ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿರುವುದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಎಸ್ವೈ ಮತ್ತು ವಿಜಯೇಂದ್ರ ವಿರುದ್ದ ಯತ್ನಾಳ್ ಮತ್ತೊಮ್ಮೆ ಕಿಡಿಕಾರಿದ್ದಾರೆ.
ವಿಜಯಪುರದ ಆನಂದ ನಗರದಲ್ಲಿ ಶುಕ್ರವಾರ ರಾತ್ರಿ ನಡೆದ ದಾನಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಯತ್ನಾಳ್, “ಮೊದಲು ಮಾಜಿ ಮುಖ್ಯಮಂತ್ರಿ ಅಂತಿದ್ದರು. ಮುಖಭಂಗ ಆಗುತ್ತೆ ಅಂತ ಈಗ ನಿಕಟಪೂರ್ವ ಎಂದು ಹೇಳುತ್ತಿದ್ದಾರೆ. ಅಪ್ಪ, ಮಗ ನಾಟಕ ಮಾಡಬೇಡಿ ಅಂತ ನಾನು ಈ ಹಿಂದೆಯೇ ಹೇಳಿದ್ದೆ. ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕೆಂದು ನಾಟಕ ಮಾಡೋದು. ಯಾಕಂದ್ರೆ ಆ ಖುರ್ಚಿ ಬಿಡಬಾರದು ಅಂತ. ಇನ್ನು ಏನಾದರೂ ಉಳಿದಿದ್ದರೆ ನಿಮ್ಮ ಮನೆಯ ಬೆಕ್ಕುಗಳಿಗೆ ಕೊಟ್ಟು ಬಿಡಿ ಎಂದು ಹೇಳಿದ್ದೇನೆ. ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಎಂದು ಮಾಡಿಕೊಳ್ಳಲಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನನ್ನನ್ನು ಹೆದರಿಸಬೇಕು ಎಂದು ಬ್ಲ್ಯಾಕ್ಮೇಲ್ ಮಾಡ್ತಾರೆ. ನನ್ನನ್ನು ಬ್ಲ್ಯಾಕ್ಮೇಲ್ ಮಾಡಲು ಬಂದ್ರೆ ನಿಮ್ಮದು ನನ್ನ ಬಳಿ ಇದೆ” ಎಂದು ಯತ್ನಾಳ್ ಎಚ್ಚರಿಕೆ ಕೊಟ್ಟಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ಬಳಗದ ವಿರುದ್ಧ ವಾಗ್ದಾಳಿ ನಡೆಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ, “ನಾನು ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವ. ಇವರೆಲ್ಲ ಬರುವ ಮುಂಚೆ ನಾನು ಕೇಂದ್ರ ಸಚಿವನಾಗಿದ್ದೆ. ಆದರೆ, ಈಗ ನನ್ನನ್ನು ಸರಿಯಾಗಿ ಪರಿಗಣಿಸುತ್ತಿಲ್ಲ” ಎಂಬ ದಾಟಿಯಲ್ಲಿ ಆಗಾಗ ಅಸಮಾಧಾನ ಹೊರ ಹಾಕುತ್ತಿದ್ದರು.
“ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತಾರೆ. ಮುಖ್ಯಮಂತ್ರಿ ಬದಲಾಗುತ್ತಾರೆ” ಎಂದು ಯತ್ನಾಳ್ ಆಗಾಗ ಹೇಳುತ್ತಿದ್ದರು. ಅದರಂತೆ, ಅವಧಿಗೂ ಮುನ್ನವೇ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಹೈಕಮಾಂಡ್ ಕೆಳಗಿಳಿಸಿತು. ಬಳಿಕ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಬದಿಗಿರುಸುತ್ತಾ ಹೋಯಿತು. ಆದರೆ, ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಯಡಿಯೂರಪ್ಪ ಇಲ್ಲದೆ ಏನೂ ನಡೆಯದು ಎಂದು ಅರಿತು ಅವರ ಮಗನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆ. ಈ ಮೂಲಕ ಲೋಕಸಭೆ ಚುನಾವಣೆ ಗೆಲ್ಲುವ ಪ್ಲಾನ್ ಮಾಡಿದೆ.
ಈ ಬೆಳವಣಿಗೆಯಿಂದ ಯತ್ನಾಳ್ ನಿಗಿ ನಿಗಿ ಕೆಂಡದಂತಾಗಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಆದ ಬೆನ್ನಲ್ಲೇ ಕಾಲಿಗೆ ಚಕ್ರ ಕಟ್ಟಿಕೊಂಡ ರೀತಿ ಓಡಾಡಿ ಅಸಮಾಧಾನಿತ ನಾಯಕರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದ್ದರು. ಅವರು ಯತ್ನಾಳ್ ಮನೆಗೂ ಹೋಗುವವರಿದ್ದರು. ಆದರೆ, ‘ಯತ್ನಾಳ್ ನನ್ನ ಮನೆಗೆ ಬರಬೇಡ’ ಎಂದು ನೇರವಾಗಿ ಹೇಳಿದ್ದರು.
ಇದನ್ನೂ ಓದಿ : 10 ವರ್ಷಗಳಲ್ಲಿ ಶೇ.50 ಮಹಿಳಾ ಮುಖ್ಯಮಂತ್ರಿ ಕಾಂಗ್ರೆಸ್ ಗುರಿ: ರಾಹುಲ್ ಗಾಂಧಿ