ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ವಾಮಾಚಾರ ಮಾಡುತ್ತಿದ್ದ ಆರೋಪದ ಮೇಲೆ ಆದಿವಾಸಿ ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ವಾಮಾಚಾರದ ಹೆಸರಿನಲ್ಲಿ ಹತ್ಯೆ, ಸಾಮಾಜಿಕ ಬಹಿಷ್ಕಾರ ಅಸ್ಸಾಂನ ಭಾಗಗಳಲ್ಲಿ ಸಾಮಾನ್ಯವಾಗಿದೆ. 2018ರಲ್ಲಿ ವಿಚ್-ಹಂಟಿಂಗ್ ಆಕ್ಟ್(ನಿಷೇಧ, ತಡೆಗಟ್ಟುವಿಕೆ ಮತ್ತು ರಕ್ಷಣೆ) ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಕಾಯ್ದೆ ಪ್ರಕಾರ, ಮಾಟಗಾತಿ ಎಂದು ಆರೋಪದಲ್ಲಿ ವ್ಯಕ್ತಿಯ ಸಾವಿಗೆ ಕಾರಣವಾಗುವ ಆಕ್ರಮಣ ಅಥವಾ ಹಲ್ಲೆಗೆ ಸಂಬಂಧಿಸಿ IPC ಸೆಕ್ಷನ್ 302ರ ಪ್ರಕಾರ ಶಿಕ್ಷೆಗೆ ಒಳಗಾಗುತ್ತಾರೆ. ಇದಲ್ಲದೆ ರಾಜ್ಯ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಜನ ಜಾಗೃತಿ ಅಭಿಯಾನ ನಡೆಸುತ್ತಿದೆ. ಆದರೂ ಈ ಹತ್ಯೆಗಳು ಮುಂದುವರಿದಿದೆ.
‘ಮಾಟಗಾತಿ ಬೇಟೆ’ಯು ಹಿಂದಿನ ಪರಿಕಲ್ಪನೆಯಲ್ಲ, ಇದು ಇಂದು ಭಾರತದ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಜೀವಂತವಾಗಿದೆ. ಮಾಟಗಾತಿ ಎಂಬ ಹಣೆಪಟ್ಟಿ ಹಚ್ಚಿ ಮಹಿಳೆಯರನ್ನು ಹಿಂಸಿಸಲಾಗುತ್ತಿದೆ. ದರೋಡೆ ಮಾಡಲಾಗುತ್ತದೆ ಮತ್ತು ಕೊಲ್ಲಲಾಗುತ್ತದೆ. ವಾಮಾಚಾರದ ಆರೋಪಗಳಲ್ಲಿ ವದಂತಿ ಮತ್ತು ಗಾಸಿಪ್ಗಳು ಈ ಹತ್ಯೆಗಳಿಗೆ ಕಾರಣವಾಗುತ್ತದೆ. ಈ ಅಪರಾಧವನ್ನು ತಡೆಯಲು ಹಲವಾರು ರಾಜ್ಯಗಳು ಪ್ರತ್ಯೇಕವಾಗಿ ಕಾಯ್ದೆಗಳನ್ನು ಜಾರಿಗೆ ತಂದಿವೆ. 1999ರಲ್ಲಿ ಬಿಹಾರವು ಮಾಟಗಾತಿ ಆಚರಣೆಗಳ ತಡೆ ಕಾಯಿದೆಯನ್ನು ಜಾರಿಗೊಳಿಸಿದೆ. ಜಾರ್ಖಂಡ್ 2001ರಲ್ಲಿ ಈ ಕುರಿತು ಕಾಯ್ದೆ ಜಾರಿಗೊಳಿಸಿದೆ. ಛತ್ತೀಸ್ಗಢವು 2005ರಲ್ಲಿ ಈ ಬಗ್ಗೆ ಕಾಯಿದೆಯನ್ನು ಜಾರಿಗೆ ತಂದಿತು. ರಾಜಸ್ಥಾನ ಮತ್ತು ಅಸ್ಸಾಂ ಕೂಡ ಈ ಕುರಿತು 2015ರಲ್ಲಿ ಕಾಯ್ದೆಯನ್ನು ಜಾರಿಗೊಳಿಸಿದೆ.
ಇತ್ತೀಚಿನ ಪ್ರಕರಣದಲ್ಲಿ ಅಸ್ಸಾಂನಲ್ಲಿ ಸಂಗೀತಾ ಕತಿ ಅಮಾನವೀಯ ಕೃತ್ಯಕ್ಕೆ ಬಲಿಯಾದ ಸಂತ್ರಸ್ತೆ. ಈಕೆಗೆ ಮೂವರು ಮಕ್ಕಳಿದ್ದಾರೆ. ಸೂರಜ್ ಬಾಗ್ವಾರ್ ಎಂಬಾತ ನಿಜ್ ಬಹ್ಬರಿ ಗ್ರಾಮದ ಹೊರಗಿನಿಂದ ಕೆಲವು ಜನರನ್ನು ಕರೆತಂದು ಈ ಕೃತ್ಯವನ್ನು ನಡೆಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಅವರೆಲ್ಲರೂ ಒಂದೇ ಗ್ರಾಮ ನಿಜ್ ಬಹ್ಬರಿ ನಿವಾಸಿಗಳಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಮಧುರಿಮಾ ದಾಸ್, ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ವಾಮಾಚಾರ ಮಾಡುತ್ತಿದ್ದ ಆರೋಪದ ಮೇಲೆ ಅಸ್ಸಾಂನಲ್ಲಿ ಮಹಿಳೆಯೊಬ್ಬರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಸುಟ್ಟು ಹಾಕಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪಿಟಿಐ ವರದಿಯ ಪ್ರಕಾರ ನೆರೆಹೊರೆಯವರು ವಿವಿಧ ವಿಷಯಗಳ ಬಗ್ಗೆ ಆಕೆಯ ಜೊತೆ ಪದೇ ಪದೇ ಜಗಳವಾಡುತ್ತಿದ್ದರು ಮತ್ತು ಆಕೆ ವಾಮಾಚಾರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಪಾನಮತ್ತರಾಗಿದ್ದ ದುಷ್ಕರ್ಮಿಗಳ ಗುಂಪು ಆಕೆಯ ಪತಿಯನ್ನು ಕಟ್ಟಿ ಹಾಕಿ ನಂತರ ಹರಿತವಾದ ಆಯುಧಗಳಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ.
ಈ ಕುರಿತು ಮಾದ್ಯಮಗಳ ಜೊತೆ ಮಾತನಾಡಿದ ಸಂಗೀತಾ ಪತಿ ರಾಮ್ ಕಪಿ, ರಾತ್ರಿ ಪತ್ನಿ ಅಡುಗೆ ಮಾಡುತ್ತಿದ್ದಾಗ ದುಷ್ಕರ್ಮಿಗಳು ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಅವರು ಅವಳನ್ನು ಮಾಟಗಾತಿ ಎಂದು ನಿಂದಿಸಿ ಹಲ್ಲೆ ನಡೆಸಿದರು. ಅವಳನ್ನು ಹೊಡೆಯಬೇಡಿ ಮತ್ತು ಬೆಳಿಗ್ಗೆ ಬನ್ನಿ ಎಂದು ನಾನು ಅವರನ್ನು ವಿನಂತಿಸಿದೆ ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ನನಗೂ ಥಳಿಸಿದ್ದಾರೆ. ನಮ್ಮನ್ನು ಥಳಿಸುತ್ತಿರುವುದನ್ನು ನೋಡಿ ನನ್ನ ಮೂವರು ಮಕ್ಕಳು ಅಳುತ್ತಿದ್ದಾಗ ನಾನು ಅವರನ್ನು ಹತ್ತಿರದಲ್ಲಿ ವಾಸಿಸುವ ನನ್ನ ಸಹೋದರನ ಮನೆಗೆ ಬಿಡಲು ಅವರನ್ನು ಕರೆದುಕೊಂಡು ಹೋದೆ, ನಾನು ಮಕ್ಕಳನ್ನು ಬಿಟ್ಟು ಬರುವಾಗ ನನ್ನ ಮನೆಗೆ ಬೆಂಕಿ ಹಚ್ಚಲಾಗಿತ್ತು. ಪತ್ನಿ ಜೀವಂತವಾಗಿ ಸುಟ್ಟು ಕರಕಲಾಗಿದ್ದಳು ಎಂದು ಹೇಳಿದ್ದಾರೆ.
VIDEO | A woman was attacked with sharp weapons and burnt to death on Sunday evening for allegedly practising witchcraft in Assam's Sonitpur district.
The victim, an Adivasi woman, was a mother of three children. The police have arrested five persons, all of them residents of… pic.twitter.com/KrYRfj1gQb
— Press Trust of India (@PTI_News) December 26, 2023
ಮೋಹನ್ಪುರ ಗ್ರಾಮದಲ್ಲಿ ವಾಮಾಚಾರದ ಶಂಕೆಯಲ್ಲಿ ಬುಡಕಟ್ಟು ಮಹಿಳೆಯ ಹತ್ಯೆ
2022ರ ಮೇ.ತಿಂಗಳಲ್ಲಿ ಅಸ್ಸಾಂನಲ್ಲಿ 45 ವರ್ಷದ ಆದಿವಾಸಿ ಮಹಿಳೆಯನ್ನು ವಾಮಾಚಾರ ಮಾಡುತ್ತಿದ್ದಾಳೆ ಎಂದು ಶಂಕಿಸಿದ ಗುಂಪೊಂದು ಆಕೆಯನ್ನು ಕೊಂದು ಹಾಕಿದೆ. ಕೊಕ್ರಜಾರ್ ಜಿಲ್ಲೆಯ ಮೋಹನ್ಪುರ ಗ್ರಾಮದ ನಿವಾಸಿಯಾಗಿರುವ ಅಂಜಲಿ ಮುರ್ಮು ಎಂಬ ಮಹಿಳೆಯನ್ನು ಮೊದಲು ಕೊಂದು ನಂತರ ಆಕೆಯ ದೇಹವನ್ನು ಮರಕ್ಕೆ ನೇಣು ಹಾಕಲಾಗಿತ್ತು. ಮಹಿಳೆಯ ಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು.
ಗುಂಡಾಪುರಿ ಗ್ರಾಮದಲ್ಲಿ ವಾಮಾಚಾರದ ಶಂಕೆಯಲ್ಲಿ ಮೂವರ ಹತ್ಯೆ
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಇದೇ ಡಿ.6ರಂದು ನಾಗ್ಪುರದ ಗುಂಡಾಪುರಿ ಗ್ರಾಮದಲ್ಲಿ ವಾಮಾಚಾರದ ಶಂಕೆಯಲ್ಲಿ ವೃದ್ಧ ದಂಪತಿ ಮತ್ತು ಅವರ ಮೊಮ್ಮಗಳನ್ನು ಕೊಂದ ಬಳಿಕ 9 ಜನರನ್ನು ಬಂಧಿಸಲಾಯಿತು.
ದೇವು ಕುಮೋತಿ (60) ಮತ್ತು ಅವರ ಪತ್ನಿ ಬಿಚ್ಚೆ (55), ಮೊಮ್ಮಗಳು ಅರ್ಚನಾ ತಳಂಡಿ (10) ಅವರನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ದಂಪತಿಯ ಪುತ್ರ ರಮೇಶ್ ಮತ್ತು ಇತರ ಸಂಬಂಧಿಕರು ಈ ಘೋರ ಕೃತ್ಯವನ್ನು ನಡೆಸಿದ್ದರು.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ವಾಮಾಚಾರಕ್ಕೆ ಸಂಬಂಧಿಸಿ ಈ ಕೃತ್ಯ ನಡೆದಿದೆ. ಮಾಟಮಂತ್ರದ ವಿಚಾರದಲ್ಲಿ ಗ್ರಾಮಸ್ಥರಿಂದ ಬಹಿಷ್ಕಾರಕ್ಕೊಳಗಾದ ತಂದೆಯಿಂದ ರಮೇಶ್ ಮತ್ತು ವಿನು ಕೋಪಗೊಂಡು ಕೃತ್ಯ ನಡೆಸಿದ್ದರು.
ಜಾರ್ಖಂಡ್ನ ವಾಮಾಚಾರದ ಶಂಕೆಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ
ವಾಮಾಚಾರದಲ್ಲಿ ತೊಡಗಿದ್ದ ಸಂಶಯದಲ್ಲಿ ಒಂದೇ ಕುಟುಂಬದ ನಾಲ್ವರನ್ನು ನೆರೆಮನೆಯ ಇಬ್ಬರು ಹೊಡೆದು ಸಾಯಿಸಿದ ಘಟನೆ ಜಾರ್ಖಂಡ್ನ ಸೆರೈಕೆಲಾ–ಕಾರ್ಸಾವನ್ ಜಿಲ್ಲೆಯಲ್ಲಿ ನಡೆದಿದೆ. ಜಿಂಕಾರು ಮುಂಡೈನ್ (75), ಮಗಳು ಸೋರು ಮುಂಡೈನ್ (55), ಇಬ್ಬರು ಗಂಡು ಮಕ್ಕಳಾದ ಘಾಸಿಯಾ ಮುಂಡ (50), ಹಾಗಲ್ ಮುಂಡ (40) ಅವರನ್ನು ವಾಮಾಚಾರದ ಆರೋಪದಲ್ಲಿ ಶ್ಯಾಮ್ಲಾಲ್ ಮುಂಡ ಮತ್ತು ಸಹೋದರ ರಾಮ್ಸಿಂಗ್ ಮುಂಡ ನಾಲ್ವರನ್ನೂ ಹೊಡೆದು ಕೊಲೆ ಮಾಡಿದ್ದರು.
ಇನ್ನೊಂದು ಪ್ರಕರಣದಲ್ಲಿ ವಾಮಾಚಾರ ನಡೆಸುತ್ತಿದ್ದ ಶಂಕೆಯ ಮೇಲೆ ಮೂವರು ಮಹಿಳೆಯರನ್ನು ಹತ್ಯೆಗೈದಿರುವ ಘಟನೆ ಜಾರ್ಖಂಡ್ನ ಬುಂಡು ಉಪವಿಭಾಗದ ಸೋನಾಹಟು ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿತ್ತು.
ರಾಯಲು ದೇವಿ (45) ಮತ್ತು ಧೋಲೋ ದೇವಿ (60) ಮತ್ತು ಅಲೂಮಣಿ ದೇವಿ (55) ಅವರನ್ನು ಹತ್ಯೆ ಮಾಡಿ ಶವಗಳನ್ನು ಅರಣ್ಯದಲ್ಲಿ ಎಸೆಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ವಾಮಾಚಾರದ ಶಂಕೆಯಲ್ಲಿ ಬುಡಕಟ್ಟು ಮಹಿಳೆ ಮತ್ತು ಆಕೆಯ 4 ಮಕ್ಕಳ ಹತ್ಯೆ
ಒಡಿಶಾದಲ್ಲಿ ವಾಮಾಚಾರದ ಶಂಕೆಯಲ್ಲಿ ಬುಡಕಟ್ಟು ಮಹಿಳೆ ಮತ್ತು ಆಕೆಯ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಕೊಲೆ ಮಾಡಿ ಬಾವಿಯಲ್ಲಿ ಎಸೆಯಲಾಗಿತ್ತು. ದೇಬ್ರಾ ಮುಂಡಾ ಮತ್ತು ಇತರ ಆರೋಪಿಗಳು ಸುದಮ್ ಮುಂಡಾ ಅವರ ಮನೆಗೆ ಬಲವಂತವಾಗಿ ನುಗ್ಗಿದರು, ಅಲ್ಲಿ ಅವರು ಮಾಂಗ್ರಿ ಮತ್ತು ಅವರ ಮಕ್ಕಳನ್ನು ವಾಮಾಚಾರದ ಆರೋಪದಲ್ಲಿ ಹತ್ಯೆ ಮಾಡಿದ್ದರು.
ಒಡಿಶಾ ಪ್ರಿವೆನ್ಶನ್ ಆಫ್ ವಿಚ್-ಹಂಟಿಂಗ್ ಆಕ್ಟ್, 2013 ರ ಹೊರತಾಗಿಯೂ ರಾಜ್ಯದಲ್ಲಿ ವಾಮಾಚಾರದ ಅನುಮಾನಕ್ಕೆ ಸಂಬಂಧಿಸಿದ ಹತ್ಯೆಗಳು ಹೆಚ್ಚುತ್ತಿವೆ.
ವಾಮಾಚಾರದ ಶಂಕೆಯಲ್ಲಿ 107 ಜನರನ್ನು ಹತ್ಯೆ
ಅಸ್ಸಾಂನಲ್ಲಿ ವಾಮಾಚಾರ ನಡೆಸಿದ್ದಾರೆ ಎಂಬ ಶಂಕೆಯಲ್ಲಿ 2011ರ ಬಳಿಕ ಒಟ್ಟು 107 ಜನರನ್ನು ಹತ್ಯೆ ಮಾಡಲಾಗಿದೆ ಎಂದು ರಾಜ್ಯದ ಸಂಸದೀಯ ವ್ಯವಹಾರಗಳ ಸಚಿವ ಚಂದ್ರಮೋಹನ್ ಪಟೋವರಿ ವಿಧಾನಸಭೆಗೆ 2019ರಲ್ಲಿ ಮಾಹಿತಿ ನೀಡಿದ್ದರು.
ವಾಮಾಚಾರ ನಡೆಸಿರುವ ಆರೋಪದಲ್ಲಿ ದ್ವೇಷ ಸಾಧನೆಗೆ ಸಂಬಂಧಿಸಿದ ಘಟನೆಯಲ್ಲಿ 2011ರಿಂದ 2016ರ ಮೇ ತಿಂಗಳಿನವರೆಗೆ 84 ಜನ ಮೃತಪಟ್ಟಿದ್ದರೆ, 2016ರಿಂದ 2019ರ ಅಕ್ಟೋಬರ್ವರೆಗಿನ ಅವಧಿಯಲ್ಲಿ ಮತ್ತೆ 23 ಮಂದಿಯನ್ನು ಹತ್ಯೆ ಮಾಡಲಾಗಿದೆ ಅವರು ಹೇಳಿದ್ದರು.
ಅಸ್ಸಾಂ ದ್ವೇಷ ಸಾಧನೆ(ನಿಷೇಧ, ತಡೆ ಮತ್ತು ರಕ್ಷಣೆ) ಕಾಯ್ದೆ 2015ನ್ನು ಪ್ರಕಟಿಸಿದ್ದು, ಮೂಢನಂಬಿಕೆಯ ವಿರುದ್ಧ ಜನಜಾಗೃತಿ ಅಭಿಯಾನವನ್ನು ರಾಜ್ಯದ್ಯಂತ ಆಯೋಜಿಸಿದೆ ಎಂದು ಸಚಿವರು ತಿಳಿಸಿದ್ದರು.
ಇದನ್ನು ಓದಿ: ಬ್ರಿಟನ್ನಲ್ಲಿ ರಾಜಕೀಯದ ಚಿತ್ರಣ ಬದಲಿಸಿದ ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ!