22 ವರ್ಷದ ಯುವಕರೊಬ್ಬನನ್ನು ಬಂಧನದಲ್ಲಿಟ್ಟು ಸತತ ಚಿತ್ರಹಿಂಸೆ ನೀಡಿ ಆತ ತನ್ನ ಬಲಗೈ ಕಳೆದುಕೊಳ್ಳುವಂತೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅಮಾನತುಗೊಳಿಸಿದ್ದಾರೆ.
ಕಾರಿನ ಬ್ಯಾಟರಿ ಕಳ್ಳತನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೋಳಿ ಅಂಗಡಿ ನಡೆಸುತ್ತಿದ್ದ ಸಲ್ಮಾನ್ ಖಾನ್ ಎಂಬ ಯುವಕನನ್ನು ವರ್ತೂರು ಪೊಲೀಸರು ಅಕ್ಟೋಬರ್ 27ರಂದು ಬಂಧಿಸಿದ್ದರು. ಮೂರು ದಿನಗಳವರೆಗೆ ಆತನಿಗೆ ಠಾಣೆಯಲ್ಲಿ ಚಿತ್ರಹಿಂಸೆ ನೀಡಲಾಗಿದೆ. ಇದರಿಂದ ಆತ ತನ್ನ ಬಲಗೈ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಘಟನೆ ಬಗ್ಗೆ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಸಲ್ಮಾನ್ ಮೇಲೆ ಹಲ್ಲೆ ನಡೆಸಿರುವುದು ಹಿರಿಯ ಅಧಿಕಾರಿಯ ವಿಚಾರಣೆಯ ನಂತರ ಬೆಳಕಿಗೆ ಬಂದಿದ್ದು, ಹೆಡ್ ಕಾನ್ಸ್ಟೆಬಲ್ಗಳಾದ ನಾಗಭೂಷಣ ಗೌಡ, ನಾಗರಾಜ್ ಬಿ.ಎನ್ ಮತ್ತು ಶಿವಕುಮಾರ್ ಹೆಚ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ಕನಸಿನ ಭಾರತಕ್ಕೆ ಸಂವಿಧಾನವೇ ರೋಡ್ ಮ್ಯಾಪ್: ಗಾಯಕಿ ಎಂ.ಡಿ.ಪಲ್ಲವಿ
ಘಟನೆ ಹಿನ್ನೆಲೆ:
ಕಳ್ಳತನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೋಳಿ ಅಂಗಡಿ ನಡೆಸುತ್ತಿದ್ದ ಸಲ್ಮಾನ್ ಖಾನ್ ಎಂಬ ಯುವಕನನ್ನು ವರ್ತೂರು ಪೊಲೀಸರು ಅಕ್ಟೋಬರ್ 27ರಂದು ಬಂಧಿಸಿದ್ದರು. ಆತನ ಬಗ್ಗೆ ಯಾವುದೇ ಸುಳಿವು ಸಿಗದೇ ಇದ್ದಾಗ ಮನೆಮಂದಿ ನಾಪತ್ತೆ ದೂರು ದಾಖಲಿಸಲು ನಿರಂತರ ಮೂರು ದಿನಗಳ ವರೆಗೆ ಪೊಲೀಸ್ ಠಾಣೆಗೆ ಅಲೆದಾಡಿದ್ದರು. ತಮಗೆ ಆತನ ಬಗ್ಗೆ ಮಾಹಿತಿ ಇಲ್ಲ ಎಂದಿದ್ದ ಪೊಲೀಸರು ದೂರು ದಾಖಲಿಸಿಕೊಳ್ಳಲೂ ನಿರಾಕರಿಸಿದ್ದರು. ನಾಲ್ಕನೇ ದಿನ ತಾಯಿ ಠಾಣೆಗೆ ತೆರಳಿದ್ದ ಸಂದರ್ಭದಲ್ಲಿ ಸಲ್ಮಾನ್ ನನ್ನು ಠಾಣೆಯಲ್ಲಿ ಕೂಡಿ ಹಾಕಿರುವ ವಿಚಾರ ಆಕೆಯ ಗಮನಕ್ಕೆ ಬಂದಿದೆ. ಆ ವೇಳೆ ಆತನನ್ನು ಬಿಡುಗಡೆ ಮಾಡಬೇಕಾದರೆ 50,000 ರೂಪಾಯಿ ನೀಡಬೇಕೆಂದು ಪೊಲೀಸರು ಒತ್ತಡ ಹೇರಿದ್ದರೆಂದು ಸ್ವತಃ ಕುಟುಂಬಸ್ಥರು ಹೇಳಿದ್ದಾರೆ. ಎರಡು-ಮೂರು ದಿನಗಳ ಬಳಿಕ ತಾಯಿ 10,000 ರೂಪಾಯಿ ಹೊಂದಿಸಿ ಆತನನ್ನು ಬಿಡಿಸಿಕೊಂಡು ಬಂದಿದ್ದರು. ಮನೆಗೆ ಬಂದ ಬಳಿಕ, ಪೊಲೀಸರು ಠಾಣೆಯಲ್ಲಿ ಅಮಾನವೀಯವಾಗಿ ಚಿತ್ರಹಿಂಸೆ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಆಸ್ಪತ್ರೆಗೆ ದಾಖಲಿಸಿದಾಗ ಪೊಲೀಸರ ಗಂಭೀರ ಹೊಡೆತದ ಪರಿಣಾಮ ಆತನ ಕೈಯಲ್ಲಿ ಸಂಪೂರ್ಣವಾಗಿ ಕೀವು ತುಂಬಿದ್ದು, ಕೂಡಲೇ ಕೈ ಕತ್ತರಿಸಬೇಕೆಂದು ವೈದ್ಯರು ಸೂಚಿಸಿದ್ದಾರೆ. ನವೆಂಬರ್ 8 ರಂದು ಯುವಕನ ಬಲಗೈ ಕತ್ತರಿಸಲಾಗಿದೆ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆಗೆ ಮಾತನಾಡಿರುವ ಸಂತ್ರಸ್ತ ಸಲ್ಮಾನ್ ಕೇರಳ ನೋಂದಣಿ ಸಂಖ್ಯೆಯ ಖಾಸಗಿ ವಾಹನದಲ್ಲಿ ಪೊಲೀಸರು ಆಗಮಿಸಿದ್ದರು ಎಂದಿದ್ದಾರೆ. “ನನ್ನನ್ನು ವರ್ತೂರು ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ಮೂವರು ಪೊಲೀಸರು ನನ್ನ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿದರು. ನಾನು ಮೂರು ಕಾರ್ ಬ್ಯಾಟರಿಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡೆ. ನಾನು ಬ್ಯಾಟರಿಗಳನ್ನು ಮಾರಾಟ ಮಾಡಿದ ಜನರ ಬಳಿಗೆ ಅವರು ನನ್ನನ್ನು ಕರೆದೊಯ್ದರು. ನನ್ನನ್ನು ಮತ್ತೆ ಪೊಲೀಸ್ ಠಾಣೆಗೆ ಕರೆತಂದು, ನಾನು ಮಾಡದ ಇತರ ಕಳ್ಳತನಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಅವುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದಾಗ ಪೊಲೀಸರು ಚಿತ್ರಹಿಂಸೆಯನ್ನು ತೀವ್ರಗೊಳಿಸಿದರು” ಎಂದು ಆರೋಪಿಸಿದ್ದಾರೆ.
“ನನ್ನನ್ನು ತಲೆಕೆಳಗಾಗಿ ಕಟ್ಟಿ ಥಳಿಸಲಾಗಿದೆ. ಮೂರು ದಿನಗಳ ಕಾಲ ಮೂವರು ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ನನ್ನ ಬಲಗೈ ಗುರಿಯಾಗಿಸಿಕೊಂಡು ತೀವ್ರವಾಗಿ ಹೊಡೆದರು. ಅಕ್ಟೋಬರ್ 31 ರಂದು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಲಾಯಿತು.” ಎಂದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಸಲ್ಮಾನ್ ತಿಳಿಸಿದ್ದಾರೆ.
ಘಟನೆಯನ್ನು ಶಾಸಕ ರಿಜ್ವಾನ್ ಅರ್ಷದ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಹಲವರು ಖಂಡಿಸಿದ್ದರು.
———————