ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಅಲಿಯಾಸ್ ಮೋನು ಸೇರಿದಂತೆ 14 ಜನರ ವಿರುದ್ಧ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸ್ ವಿಶೇಷ ತನಿಖಾ ತಂಡ (ಎಸ್ಐಟಿ) ಸೋಮವಾರ 5,000 ಪುಟಗಳ ಮೊದಲ ಚಾರ್ಜ್ಶೀಟ್ ಅನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಅಕ್ಟೋಬರ್ 3ರಂದು ಲಖಿಂಪುರ್ ಖೇರಿಯ ಟಿಕೋನಿಯಾ ಪ್ರದೇಶದಲ್ಲಿ ಬೆಂಗಾವಲು ವಾಹನಗಳನ್ನು ರೈತರ ಮೇಲೆ ಹರಿಸಲಾಗಿತ್ತು. ನಾಲ್ವರು ಪ್ರತಿಭಟನಾನಿರತ ರೈತರು ಮತ್ತು ಓರ್ವ ಪತ್ರಕರ್ತ ಸಾವಿಗೀಡಾಗಿದ್ದರು. ಭುಗಿಲೆದ್ದ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಇನ್ನೂ ಮೂರು ಜನರು ಸಾವನ್ನಪ್ಪಿದರು.
“ನಾಲ್ವರು ರೈತರು ಮತ್ತು ಪತ್ರಕರ್ತನ ಸಾವಿನ ಬಗ್ಗೆ 14 ಜನರ ವಿರುದ್ಧ ಸುಮಾರು 5,000 ಪುಟಗಳ ಚಾರ್ಜ್ಶೀಟ್ ಅನ್ನು ಲಖೀಂಪುರದ ಸ್ಥಳೀಯ ನ್ಯಾಯಾಲಯಕ್ಕೆ ಎಸ್ಐಟಿ ಸಲ್ಲಿಸಿದೆ. ಕೊಲೆ ಮತ್ತು ಕೊಲೆ ಯತ್ನ ಸೇರಿದಂತೆ ವಿವಿಧ ಆರೋಪಗಳ ಮೇಲೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ” ಎಂದು ಹಿರಿಯ ಪ್ರಾಸಿಕ್ಯೂಟಿಂಗ್ ಅಧಿಕಾರಿ ಎಸ್ಪಿ ಯಾದವ್ ಹೇಳಿದ್ದಾರೆ.
ಆರೋಪಪಟ್ಟಿಯಲ್ಲಿರುವ ಆಶಿಶ್ ಮಿಶ್ರಾ ಸೇರಿದಂತೆ 13 ಮಂದಿಯೂ ಜೈಲಿನಲ್ಲಿದ್ದಾರೆ. ವೀರೇಂದ್ರ ಕುಮಾರ್ ಶುಕ್ಲಾ ಎಂಬ ವ್ಯಕ್ತಿಯ ವಿರುದ್ಧ ಸಾಕ್ಷ್ಯ ನಾಶದ ಆರೋಪವಿದೆ. ಅವರನ್ನು ಬಂಧಿಸಿಲ್ಲ. ಆದರೆ ಎಸ್ಐಟಿ ಅವರಿಗೆ ನೋಟಿಸ್ ನೀಡಿದೆ. ಶುಕ್ಲಾ ಅವರು ಅಜಯ್ ಮಿಶ್ರಾ ಅವರ ದೂರದ ಸಂಬಂಧಿ ಮತ್ತು ಬ್ಲಾಕ್ ಮುಖಂಡರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ರಾಜ್ಯಸಭಾ ಸದಸ್ಯ ಅಖಿಲೇಶ್ ದಾಸ್ ಅವರ ಸೋದರಳಿಯ ಲಕ್ನೋ ಮೂಲದ ಅಂಕಿತ್ ದಾಸ್ ಅವರನ್ನೂ ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಆರೋಪಿಗಳಾದ ಆಶಿಶ್ ಮಿಶ್ರಾ, ವೀರೇಂದ್ರ ಶುಕ್ಲಾ ಮತ್ತು ಅಂಕಿತ್ ದಾಸ್ ನಂದನ್ ದಾಸ್ ಭಿಸ್ಟ್, ಸತ್ಯಂ ತ್ರಿಪಾಠಿ ಅಲಿಯಾಸ್ ಸತ್ಯ ಪ್ರಕಾಶ್ ತ್ರಿಪಾಠಿ, ಲತೀಫ್ ಅಲಿಯಾಸ್ ಕಲ್ಲೆ, ಶೇಖರ್ ಭಾರತಿ, ಸುಮಿತ್ ಜೈಸ್ವಾಲ್, ಆಶಿಶ್ ಪಾಂಡೆ, ಲುವ್ಕುಶ್, ಶಿಶುಪಾಲ್, ಉಲ್ಲಾಸ್ ಕುಮಾರ್ ತ್ರಿವೇದಿ, ಉಲ್ಲಾಸ್ ಕುಮಾರ್ ತ್ರಿವೇದಿ, ರಿಂಕು ರಾಣಾ ಮತ್ತು ಧರ್ಮೇಂದ್ರ ಕುಮಾರ್ ಬಂಜಾರ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಯು ಹೈಕೋರ್ಟ್ನಲ್ಲಿ ಬಾಕಿ ಉಳಿದಿದ್ದು, ಇತರರ ಜಾಮೀನು ಅರ್ಜಿಯು ಲಖಿಂಪುರ ಖೇರಿ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಲಖಿಂಪುರ್ ಖೇರಿ ಘಟನೆಯನ್ನು “ಯೋಜಿತ ಪಿತೂರಿ” ಎಂದು ಇತ್ತೀಚೆಗೆ ಎಸ್ಐಟಿ ವರದಿ ಮಾಡಿತ್ತು. ಇಲ್ಲಿನ ಹತ್ಯೆಯು “ನಿರ್ಲಕ್ಷ್ಯ ಅಥವಾ ನಿಷ್ಠುರತೆಯಿಂದ ಸಂಭವಿಸಿಲ್ಲ. ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ” ಎಂದು ತಿಳಿಸಿತ್ತು.
ಆಶಿಶ್ ಮಿಶ್ರಾ ಸೇರಿದಂತೆ 13 ಜನರ ವಿರುದ್ಧ ಐಪಿಸಿ ಸೆಕ್ಷನ್ಗಳಾದ 147 (ಗಲಭೆ), 148 (ಗಲಭೆ, ಮಾರಣಾಂತಿಕ ಶಸ್ತ್ರಾಸ್ತ್ರ), 149 (ಕಾನೂನುಬಾಹಿರ ಸಭೆಯ ಪ್ರತಿಯೊಬ್ಬ ಸದಸ್ಯರು ಸಾಮಾನ್ಯ ವಸ್ತುವಿನ ವಿಚಾರಣೆಯಲ್ಲಿ ಮಾಡಿದ ಅಪರಾಧ), 302 (ಕೊಲೆ), 307 (ಕೊಲೆಯ ಯತ್ನ), 326 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಗಾಯಗೊಳಿಸುವುದು), 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು), 427 (ಐವತ್ತು ರೂಪಾಯಿಗಳ ಮೊತ್ತಕ್ಕೆ ಹಾನಿ ಉಂಟುಮಾಡುವ ಕಿಡಿಗೇಡಿತನ), 120-ಬಿ (ಕ್ರಿಮಿನಲ್ ಪಿತೂರಿ) ಮತ್ತು ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ವೀರೇಂದ್ರ ಕುಮಾರ್ ಶುಕ್ಲಾ ವಿರುದ್ಧ ಐಪಿಸಿ ಸೆಕ್ಷನ್ 201 (ಸಾಕ್ಷ್ಯಾನಾಶ) ಅಡಿಯಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಇದನ್ನೂ ಓದಿರಿ: Explained: ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಬೊಮ್ಮಾಯಿ ಮುಂದಾಗಿರುವುದೇಕೆ?