ಬೆಂಗಳೂರು (ಜನವರಿ 27); ಹೈಕಮಾಂಡ್ನೊಂದಿಗೆ ಸತತ ಎರಡು ತಿಂಗಳ ಹಗ್ಗಾಜಗ್ಗಾಟದ ನಂತರ ಕೊನೆಗೂ ಸಚಿವ ಸಂಪುಟ ವಿಸ್ತರಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಅಂತಿಮ ತಯಾರಿ ನಡೆಸುತ್ತಿದ್ದಾರೆ. ಇದಕ್ಕಾಗಿ ವಲಸಿಗರಿಗೆ 9 ಮತ್ತು ಮೂಲ ಬಿಜೆಪಿಗರಿಗೆ 3 ಸಚಿವ ಸ್ಥಾನ ಎಂಬ ಸೂತ್ರವನ್ನು ಸಿದ್ದಪಡಿಸಿದ್ದಾರೆ. ಆದರೆ, ಸಂಪುಟ ವಿಸ್ತರಣೆ ಬೆನ್ನಿಗೆ ವಿಧಾನ ಪರಿಷತ್ ಚುನಾವಣೆ ಎದುರಾಗುತ್ತಿದ್ದು, ಬಿಎಸ್ವೈ ಎದುರು ಮತ್ತೊಂದು ದೊಡ್ಡ ಕಂಟಕ ಎದುರಾಗುವ ಎಲ್ಲಾ ಸಾಧ್ಯತೆಗಳನ್ನು ತೆರೆದಿಟ್ಟಿದೆ.
ಕಾಂಗ್ರೆಸ್ ಪಕ್ಷದ ರಿಜ್ವಾನ್ ಅರ್ಷದ್ ಅವರ ರಾಜೀನಾಮೆಯಿಂದ ತೆರವಾಗಿದ್ದ 1 ವಿಧಾನ ಪರಿಷತ್ ಸ್ಥಾನಕ್ಕೆ ಮುಂದಿನ ತಿಂಗಳು ಫೆಬ್ರವರಿ 17ಕ್ಕೆ ಚುನಾವಣೆ ನಡೆಯಲಿದೆ. ಆದರೆ, ಇರುವ ಈ ಒಂದು ಸ್ಥಾನವನ್ನು ಯಾರಿಗೆ ನೀಡುವುದು? ಎಂಬುದು ಇದೀಗ ಬಿಎಸ್ ಯಡಿಯೂರಪ್ಪ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಬೇಕು ಎಂದರೆ ಶತಾಯಗತಾಯ ವಿಧಾನ ಪರಿಷತ್ಗೆ ಆಯ್ಕೆ ಆಗಲೇಬೇಕು. ಇನ್ನೂ ರಾಣಿಬೆನ್ನೂರು ಮಾಜಿ ಶಾಸಕ ಆರ್. ಶಂಕರ್ ಅವರಿಗೆ ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ ಏಕೈಕ ಕಾರಣಕ್ಕೆ ಅವರು ಬಿಜೆಪಿ ನಾಯಕರ ಅಣತಿಯಂತೆ ತಮ್ಮ ಶಾಸಕ ಸ್ಥಾನವನ್ನೂ ಬಿಟ್ಟುಕೊಟ್ಟಿದ್ದರು.
ಇದೀಗ ಮುಂದಿನ ತಿಂಗಳು ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬಿಜೆಪಿಯ ಇಬ್ಬರು ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡದಿದ್ದರೆ, ಉತ್ತರ ಕರ್ನಾಟಕದಲ್ಲಿ ಬಿಜೆಪಿ ಲಿಂಗಾಯತ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಇನ್ನೂ ಸಚಿವ ಸ್ಥಾನಕ್ಕಾಗಿಯೇ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸೆ ಬಂದಿರುವ ಆರ್. ಶಂಕರ್ಗೆ ಸಚಿವ ಸ್ಥಾನ ನೀಡಿ ವಿಧಾನ ಪರಿಷತ್ಗೆ ಆಯ್ಕೆ ಮಾಡದಿದ್ದರೆ, ವಚನ ಭ್ರಷ್ಟ ಎಂಬ ಅಪಖ್ಯಾತಿ ಬಿಜೆಪಿ ಪಕ್ಷಕ್ಕೆ ಅಂಟಿಕೊಳ್ಳುತ್ತದೆ. ಅಲ್ಲದೆ ಅರ್ಹ ಶಾಸಕರ ಬಣದಲ್ಲಿ ಅಸಮಾಧಾನಕ್ಕೂ ಕಾರಣವಾಗಲಿದೆ.
ಹೀಗಾಗಿ, ಒಂದು ವೇಳೆ ಬಿಜೆಪಿ ಪಕ್ಷದಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಲಿದೆ ಎಂದು ಬಿಂಬಿಸಲಾಗಿರುವ ಸಚಿವ ಸಂಪುಟ ವಿಸ್ತರಣೆಯನ್ನು ಬಿಎಸ್ವೈ ಯಶಸ್ವಿಯಾಗಿ ನಿಭಾಯಿಸಿದರೂ ಸಹ, ಮುಂದಿನ ವಿಧಾನ ಪರಿಷತ್ ಚುನಾವಣೆ ಅವರ ಪಾಲಿಗೆ ಕತ್ತಿಯಂಚಿನ ದಾರಿಯಂತಾಗಲಿದೆ ಎಂದು ರಾಜ್ಯ ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.