ಜಮ್ಮ ಕಾಶ್ಮೀರ ಪೀಪಲ್ಸ್ ಮೂವ್ ಮೆಂಟ್ ನ ಯುವ ಕಾರ್ಯಕರ್ತೆ ಶೆಹ್ಲಾ ರಶೀದ್ ಮೇಲೆ ಪೊಲೀಸರು ಎಫ್.ಐ.ಆರ್ ಹಾಕಿ ದೇಶ ದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಸೈನ್ಯದ ವಿರುದ್ಧ ಶೆಹ್ಲಾ ಟ್ವೀಟ್ ಮಾಡಿದ್ದರು ಎಂದು ಪೊಲೀಸರು ಆರೋಪಿಸಿದರೆ, ಕಾಶ್ಮೀರದಲ್ಲಿ ಮನೆಗೆ ನುಗ್ಗಿ ಸೇನಾ ಶಿಬಿರಕ್ಕೆ ನಾಲ್ವರನ್ನು ಕರೆದುಕೊಂಡು ಹೋಗಿ, ವಿಚಾರಣೆ ನಡೆಸಿ ಹಿಂಸೆ ನೀಡಲಾಗಿದೆ ಎಂದು ಶೆಹ್ಲಾ ರಶೀದ್ ಹೇಳಿಕೊಂಡಿದ್ದರು.
ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಅದನ್ನು ವಿರೋಧಿಸಿ ಆಗಸ್ಟ್ 17ರಂದು ಶೆಹ್ಲಾ ರಶೀದ್ ಸರಣಿ ಟ್ವಿಟ್ ಗಳನ್ನು ಮಾಡಿದ್ದರು. ಪ್ರತಿನಿತ್ಯ ಅದರಲ್ಲಿಯೂ ರಾತ್ರಿವೇಳೆ ವಿಚಾರಣೆಯ ನೆಪದಲ್ಲಿ ಸಾಮಾನ್ಯ ಜನರಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು.
ತಮ್ಮನ್ನು ಸೋಫಿಯನ್ ಎಂಬಲ್ಲಿ ಸೇನಾ ಶಿಬಿರಕ್ಕೆ ವಿಚಾರಣೆಗೆಂದು ಕರೆಸಿಕೊಂಡು ವಿಚಾರಣೆಯ ನೆಪದಲ್ಲಿ ಒಬ್ಬ ಮನಷ್ಯ ತೀರಾ ಹತ್ತಿರಕ್ಕೆ ಬಂದು ತೊಂದರೆ ಕೊಟ್ಟಿದ್ದರು. ಮೈಕ್ ನಲ್ಲಿ ಅದೆಲ್ಲಾ ಮುದ್ರಿತಗೊಂಡಿದೆ ಎಂದು ಆರೋಪಿಸಿದ್ದರು.
ಇದಾದ ನಂತರ ವಕೀಲ್ ಅಲಾಕ್ ಅಲೋಕ್ ಶ್ರೀವತ್ಸ ಎಂಬುವವರ ದೆಹಲಿ ಪೊಲೀಸರ ಬಳಿ ದೂರೊಂದನ್ನು ನೀಡಿದ್ದು “ಶೆಹ್ಲಾ ಸುಳ್ಲು ಸುದ್ದಿಗಳನ್ನು ಹರಡುತ್ತಿದ್ದಾರೆ, ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ, ಅವರ ಬಳಿ ಯಾವುದೇ ದಾಖಲೆಗಳಿಲ್ಲ” ಎಂದು ದೂರಿದ್ದರು.
ಈ ರೀತಿ ಉದ್ದೇಶಪೂರ್ವಕವಾಗಿ ದೇಶದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಸೈನ್ಯದ ಮೇಲೆ ಕೆಟ್ಟ ಹೆಸರು ಬರಲೆಂದು ಅವರು ಸುಳ್ಲು ಆರೋಪಗಳನ್ನು ಮಾಡಿದ್ದಾರೆ ಎಂದು ಶ್ರೀವತ್ಸ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸೆಪ್ಟೆಂಬರ್ 3 ರಂದು ಸಲ್ಲಿಸಿದ ಎಫ್ಐಆರ್ನಲ್ಲಿ, ರಶೀದ್ ವಿರುದ್ಧ 124 ಎ (ದೇಶದ್ರೋಹ), 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 153 (ಅಪೇಕ್ಷಿತವಾಗಿ ಪ್ರಚೋದನೆಯನ್ನು ನೀಡುವ ಉದ್ದೇಶದಿಂದ ಪ್ರಚೋದಿಸಿ ಗಲಭೆಗೆ ಕಾರಣ), 504 (ಶಾಂತಿಯನ್ನು ಉಲ್ಲಂಘಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಭಾರತೀಯ ದಂಡ ಸಂಹಿತೆಯ 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.
ದೆಹಲಿ ಪೊಲೀಸರ ವಿಶೇಷ ಸೆಲ್ ಪ್ರಕರಣದ ವಿಚಾರಣೆ ನಡೆಸಿತ್ತಿದೆ. ಇದೇ ಪೊಲೀಸರು ರಶೀದ್ ಅವರ ಬ್ಯಾಚ್ಮೇಟ್ ಮತ್ತು ಮಾಜಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್ಯುಎಸ್ಯು) ಅಧ್ಯಕ್ಷ ಕನ್ಹಯ್ಯ ಕುಮಾರ್ ವಿರುದ್ಧದ ದೇಶದ್ರೋಹ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.
ಸಂಸತ್ತಿನ ದಾಳಿಯ ಮಾಸ್ಟರ್ ಮೈಂಡ್ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ನೆನಪಿಗಾಗಿ 2016 ರ ಫೆಬ್ರವರಿ 9 ರಂದು ಜೆಎನ್ಯುನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಕುಮಾರ್ ಮತ್ತು ಇತರ ಒಂಬತ್ತು ಜನರ ವಿರುದ್ಧ ದೆಹಲಿ ಪೊಲೀಸರು ಈ ವರ್ಷದ ಜನವರಿಯಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಆಗಿನ ಜೆಎನ್ಯುಎಸ್ಯು ಉಪಾಧ್ಯಕ್ಷೆ ಶೆಹ್ಲಾ ರಶೀದ್ ಮತ್ತು ಇತರ 35 ಮಂದಿಯನ್ನು ಚಾರ್ಜ್ಶೀಟ್ನ 12 ನೇ ಕಾಲಂನಲ್ಲಿ ಹೆಸರಿಸಲಾಗಿದೆ. ಆದರೆ ಇಂದು ದೆಹಲಿ ಸರ್ಕಾರ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ ಎಂದು ಘೋಷಿಸಿದೆ.