Homeಮುಖಪುಟಪೊಲೀಸರು ಎಂಜಲು ಕಾಸು ತಿನ್ನುತ್ತಾರೆ ಹೇಳಿಕೆ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು

ಪೊಲೀಸರು ಎಂಜಲು ಕಾಸು ತಿನ್ನುತ್ತಾರೆ ಹೇಳಿಕೆ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು

"ಪೊಲೀಸರಿಂದಲೂ ಎಂಜಲು ಪಡೆಯುವ ಮಂತ್ರಿಗಳ ಬಗ್ಗೆಯೂ ಗೃಹ ಸಚಿವರು ಮಾತನಾಡಲಿ" ಎಂದು ಬಿಜೆಪಿ ಮುಖಂಡ ಗಿರೀಶ್ ಮಟ್ಟೆಣ್ಣನವರ್ ಪ್ರತಿಕ್ರಿಯಿಸಿದ್ದಾರೆ.

- Advertisement -
- Advertisement -

ಪೊಲೀಸರು ಎಂಜಲು ಕಾಸು ತಿನ್ನುತ್ತಾರೆ ಎಂಬ ಅವಹೇಳನಕಾರಿ ಹೇಳಿಕೆ ನೀಡಿದ್ದ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಡೆಕ್ಕಾನ್ ಹೆರಾಲ್ಡ್ ವರದಿ ಮಾಡಿದೆ.

ಪೊಲೀಸರು ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅವರು ಕೆಟ್ಟು ಹೋಗಿದ್ದಾರೆ. ಲಂಚ ಪಡೆದು ನಾಯಿಯ ಹಾಗೆ ಬಿದ್ದಿರುತ್ತಾರೆ ಎಂದು ಪಕ್ಷದ ಕಾರ್ಯಕರ್ತರ ಎದುರು ಪೋನ್‌ನಲ್ಲಿ ಮಾತನಾಡುತ್ತ ಗೃಹ ಸಚಿವರು ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದೂರು ದಾಖಲಿಸಿದೆ. ಇದು ಪೊಲೀಸರ ಮೇಲಿನ ಸಾರ್ವಜನಿಕ ಗೌರವವನ್ನು ಕಡಿಮೆ ಮಾಡುತ್ತದೆ ಮತ್ತು ಪೊಲೀಸರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸುತ್ತದೆ. ಹಾಗಾಗಿ ಗೃಹ ಸಚಿವರ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಇನ್ನೊಂದೆಡೆ ಸಾಮಾಜಿಕ ಕಾರ್ಯಕರ್ತ ಎಲ್.ಹನುಮೇಗೌಡ ಎಂಬುವವರು ಗೃಹ ಸಚಿವರ ವಿರುದ್ಧ ರಾಜ್ಯಪಾಲರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಪೊಲೀಸರು ಹಗಲು ರಾತ್ರಿ ದುಡಿಯುತ್ತಿದ್ದರೂ ಅವರ ವಿರುದ್ದ ಗೌರವಕ್ಕೆ ಚ್ಯುತಿ ತರುವ ರೀತಿ ಹೇಳಿಕೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಸುಗಳ ಕಳ್ಳ ಸಾಗಣಿಕೆಯ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಗೃಹ ಸಚಿವರು ಕೆಂಡಮಂಡಲವಾಗಿದ್ದರು. “ಇಡಿ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ಕೆಟ್ಟು ಹೋಗಿದ್ದಾರೆ. ನಾವು ಕೈತುಂಬಾ ಸಂಬಳ ನೀಡುತ್ತೇವೆ. ಅದರಲ್ಲಿ ಬದುಕಲಾಗದೆ ಎಂಜಲು ಕಾಸು ತಿನ್ನುತ್ತಿದ್ದಾರೆ. ಯೋಗ್ಯತೆಯಿಲ್ಲದಿದ್ದರೆ ಯೂನಿಫಾರ್ಮ್ ಬಿಚ್ಚಿಟ್ಟು ಹೋಗಿ ಸಾಯ್ರಿ. ಗೋಸಾಗಣಿಕೆದಾರರಿಂದ ಲಂಚ ಪಡೆದು ನಾಯಿಗಳ ಥರ ನಿದ್ರಿಸುತ್ತೀರಿ. ಅವರು ಯಾವುದೇ ಭಯವಿಲ್ಲದೆ ದಂಧೆಯಲ್ಲಿ ತೊಡಗಿದ್ದಾರೆ” ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದರು.

ಇದಕ್ಕೆ ಪ್ರತಿಯಾಗಿ ಮಾಜಿ ಪೊಲೀಸ್ ಅಧಿಕಾರಿ, ಬಿಜೆಪಿ ಮುಖಂಡ ಗಿರೀಶ್ ಮಟ್ಟೆಣ್ಣನವರ್ ಸಹ “ಹಣ ಪಡೆಯದೆ ಯಾವ ಗೃಹ ಸಚಿವರು ವರ್ಗಾವಣೆ ಮಾಡಿದ್ದಾರೆ. ಪೊಲೀಸರಿಂದಲೂ ಎಂಜಲು ಪಡೆಯುವ ಮಂತ್ರಿಗಳ ಬಗ್ಗೆಯೂ ಗೃಹ ಸಚಿವರು ಮಾತನಾಡಲಿ” ಎಂದು ತಿರುಗೇಟು ನೀಡಿದ್ದರು.

ಉಪ್ಪಾರಪೇಟೆ, ಕಬ್ಬನ್ ಪಾರ್ಕ್, ಚಿಕ್ಕಪೇಟೆ, ದೇವನಹಳ್ಳಿ, ವೈಟ್‌ಫೀಲ್ಡ್, ವರ್ತೂರು ಠಾಣೆಗೆ ವರ್ಗವಾಗಲು 50 ಲಕ್ಷ ರೂ ಕೊಡಬೇಕು. ಕೆಲವು ಜಾಗಗಳನ್ನು ಹೊರತುಪಡಿಸಿ ಉಳಿದ ಠಾಣೆಗಳಿಗೆ ವರ್ಗವಾಗಲು 25 ಲಕ್ಷ ರೂ ಎಂಜಲು ಕೊಡಬೇಕು. ವರ್ಗಾವಣೆಯ ಪ್ರತಿ ಹಂತದಲ್ಲಿಯೂ ಲಂಚ ಕೊಡುವುದು ಸಾಮಾನ್ಯವಾಗಿದೆ. ಇದು ಗೃಹ ಸಚಿವರಿಗೆ ತಿಳಿದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಶಾಸಕರು, ಇಲ್ಲದಿದ್ದರೆ ಸಚಿವರು ಇಲ್ಲದಿದ್ದರೆ ಕೇಂದ್ರ ಕಚೇರಿಗೆ ಲಂಚ ಕೊಡಬೇಕು. ಹಣವಿಲ್ಲದ ವರ್ಗಾವಣೆ ಎಂದರೆ ಅದು ಶಿಕ್ಷೆಯಾಗಿರುತ್ತದೆ. ಈ ಬಗ್ಗೆ ಗೃಹ ಸಚಿವರು ಮಾತನಾಡಲಿ ಎಂದು ಸವಾಲು ಹಾಕಿದ್ದರು.

ತನ್ನ ಹೇಳಿಕೆ ವಿವಾದಾತ್ಮಕ ರೂಪ ಪಡೆದುಕೊಳ್ಳುತ್ತಲೇ ಗೃಹ ಸಚಿವ ಆರಗ ಜ್ಞಾನೇಂದ್ರರವರು ಸ್ಪಷ್ಟನೆ ನೀಡಿದ್ದಾರೆ. “ನಮ್ಮ ಜಿಲ್ಲೆಯಲ್ಲಿ ಇಬ್ಬರು ಗೋ ರಕ್ಷಕ ಬಜರಂಗದಳ ಕಾರ್ಯಕರ್ತರು ಅಕ್ರಮ ಗೋ ಸಾಗಾಣಿಕೆದಾರರನ್ನು ಹಿಂಬಾಲಿಸುವಾಗ ಹಲ್ಲೆಗೊಳಗಾಗಿದ್ದಾರೆ. ಟ್ರಕ್ ಡ್ರೈವರ್ ಅವರ ಮೇಲೆ ವಾಹನ ಹರಿಸಿ ಕೊಲ್ಲಲು ಯತ್ನಿಸಿದ್ದಾನೆ, ಅವರ ಪರಿಸ್ಥಿತಿ ಗಂಭೀರವಾಗಿದೆ. ಹಾಗಾಗಿ ಹೇಳಿಕೆ ನೀಡಿದೆ” ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: ನಾಗಾಲ್ಯಾಂಡ್ ಹತ್ಯಾಕಾಂಡ: ಈಶಾನ್ಯ ಭಾರತದಲ್ಲಿ AFSPA ರದ್ದತಿ ಹೋರಾಟಕ್ಕೆ ಮತ್ತಷ್ಟು ಧ್ವನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಿಮ್ಮಂಥಹ ರಾಜಕಾರಿಣಿಗಳು ಮೊದಲು‌ ಅಧಿಕಾರಿಗಳಿಂದ ಎಂಜಲು‌ ಕಾಸು ತಿಂದು‌ ಹಂದಿ ತರಹ ಮಲಗೋದನ್ನ ಬಿಡಿ….ಪ್ರತಿಯೊಂದು ಕೆಲಸಕ್ಕೂ ರಾಜಕಾರಿಣಿಗಳು ರೊಕ್ಕಾ ಕೇಳ್ತೊಇರಲ್ಲಾ. ನಾಚಿಕ್ವ್ಯಾಗಬೇಕು.

LEAVE A REPLY

Please enter your comment!
Please enter your name here

- Advertisment -

Must Read