ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಎಬಿಪಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ”ಭಾರತವು ಹಿಂದೂ ರಾಷ್ಟ್ರ ಏಕೆಂದರೆ ದೇಶದ ಎಲ್ಲಾ ನಾಗರಿಕರು ಹಿಂದೂಗಳು” ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೇ ಅವರು ಟ್ವಿಟರ್ನಲ್ಲಿ ಸಂದರ್ಶನದ ಕ್ಲಿಪ್ನ್ನು ಸಹ ಹಂಚಿಕೊಂಡಿದ್ದಾರೆ.
ಹಿಂದೂಗಳೇ ಪರಮಾಧಿಕಾರ ಹೊಂದುವುದನ್ನು ಹಿಂದೂ ರಾಷ್ಟ್ರ ಬಯಸುತ್ತದೆ. ಅವರ ಪ್ರಕಾರ, ಭಾರತದ ಜಾತ್ಯತೀತ ಸಂವಿಧಾನವನ್ನು ಕಿತ್ತುಹಾಕುವ ಮೂಲಕ ಮತ್ತು ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ಕಂಟ್ರೋಲ್ ಮಾಡುವ ಅಧಿಕಾರವನ್ನು ಹಿಂದೂಗಳಿಗೆ ನೀಡುವ ಮೂಲಕ ಹಿಂದೂ ರಾಷ್ಟ್ರ ರಚಿಸುವುದಾಗಿದೆ.
ಆದಿತ್ಯನಾಥ್ ಅವರು, ಹಿಂದೂ ಎನ್ನುವುದು ಒಂದು ನಂಬಿಕೆ, ಧರ್ಮ ಅಥವಾ ಪಂಥಕ್ಕೆ ಸಂಬಂಧಿಸಿದ್ದಲ್ಲ, ಇದು ಸಾಂಸ್ಕೃತಿಕ ಪದವಾಗಿದೆ ಎಂದು ವಾದಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಕೊಲೆಗೆ ಕರೆ ನೀಡಿದ ಅಶ್ವತ್ಥ ನಾರಾಯಣ ವಿರುದ್ಧ ರಾಜ್ಯಾದ್ಯಂತ ಖಂಡನೆ ವ್ಯಕ್ತ
”ಭಾರತದಿಂದ ಯಾರಾದರೂ ಹಜ್ಗೆ ಹೋದರೆ, ಅವರನ್ನು ಅಲ್ಲಿ ಹಿಂದೂ ಎಂದು ಸಂಬೋಧಿಸುತ್ತಾರೆ. ಅಲ್ಲಿ ಯಾರೂ ಅವರನ್ನು ಹಾಜಿ ಎಂದು ನೋಡುವುದಿಲ್ಲ, ಯಾರೂ ಅವರನ್ನು ಇಸ್ಲಾಂ ಎಂದು ಸ್ವೀಕರಿಸುವುದಿಲ್ಲ, ಅಲ್ಲಿ ಅವರನ್ನು ಹಿಂದೂ ಎಂಬ ಹೆಸರಿನಿಂದ ಸಂಬೋಧಿಸಲಾಗುತ್ತದೆ. ಆ ಸಂದರ್ಭವನ್ನು ನೋಡಿದರೆ, ಭಾರತವು ಹಿಂದೂ ರಾಷ್ಟ್ರವಾಗಿದೆ, ಏಕೆಂದರೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಹಿಂದೂವಾಗಿದ್ದಾನೆ” ಎಂದು ಮುಖ್ಯಮಂತ್ರಿ ಎಬಿಪಿಗೆ ತಿಳಿಸಿದರು.
भारत हिंदू राष्ट्र है, क्योंकि भारत का हर नागरिक हिंदू है।
भारत हिंदू राष्ट्र था, है और आगे भी रहेगा… pic.twitter.com/e8k6ieW7YJ
— Yogi Adityanath (@myogiadityanath) February 15, 2023
ಭಾರತದಲ್ಲಿ ಜನಿಸಿದ ಪ್ರತಿಯೊಬ್ಬರನ್ನು ಹಿಂದೂಗಳು ಎಂದು ಕರೆಯಲಾಗುತ್ತದೆ ಮತ್ತು ಪ್ರತಿಯೊಬ್ಬರು ತಮ್ಮನ್ನ ತಾವು ಅದೇ ದೃಷ್ಟಿಕೋನದಲ್ಲಿ ನೋಡಿದರೆ, ಅವರಿಗೆ ಅದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಆದಿತ್ಯನಾಥ್ ಹೇಳಿದರು.
”ನಾವು ಹಿಂದೂವನ್ನು ಧರ್ಮ, ನಂಬಿಕೆ ಮತ್ತು ಪಂಥದೊಂದಿಗೆ ಜೋಡಿಸಿದರೆ, ನಾವು ಹಿಂದೂ ಪದವನ್ನು ಅರ್ಥಮಾಡಿಕೊಳ್ಳುವಲ್ಲಿ ತಪ್ಪು ಮಾಡುತ್ತಿದ್ದೇವೆ ಎಂದು ಅರ್ಥ..” ಎಂದು ಆದಿತ್ಯನಾಥ್ ಹೇಳಿದರು. ಇದೇ ವೇಳೆ ಅವರು, “ಪ್ರತಿಯೊಬ್ಬ ಭಾರತಿಯನು ಸಂವಿಧಾನದ ಬಗ್ಗೆ ಅತ್ಯುನ್ನತ ಗೌರವವನ್ನು ಹೊಂದಿರಬೇಕು, ಅದು ನಮ್ಮ ಮಾರ್ಗದರ್ಶಿಯಾಗಿದೆ” ಎಂದು ಹೇಳುತ್ತಾರೆ.
”ಅಖಂಡ ಭಾರತ” ಕಲ್ಪನೆಯು ನಿಜವಾಗಲಿದ್ದು, ಪಾಕಿಸ್ತಾನವು ಅಂತಿಮವಾಗಿ ಭಾರತದೊಳಗೆ ಸೇರಿಕೊಳ್ಳುತ್ತದೆ ಎಂದು ಸಂದರ್ಶನದಲ್ಲಿ ಆದಿತ್ಯನಾಥ್ ಹೇಳಿದ್ದಾರೆ.
”ಅಖಂಡ ಭಾರತ” ಎಂಬುದು ಹಿಂದುತ್ವವಾದಿಗಳು ಪ್ರತಿಪಾದಿಸುವ ಪರಿಕಲ್ಪನೆಯಾಗಿದೆ. ಇದು ನೆರೆಯ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು ಭಾರತದ ಭಾಗವಾಗಲಿದೆ ಎಂದು ಹೇಳುತ್ತದೆ.
”ಆಧ್ಯಾತ್ಮಿಕ ಜಗತ್ತಿನಲ್ಲಿ ಪಾಕಿಸ್ತಾನವು ವಾಸ್ತವವಲ್ಲ, ಆ ದೇಶ ಇಷ್ಟು ದಿನ ಬದುಕಿರುವುದೇ ಅದೃಷ್ಟದಿಂದ.. ಅದು ಇರುವವರೆಗೂ ಭೂಮಿಗೆ ಹೊರೆಯಾಗಲಿದೆ. ಶೀಘ್ರದಲ್ಲೇ ಭಾರತಕ್ಕೆ ಸೇರುವುದು ಪಾಕಿಸ್ತಾನದ ಆಸಕ್ತಿಯಾಗಿದೆ” ಎಂದು ಸಂದರ್ಶನದಲ್ಲಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.