ರಾಷ್ಟ್ರೀಯ ಭದ್ರತಾ ಕಾಯಿದೆಯಡಿ (ಎನ್ಎಸ್ಎ) ಬಂಧನದಲ್ಲಿದ್ದ ಉತ್ತರ ಪ್ರದೇಶದ ಡಾ.ಕಫೀಲ್ ಖಾನ್ ಅವರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಮತ್ತು ಅವರ ಮೇಲಿನ NSA ಪ್ರಕರಣ ಕೈಬಿಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದ ಬೆನ್ನಲೇ ನಿನ್ನೆ ಮಧ್ಯ ರಾತ್ರಿ ಅವರನ್ನು ಮಥುರಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಅಲಹಾಬಾದ್ ಹೈಕೋರ್ಟ್ ಮಂಗಳವಾರ ಡಾ.ಕಫೀಲ್ ಖಾನ್ ಬಂಧನವನ್ನು ಕಾನೂನುಬಾಹಿರ ಎಂದು ಕರೆದಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿದೆ. ಕಫೀಲ್ ಖಾನ್ರವರ ಭಾಷಣವು ಹಿಂಸೆಯನ್ನು ಪ್ರಚೋದಿಸುವಂತಿರಲಿಲ್ಲ. ಅದು ರಾಷ್ಟ್ರೀಯ ಏಕತೆ ಮತ್ತು ಜನರ ನಡುವೆ ಭಾವೈಕ್ಯತೆಯನ್ನು ಸಾರುವಂತೆ ಕರೆ ಕೊಡುವಂತಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಡಾ.ಕಫೀಲ್ ಖಾನ್ ಈ ಹಿಂದೆ ಹಲವು ಮನವಿಗಳನ್ನು ಮಾಡಿದ್ದರು. ಕೊನೆಗೂ ಅವರ ಅರ್ಜಿಯನ್ನು ಮಾನ್ಯ ಮಾಡಿದ ಅಲಹಾಬಾದ್ ಹೈಕೋರ್ಟ್ನ ನ್ಯಾ.ಸುಮಿತ್ರಾ ದಯಾಳ್ ಸಿಂಗ್ ಮತ್ತು ನ್ಯಾ.ಗೋವಿಂದ ಮಾಥೂರ್ ಅವರಿದ್ದ ಪೀಠವು ಅವರ ಬಿಡುಗಡೆಗೆ ಸರ್ಕಾರಕ್ಕೆ ಸೂಚಿಸಿದೆ.
ನ್ಯಾಯಾಲಯದ ತೀರ್ಪಿನ ನಂತರವೂ, ಜೈಲಿನ ಅಧಿಕಾರಿಗಳು ಡಾ.ಕಫೀಲ್ ಖಾನ್ ಅವರನ್ನು ಬಿಡುಗಡೆ ಮಾಡುವುದಕ್ಕೆ ಗಂಟೆಗಟ್ಟಲೆ ತಡ ಮಾಡಿದಾಗ, ಅವರ ಕುಟುಂಬವು ಅಲಹಾಬಾದ್ ಹೈಕೋರ್ಟ್ನಲ್ಲಿ ತಿರಸ್ಕಾರ ಅರ್ಜಿ ಸಲ್ಲಿಸುವುದಾಗಿ ತಿಳಿಸಿತ್ತು.
“ನನ್ನ ಮಗ ಜೈಲಿನಿಂದ ಹೊರಬರುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಬಹಳ ಸಮಯದ ನಂತರ ನಾನು ಅವನನ್ನು ನೋಡಲು, ಸ್ಪರ್ಶಿಸಲು ಸಾಧ್ಯವಾಗುತ್ತದೆ” ಎಂದು ಮಥುರಾ ಜೈಲಿಗೆ ತೆರಳುವಾಗ ಕಫೀಲ್ ಅವರ ತಾಯಿ ಎಂ.ಎಸ್. ಪರ್ವೀನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ ಎಂದು ಎನ್ ಡಿ ಟಿ ವಿ ಹೇಳಿದೆ.
“ನನ್ನ ಮಗ ಒಳ್ಳೆಯ ವ್ಯಕ್ತಿ. ಅವನು ಎಂದಿಗೂ ದೇಶ ಅಥವಾ ಸಮಾಜಕ್ಕೆ ವಿರೋಧಿಯಲ್ಲ. ಇಂದು ನನ್ನ ಸೊಸೆಯ ಜನ್ಮದಿನ. ಹಾಗಾಗಿ ಅವಳಿಗೆ ಕೇಕ್ ಕೂಡ ತೆಗೆದುಕೊಂಡುಹೋಗುತ್ತಿದ್ದೇವೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಡಾ.ಕಫೀಲ್ ಖಾನ್ ಜೀವಕ್ಕೆ ಅಪಾಯವಿದೆ : ಖಾನ್ ಪತ್ನಿಯ ಆರೋಪ
ಸಿಎಎ ವಿರೋಧಿ ಹೋರಾಟಗಳು ಉತ್ತುಂಗದಲ್ಲಿದ್ದಾಗ 2019 ರ ಡಿಸೆಂಬರ್ 13 ರಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಡಾ.ಕಫೀಲ್ ಖಾನ್ ಅವರನ್ನು ಜನವರಿಯಲ್ಲಿ ಮುಂಬೈನಲ್ಲಿ ಬಂಧಿಸಲಾಗಿತ್ತು.
ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಅವರ ಮೇಲೆ ಮೊದಲ ಬಾರಿಗೆ ಆರೋಪ ಹೊರಿಸಲಾಗಿದ್ದರೂ, ಈ ವರ್ಷ ಫೆಬ್ರವರಿ 13ರಂದು ಜಾಮೀನು ನೀಡಿದ ಎರಡು ದಿನಗಳ ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆರೋಪ ಹೊರಿಸಿದ್ದು ಪ್ರಸ್ತುತ ಮಥುರಾ ಜೈಲಿನಲ್ಲಿದ್ದರು.
ಆಗಸ್ಟ್ 16ರಂದು NSA ಪ್ರಕರಣದಲ್ಲಿ ಇನ್ನು ಮೂರು ತಿಂಗಳ ಕಾಲ ಅವರ ಬಂಧನವನ್ನು ವಿಸ್ತರಿಸುವಂತೆ ಕೇಳಿಕೊಳ್ಳಲಾಗಿತ್ತು.
ಆದರೆ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಎನ್ಎಸ್ಎ ಕಾಯಿದೆಯಡಿ ಡಾ. ಕಫೀಲ್ ಖಾನ್ ಬಂಧನ ಕಾನೂನಿನಡಿ ಮಾನ್ಯವಲ್ಲ. ಹಾಗಾಗಿ ಅವರನ್ನು ಕೂಡಲೇ ಬಿಡುಗಡೆಗೊಳಿಸಿ ಎಂದು ಹೇಳಿದೆ.
2017 ರಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಗೋರಖ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ 60 ಕ್ಕೂ ಹೆಚ್ಚು ಮಕ್ಕಳ ಸಾವಿನಲ್ಲಿ ಕಫೀಲ್ ಖಾನ್ ಅವರನ್ನು ಅಮಾನತುಗೊಳಿಸಲಾಗಿತ್ತು. ನಂತರ ಬಂಧಿಸಿ, ಜೈಲಿಗೆ ಹಾಕಲಾಗಿತ್ತು.
ಇದನ್ನೂ ಓದಿ: ಕರ್ತವ್ಯನಿಷ್ಠ, ಪ್ರಾಮಾಣಿಕ ಪ್ರತಿಭಾನ್ವಿತ ವೈದ್ಯ ಹೋರಾಟಗಾರ ಡಾ. ಕಫೀಲ್ಖಾನ್