Homeಮುಖಪುಟಬೀದಿಗೆ ಬಿದ್ದ ಜೆಟ್ ಏರ್‍ವೇಸ್ ಸಿಬ್ಬಂದಿ: ಕೆಲಸ ಕಳೆದುಕೊಳ್ಳುವ ಎಲ್ಲರ ಗೋಳೂ ಒಂದೇ(ನಾ)?

ಬೀದಿಗೆ ಬಿದ್ದ ಜೆಟ್ ಏರ್‍ವೇಸ್ ಸಿಬ್ಬಂದಿ: ಕೆಲಸ ಕಳೆದುಕೊಳ್ಳುವ ಎಲ್ಲರ ಗೋಳೂ ಒಂದೇ(ನಾ)?

- Advertisement -
- Advertisement -

| ಡಾ.ವಾಸು ಎಚ್.ವಿ |

ಕುಖ್ಯಾತ ಮಾಫಿಯಾ ಡಾನ್, ಭಯೋತ್ಪಾದಕ ಕೃತ್ಯಗಳ ಆರೋಪಿ ಕ್ರಿಮಿನಲ್ ದಾವೂದ್ ಇಬ್ರಾಹಿಂನ ಬೇನಾಮಿ ಒಡೆತನದ್ದೆಂದು ಹೇಳಲಾಗುತ್ತಿರುವ ಜೆಟ್ ಏರ್‍ವೇಸ್ ಸಂಸ್ಥೆ ಆರ್ಥಿಕವಾಗಿ ಕುಸಿದು ಕುಂತಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 16,000 ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಗಗನದಲ್ಲಿ ಓಡಾಡುತ್ತಿದ್ದ ಪೈಲಟ್‍ಗಳು, ಗಗನಸಖಿಯರು ಸೇರಿದಂತೆ ನೂರಾರು ಜನ ಅಕ್ಷರಶಃ ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿ, ‘ನಮ್ಮ ಗೋಳನ್ನು ಕೇಳಿ, ಉದ್ಯೋಗ ಉಳಿಸಿಕೊಡಿ’ ಎಂದು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: ದಾವೂದ್ ಬೇನಾಮಿ ಒಡೆತನದ ಜೆಟ್ ಏರ್ ವೇಸ್

ಕಳೆದ ಅಕ್ಟೋಬರ್‍ನಿಂದ ಕಡಿಮೆಯೆಂದರೂ 2,000 ಉದ್ಯೋಗಿಗಳು ಬಿಟ್ಟು ಹೋಗಿದ್ದಾರೆ. ಆ ನಂತರವೂ 1,500 ಪೈಲಟ್‍ಗಳು, 3,000 ಗಗನಸಖಿಯರನ್ನೊಳಗೊಂಡ ವಿಮಾನ ಸಿಬ್ಬಂದಿ, 5,000 ಭೂಕಾರ್ಯಾಚರಣಾ ಸಿಬ್ಬಂದಿ, 2,000 ತಾಂತ್ರಿಕ ಸಿಬ್ಬಂದಿ ಮತ್ತು 3,000 ಆಡಳಿತ ಅಧಿಕಾರಿಗಳು ಸೇರಿ 14,500 ಜನ ಸಿಬ್ಬಂದಿಗಳು ಉಳಿದುಕೊಂಡಿದ್ದರು. ಇತರ ವಿಮಾನಯಾನ ಕಂಪೆನಿಗಳಿಗೆ ಹೋಲಿಸಿದರೆ ಹೆಚ್ಚೇ ಸಂಬಳ ಕೊಡುತ್ತಿದ್ದ ಜೆಟ್ ಏರ್‍ವೇಸ್‍ನಲ್ಲಿದ್ದ ಇಷ್ಟು ಜನರು ಒಮ್ಮೆಗೇ ಕೆಲಸ ಕಳೆದುಕೊಳ್ಳುವುದೆಂದರೆ, ಅದು ಉಂಟು ಮಾಡುವ ತಲ್ಲಣವನ್ನು ಯಾರೂ ಊಹಿಸಬಹುದು.


ಇವೆಲ್ಲಾ ಸಂಖ್ಯೆಗಳು. ಆದರೆ, ಯಾವುದಾದರೂ ಒಂದು ಕಡೆ ಉದ್ಯೋಗವನ್ನು ನಂಬಿಕೊಂಡು ಕೆಲಸ ಮಾಡುವ ಉದ್ಯೋಗಿಗೆ ಆ ಉದ್ಯೋಗ ಇದ್ದಕ್ಕಿದ್ದಂತೆ ಇಲ್ಲವಾಗಿಬಿಟ್ಟರೆ ಅವರ ಮಟ್ಟಿಗೆ ಅದೊಂದು ಆಘಾತವೇ ಆಗಿರುತ್ತದೆ. ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೆ ಇನ್ನೊಂದು ಕೆಲಸ ಸಲೀಸಾಗಿ ಸಿಗುವಂತಿದ್ದರೆ ಆ ಮಾತು ಬೇರೆ. ಈಗ ಸ್ಪೈಸ್‍ಜೆಟ್‍ನವರು, ಇಲ್ಲಿ ಕೆಲಸ ಕಳೆದುಕೊಂಡ 100 ಜನ ಪೈಲಟ್‍ಗಳು ಮತ್ತು 400 ಜನ ವಿಮಾನ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗೆ ತಮ್ಮಲ್ಲಿ ಉದ್ಯೋಗ ಕೊಟ್ಟಿದ್ದಾರೆ. ಜೆಟ್‍ನಲ್ಲಿ ಪಡೆಯುತ್ತಿದ್ದ ಸಂಬಳಕ್ಕೆ ಹೋಲಿಸಿದರೆ ಇಲ್ಲಿ ಶೇ.25ರಷ್ಟು ಸಂಬಳ ಮಾತ್ರ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಣಾಮವನ್ನು ಅಂದಾಜು ಮಾಡಬಹುದು.

ಜೆಟ್ ಏರ್‍ವೇಸ್‍ಅನ್ನು ಬೇರೆ ಯಾರಾದರೂ ಕೊಂಡುಕೊಳ್ಳಲಿ, ಎಸ್‍ಬಿಐ ಈ ಕಂಪೆನಿಗೆ ಸಾಲ ಕೊಡಲಿ, ಸರ್ಕಾರವು ತುರ್ತು ಪರಿಹಾರ ನಿಧಿಯನ್ನು ಕೊಟ್ಟು ಸಂಬಳದ ಬಾಕಿ (ಈಗಾಗಲೇ ಹಲವು ತಿಂಗಳುಗಳಿಂದ ಸಂಬಳ ಕೊಟ್ಟಿಲ್ಲ) ತೀರಿಸಲಿ ಹೀಗೆ ಹಲವು ಬೇಡಿಕೆಗಳನ್ನು ಸಿಬ್ಬಂದಿ ಮುಂದಿಟ್ಟಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ ಎಲ್ಲರಿಗೂ ಅವರ ಬೇಡಿಕೆ ತಲುಪಿದೆ. ಇವುಗಳಲ್ಲಿ ಕೆಲವನ್ನು ಸರ್ಕಾರ, ಬ್ಯಾಂಕ್‍ಗಳು ಪರಿಶೀಲಿಸುತ್ತಲೂ ಇವೆ.

ಈ ರೀತಿಯ ಸಹಾಯವನ್ನು ಸರ್ಕಾರ ಮಾಡಬೇಕಾಗುತ್ತದೆ. ಈ ಸಿಬ್ಬಂದಿಯಲ್ಲಿ ಪೈಲಟ್‍ಗಳಿಗೆ ತಿಂಗಳಿಗೆ ನಾಲ್ಕು ಲಕ್ಷ ವೇತನವಿದ್ದರೆ, ಮೂರು ಲಕ್ಷಕ್ಕೂ ಹೆಚ್ಚು ತಿಂಗಳ ಕಂತು ಪಾವತಿ ಮಾಡುವಂತಹ ಸಾಲಗಳನ್ನು ಮಾಡಿಕೊಂಡಿರಬಹುದು. ಇನ್ನು ಕೆಳಹಂತದವರಿಗೆ 50 ಸಾವಿರ ಸಂಬಳವಿದ್ದರೆ, ಮನೆ ಸಾಲವೂ ಒಳಗೊಂಡಂತೆ ಹಲವು ಇಎಂಐಗಳನ್ನು ಪಾವತಿಸುವ ಕಷ್ಟ ಅವರಿಗಿರಬಹುದು. ಹಾಗಾಗಿ ಇದ್ದಕ್ಕಿದ್ದಂತೆ ನಾಲ್ಕೈದು ತಿಂಗಳ ವೇತನವೇ ಇಲ್ಲದಿದ್ದರೆ ಆಕಾಶವು ನೆಲಕ್ಕೆ ಮತ್ತು ಪಾತಾಳಕ್ಕೆ ಕುಸಿದಂತೆ ಆಗುವ ಎಲ್ಲಾ ಸಾಧ್ಯತೆ ಇದ್ದೇ ಇರುತ್ತದೆ. ಇವರಲ್ಲೇ ಕೆಲವರು ಮಕ್ಕಳ ಶಾಲಾ ಶುಲ್ಕವನ್ನೂ ಕಟ್ಟಲಾಗಿಲ್ಲ ಎಂದು ಗೋಳಾಡಿದ್ದನ್ನು ನೋಡಬಹುದು. ಇವರೆಲ್ಲರ ಕಷ್ಟಕ್ಕೆ ಮರುಗಬೇಕಿದೆ. ಈ ಕಂಪೆನಿ ದಾವೂದ್ ಇಬ್ರಾಹಿಂನ ಬೇನಾಮಿ ಎಂಬುದೂ ಒಂದು ಆರೋಪ (ಆರೋಪಕ್ಕೆ ಎಷ್ಟೇ ಗಟ್ಟಿ ಕಾರಣಗಳಿದ್ದರೂ, ಅದನ್ನು ಪ್ರತ್ಯೇಕವಾಗಿ ನಿಭಾಯಿಸಬೇಕು).

ಆದರೆ, ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ. ಒಂದು – ಯಾವುದೇ ಕಂಪೆನಿಯು ಇದ್ದಕ್ಕಿದ್ದಂತೆ ಕಾರ್ಯಾಚರಣೆ ನಿಲ್ಲಿಸಿ ಕೈ ಎತ್ತುವುದಾದರೆ ಅದಕ್ಕೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲವೇ? ಲೇಆಫ್ ಕಾನೂನುಗಳು ಈಗ ಹೇಗೂ ಇವೆ. ಅಂತಹ ಸಂದರ್ಭದಲ್ಲಿ ಸಂಬಂಧಿಸಿದ ಮಾಲೀಕರ ಇತರ ಆಸ್ತಿಪಾಸ್ತಿಗಳನ್ನು ಬಳಸಿ ಸಿಬ್ಬಂದಿಗೆ ಪರಿಹಾರ ಕಲ್ಪಿಸಲು ಏಕೆ ಸಾಧ್ಯವಿಲ್ಲ? ಲಾಭ ಬಂದಾಗ ಮಾತ್ರ ಹೆಚ್ಚಿನ ಪಾಲು ಕಬಳಿಸಬೇಕು, ನಷ್ಟವಾದರೆ ಸಿಬ್ಬಂದಿ ಅಥವಾ ಸಾರ್ವಜನಿಕ ಬ್ಯಾಂಕು ಅಥವಾ ಸರ್ಕಾರ ಏಕೆ ಹೊರಬೇಕು? ಈ ವಿಚಾರ ಚರ್ಚೆಯಾಗುತ್ತಲೇ ಇಲ್ಲ. ವಿಜಯ್ ಮಲ್ಯನ ಕಿಂಗ್‍ಫಿಷರ್ ಏರ್‍ಲೈನ್ಸ್ ನಷ್ಟಕ್ಕೀಡಾದಾಗಲೂ ಆತ ಕೇಳಿದ್ದು, ‘ನನ್ನ ಐಷಾರಾಮಿ ಏರ್‍ಲೈನ್ಸ್ ನಷ್ಟಕ್ಕೀಡಾಗುತ್ತಿದೆ. ಸರ್ಕಾರ ಏನು ಮಾಡುತ್ತಿದೆ?’ ಎಂಬ ಧಮಕಿ! ಆತನ ಇನ್ನೂ ಎಷ್ಟೋ ಬೇರೆ ಬೇರೆ ಆಸ್ತಿಗಳು ಆಗಲೂ ಇದ್ದವು, ಈಗಲೂ ಇವೆ. ದಕ್ಷಿಣ ಆಫ್ರಿಕಾದಲ್ಲಿರುವ ಸ್ವಂತ ಕಾಡನ್ನೂ ಒಳಗೊಂಡು (ರೆಸಾರ್ಟ್ ಅಲ್ಲ, ಕಾಡು!!). ಹಾಗೆಯೇ ಜೆಟ್ ಏರ್‍ವೇಸ್‍ನ ನರೇಶ್ ಗೋಯೆಲ್‍ನ ಆಸ್ತಿಪಾಸ್ತಿಯ ವಿವರಗಳು ಸಾರ್ವಜನಿಕವಾಗಬೇಕು. ಉಳಿದ ವ್ಯವಹಾರಗಳೂ ಸಹಾ ಪಾರದರ್ಶಕವಾಗಿರಬೇಕು. ಸಾಧ್ಯವಾದಷ್ಟೂ ಅವುಗಳಿಂದಲೇ ಸಿಬ್ಬಂದಿ ಅಥವಾ ಸಿಬ್ಬಂದಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸಿದ ಸರ್ಕಾರ ಅಥವಾ ಬ್ಯಾಂಕಿಗೆ ಋಣ ಸಂದಾಯ ಆಗಬೇಕು.


ಎರಡು, ವಿಮಾನಯಾನ ಸಿಬ್ಬಂದಿಯ ಕುರಿತು ಮಾಧ್ಯಮಗಳು, ಸರ್ಕಾರ, ಬ್ಯಾಂಕು ಎಲ್ಲರೂ ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಖಾಸಗಿ ಕಂಪೆನಿಗಳ ಕಾರ್ಮಿಕರು, ದಿನನಿತ್ಯವೂ ಖಾಸಗಿ ಗುತ್ತಿಗೆ ಕಾರ್ಮಿಕರು ಮತ್ತು ಸರ್ಕಾರೀ ಗುತ್ತಿಗೆ ನೌಕರರು ಬೇಕಾಬಿಟ್ಟಿ ಕೆಲಸ ಕಳೆದುಕೊಳ್ಳುತ್ತಿದ್ದಾರಲ್ಲಾ, ಅವರ ಬಗ್ಗೆ ಈ ಥರದಲ್ಲಿ ಯಾರೂ ಕಣ್ಣೀರು ಮಿಡಿಯುವುದಿಲ್ಲವಲ್ಲಾ ಏಕೆ? ಅವರ ಜೀವನ ಕಡಿಮೆ ಬೆಲೆಯುಳ್ಳದ್ದಾ? ಅಪಘಾತ ಪರಿಹಾರ ಕೊಡುವಾಗಲೂ ಬೀದಿಯಲ್ಲಿ ಸತ್ತವರಿಗೊಂದು ಬೆಲೆ, ವಿಮಾನದಲ್ಲಿ ಸತ್ತವರಿಗೊಂದು ಪರಿಹಾರ ನಿಗದಿಯಾಗುತ್ತದಲ್ಲಾ ಹಾಗೇನಾ ಇದೂ?

ಇರಲಿ, ಪೈಲಟ್‍ಗೂ ಗುತ್ತಿಗೆ ಕಾರ್ಮಿಕರಿಗೂ ಒಂದೇ ಸಂಬಳ ಕೊಡಿ ಎಂಬುದೂ ಇಲ್ಲಿನ ಚರ್ಚೆಯಲ್ಲ. ಉದ್ಯೋಗ ಕಳೆದುಕೊಳ್ಳುವುದರ ವಿಚಾರದಲ್ಲಿ ಪೈಲಟ್‍ಗೆ ಇರುವ ಕಷ್ಟ ಹೇಗೆ ಕಷ್ಟವೋ, ಗುತ್ತಿಗೆ ನೌಕರರಿಗೂ ಅಂತಹುದೇ ಕಷ್ಟ ಇರುವುದಿಲ್ಲವಾ? ಇಲ್ಲಿ, ಪೈಲಟ್‍ಗಿದ್ದದ್ದು ಖಾಯಂ ಕೆಲಸ, ಗುತ್ತಿಗೆಯಲ್ಲಿ ಕೆಲಸ ಮಾಡುವವರಿಗೆ ಅಂತಹ ಗ್ಯಾರಂಟಿ ಇರುವುದಿಲ್ಲ ಎಂಬ ವಾದವನ್ನು ತರಬಾರದು. ಗುತ್ತಿಗೆ ನೌಕರಿ ಎನ್ನುವುದೇ ದೊಡ್ಡ ಬೋಗಸ್. ಖಾಯಂ ನೌಕರಿಯನ್ನು ತಪ್ಪಿಸಲು ಕಾನೂನಿಗೆ ವಿರುದ್ಧವಾಗಿ ಜಾರಿಗೆ ತಂದಿರುವ, ವರ್ಷಾನುಗಟ್ಟಲೇ ದುಡಿಸಿಕೊಳ್ಳುವ ಪದ್ಧತಿ ಗುತ್ತಿಗೆಯದ್ದಾಗಿದೆ.

ಅಂತಿಮವಾಗಿ ಇಷ್ಟು ಹೇಳಬಹುದು. ಜೆಟ್ ಏರ್‍ವೇಸ್‍ನ ಸಿಬ್ಬಂದಿಯ ನೆರವಿಗೆ ಸರ್ಕಾರವು ನಿಲ್ಲಲಿ, ಅವರ ತಲ್ಲಣವನ್ನು ಕೊನೆಗೊಳಿಸಲಿ. ಅದೇ ರೀತಿ ದೇಶದ ಎಲ್ಲೆಡೆ ಏಕಾಏಕಿ ಕೆಲಸ ಕಳೆದುಕೊಳ್ಳುವ ಎಲ್ಲರ ಪರವಾಗಿಯೂ ದುಡಿಸಿಕೊಳ್ಳುವ ಕಂಪೆನಿ, ಮಾಲೀಕರು, ಸರ್ಕಾರ ನಿಲ್ಲಬೇಕು.

(ಲೇಖಕರು, ಗುತ್ತಿಗೆ ನೌಕರರ ಸಂಘಟನೆಯ ಮುಂಚೂಣಿ ವ್ಯಕ್ತಿ.
ಲೇಖನದ ಅಭಿಪ್ರಾಯಗಳು ಲೇಖಕರವು. ಅವು ನಾನುಗೌರಿ.ಕಾಂ ವೆಬ್‍ತಂಡದ ಅಭಿಪ್ರಾಯಗಳು ಆಗಿರಲೇಬೇಕೆಂದಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...