ಏರ್ ಇಂಡಿಯಾ ಮಾರಾಟ ಮಾಡುತ್ತಿರುವುದು ನಿಜವಾಗಿಯೂ ಟಾಟಾ ಕಂಪೆನಿಗೆ ನೀಡಿರುವ ಉಡುಗೊರೆಯಾಗಿದೆ ಎಂದು ಭಾರತೀಯ ಕಮ್ಯುನಿಷ್ಟ್ ಪಕ್ಷ(ಮಾರ್ಕ್ಸ್ವಾದಿ)ದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೊಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಅಧಿಕಾರಕ್ಕೆ ಏರಿದ ನಂತರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಲೆ ಬರುತ್ತಿದೆ. ಈ ಪಟ್ಟಿಗೆ ಹೊಸದಾಗಿ ಏರ್ ಇಂಡಿಯಾ ಕೂಡಾ ಸೇರಿಕೊಂಡಿದೆ. ಟಾಟಾ ಕಂಪೆನಿಯಿಂದಲೇ ಪ್ರಾರಂಭವಾಗಿದ್ದ ಏರ್ ಇಂಡಿಯಾ(ಆಗ ಅದಕ್ಕೆ ಟಾಟಾ ಏರ್ಲೈನ್ಸ್ ಎಂದು ಹೆಸರಿತ್ತು) ಉದ್ದಿಮೆಯನ್ನು ಸರ್ಕಾರವು ಈ ಹಿಂದೆ ರಾಷ್ಟ್ರೀಕರಣಗೊಳಿಸಿತ್ತು. ಇದೀಗ ಮತ್ತೆ ಐದು ದಶಕಗಳ ನಂತರ ಏರ್ ಇಂಡಿಯಾ ಟಾಟಾ ಕಂಪೆನಿಯ ತೆಕ್ಕೆಗೆ ಸೇರುತ್ತಿದೆ.
ಇದನ್ನೂ ಓದಿ: ಮತ್ತೊಂದು ಉದ್ದಿಮೆಯನ್ನು ಕೈಚೆಲ್ಲಿದ ಸರ್ಕಾರ: ಟಾಟಾ & ಸನ್ಸ್ ತೆಕ್ಕೆಗೆ ಏರ್ ಇಂಡಿಯಾ
ಏರ್ ಇಂಡಿಯಾವನ್ನು ಪಡೆಯಲು ಟಾಟಾ ಕಂಪೆನಿಯು 18,000 ಕೋಟಿ ಮೊತ್ತವನ್ನು ಬಿಡ್ ಮಾಡಿದ್ದು, ಒಕ್ಕೂಟ ಸರ್ಕಾರ ಇದನ್ನು ಸ್ವೀಕರಿಸಿದೆ. ಸರ್ಕಾರ ಬಿಡಿ ಸ್ವೀಕರಿಸಿರುವುದನ್ನು ರತನ್ ಟಾಟಾ ಕಳೆದ ಶುಕ್ರವಾರ ಸ್ವಾಗತಿಸಿದ್ದರು.
ಏರ್ ಇಂಡಿಯಾ ಮತ್ತೆ ಟಾಟಾ ಕಂಪೆನಿಗೆ ಸೇರುತ್ತಿರುವುದಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, “ಒಕ್ಕೂಟ ಸರ್ಕಾರ ಏರ್ ಇಂಡಿಯಾ ಮಾರಾಟ ಮಾಡುತ್ತಿರುವುದು ಟಾಟಾ ಕಂಪೆನಿಗೆ ನೀಡಿರುವ ಉಡುಗೊರೆಯಾಗಿದೆ. ಇದು ಹೆದ್ದಾರಿಯಲ್ಲಿ ಹಾಡ ಹಗಲೇ ನಡೆಯುತ್ತಿರುವ ದರೋಡೆಯಾಗಿದೆ” ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಲಖಿಂಪುರ್ ಖೇರಿ ಹತ್ಯಾಕಾಂಡದ ಬಗ್ಗೆಯು ಆಕ್ರೋಶ ವ್ಯಕ್ತಪಡಿಸಿದ ಯಚೂರಿ, “ಸಚಿವ ಅಜಯ್ ಮಿಶ್ರಾ ಅವರನ್ನು ತಕ್ಷಣವೇ ವಜಾಗೊಳಿಸಬೇಕು. ಅವರ ಭಾಷಣಗಳು ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸೆಗೆ ಪ್ರಚೋದನೆಯಾಗಿತ್ತು. ಅವರ ಮಗ ಆರೋಪಿಯಾಗಿದ್ದಾಗ ಕೂಡಾ ಅವರು ಸಚಿವರಾಗಿ ಉಳಿದುಕೊಂಡಿದ್ದಾರೆ. ಇದರಿಂದ ನ್ಯಾಯ ಸಿಗಲು ಸಾಧ್ಯವಿಲ್ಲ” ಎಂದು ಅವರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
P.B. Communique
The Polit Bureau of the Communist Party of India (Marxist) met at New Delhi on October 9-10, 2021. It has issued the following communique:https://t.co/4kqn1tXKZl
— CPI (M) (@cpimspeak) October 11, 2021
ಇದನ್ನೂ ಓದಿ: ಟೆಲಿಕಾಂನಿಂದ ಬಾಕಿ ಹಣ: ಸರ್ಕಾರದಿಂದ BSNLಗೆ ನಾಮ, ಏರ್ಟೆಲ್, ವೊಡಾ ಮೇಲೇಕೆ ಪ್ರೇಮ?