Homeಕರ್ನಾಟಕಸ್ವಮೂತ್ರದಿಂದ ಏಡ್ಸ್‌ ವಾಸಿ, ಗೋಮೂತ್ರದಿಂದ ಮಧುಮೇಹ ಚಿಕಿತ್ಸೆ: ಅವೈಜ್ಞಾನಿಕ ಕೃತಿ ಓದಲು ಮೈಸೂರು ವಿವಿ ಸಲಹೆ!

ಸ್ವಮೂತ್ರದಿಂದ ಏಡ್ಸ್‌ ವಾಸಿ, ಗೋಮೂತ್ರದಿಂದ ಮಧುಮೇಹ ಚಿಕಿತ್ಸೆ: ಅವೈಜ್ಞಾನಿಕ ಕೃತಿ ಓದಲು ಮೈಸೂರು ವಿವಿ ಸಲಹೆ!

ಸ್ವಪ್ನ ಬುಕ್‌ಹೌಸ್‌ ಪ್ರಕಟಿಸಿರುವ ‘ವೈದ್ಯಕೀಯ ಸಮಾಜಶಾಸ್ತ್ರ’ ಪುಸ್ತಕ ರೆಫರ್‌‌ ಮಾಡಿ ಎಂದ ಮೈಸೂರು ವಿವಿ

- Advertisement -
- Advertisement -

“ಸ್ವಮೂತ್ರದಿಂದ ಕ್ಯಾನ್ಸರ್‌, ಏಡ್ಸ್‌ ಗುಣಪಡಿಸಬಹುದು, ಗೋಮೂತ್ರ ಸೇವನೆಯಿಂದ ಮಧುಮೇಹ ವಾಸಿಯಾಗುತ್ತದೆ” ಎಂಬ ಅಂಶಗಳಿರುವ ಕೃತಿಯನ್ನೇ ಮೈಸೂರು ವಿಶ್ವವಿದ್ಯಾನಿಲಯವು ಸಮಾಜಶಾಸ್ತ್ರ ಪದವಿ ವಿದ್ಯಾರ್ಥಿಗಳಿಗೆ ರೆಫರೆನ್ಸ್‌ (ಆಕಾರ ಕೃತಿ) ಆಗಿ ನೀಡಿರುವುದು ಟೀಕೆಗೆ ಗುರಿಯಾಗಿದೆ.

ನೂತನ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ ಮೈಸೂರು ವಿವಿಯು ಐದನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ‘ವೈದ್ಯಕೀಯ ಸಮಾಜಶಾಸ್ತ್ರ’ (ಮೆಡಿಕಲ್ ಸೋಷಿಯಾಲಜಿ) ಪಠ್ಯವನ್ನು ರೂಪಿಸಿದೆ. ಆದರೆ ವಿದ್ಯಾರ್ಥಿಗಳಿಗೆ ರೆಫರೆನ್ಸ್‌ ನೀಡಲಾಗಿರುವ ಕನ್ನಡ ಕೃತಿಯಲ್ಲಿ ಅವೈಜ್ಞಾನಿಕ ವಿಚಾರಗಳಿವೆ ಎಂಬ ಅಂಶ ಬೆಳಕಿಗೆ ಬಂದಿದೆ.

ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಭೈರಪ್ಪ ಅವರು ಬರೆದಿರುವ, ‘ಸ್ವಪ್ನ ಬುಕ್‌ಹೌಸ್‌’ ಪ್ರಕಟಿಸಿರುವ ‘ವೈದ್ಯಕೀಯ ಸಮಾಜಶಾಸ್ತ್ರ’ ಕೃತಿಯನ್ನು ರೆಫರೆನ್ಸ್‌ ಪುಸ್ತಕಗಳ ಪಟ್ಟಿಯಲ್ಲಿ ನೀಡಲಾಗಿದೆ. ಅದರಲ್ಲಿರುವ ಒಂದು ಅಧ್ಯಾಯದಲ್ಲಿ ಮೂತ್ರಚಿಕಿತ್ಸೆ, ಗೋಮೂತ್ರ ಚಿಕಿತ್ಸೆ, ಶಂಖ ಚಿಕಿತ್ಸೆ, ತೈಲ ಚಿಕಿತ್ಸೆ, ಚುಟ್ಕಿ ಚಿಕಿತ್ಸೆ, ಸಿದ್ಧ ವೈದ್ಯ ಪದ್ಧತಿ, ಜ್ಯೂಸ್‌ ಚಿಕಿತ್ಸೆ ಇತ್ಯಾದಿ ಅಂಶಗಳಿವೆ. ಇವುಗಳಿಗೆ ನೀಡಲಾಗಿರುವ ವಿವರಣೆಗಳು ಅವೈಜ್ಞಾನಿಕವಾಗಿವೆ.

ಮೈಸೂರು ವಿವಿ ರೂಪಿಸಿರುವ ‘ವೈದ್ಯಕೀಯ ಸಮಾಜಶಾಸ್ತ್ರ’ ಪಠ್ಯವಿದು. ರೆಫರೆನ್ಸ್‌ ಪಟ್ಟಿಯಲ್ಲಿ ಕೆ.ಭೈರಪ್ಪ ಅವರ ‘ವೈದ್ಯಕೀಯ ಸಮಾಜಶಾಸ್ತ್ರ’ ಕೃತಿ ಇದೆ.

ಅವೈಜ್ಞಾನಿಕ ವಿಚಾರಗಳೇನು?

ಪ್ರಕೃತಿಯು ರೋಗನಿರೋಧಕ ಶಕ್ತಿಯನ್ನು ಮನುಷ್ಯನಿಗೆ ಆತನ ದೇಹದಲ್ಲಿಯೇ ಒದಗಿಸಿದೆ. ಅದೆಂದರೆ ಮೂತ್ರ. ಸಹಸ್ರಾರು ವರ್ಷಗಳಿಂದ ಯೋಗಿಗಳು ಮೂತ್ರ ಸೇವಿಸುತ್ತಿದ್ದರು ಎಂಬ ವಿಚಾರವಿದೆ. ಸಂಸ್ಕೃತ ಸಾಹಿತ್ಯ ನಿಧಿಯಲ್ಲಿ ‘ಶಿವಾಂಬು ಸಂಹಿತೆ’ಯಲ್ಲಿ ಈ ಬಗ್ಗೆ ಮಾಹಿತಿ ಇದೆ. ಬೈಬಲ್ ಗ್ರಂಥದಲ್ಲಿ “ನಿಮ್ಮ ಆರೋಗ್ಯ ರಕ್ಷಣೆಗಾಗಿ ನಿಮ್ಮ ದೇಹವನ್ನು ಅವಲಂಬಿಸಿ” ಎಂಬ ಉಲ್ಲೇಖವಿದೆ. ಆರ್ಮ್‌‌ಸ್ಟ್ರಾಂಗ್‌ರವರು ಬರೆದಿರುವ ‘ವಾಟರ್‌ ಆಫ್‌ ಲೈಫ್‌’ ಎಂಬ ಪುಸ್ತಕದಲ್ಲಿ ಈ ಬಗ್ಗೆ ವಿವರಣೆ ಇದೆ. ಮೂತ್ರ ಚಿಕಿತ್ಸೆಯಿಂದ ಅಂದರೆ ಸ್ವಮೂತ್ರ ಪಾನ ಮತ್ತು ಲೇಪನದಿಂದದಿಂದ ಸಿಹಿಮೂತ್ರ ರೋಗ, ಏಡ್ಸ್‌, ಕ್ಯಾನ್ಸರ್‌, ಕಣ್ಣು, ಕಿವಿ, ಹಲ್ಲು, ಚರ್ಮರೋಗಗಳನ್ನು ನಿಯಂತ್ರಿಸಬಹುದಾಗಿದೆ.

ಗೋಮೂತ್ರ ಚಿಕಿತ್ಸೆಯು ಪ್ರಕೃತಿ ಚಿಕಿತ್ಸೆಯ ಒಂದು ಭಾಗ. ಹಿಂದೂಗಳಲ್ಲಿ ಗೋಮೂತ್ರವನ್ನು ಸೇವಿಸುವುದು ಪವಿತ್ರವೆಂದು ತಿಳಿದಿರುವುದಿದೆ. ಅದನ್ನು ಧಾರ್ಮಿಕ ವಿಧಿವಿಧಾನಗಳಲ್ಲಿ ಸೇವಿಸುವುದಿದೆ. ಗೋವಿನ ಹಾಲು, ಮೊಸರು, ಬೆಣ್ಣೆ, ತುಪ್ಪ ಮತ್ತು ಮೂತ್ರದಿಂದ ಕೂಡಿದ ಪಂಚಗವ್ಯ ಹಿಂದೂಗಳಲ್ಲಿ ಹೆಚ್ಚು ಪರಿಚಿತ ಪದಾರ್ಥವಾಗಿದೆ. ಇದಕ್ಕೆ ಕ್ಯಾನ್ಸರ್‌, ಮೈಗ್ರೇನ್‌, ಅಸ್ತಮಾ, ಅರ್ಥೈಟಿಸ್, ಮಧುಮೇಹ ಮುಂತಾದ ರೋಗಗಳನ್ನು ನಿವಾರಣೆ ಮಾಡುವ ಶಕ್ತಿ ಇದೆ.- ಇತ್ಯಾದಿ ಅವೈಜ್ಞಾನಿಕವಾದ ಅಂಶಗಳನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ.

‘ಪ್ರಜಾವಾಣಿ’ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸಮಾಜಶಾಸ್ತ್ರ ಪಠ್ಯಕ್ರಮ ರಚನಾ ಮಂಡಳಿ ಅಧ್ಯಕ್ಷ ಪ್ರೊ.ಎ.ರಾಮೇಗೌಡ, “ಎನ್‌ಇಪಿ ಪಠ್ಯಕ್ರಮದಂತೆ ಆರೋಗ್ಯ ಸಮಾಜಶಾಸ್ತ್ರ ಪರಿಚಯಿಸಲಾಗಿದೆ. ಆದರೆ ಪೂರ್ಣ ಪಠ್ಯಕ್ರಮ ಅಂತಿಮವಾಗಿಲ್ಲ. ಲೇಖಕರು ಏಕೆ ಹಾಗೆ ಬರೆದಿದ್ದಾರೆ ಎನ್ನುವ ಮಾಹಿತಿ ಇಲ್ಲ” ಎಂದಿದ್ದಾರೆ.

ಆದರೆ ಈಗ ಸಾರ್ವಜನಿಕವಾಗಿ ಲಭ್ಯವಿರುವ ಮೈಸೂರು ವಿವಿ ಪಠ್ಯದಲ್ಲಿ ಪ್ರೊ.ಕೆ.ಭೈರಪ್ಪ ಅವರ ಕೃತಿಯನ್ನು ರೆಫರೆನ್ಸ್ ಆಗಿ ನೀಡಿದ್ದು ಹೇಗೆ? ಇದರಲ್ಲಿ ಅವೈಜ್ಞಾನಿಕ ವಿಷಯಗಳಿವೆ ಎಂಬ ಎಚ್ಚರಿಕೆ ಪಠ್ಯ ರೂಪಿಸಿದವರಿಗೆ ಇರಲಿಲ್ಲವೇ? ಕನ್ನಡದಲ್ಲಿ ಪಠ್ಯವನ್ನು ಓದಲು ಬಯಸುವ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯವೇ ದಾರಿತಪ್ಪಿಸಿದಂತೆ ಅಲ್ಲವೇ? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ಶಿಕ್ಷಣತಜ್ಞರಾದ ಶ್ರೀಪಾದ್ ಭಟ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಅನೇಕ ವಿದ್ಯಾರ್ಥಿಗಳು ಇದನ್ನು ಓದುತ್ತಿದ್ದಾರೆ, ಈ ಪುಸ್ತಕದ ಅಧಿಕೃತವಾಗಿದೆಯೇ ಎಂದು ಕಾಲೇಜು ಶಿಕ್ಷಣ ಇಲಾಖೆಗೆ ಫೋನ್ ಮಾಡಿ ವಿಚಾರಿಸಿದರೆ ಅವರಿಂದ ಪ್ರತ್ಯುತ್ತರ ಬರಲಿಲ್ಲ. ಈ ಪುಸ್ತಕವನ್ನು ಅವರು ಅನುಮೋದಿಸಿದ್ದಾರೆಯೇ? ಹೌದಾಗಿದ್ದರೆ ಯಾವ ಆಧಾರದಲ್ಲಿ? ಇಲ್ಲ ಎಂದಾದರೆ ಸಂಬಂಧಿಸಿದ ಲೇಖಕರು ಈ ಪುಸ್ತಕದ ಮುಖಪುಟದ ಮೇಲೆ ಮೈಸೂರು ವಿವಿ, 5ನೇ ಸೆಮಿಸ್ಟರ್, ಎನ್‌ಇಪಿ ಇತ್ಯಾದಿ ಹೇಗೆ ಬರೆಯಲು ಸಾಧ್ಯವಾಯಿತು? ನಿಮ್ಮ ಕ್ರಮವೇನು? ಎನ್ನುವ ಪ್ರಶ್ನೆಗೆ ಉತ್ತರಗಳಿಲ್ಲ” ಎಂದು ತಿಳಿಸಿದ್ದಾರೆ.

ಮೈಸೂರು ವಿವಿ ಸಮಾಜಶಾಸ್ತ್ರ ಪ್ರಾಧ್ಯಾಪಕಿಯೊಬ್ಬರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಪ್ರಾಧ್ಯಾಪಕರೆಲ್ಲರೂ ಇದನ್ನೇ ಚರ್ಚೆ ಮಾಡುತ್ತಿದ್ದೇವೆ. ರೆಫರೆನ್ಸ್ ಕೊಟ್ಟು ಇದರಲ್ಲಿ ಪಾಠ ಮಾಡಿ ಎಂದರೆ ಏನರ್ಥ? ನಾವು ಯಾವುದನ್ನು ರೆಫರ್‌ ಮಾಡುತ್ತೇವೆ ಎಂಬುದು ನಮ್ಮ ವಿವೇಚನೆಗೆ ಬಿಟ್ಟಿರುತ್ತದೆ ಎಂಬುದೂ ನಿಜ. ಆದರೆ ನೂತನ ಪಠ್ಯದ ಹೆಸರಲ್ಲಿ ಯಾವುದೋ ಪಕ್ಷದ ಸಿದ್ಧಾಂತವನ್ನು ಹೇರುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಕನ್ನಡದಲ್ಲಿ ಓದುವ ವಿದ್ಯಾರ್ಥಿಗಳು ಈ ಪುಸ್ತಕವನ್ನೇ ಖರೀದಿಸಿದರೆ ಕಷ್ಟವಾಗುತ್ತದೆ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: ತಮಿಳು ವೀರರನ್ನು ಎರವಲು ತಂದು ಇಲ್ಲದ ‘ಉರಿಗೌಡ, ನಂಜೇಗೌಡ’ರನ್ನು ಸೃಷ್ಟಿಸಿದ ವಾಟ್ಸಾಪ್‌ ವಿವಿ!

ಸಮಾಜದ ಭಾವನೆಗಳನ್ನು ಉಲ್ಲೇಖಿಸಿದ್ದೇನೆ: ಪ್ರೊ.ಕೆ.ಭೈರಪ್ಪ

‘ವೈದ್ಯಕೀಯ ಸಮಾಜಶಾಸ್ತ್ರ’ ಕೃತಿಯ ಲೇಖಕರಾದ ಪ್ರೊ.ಕೆ.ಭೈರಪ್ಪ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದರು. “ನಾನು ಎಲ್ಲವನ್ನೂ ಮುಕ್ತವಾಗಿ ನೋಡುತ್ತೇನೆ. ನನಗಿಂತ ಕಿರಿಯರು ಹೇಳಿದ್ದನ್ನೂ ಸ್ವೀಕರಿಸುತ್ತೇನೆ. ಭಾರತೀಯ ಸಮಾಜದಲ್ಲಿ ಈ ರೀತಿಯ ಭಾವನೆಗಳಿವೆ ಎಂದು ಉಲ್ಲೇಖಿಸಿದ್ದೇನೆ. ಹಾಗೆಂದು ನಾನು ಬರಿದ್ದದ್ದೇ ಅಂತಿಮವೆಂದು ಹೇಳುತ್ತಿಲ್ಲ. ಈಗಾಗಲೇ ಇರುವ ಹಲವು ಕೃತಿಗಳಲ್ಲಿನ ಉಲ್ಲೇಖಗಳನ್ನು ಆಧರಿಸಿ ಈ ಪುಸ್ತಕ ಬರೆದಿದ್ದೇನೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಥರದ ಪ್ರಾಜ್ಞರೇ ಸ್ವಮೂತ್ರ ಚಿಕಿತ್ಸೆಯನ್ನು ಅನುಸರಿಸಿದ ಉದಾಹರಣೆಗಳಿವೆ. ಅದನ್ನು ಕೃತಿಯಲ್ಲಿ ಉಲ್ಲೇಖಿಸಿದ್ದೇನೆ” ಎಂದು ವಿವರಿಸಿದರು.

“ಮೆಡಿಕಲ್ ಸೋಷಿಯಾಲಜಿ ಬಗ್ಗೆ ಬರೆಯುವಾಗ ಬೆಂಗಳೂರು ವಿವಿಯ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರನ್ನು ಭೇಟಿಯಾಗಿ ಅಗತ್ಯವಾಗಿ ಬೇಕಾದ ಆಕರ ಕೃತಿಗಳನ್ನು ಪಡೆದಿದ್ದೇನೆ. ಮೈಸೂರು ವಿವಿ ಸಿಲಬಸ್‌ನಲ್ಲಿ ಪಟ್ಟಿ ಮಾಡಲಾದ ಕೃತಿಗಳನ್ನು ರೆಫರ್‌ ಮಾಡಿದ್ದೇನೆ. ಇಲ್ಲಿ ಕೃತಿಯಲ್ಲಿ ಬರೆದಿರುವುದೆಲ್ಲವೂ ಅಧಿಕೃತ ಎನ್ನಲು ಸಾಧ್ಯವಿಲ್ಲ. ನನಗೆ ತೋಚಿದ ರೀತಿಯಲ್ಲಿ, ರೆಫರೆನ್ಸ್‌ ಮಾಡಿದ್ದನ್ನು ಆಧರಿಸಿ ಬರೆದಿದ್ದೇನೆ. ಜಾನಪದೀಯ, ಸಾಂಪ್ರದಾಯಿಕ ಔಷಧಿಗಳ ಕುರಿತು ಬರೆಯುತ್ತಾ ಇವುಗಳನ್ನು ಉಲ್ಲೇಖಿಸಿದ್ದೇನೆ. ಸಮಾಜದಲ್ಲಿ ಈ ಆಚರಣೆಗಳು, ಭಾವನೆಗಳಿವೆ ಎಂಬುದನ್ನು ಹೇಳಲು ಯತ್ನಿಸಿದ್ದೇನೆ. ಇವು ಅವೈಜ್ಞಾನಿವಾಗಿವೆಯೇ ಎಂಬುದನ್ನು ಚರ್ಚಿಸಬೇಕಿದೆ. ಆದರೆ ಇವುಗಳನ್ನು ಉಲ್ಲೇಖಿಸುವುದೇ ಅಪರಾಧವೇ?” ಎಂದು ಪ್ರಶ್ನಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...