ಹೂಡಿಕೆದಾರರನ್ನು ರಕ್ಷಿಸುವುದು ಹೇಗೆ ಎಂದು ಸೂಚಿಸಲು ಸಮಿತಿಯನ್ನು ರಚಿಸುವ ಬಗ್ಗೆ ಕೇಂದ್ರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಸೋಮವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ಅದಾನಿ ಗ್ರೂಪ್ನ ಷೇರುಗಳಲ್ಲಿ ಹೂಡಿಕೆದಾರರು ಲಕ್ಷ ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದ್ದಾರೆ ಎನ್ನುವ ವಿಚಾರಕ್ಕೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಶುಕ್ರವಾರ, ಸುಪ್ರೀಂ ಕೋರ್ಟ್ ಹೂಡಿಕೆದಾರರನ್ನು ರಕ್ಷಿಸಲು ಹೆಚ್ಚು ದೃಢವಾದ ಕಾರ್ಯವಿಧಾನವನ್ನು ಹೇಗೆ ಸ್ಥಾಪಿಸಬಹುದು ಎಂಬುದರ ಕುರಿತು ಕೇಂದ್ರ ಮತ್ತು ಸೆಬಿಯ ಅಭಿಪ್ರಾಯಗಳನ್ನು ಕೇಳಿದೆ ಮತ್ತು ಸಮಿತಿಯನ್ನು ರಚಿಸಲು ಪ್ರಸ್ತಾಪಿಸಿತ್ತು.
ಸಮಿತಿಯನ್ನು ರಚಿಸುವ ಬಗ್ಗೆ ಕೇಂದ್ರಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ಸಮಿತಿಯ ಸದಸ್ಯರ ಹೆಸರನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಮೆಹ್ತಾ ಹೇಳಿದ್ದಾರೆ. ಅದಾನಿ ಗ್ರೂಪ್ ವಿರುದ್ಧ ಆರೋಪ ಮಾಡಿರುವ ಯುನೈಟೆಡ್ ಸ್ಟೇಟ್ಸ್ ಮೂಲದ ಹೂಡಿಕೆ ಸಂಸ್ಥೆ ಹಿಂಡೆನ್ಬರ್ಗ್ ರಿಸರ್ಚ್ನ ವರದಿಯಿಂದಾಗಿ ಮಾರುಕಟ್ಟೆಗಳಲ್ಲಿನ ಕುಸಿತವನ್ನು ನಿಭಾಯಿಸಲು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಸಮರ್ಥವಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಇದನ್ನೂ ಓದಿ: ಅದಾನಿ ಹಗರಣ: ಹೂಡಿಕೆದಾರರನ್ನು ರಕ್ಷಿಸಲು ತಜ್ಞರ ಸಮಿತಿ ರಚನೆಗೆ ಸುಪ್ರೀಂ ಸೂಚನೆ
ಕೇಂದ್ರದ ಸಲಹೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದ್ದು, ಸರ್ಕಾರವು ಸಮಿತಿಯ ಸದಸ್ಯರ ಹೆಸರು ನೀಡಿದ ನಂತರ ಈ ವಿಷಯದ ಬಗ್ಗೆ ಆದೇಶ ನೀಡುವುದಾಗಿ ಹೇಳಿದೆ.
ಉದ್ಯಮಿ ಗೌತಮ್ ಅದಾನಿಯ ಕಂಪನಿಯು ಜನವರಿ 24 ರಿಂದ ನಷ್ಟದಲ್ಲಿ ಮುಳುಗಿದೆ. ಹಿಂಡೆನ್ಬರ್ಗ್ ರಿಸರ್ಚ್ ವರದಿ ಬಿಡುಗಡೆಯಾದಾಗಿನಿಂದ ಅದಾನಿ ಗ್ರೂಪ್ ಕಂಪನಿಗಳು ಷೇರುಪೇಟೆಯ ಸುಮಾರು 9 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿವೆ.
ವಕೀಲ ಮನೋಹರ್ ಲಾಲ್ ಶರ್ಮಾ ಮತ್ತು ವಿಶಾಲ್ ತಿವಾರಿ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥಾಪಕ ನಾಥನ್ ಆಂಡರ್ಸನ್ ಮತ್ತು ಭಾರತದಲ್ಲಿನ ಅವರ ಸಹಚರರ ವಿರುದ್ಧ ತನಿಖೆ ನಡೆಸುವ ಬಗ್ಗೆ FIR ದಾಖಲಿಸಲು SEBI ಮತ್ತು ಗೃಹ ಸಚಿವಾಲಯಕ್ಕೆ ನಿರ್ದೇಶನಗಳನ್ನು ನೀಡಬೇಕು ಎಂದು ಶರ್ಮಾ ತಮ್ಮ ಮನವಿಯಲ್ಲಿ ಕೋರಿದ್ದರು.
ಮತ್ತೊಂದೆಡೆ, ಹಿಂಡೆನ್ಬರ್ಗ್ ಸಂಶೋಧನಾ ವರದಿಯನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರ ಅಡಿಯಲ್ಲಿ ಸಮಿತಿಯನ್ನು ರಚಿಸುವಂತೆ ತಿವಾರಿ ಕೋರಿದ್ದಾರೆ.