Homeಮುಖಪುಟಅಭಿವ್ಯಕ್ತಿ ಸ್ವಾತಂತ್ರ್ಯ: ಆತಂಕ ಹುಟ್ಟಿಸುವ ಶರಣಾಗತಿ ಪ್ರವೃತ್ತಿ- ಎ. ನಾರಾಯಣ

ಅಭಿವ್ಯಕ್ತಿ ಸ್ವಾತಂತ್ರ್ಯ: ಆತಂಕ ಹುಟ್ಟಿಸುವ ಶರಣಾಗತಿ ಪ್ರವೃತ್ತಿ- ಎ. ನಾರಾಯಣ

- Advertisement -
- Advertisement -

 

ಎ. ನಾರಾಯಣ

ಕನ್ನಡ ಪತ್ರಿಕೆಯ ಓದುಗರು ಬಹುವಾಗಿ ಮೆಚ್ಚಿಕೊಳ್ಳುತ್ತಿರುವ ಅಂಕಣಕಾರರಲ್ಲಿ ಒಬ್ಬರಾದ ಎ.ನಾರಾಯಣ ಅವರು ಕಾಸರಗೋಡಿನವರು. ಇಂಗ್ಲೆಂಡಿನ ಸಸೆಕ್ಸ್ ವಿವಿಯಲ್ಲಿ ಪಿಎಚ್‍ಡಿ ಮಾಡುವಮುನ್ನ ಡೆಕ್ಕನ್ ಹೆರಾಲ್ಡ್‍ನಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಪ್ರಸ್ತುತ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ ಮತ್ತು ಆಡಳಿತ ವಿಭಾಗದಲ್ಲಿ ಬೋಧಿಸುತ್ತಾರೆ. ಪ್ರಜಾವಾಣಿ ಪತ್ರಿಕೆಯ ಅಂಕಣಕಾರರಾಗಿ ರಾಜಕೀಯ, ಸಾಮಾಜಿಕ ವಿಷಯಗಳ ಕುರಿತಂತೆ ಭಿನ್ನ ರೀತಿಯ ಹರಿತ, ವಸ್ತುನಿಷ್ಠ ವಿಶ್ಲೇಷಣೆಗಳ ಬರಹಗಳನ್ನು ಬರೆಯುತ್ತಿದ್ದಾರೆ.

ಸಮಸ್ಯೆ ಇರುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎನ್ನುವುದರಿಂದ ಮಾತ್ರವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲಾ ಕಾಲದಲ್ಲೂ ಎಲ್ಲಾ ಆಳುವ ಸರಕಾರಗಳೂ ಹತ್ತಿಕ್ಕುವ ಕೆಲಸವನ್ನು ಮಾಡುತ್ತಲೇ ಬಂದಿವೆ. ಈಗ ಅದು ಇನ್ನೂ ಹೆಚ್ಚಾಗಿದೆ ಅಥವಾ ತೀರಾ ಹೆಚ್ಚಾಗಿದೆ ಅಂತ ಬೇಕಾದರೆ ಹೇಳಬಹುದು. ನಮ್ಮ ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಇನ್ನೂ ಮುಖ್ಯವಾದ ಆತಂಕ ಏನು ಎಂದರೆ ಈ ಸಂವಿಧಾನದತ್ತ ಹಕ್ಕನ್ನು ಬಳಸಿಕೊಳ್ಳುವಲ್ಲಿ ಇಡೀ ದೇಶವು ಒಂದು ರೀತಿಯ ಶಸ್ತ್ರಸನ್ಯಾಸವನ್ನು ಘೋಷಿಸಿಕೊಂಡಿದೆ ಎನ್ನುವುದು. ಯಾರ್ಯಾರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂರಕ್ಷಿಸುವಲ್ಲಿ ಮುಂಚೂಣಿಯಲ್ಲಿರಬೇಕಿತ್ತೋ ಅವರೆಲ್ಲರೂ ಸೇರಿ ಅದನ್ನು ಅಧಿಕಾರಸ್ಥರ ಕಾಲಬುಡದಲ್ಲಿ ಒತ್ತೆಯಿಟ್ಟು ಒಂದು ರೀತಿಯ ಬಹುಪರಾಕು ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ.

ಈಗ ನಡೆಯುತ್ತಿರುವ ಮಾಧ್ಯಮ ದಮನ, ತುರ್ತುಪರಿಸ್ಥಿತಿಯ ಕಾಲದಲ್ಲಿ ಏನೇನಾಯಿತೋ ಅದಕ್ಕಿಂತ ಭಿನ್ನವಾಗಿ ಏನೂ ಇಲ್ಲ ಎನ್ನುವ ಅಭಿಪ್ರಾಯವೊಂದಿದೆ. ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳಬಹುದು: ಮಾಧ್ಯಮಗಳು ತುರ್ತುಪರಿಸ್ಥಿತಿಯ ಕಾಲದಲ್ಲಿ ತಗ್ಗಿಬಗ್ಗಿ ನಡೆದದ್ದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಈಗ ದಾಸ್ಯವನ್ನು ಒಪ್ಪಿಕೊಂಡಿವೆ. ಅಂದಿನ ಮಾಧ್ಯಮ ರಂಗದ ಬಗ್ಗೆ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅದ್ವಾಣಿ ಅವರು ಹೇಳಿದ್ದಾರೆ ಎನ್ನಲಾದ ಒಂದು ಮಾತು ಬಹಳ ಚಿರಪರಿಚಿತ. “ಮಾಧ್ಯಮಗಳನ್ನು ಸರಕಾರ ಬಗ್ಗುವಂತೆ ಸೂಚಿಸಿತ್ತು. ಆದರೆ ಮಾಧ್ಯಮಗಳು ಅಕ್ಷರಶಃ ನೆಲಕ್ಕೆ ಒರಗಿ ತೆವಳಿದವು” ಅಂತ. ಈಗ ಅವರ ಮಾತು ಅವರೇ ಕಟ್ಟಿರುವ ಪಕ್ಷ ಅಧಿಕಾರದಲ್ಲಿರುವಾಗ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತಿದೆ ಎನ್ನುವುದು ಇತಿಹಾಸದ ಒಂದು ಕ್ರೂರ ವ್ಯಂಗ್ಯ.

ತೀರಾ ಇತ್ತೀಚೆಗಿನ ಉದಾಹರಣೆ ಕಾಶ್ಮೀರದ ವಿಚಾರದಲ್ಲಿ ಭಾರತೀಯ ಮಾಧ್ಯಮಗಳು ಅನುಸರಿಸುತ್ತಿರುವ ನೀತಿ. ಕೇಂದ್ರ ಸರಕಾರ ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೆಯ ವಿಧಿಯನ್ನು ಅಸಿಂಧುಗೊಳಿಸಿದ ಬಳಿಕ ಆ ರಾಜ್ಯದ ಜನಜೀವನದ ಮೇಲೆ ಹೇರಿರುವ ಭೀಕರ ನಿರ್ಬಂಧಗಳ ಕುರಿತು ಭಾರತೀಯ ಮಾಧ್ಯಮಗಳು ಸಂಪೂರ್ಣ ಕುರುಡಾಗಿ ವರ್ತಿಸುತ್ತಿವೆ. ಅಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ ಎಂದೂ, ನಿರ್ಬಂಧಗಳು ಅನಿವಾರ್ಯ ಎಂದೂ ಸರಕಾರ ಹೇಳುತ್ತಿರುವುದನ್ನು ಮುಖ್ಯವಾಹಿನಿ ಮಾಧ್ಯಮಗಳು ಏನೊಂದೂ ಚಿಕಿತ್ಸಕ ದೃಷ್ಟಿಯನ್ನು ಇಟ್ಟುಕೊಳ್ಳದೆ ಗಿಳಿಪಾಠ ಒಪ್ಪಿಸುತ್ತಿವೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಮಾತ್ರ ಮಾಧ್ಯಮಗಳಿಗೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ಮೀರಿ ಆ ರಾಜ್ಯದಲ್ಲಿ ಆಗುತ್ತಿರುವ ದೈನಂದಿನ ಅನಾಹುತಗಳನ್ನು ಜಗತ್ತಿನ ಮುಂದಿಡುತ್ತಿವೆ. ಭಾರತೀಯ ಮಾಧ್ಯಮಗಳು ಇದನ್ನು ಮಾಡುತ್ತಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಈ ವಿಚಾರದಲ್ಲಿ ಅವುಗಳು ಸರ್ಕಾರದ ಮುಖವಾಣಿಗಳಾಗಿ ಹೋಗಿರುವುದು ದುರಂತದ ಸಂಗತಿ. ಆಳುವ ಪಕ್ಷಗಳ ಅಥವಾ ಅಧಿಕಾರಸ್ಥ ರಾಜಕಾರಣಿಗಳ ಸ್ವಂತ ಬಂಡವಾಳದಲ್ಲಿ ನಡೆಯುವ ಅಥವಾ ಅವರನ್ನು ಓಲೈಸಲೆಂದೇ ಹುಟ್ಟಿಕೊಂಡಿರುವ ಮಾಧ್ಯಮಗಳು ಮಾತ್ರವೇ ಹೀಗೆ ನಡೆದುಕೊಳ್ಳುತ್ತವೆ ಎಂದಾಗಿದ್ದರೆ ಅದರಲ್ಲಿ ವಿಶೇಷವೇನಿರಲಿಲ್ಲ. ಆದರೆ ಇಂದು ಈ ಪ್ರವೃತ್ತಿ ಇಂತಹ ಮಾಧ್ಯಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಇಡೀ ಮುಖ್ಯವಾಹಿನಿ ಮಾಧ್ಯಮ ರಂಗವನ್ನು ಬಹುತೇಕ ಆವರಿಸಿಬಿಟ್ಟಿದೆ. ಕಾಶ್ಮೀರದ ವಿಚಾರದಲ್ಲೇನೋ ‘ದೇಶಭಕ್ತಿ’ ಮಾಧ್ಯಮಗಳ ಕೈಕಟ್ಟಿಹಾಕಿತು ಎನ್ನೋಣ. ಆದರೆ ಗುಂಪು ಹತ್ಯೆಗಳ ವಿಚಾರದಲ್ಲಿ ಮಾಧ್ಯಮಗಳು ಎತ್ತಬೇಕಾದ ಪ್ರಶ್ನೆಗಳನ್ನು ಎತ್ತದಿರುವುದನ್ನು ಏನೆಂದು ಕರೆಯೋಣ? ಬರಬರುತ್ತಾ ಗುಂಪು ಹತ್ಯೆಗಳ ಕುರಿತಾದ ಸುದ್ದಿಗಳು ಏನೋ ಮಾಮೂಲಿ ಘಟನೆಗಳ ವರದಿ ಎನ್ನುವಂತೆ ಒಳಪುಟಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ಸುಪ್ರೀಂಕೋರ್ಟ್ ಆದೇಶದ ಬಳಿಕವೂ ಸರಕಾರ ಈ ವಿಚಾರದಲ್ಲಿ ತೋರುತ್ತಿರುವ ಉದಾಸೀನ ಪ್ರವೃತ್ತಿಯನ್ನು ದೊಡ್ಡ ಧ್ವನಿಯಲ್ಲಿ ಪ್ರಶ್ನಿಸದೆ ಇರುವ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರವನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಿವೆ ಎನ್ನುವ ಪ್ರಶ್ನೆ ಮೂಡುವುದಿಲ್ಲವೇ? ಇಂತಹ ಸಾವಿರ ಉದಾಹರಣೆಗಳಿವೆ. “ಇದರಲ್ಲಿ ಹೊಸದೇನಿಲ್ಲ, ಇಂತಹ ಪರಿಸ್ಥಿತಿ ಬಂದಾಗಲೆಲ್ಲಾ ಭಾರತೀಯ ಮಾಧ್ಯಮಗಳು ಹೀಗೆಯೇ ನಡೆದುಕೊಂಡಿರುವುದು – ಮತ್ತೊಂದು ಸಂದಿಗ್ಧತೆ ಎದುರಾಗಿದೆ, ಮಾಧ್ಯಮಗಳು ಮತ್ತದೇ ಪ್ರವೃತ್ತಿಯನ್ನು ತೋರುತ್ತಿವೆ. ಇದು ಒಂಥರಾ ಪಾವಲೋವನ ಪ್ರಯೋಗದ ನಾಯಿಯ ಕತೆ” ಅಂತ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಇತ್ತೀಚಿಗೆ ಬರೆದರು (ಮನಶಾಸ್ತ್ರದ ವಿದ್ಯಾರ್ಥಿಗಳು ಕಲಿಯುವ ಪಾವಲೋವನ ಪ್ರಯೋಗದಲ್ಲಿ ಒಂದು ನಿರ್ದಿಷ್ಟ ಸಂಜ್ಞೆಗೆ ಒಂದೇ ರೀತಿ ಪ್ರತಿಕ್ರಿಯಿಸುವ ಪ್ರವೃತ್ತಿ ತೋರಿಸುತ್ತದೆ).

ಭಾರತೀಯ ಮಾಧ್ಯಮಗಳು ಹೀಗೆ ಆಳುವ ಸರಕಾರಗಳ ತಾಳಕ್ಕೆ ಸರಿಯಾಗಿ ಕುಣಿಯುವುದು ಅವುಗಳಿಗೆ ಒಪ್ಪಿಗೆಯಾಗಿ ಅಲ್ಲ, ಅವುಗಳು ಹಾಗೆ ಮಾಡುವುದು ಸರಕಾರ ಅನುಸರಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನೀತಿಯ ಪರಿಣಾಮವಾಗಿ ಅಂತ ವಾದಿಸಬಹುದು. ಯಾಕೆಂದರೆ ಭಾರತದ ಮಾಧ್ಯಮ ಒಂದು ಉದ್ಯಮವಾಗಿ ಸದಾ ಸರಕಾರದ ಮರ್ಜಿಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಸರಕಾರದ ಜತೆ ನಿಷ್ಠುರವಾಗಿ ನಡೆದುಕೊಂಡರೆ ಮಾಧ್ಯಮಗಳನ್ನು ಸರಕಾರ ವಿವಿಧ ರೀತಿಯಲ್ಲಿ ಬಗ್ಗುಬಡಿಯಬಹುದು. ಸರಕಾರೀ ಜಾಹೀರಾತುಗಳನ್ನು ನಿಲ್ಲಿಸಬಹುದು, ಖಾಸಗಿ ಜಾಹೀರಾತುಗಳೂ ಸಿಗದೇ ಹೋಗುವಂತೆ ತಂತ್ರ ಹೂಡಬಹುದು. ಪತ್ರಿಕೆಯ ಮಾಲೀಕರ, ಅದರ ಹಿರಿಯ ಪತ್ರಕರ್ತರ ಮೇಲೆ ತನಿಖಾ ಸಂಸ್ಥೆಗಳನ್ನು ಛೂ ಬಿಡಬಹುದು. ಇದೆಲ್ಲಾ ಈ ದೇಶದಲ್ಲಿ ಹಿಂದೆ ಆಗಿಹೋಗಿದೆ. ಆದುದರಿಂದ ಮಾಧ್ಯಮೋದ್ಯಮ ಆರ್ಥಿಕವಾಗಿ ಅತ್ಯಂತ ಸೊರಗಿಹೋಗಿರುವ ಈ ಕಾಲದಲ್ಲಿ ಯಾರು ತಾನೇ ಸರಕಾರದ ದ್ವೇಷ ಕಟ್ಟಿಕೊಳ್ಳಲು ತಯಾರಿದ್ದಾರೆ? ಸಹಜವಾಗಿಯೇ ಮಾಧ್ಯಮಗಳು ಸರಕಾರವನ್ನು ಪ್ರಶ್ನಿಸುವುದನ್ನು ಬಿಟ್ಟು ಅದರ ಹೊಗಳುಭಟ್ಟರಾಗಿಬಿಟ್ಟಿವೆ. ಅಂದಮೇಲೆ ಅವುಗಳಿಗೇನು ಅಭಿವ್ಯಕ್ತಿ ಸ್ವಾತಂತ್ರ್ಯದ ಹಂಗು ಎನ್ನುವ ವಾದ ಒಪ್ಪತಕ್ಕದ್ದೇ. ಇಲ್ಲೇ ಇರುವುದು ಮಹತ್ವದ ವಿಚಾರ. ಒಂದು ವೇಳೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಬಲವಾಗಿ ಉಳಿಸಿಕೊಳ್ಳಬೇಕು ಎನ್ನುವ ತುಡಿತವೊಂದು ಭಾರತದ ಸಮಾಜದಲ್ಲಿ ಆಳವಾಗಿ ನೆಲೆಸಿದ್ದರೆ ಇಷ್ಟೊತ್ತಿಗೆ ಸರಕಾರೀ ಮತ್ತು ಖಾಸಗೀ ಜಾಹೀರಾತುಗಳ ಹಂಗಿಲ್ಲದೆ ನಡೆಯಬಹುದಾದ ಮಾಧ್ಯಮೋದ್ಯಮದ ಮಾದರಿಯೊಂದು ಈ ದೇಶದಲ್ಲಿ ಸೃಷ್ಟಿಯಾಗುತಿತ್ತು. ಒಂದೋ ಸಹಕಾರೀ ತತ್ವದ ಆಧಾರದ ಮೇಲೆ ಅಥವಾ ದೊಡ್ಡ ಮಟ್ಟದ ದತ್ತಿಯೊಂದನ್ನು ಸ್ಥಾಪಿಸಿ ಅದರಿಂದ ಹುಟ್ಟುವ ಆದಾಯದ ಮೇಲೆ ಅವಲಂಬಿಸಿ ಸ್ವತಂತ್ರವಾಗಿ ನಡೆಯುವ ಮಾಧ್ಯಮ ಸಂಸ್ಥೆಯೊಂದು ಹುಟ್ಟಬಹುದಾಗಿತ್ತು. ಅಂತಹದ್ದೊಂದು ಪ್ರಯೋಗ ಸರಿಯಾಗಿ ಆಗಿಲ್ಲ ಅಥವಾ ಆದರೂ ಬಹುಕಾಲ ಉಳಿಯಲಿಲ್ಲ (ಉದಾಹರಣೆಗೆ ತೆಹೆಲ್ಕಾ) ಎಂಬುದು ಏನನ್ನು ಸೂಚಿಸುತ್ತದೆ? ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ನಾಗರಿಕ ಸಮಾಜ ಯಾಕೆ ಹೋರಾಟ ನಡೆಸುತಿಲ್ಲ. ವಾಸ್ತವದಲ್ಲಿ, ಈಗ್ಗೆ ನಾಲ್ಕು ವರ್ಷಗಳ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರವೃತ್ತಿಯನ್ನು ಖಂಡಿಸಿ ನಡೆದ ‘ಪ್ರಶಸ್ತಿ ವಾಪಸಾತಿ ಚಳವಳಿ’ ಬಹಳ ಅರ್ಥಪೂರ್ಣವಾಗಿತ್ತು. ಆದರೆ ಅದು ಅಷ್ಟೇ ಬೇಗ ನಿಂತುಹೋಯಿತು. ಅದರ ವಿಚಾರದಲ್ಲಿ ಹುಟ್ಟಿಕೊಂಡ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಅದಕ್ಕೆ ಸಾಧ್ಯವಾಗಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚಿಂತೆ ಮತ್ತು ಅದನ್ನು ಬಳಸಿಕೊಳ್ಳುವ ಧಾವಂತ ಏನಿದ್ದರೂ ಕೆಲವೇ ಕೆಲ ವ್ಯಕ್ತಿಗಳದ್ದು ಮತ್ತು ಕೆಲ ಪರ್ಯಾಯ ಮಾಧ್ಯಮಗಳದ್ದು ಎಂಬಂತ ಸ್ಥಿತಿಯೇ ಎಲ್ಲಾ ಕಾಲದಲ್ಲೂ ಇದ್ದದ್ದು.

ಇಡೀ ಭಾರತೀಯ ಸಮಾಜಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿ ಅಧಿಕಾರಸ್ಥರನ್ನು ಹದ್ದುಬಸ್ತಿನಲ್ಲಿಡಬೇಕು ಎನ್ನುವುದರ ಬಗ್ಗೆ ವಿಶೇಷವಾದ ಕಾಳಜಿ ಇನ್ನೂ ಮೂಡಿಲ್ಲ ಅನ್ನಿಸುತ್ತದೆ. ಅರ್ಥಾತ್ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಇರುವ ಉದಾಸೀನ ಎರಡೂ ಕೂಡಾ ಭಾರತದ ಪ್ರಜಾತಂತ್ರದ ಇನ್ನೊಂದು ದೊಡ್ಡ ಸವಾಲಿನ ಭಾಗಗಳು. ಆ ಸವಾಲು ಏನು ಅಂತ ಅಂದರೆ ಭಾರತೀಯ ಮನಸ್ಸುಗಳು ಪ್ರಜಾತಂತ್ರದ ಸಂಸ್ಕೃತಿಗೆ ತಯಾರಾಗುವ ಮುನ್ನವೇ ಈ ದೇಶಕ್ಕೆ ಪ್ರಜಾತಂತ್ರ ಬಂದದ್ದು. ಇದನ್ನೇ ಅಲ್ಲವೇ ಬಿ.ಆರ್.ಅಂಬೇಡ್ಕರ್ ಅಂದೇ ಎಚ್ಚರಿಸಿದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...