ವರದಿಗಳಿವೆ.
ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ದೈಹಿಕ ಹಿಂಸೆ, ನಿದ್ರೆಗೆ ಅವಕಾಶ ನೀಡದಿರುವುದು ಸೇರಿದಂತೆ ಉತ್ತರ ಪ್ರದೇಶದ ಪೊಲೀಸರು ‘ತೀವ್ರ ಚಿತ್ರಹಿಂಸೆ’ ನೀಡಿದ್ದಾರೆ ಎಂದು ಸತ್ಯಶೋಧನೆಯ ವರದಿಯು ತಿಳಿಸಿದೆ. ಬಿಜ್ನೋರ್, ಮುಜಾಫರ್ನಗರ ಮತ್ತು ಫಿರೋಜಾಬಾದ್ನಲ್ಲಿ ಅಪ್ರಾಪ್ತರನ್ನು ಬಂಧಿಸಿ ಅವರಿಗೆ ಚಿತ್ರಹಿಂಸೆ ನೀಡಿದ ಆರೋಪವೂ ಇದೆ.