Homeಮುಖಪುಟಗೋದಿ ಮಾಧ್ಯಮಗಳೆದುರು ದಿಟ್ಟತನದಿಂದ ಹೋರಾಡಿದ ನೈಜ ಪತ್ರಕರ್ತರಿಗೆ ಸಿಕ್ಕಿದ್ದೇನು?

ಗೋದಿ ಮಾಧ್ಯಮಗಳೆದುರು ದಿಟ್ಟತನದಿಂದ ಹೋರಾಡಿದ ನೈಜ ಪತ್ರಕರ್ತರಿಗೆ ಸಿಕ್ಕಿದ್ದೇನು?

ಸತ್ಯವನ್ನು ನುಡಿಯುವ ದಿಟ್ಟ ಪತ್ರಕರ್ತರ ರಕ್ಷಣೆಗೆ ನಾವು ಮಾಡಬೇಕಾಗಿರುವುದೇನು? ಇದು ನಾವು ಆದ್ಯತೆಯ ಮೇಲೆ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆ.

- Advertisement -
- Advertisement -

| ದೊಡ್ಡಿಪಾಳ್ಯ ನರಸಿಂಹಮೂರ್ತಿ |

ಒಬ್ಬ ತಂದೆಯ ಫೋನಿನಲ್ಲಿ ತನ್ನ ಮುವ್ವತ್ಮೂರು ವಯಸ್ಸಿನ ಮಗಳ ಮುಖವನ್ನು ಮಾರ್ಫ್ ಮಾಡಲಾಗಿರುವ ಒಂದು ಬ್ಲೂಫಿಲಂ ಬಂದು ಬೀಳುತ್ತದೆ; ಅವರು ಆ ನೀಲಿ ಚಿತ್ರವನ್ನು ಕೆಲಕ್ಷಣ ನೋಡಿ ನಿಲ್ಲಿಸುತ್ತಾರೆ. ತನ್ನ ಮಗಳಿಗೆ ಜೀವ ಬೆದರಿಕೆಯಿದೆಯೆನ್ನುವುದು ಅವರಿಗೆ ಈಗಾಗಲೇ ಗೊತ್ತಿತ್ತು. ತನ್ನ ಹೆಮ್ಮೆಯ ಎದೆಗಾರಿಕೆಯುಳ್ಳ ಮಗಳೊಂದಿಗೆ ಫೋನ್ ಕನೆಕ್ಟ್ ಆದಾಗ ಕೆಲಕ್ಷಣ ಮಗಳಿಗೆ ಮಾತೇ ಹೊರಡುವುದಿಲ್ಲ. ಕೊನೆಗೂ ಮಾತನಾಡಿದ ನಂತರ ಅವನು ತನ್ನ ಮಗಳಿಗೆ ಹೇಳುವುದು, it was a matter of time that this happened”. ಅಷ್ಟಾದರೂ ಆ ಮಗಳು ಮಾಡಿರುವ ಅಪರಾಧವಾದರೂ ಏನು?

ಮತ್ತೊಂದು ಯಶಸ್ವೀ ಸುಖೀ ಕುಟುಂಬವಿದೆ. ಆಕೆ ಕಾಲೇಜೊಂದರಲ್ಲಿ ಇತಿಹಾಸ ವಿಭಾಗದ ಎಚ್.ಓ.ಡಿ. ಆಗಿದ್ದಾಳೆ, ಇಬ್ಬರು ಹೆಣ್ಣುಮಕ್ಕಳು ಶಾಲೆಯಲ್ಲಿ ಓದುತ್ತಿವೆ, ಗಂಡನೂ ತನ್ನ ಕೆಲಸದಲ್ಲಿ ತುಂಬಾ ಯಶಸ್ವಿ ಮತ್ತು ಸಾಕಷ್ಟು ಹೆಸರು ಗಳಿಸಿದ್ದಾನೆ. ತನ್ನ ಗಂಡನ ಬಗ್ಗೆ ತುಂಬಾ ಹೆಮ್ಮೆಯಿದೆ ಅವಳಿಗೆ. ಆದರೆ ಕೆಲವರ್ಷಗಳಿಂದ ಗಂಡನಿಗೆ ಜೀವದ ಬೆದರಿಕೆಗಳು ಶುರುವಾಗಿವೆ. ಅವನಿಗಷ್ಟೇ ಅಲ್ಲ, ತನಗೂ ತನ್ನ ಮಕ್ಕಳಿಗೂ ಕೊಲೆ ಬೆದರಿಕೆ, ಅತ್ಯಾಚಾರದ ಬೆದರಿಕೆಗಳೂ ಪದೇಪದೇ ಬರುತ್ತಲೇ ಇವೆ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಅಷ್ಟಾದರೂ ಆತ ಮಾಡಿದ ಅಪರಾಧವಾದರೂ ಏನು?

ಉತ್ತರ- ಏನೂ ಇಲ್ಲ. ಅವರಿಬ್ಬರೂ ಯಾವ ಅಪರಾಧವನ್ನೂ ಮಾಡಿಲ್ಲ. ತಮ್ಮ ಕರ್ತವ್ಯಕ್ಕೆ ನಿಷ್ಠರಾಗಿ ದುಡಿಯುತ್ತಿರುವುದಕ್ಕಾಗಿ ಈ ಶಿಕ್ಷೆ.

ಆಕೆಯ ಹೆಸರು ರಾಣಾ ಅಯುಬ್ ಮತ್ತು ಆತನ ರವೀಶ್ ಕುಮಾರ್, ಇಬ್ಬರೂ ಪತ್ರಕರ್ತರು. ನಮ್ಮ ದೇಶದಲ್ಲಿ ಪತ್ರಿಕೋದ್ಯಮದ ಧರ್ಮವನ್ನು ಕಾಪಾಡಿಕೊಂಡು ಬರುತ್ತಿರುವ ಕೆಲವರಲ್ಲಿ ಇಬ್ಬರದೂ ದೊಡ್ಡ ಹೆಸರು.

ರಾಣಾ ಅಯೂಬ್ 1984ರಲ್ಲಿ ಮುಂಬಯಿಯಲ್ಲಿ ಜನಿಸಿದರು. ತಂದೆ ಕೂಡ ಪತ್ರಕರ್ತ, ಈಗ ಮುಚ್ಚಿಹೋಗಿರುವ ‘Blitz’ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆಗಾಗಿ ಕೆಲಸ ಮಾಡುತ್ತಿದ್ದರು. ಪತ್ರಕರ್ತೆಯಾಗಬೇಕೆಂಬ ಆಕಾಂಕ್ಷೆಯುಳ್ಳ ರಾಣಾ ಆಗ ತುಂಬಾ ಸುದ್ದಿ ಮಾಡುತ್ತಿದ್ದ, ದಿಟ್ಟ ಪತ್ರಿಕೋದ್ಯಮಕ್ಕೆ ಹೆಸರುವಾಸಿಯಾದ ‘ತೆಹೆಲ್ಕಾ’ ಸೇರಿಕೊಂಡರು. ಅಲ್ಲಿ ಅವರು ತೆಗೆದುಕೊಂಡ ಪ್ರಮುಖ ಕೆಲಸ ಗುಜರಾತನಲ್ಲಿ ಆದ ಗಲಭೆಗಳ ಬಗ್ಗೆ ಒಂದು ಸ್ಟಿಂಗ್ ಮಾಡುವುದು. ರಾಣಾ ಅವರು ಮೈಥಿಲಿ ತ್ಯಾಗಿ ಎನ್ನುವ ಹೆಸರಿನಲ್ಲಿ ಗುಜರಾತಿನಾದ್ಯಂತ ತಿರುಗಿ, ಬಿಜೆಪಿ ಹಾಗೂ ಸಂಘಪರಿವಾರದ ಅನೇಕ ಮುಖಂಡರೊಂದಿಗೆ ಮಾತನಾಡಿದರು, ಆ ಮಾತುಕತೆಗಳ ವಿಡಿಯೋ ಕೂಡ ಮಾಡಿದರು. ಅವರ ತನಿಖಾ ವರದಿಗಳು ಭಾರೀ ಪರಿಣಾಮಕಾರಿಯಾಗಿದ್ದು, ಅಂತರಾಷ್ಟ್ರೀಯ ಮನ್ನಣೆ ಗಳಿಸಿವೆ. ಇಂಥಾ ಒಂದು ತನಿಖಾ ವರದಿಯ ಪರಿಣಾಮವಾಗಿ ರಾಷ್ಟ್ರೀಯ ಪಕ್ಷವೊಂದರ ಹಾಲಿ ಅಧ್ಯಕ್ಷ ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು. ಜೈಲಿಗೆ ಹೋದ ಆ ಮಹನೀಯರ ಹೆಸರು ಅಮಿತ್ ಶಾ. ಆತ ಇಂದು ನಮ್ಮ ಭಾರತದ ಗೃಹ ಸಚಿವ ಎಂದರೆ ನಾವು ನಂಬಲೇಬೇಕು.

ಗುಜರಾತ್‍ನ ತನಿಖಾ ಕೆಲಸ ಮುಗಿಯುವ ಹೊತ್ತಿಗೆ ತೆಹೆಲ್ಕಾದಲ್ಲಿ ಸಮಸ್ಯೆಗಳು ಶುರುವಾಗಿದ್ದರಿಂದ ರಾಣಾ ಅಲ್ಲಿಂದ ಹೊರಬಂದು ತಾವು ಸಂಗ್ರಹಿಸಿದ ವಿಡಿಯೋಗಳು ಮತ್ತು ಸಂಭಾಷಣೆಗಳನ್ನಾಧರಿಸಿ ‘Gujrat Files, Anatomy of a cover up’ ಎನ್ನುವ ಪುಸ್ತಕವನ್ನು 2016 ರಲ್ಲಿ ಹೊರತಂದರು. (ಆ ಪುಸ್ತಕವನ್ನು ಶ್ರೀನಿವಾಸ್ ಕಾರ್ಕಳರವರು ಕನ್ನಡಕ್ಕೆ ಅನುವಾದ ಮಾಡಿದ್ದು 2017ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರು ತಮ್ಮ ಪ್ರಕಾಶನದಿಂದಲೇ ಪ್ರಕಟಿಸಿದ್ದರು).

ಪುಸ್ತಕ ಬಿಡುಗಡೆಯಾದೊಡನೆ ರಾಣಾಗೆ ಖ್ಯಾತಿ, ಪ್ರಶಸ್ತಿಗಳೇನೋ ಬಂದವು. ಆದರೆ ಅದಕ್ಕಿಂತ ಹೆಚ್ಚು ಬಂದಿದ್ದು ಕೊಲೆ, ಅತ್ಯಾಚಾರದ ಬೆದರಿಕೆಗಳು. ಇದ್ಯಾವುದಕ್ಕೂ ಜಗ್ಗದ ರಾಣಾಗೆ ಆಘಾತವೊಂದು ಕಾದಿತ್ತು. ಎರಡು ತಿಂಗಳ ಹಿಂದೆ ಕಾಶ್ಮೀರದಲ್ಲಿ ಹಸುಳೆ ಮೇಲೆ ಬಲಾತ್ಕಾರವಾದಾಗ ಆ ಬಲಾತ್ಕಾರವನ್ನು ರಾಣಾ ಸಮರ್ಥಿಸಿಕೊಂಡಳೆಂದು, ರಾಣಾ ಭಾರತವನ್ನು, ಭಾರತೀಯರನ್ನು ದ್ವೇಷಿಸುತ್ತಾಳೆನ್ನುವ ಹೇಳಿಕೆಗಳನ್ನು ಅವರ ಚಿತ್ರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಯ ಬಿಡಲಾಯ್ತು. ಅಷ್ಟಕ್ಕೂ ನಿಲ್ಲದೇ ನೀಲಿ ಚಿತ್ರವೊಂದಕ್ಕೆ ಇವರ ಮುಖವನ್ನು ಸೇರಿಸಿ ಎರಡೂವರೆ ನಿಮಿಷದ ವಿಡಿಯೋ ಒಂದನ್ನು ಹರಿಬಿಟ್ಟರು, ಆ ವಿಡಿಯೋವನ್ನು ಅವರ ತಂದೆಗೂ ತಲುಪಿಸಲಾಯಿತು. ರಾಣಾ ಅವರ ವೈಯಕ್ತಿಕ ಫೋನ್ ನಂಬರಿನೊಂದಿಗೆ, ಅವರ ಚಿತ್ರವನ್ನು ಮತ್ತು ಮನೆಯ ವಿಳಾಸವನ್ನೂ ಸೇರಿಸಿ, ಅವಳು ಲಭ್ಯವಿದ್ದಾಳೆ ಎನ್ನುವ ಪೋಸ್ಟ್ ಕೂಡ ಹರಿಬಿಡಲಾಯಿತು. ಅವಳ ದರವನ್ನು ಕೇಳುತ್ತ ನೂರಾರು ಕರೆಗಳು ಬಂದವು. ದಿಟ್ಟ ರಾಣಾ ಕಂಗೆಟ್ಟು ಆಸ್ಪತ್ರೆ ಸೇರಬೇಕಾಯಿತು. ಇದರ ಬಗ್ಗೆ ರಾಣಾ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ದಿಟ್ಟ ಪತ್ರಕರ್ತೆ ಎದುರಿಸುತ್ತಿರುವ ಅಪಾಯವನ್ನು ಗಮನಿಸಿದ ವಿಶ್ವಸಂಸ್ಥೆ ರಾಣಾ ಅವರ ಸುರಕ್ಷತೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಭಾರತ ಸರ್ಕಾರವನ್ನು ಕೋರಿದೆ.

ರವೀಶ್ ಕುಮಾರ್, 1974ರಲ್ಲಿ ಬಿಹಾರನ ಮೊತಿಹಾರಿಯ ಮೂಲದವರು, ಉನ್ನತ ವ್ಯಾಸಂಗಕ್ಕಾಗಿ ದೆಹಲಿಗೆ ಬಂದರು. ದೆಹಲಿಯಲ್ಲಿ ಪತ್ರಿಕೋದ್ಯಮವನ್ನು ಅಭ್ಯಾಸ ಮಾಡಿದ ರವೀಶ್, ತಮಗೆ ಇಂಗ್ಲೀಷ್ ಬರದಿದ್ದಕ್ಕಾಗಿ ಕೀಳರಿಮೆಯನ್ನು ಅನುಭವಿಸಿದವರು. ಸ್ವಪ್ರಯತ್ನದಿಂದಲೇ ಮೇಲೆಬಂದ ರವೀಶ್ NDTV ಸೇರಿಕೊಂಡರು. NDTV India ಹಿಂದಿ ವಾಹಿನಿಯ ಸಂಪಾದಕರಾದರು. ಹಿಂದಿ ಗೊತ್ತಿರುವ ಎಲ್ಲರಿಗೂ ರವೀಶ್ ಚಿರಪರಿಚಿತರು. ಇವರ ಆಳವಾದ ವಿಶ್ಲೇಷಣೆ, ಪತ್ರಿಕೋದ್ಯಮದ ಸಾಂಪ್ರದಾಯಿಕವಲ್ಲದ ವಿಧಾನ, ಮಾತುಗಾರಿಕೆ, ಸತ್ಯವನ್ನು ಹುಡುಕುವುದಕ್ಕಾಗಿ ಎಲ್ಲೆಲ್ಲೋ ಸುತ್ತಾಡುವ ಇವರಿಗೆ ಖ್ಯಾತಿ, ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಇತರ ಟಿವಿ ಆಂಕರ್‍ಗಳು ಒಂದು ವಿಷಯದ ಬಗ್ಗೆ ಅರ್ಧ ಗಂಟೆ ಚರ್ಚೆ ನಡೆಸುವುದೇ ಕಷ್ಟವಾಗಿರುವಾಗ, ಕೆಲವು ಮಹತ್ವದ ಸಂದರ್ಭದಲ್ಲಿ ಒಂದೇ ವಿಷಯದ ಮೇಲೆ ವಾರಗಟ್ಟಲೆ ವರದಿ, ಚರ್ಚೆ ಮಾಡಿದ ದಿಟ್ಟ ಪತ್ರಕರ್ತ ಈತ. ತೋರಿಸಿದ್ದನ್ನೇ ಮತ್ತೆ ಮತ್ತೆ ತೋರಿಸುವ, ಜೋರು ಗಂಟಲಿನಲ್ಲಿ ಅರ್ಥವಿಲ್ಲದ ಪ್ರಲಾಪ ಮಾಡುವ ಅದೆಷ್ಟೋ ‘ಖ್ಯಾತ’ ಪತ್ರಕರ್ತರಿಗಿಂತ ರವೀಶ್ ತೀರಾ ಭಿನ್ನ. ಯಾವುದೇ ಅಬ್ಬರವಿಲ್ಲದೆ ತಣ್ಣಗೆ ಈ ದೇಶದ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಮಸ್ಯೆಗಳನ್ನು ಆಧಾರಸಮೇತ ಎಳೆಎಳೆಯಾಗಿ ಬಿಚ್ಚಿಡುವ ರವೀಶ್ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಹಾಗೆಯೆ ಪಟ್ಟಭದ್ರ ಶಕ್ತಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಪರಿಣಾಮವಾಗಿ ಇವರಿಗೆ ಮಾತ್ರವಲ್ಲದೆ, ಇವರ ಕುಟುಂಬದ ಸದಸ್ಯರಿಗೂ ಬೆದರಿಕೆಗಳು ಶುರುವಾದವು. ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಎಷ್ಟು troll ಮಾಡಲಾಯಿತೆಂದರೆ ಇವರು ಸಾಮಾಜಿಕ ಜಾಲತಾಣಗಳನ್ನು ಸಂಪೂರ್ಣವಾಗಿ ತೊರೆಯುವಂತಾಯಿತು. ಕೊಲೆಯ ಬೆದರಿಕೆಗಳು ಸಾಮಾನ್ಯವಾದವು. ರವೀಶ್‍ರನ್ನು ಕೊಲೆ ಮಾಡುತ್ತೇನೆ ಎಂದು ಕೆಲವರು ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರವೀಶ್ ಪ್ರಸ್ತುತ ಸಮಯದಲ್ಲಿ ಎಲ್ಲಿದ್ದಾರೆ, ಎಲ್ಲಿಗೆ ಹೊರಟಿದ್ದಾರೆ ಎನ್ನುವ ವಿಷಯಗಳನ್ನು ಈ ಪೀಡಕರು ರವೀಶ್‍ಗೆ ನಿರಂತರವಾಗಿ ಕಳುಹಿಸುತ್ತಿರುತ್ತಾರೆ.

ಆ ಇಬ್ಬರಿಗೆ ಬಂದ ಬೆದರಿಕೆಗಳು, ಅವರಿಗೆ ಕೊಡಲಾದ ಮಾನಸಿಕ ಕಿರುಕುಳದ ಬಗ್ಗೆ ಬರೆಯತೊಡಗಿದರೆ ಅದೇ ಒಂದು ಪುಸ್ತಕವಾಗಬಹುದು.. ಕಿರುಕುಳ ಮತ್ತು ಬೆದರಿಕೆಗಳು ಎಷ್ಟರ ಮಟ್ಟಿಗೆ ಬಂದಿವೆಯೆಂದರೆ, ‘ಈಗ ಆ ಬೆದರಿಕೆಗಳನ್ನು ಕಾರ್ಯಗತಗೊಳಿಸುವುದಷ್ಟೇ ಉಳಿದಿರುವುದು’ ಎಂದು ರವೀಶ್ ಹೇಳಿದ್ದಾರೆ. ಬೊಗಳೋ ನಾಯಿ ಕಚ್ಚೋದಿಲ್ಲ ಎಂದು ತಿಳಿದರೆ ಅದು ಸಂಪೂರ್ಣ ತಪ್ಪು. 2017ರಲ್ಲಿ ನಾಲ್ಕು ಪತ್ರಕರ್ತರ ಕೊಲೆಯಾಗಿದೆ, ಈ ವರ್ಷ ಆಗಲೇ ಇಬ್ಬರು ಪತ್ರಕರ್ತರ ಕೊಲೆಯಾಗಿದೆ. ಕರ್ನಾಟಕದ ದಿಟ್ಟ ಪತ್ರಕರ್ತೆಯಾದ ನಮ್ಮೆಲ್ಲರ ನೆಚ್ಚಿನ ಗೌರಿಲಂಕೇಶ್‍ರನ್ನು ಕೊಂದೇಬಿಟ್ಟರು. ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಭಾರತ ದಿನೇದಿನೇ ಜಾರುತ್ತಾ ಈಗ 138ನೇ ಸ್ಥಾನಕ್ಕೆ ಇಳಿದಿದೆ. ಅಂದರೆ ಸತ್ಯನಿಷ್ಠ ಪತ್ರಕರ್ತರ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಬಹುದು.

ಈಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಮೇಲಿನ ಇಬ್ಬರೂ ಹೆಸರಾಂತ ಪತ್ರಕರ್ತರು, ಅವರಿಗೆ ತಮ್ಮ ಭಾಷೆಯ, ತಾವು ಪ್ರತಿನಿಧಿಸುತ್ತಿರುವ ವರ್ಗದ ಹಾಗೂ ನಗರಪ್ರದೇಶದಲ್ಲಿ ಒಂದು ಮಟ್ಟಿಗೆ ಬೆಂಬಲವಿದೆ. ಇವರ ಕಾರ್ಯಕ್ರಮಗಳನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ಆದರೆ ದೂರದ ಊರುಗಳಲ್ಲಿ, ಹಳ್ಳಿಗಾಡುಗಳಲ್ಲಿ ಕೆಲಸ ಮಾಡುತ್ತಿರುವ, ಇಂಗ್ಲೀಷ್ ಭಾಷೆಯ ಬೆಂಬಲವಿಲ್ಲದ, ಅನಾಮಧೇಯರಾಗಿರುವ ನೂರಾರು ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಸತ್ಯವನ್ನು ಜನರ ಮುಂದಿಡಬೇಕೆಂದರೆ ಪಟ್ಟಭದ್ರರನ್ನು ಎದುರು ಹಾಕಿಕೊಳ್ಳಲೇಬೇಕಾಗುತ್ತದೆ. ಅವರೆಲ್ಲ ಎಂಥೆಂಥಾ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿರಬಹುದು?

ಇನ್ನೂ ಎರಡನೇ ಅತೀಮುಖ್ಯ ಪ್ರಶ್ನೆ

ಇದು ಯಾವುದೋ ಒಂದು ರಾಜಕೀಯ ಪಕ್ಷ ಅಥವ ಸಂಘಟನೆಯ ಪ್ರಶ್ನೆ ಖಂಡಿತ ಅಲ್ಲ. ಇದೊಂದು ವ್ಯವಸ್ಥೆ. ಆ ವ್ಯವಸ್ಥೆ ಈ ದಿಟ್ಟ ಪತ್ರಕರ್ತರನ್ನು ಹಿಂದೂ ಧರ್ಮದ ವಿರೋಧಿಗಳಂತೆ ಬಿಂಬಿಸುತ್ತಿದೆ. ವಾಸ್ತವದಲ್ಲಿ ಈ ಇಬ್ಬರೂ ಹಿಂದೂ ಧರ್ಮ, ಸಂಸ್ಕೃತಿಯ ವಿರುದ್ಧ ಮಾತನಾಡಿರುವ ಯಾವ ಉದಾಹರಣೆಗಳೂ ಇಲ್ಲ. ಹಾಗಾದರೆ ಇವರು ಹಿಂದೂ ಧರ್ಮದ ವಿರೋಧಿಗಳು ಆಗಿದ್ದಾದಾರೂ ಹೇಗೆ? ಹೀಗೆ ಧರ್ಮದ ಮುಸುಕಿನಲ್ಲಿ ಆಶ್ರಯ ಪಡೆಯುತ್ತಿರುವ ಶಕ್ತಿಗಳಾದರೂ ಯಾರು?

ಈ ಎಲ್ಲ ಬೆದರಿಕೆ, ಕಿರುಕುಳಗಳಲ್ಲಿ ಒಂದು ಸಂಗತಿ ಸುಸ್ಪಷ್ಟವಾಗಿದೆ. I am a Troll ಎಂಬ ಸಂಶೋದನಾ ಕೃತಿ ರಚಿಸಿರುವ ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು ಹೇಳುವಂತೆ ಇವೆಲ್ಲ ಯಾವುದೋ ಬಿಡಿ ಬಿಡಿ ಘಟನೆಗಳಲ್ಲ. ಇವು ಸುಸಜ್ಜಿತ ಯೋಜನೆಯೊಂದಿಗೆ ನಡೆಯುತ್ತಿವೆ, ಬೆದರಿಕೆ ಒಡ್ಡುವ ಈ ಪುಂಡರಿಗೆ ರಾಜಕೀಯ ಆಶ್ರಯವಿದೆ. ಇಂದಿನ ಪ್ರಧಾನಿಯವರನ್ನು ಒಳಗೊಂಡು ಹಲವು ಸಚಿವರು ಈ ಪುಂಡರನ್ನು ಟ್ವಿಟರ್‍ಗಳಲ್ಲಿ ಫಾಲೋ ಮಾಡುತ್ತಾರೆ, ಫೇಸ್‍ಬುಕ್‍ಗಳಲ್ಲಿ ಸ್ನೇಹಿತರಾಗಿರುತ್ತಾರೆ. ಈ Troll brigadeಗಳಿಗೆ ಭಾರೀ ಖದೀಮ ಕುಳಗಳ ಕೃಪೆಯೂ ಇರುತ್ತದೆ. ಇದು ಒಟ್ಟಾರೆ ವರ್ತಮಾನದ ಪತ್ರಿಕೋದ್ಯಮ ಎದುರಿಸುತ್ತಿರುವ ಅಪಾಯಕಾರಿ ಬಿಕ್ಕಟ್ಟಿನ ಭಾಗವೇ ಆಗಿದೆ.

ಪ್ರಜಾತಂತ್ರ ಯಶಸ್ವಿಯಾಗಬೇಕಾದರೆ ನಾಲ್ಕನೇ ಸ್ಥಂಬವೆಂದು ಪರಿಗಣಿತವಾಗಿರುವ ಪತ್ರಿಕಾರಂಗ ಸ್ವತಂತ್ರವಾಗಿ ಕೆಲಸ ಮಾಡುವಂತಿರಬೇಕು. ಮಾತ್ರವಲ್ಲ, ಪತ್ರಿಕಾರಂಗಕ್ಕೆ ಸಮಾಜದ ಹಿತವನ್ನು ಕಾಪಾಡುವ ಹೊಣೆಗಾರಿಕೆ ಇರಬೇಕು. ಇಂಥಾ ಜನಪರ ಪತ್ರಿಕೋದ್ಯಮವನ್ನು ಉಳಿಸಿ, ಬೆಳೆಸಲು ನಾವೇನು ಮಾಡಬೇಕು? ಸತ್ಯವನ್ನು ನುಡಿಯುವ ದಿಟ್ಟ ಪತ್ರಕರ್ತರ ರಕ್ಷಣೆಗೆ ನಾವು ಮಾಡಬೇಕಾಗಿರುವುದೇನು? ಇದು ನಾವು ಆದ್ಯತೆಯ ಮೇಲೆ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...