ಮುಂಬೈ: ಖ್ಯಾತ ನಟಿ ಮಂಜು ವಾರಿಯರ್ ಅವರ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿ ಚಿತ್ರ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಒಂದೆರಡು ಪೋಸ್ಟ್ ಗಳನ್ನು ಹಾಕಿದ್ದಾರೆ.
“ಮಂಜು ವಾರಿಯರ್ ಅವರು ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವು ಜನರ ವಶದಲ್ಲಿದ್ದಾರೆ” ಎಂದು ಮೇ 1ರಂದು ಮಾಡಲಾದ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಇದು ಗಂಭೀರವಾದ ವಿಷಯ. ನಟಿಯ ಜೀವ ಅಪಾಯದಲ್ಲಿದೆ. ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಅವರ ಜೀವಕ್ಕೆ ಅಪಾಯವಿದೆ. ಅವರು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಶದಲ್ಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ನಾಲ್ಕು ದಿನಗಳಾಗಿವೆ. ಆದರೆ ಇದುವರೆಗೆ ಮಂಜು ವಾರಿಯರ್ ಅವರಾಗಲೀ ಅಥವಾ ಅವರಿಗೆ ಸಂಬಂಧಪಟ್ಟವರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ” ಎಂದು ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಮಂಜು ವಾರಿಯರ್ ಅವರ ಮ್ಯಾನೇಜರ್ಗಳಾದ ಬಿನೀಶ್ ಚಂದ್ರನ್ ಮತ್ತು ಬಿನು ನಾಯರ್ ಅವರ ಹೆಸರುಗಳನ್ನು ನಾನು ಪೋಸ್ಟ್ ಮಾಡಿದ್ದೇನೆ. ಮಂಜು ವಾರಿಯರ್ ಬಂಧನದಲ್ಲಿದ್ದಾರೆ ಎಂಬುದಕ್ಕೆ ನಾನು ಕಾರಣಗಳನ್ನು ನೀಡಿದ್ದೇನೆ. ನಟಿ ಬಂಧನದಲ್ಲಿದ್ದು ಅದಕ್ಕೆ ಅವರ ಮ್ಯಾನೇಜರ್ಗಳು ಕಾರಣ” ಎಂದು ಅವರು ಆರೋಪಿಸಿದ್ದಾರೆ.
“ಮಂಜು ವಾರಿಯರ್ ಅವರ ಮೌನ ನನ್ನ ಅನುಮಾನವನ್ನು ಬಲಪಡಿಸುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ಲಿಂಗ ಸಮಾನತೆಗಾಗಿ ಕೆಲಸ ಮಾಡುತ್ತಿರುವ ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ ಸಂಸ್ಥೆಗೆ ನಿನ್ನೆ ಇಮೇಲ್ ಕಳುಹಿಸಿದ್ದೇನೆ. ಅವರೂ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ನಾನು ಇಂದು ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ಹೇಳಿದಾಗ, ಅನೇಕ ಜನರು ಈ ಗಂಭೀರ ಸಮಸ್ಯೆಯನ್ನು ತಮಾಷೆ ಮಾಡಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ” ಎಂದು ಸನಲ್ ಮನವಿ ಮಾಡಿದ್ದಾರೆ.
ಮಂಜು ವಾರಿಯರ್ ಮಲಯಾಳಂ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರಾಗಿದ್ದಾರೆ. ವೆಟ್ರಿಮಾರನ್ ನಿರ್ದೇಶನದ ಅಸುರನ್ ಸಿನಿಮಾದಲ್ಲಿ ನಟಿಸಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ನಡುವೆ ನಟಿ ನಾಪತ್ತೆಯಾಗಿದ್ದು, ಅವರ ಜೀವಕ್ಕೆ ಅಪಾಯವಿದೆ ಎಂದು ಖ್ಯಾತ ನಿರ್ದೇಶಕ ಮಾಡಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.