Homeಕರ್ನಾಟಕಶಾಂತಿ-ಸೌಹಾರ್ದತೆ ಉದ್ದೀಪಿಸಲು ಉಡುಪಿಯಲ್ಲಿ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶ

ಶಾಂತಿ-ಸೌಹಾರ್ದತೆ ಉದ್ದೀಪಿಸಲು ಉಡುಪಿಯಲ್ಲಿ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶ

- Advertisement -
- Advertisement -

ಮುಸ್ಲಿಂ ಹೆಣ್ಣು ಮಕ್ಕಳು ತರಗತಿ ಕೊಠಡಿಗಳಿಗೆ ಹಿಜಾಬ್ ಧರಿಸಿ ಬರಬಾರದೆಂಬ ವಿವಾದವನ್ನು ಉಡುಪಿಯಲ್ಲಿ ಹುಟ್ಟುಹಾಕಿದ ನಂತರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಆ ನಂತರ ಕಾಲೇಜುಗಳು ಮತ್ತೆ ಆರಂಭವಾದಾಗ ವಿವಿಧ ಮುಸ್ಲಿಮೇತರ ಸಮುದಾಯದ ಹೆಣ್ಣುಮಕ್ಕಳು ಹಿಜಾಬ್ ಧರಿಸಿದ ಮುಸ್ಲಿಂ ಬಾಲಕಿಯ ಕೈಹಿಡಿದು ಶಾಲೆ ಪ್ರವೇಶಿಸಿದ ಫೋಟೋವೊಂದು ವೈರಲ್ ಆಗಿತ್ತು. ಇರ್ಷಾದ್ ಮೊಹಮ್ಮದ್ ತೆಗೆದ ಆ ಚೆಂದದ ಫೋಟೋವನ್ನು ‘Unity in Diversity’ ಶೀರ್ಷಿಕೆಯಡಿ ಡೆಕ್ಕನ್ ಹೆರಾಲ್ಡ್ ಪ್ರಕಟಿಸಿತ್ತು. ಈ ಜಾತಿ ಧರ್ಮದ ದ್ವೇಷ ದೊಡ್ಡವರು ಮಾಡಬಹುದು, ಆದರೆ ನಾವು ಎಳೆಯರು, ನಾವು ಗೆಳೆಯರು ನಮ್ಮಲ್ಲಿ ಅದಕ್ಕೆ ಅವಕಾಶವಿಲ್ಲವೆಂಬ ಸಂದೇಶವನ್ನು ಆ ಪುಟ್ಟ ಮಕ್ಕಳು ಸಾರಿದ್ದರು. ’ಇದು ನನ್ನ ಭಾರತ’ ಎಂದು ಸಾವಿರಾರು ಜನರು ಆ ಫೋಟೊವನ್ನು ಹಂಚಿಕೊಂಡಿದ್ದರು.

ಈ ರೀತಿಯ ಶಾಂತಿ ಸಹಬಾಳ್ವೆ ಸಾಮರಸ್ಯ ಸಾಮಾನ್ಯ ಜನರಲ್ಲಿ ಹಾಸುಹೊಕ್ಕಾಗಿದೆ. ಆದರೆ ದ್ವೇಷದ ಮೂಲಕ ರಾಜಕೀಯ ಲಾಭ ಪಡೆಯಲು ಹವಣಿಸುವವರು ಅಂತಹ ಸಾಮರಸ್ಯಕ್ಕೆ ಗಲಭೆಗಳ ಮೂಲಕ ಹುಳಿಹಿಂಡಲು ಪದೇಪದೇ ಪ್ರಯತ್ನಿಸುತ್ತಿದ್ದಾರೆ. ಅಧಿಕಾರದಲ್ಲಿರುವ ಸರ್ಕಾರವೇ ಅಂತಹ ಕೆಲಸಕ್ಕೆ ಕುಮ್ಮಕ್ಕು ನೀಡಿದರೆ ಏನಾಗಬಹುದು ಎಂಬುದಕ್ಕೆ ನಮ್ಮ ಕರ್ನಾಟಕ ಸಾಕ್ಷಿಯಾಗಿದೆ. ಉಡುಪಿಯ ಕಾಪುವಿನಲ್ಲಿ ಮಾರಿಗುಡಿ ಜಾತ್ರೆಯ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶವಿಲ್ಲ ಎಂಬ ಬ್ಯಾನರ್ ಹಾಕುವ ಮೂಲಕ ಬಿಜೆಪಿ ಬೆಂಬಲಿತ ಸಂಘಪರಿವಾರದ ಸಂಘಟನೆಗಳು ಕೋಮು ಧ್ರುವೀಕರಣ ಮತ್ತು ದ್ವೇಷ ಹುಟ್ಟುಹಾಕುವ ಪ್ರಕ್ರಿಯೆಗೆ ಮುಂದಾಗಿದ್ದವು. ಆದರೆ ಜಾತ್ರೆಗೆ ಬಂದಿದ್ದ ಭಕ್ತಾದಿಗಳು ಸಂಘಪರಿವಾರದ ಬೆದರಿಕೆಗಳಿಗೆ ಸೊಪ್ಪು ಹಾಕದೆ ಮುಸ್ಲಿಂ ವ್ಯಾಪಾರಿಗಳೊಂದಿಗೆ ವ್ಯಾಪಾರ ಮಾಡಿದರು. ಜಾತ್ರೆಯ ’ವಾಲಗ ಚಾಕರಿ’ಯನ್ನು ಸಂಪ್ರದಾಯದಂತೆ ಮುಸ್ಲಿಂ ಸಮುದಾಯದ ವ್ಯಕ್ತಿಗಳೆ ನಡೆಸಿಕೊಟ್ಟರು. ಎರಡು ದಿನವೂ ವಾಲಗ ಊದಿ ’ತುಳುನಾಡಿನ ಪರಂಪರೆ’ಯನ್ನು ಎತ್ತಿಹಿಡಿದರು.

ಈ ಎರಡು ಪ್ರಕರಣಗಳು ತೋರಿಸುವುದೇನೆಂದರೆ ಸರ್ಕಾರವೂ ಸೇರಿಕೊಂಡು, ಸಂಘಪರಿವಾರ, ಮುಖ್ಯವಾಹಿನಿ ಮಾಧ್ಯಮಗಳು ಎಷ್ಟೇ ದ್ವೇಷ ಹರಡಲು ಮುಂದಾದರೂ ಈ ನಾಡಿನ ಸಮುದಾಯಗಳ ಬಹುಸಂಖ್ಯೆಯ ಜನರಿಗೆ ಅದು ಬೇಕಾಗಿಲ್ಲ. ಏಕೆಂದರೆ ನಿತ್ಯವೂ ಅವರ ಬದುಕು ಬವಣೆ ನೂರಾರು ಜನರೊಂದಿಗೆ, ಹಲವು ಸಮುದಾಯಗಳೊಂದಿಗೆ ಹೆಣೆದುಕೊಂಡಿದೆ. ಹಾಗಾಗಿ ಅವರ ನಡುವೆ ಕೊಡುಕೊಳ್ಳುವಿಕೆ ಇಲ್ಲದೆ ಬದುಕು ಸಪ್ಪೆಯಾಗುತ್ತದೆ, ಮತ್ತು ಕೆಲವು ಕಡೆಗೆ ಅದು ವಿನಾಶಕ್ಕೂ ಎಡೆಮಾಡಿಕೊಡುತ್ತದೆ. ಕೊಡು-ಕೊಳ್ಳುವಿಕೆಯ ಸಂಪ್ರದಾಯದ ಪರಿಕಲ್ಪನೆಗಳಲ್ಲೀ ಸೌಹಾರ್ದತೆ-ಸಹಬಾಳ್ವೆಯೂ ಸೇರಿಕೊಂಡಿದೆ. ಆದನ್ನು ಮತ್ತಷ್ಟು ಉದ್ದೀಪನಗೊಳಿಸುವ ಪ್ರಯತ್ನದ ಭಾಗವಾಗಿ ಮೇ 14 ರಂದು ಉಡುಪಿಯಲ್ಲಿ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶ ನಡೆಯುತ್ತಿದೆ.

’ಇದು ಬಹಳ ಮೇಲ್ಮಟ್ಟದ ಪರೀಕ್ಷೆ ಅಂದುಕೊಂಡರೂ, ಮುಸ್ಲಿಂ ಸಮುದಾಯವನ್ನು ದ್ವೇಷಿಸುವ ಯುವಕ-ಯುವತಿಯರೆ, ನಿಮಗೆ ವೈಯಕ್ತಿಕವಾಗಿ ಮೋಸ, ಅನ್ಯಾಯ ಮಾಡಿದ ಹತ್ತು ಜನರ ಹೆಸರು ಪಟ್ಟಿಮಾಡಿ ನೋಡಿ. ಅದರಲ್ಲಿ ಮುಸ್ಲಿಮರ ಹೆಸರು ಇರುವುದಕ್ಕಿಂತಲೂ, ನಿಮ್ಮದೆ ಧರ್ಮದ, ನಿಮ್ಮದೆ ಜಾತಿಯ ಜನರ ಹೆಸರುಗಳು ಹೆಚ್ಚು ಇರುತ್ತವೆ. ಹೀಗಿರುವಾಗ ಯಾರೋ ವಿಷ ಹರಡುವ ಇರಾದೆ ಹೊಂದಿರುವವರು ಹೇಳಿದ ಮಾತು ಕೇಳಿ ಮುಸ್ಲಿಮರನ್ನು ಏಕೆ ದ್ವೇಷಿಸುತ್ತೀರಿ? ಎಷ್ಟೋ ಬಾರಿ ನೀವು ಅವರೊಂದಿಗೆ ಒಡನಾಡಿಯಾಗಿರುವುದೇ ಇಲ್ಲ, ಅವರ ಆಚಾರ ವಿಚಾರದ ನೈಜ ದರ್ಶನ ನಿಮಗಾಗಿರುವುದಿಲ್ಲ. ಈ ಒಡನಾಟ ಸಾಧ್ಯವಾಗಿದ್ದರೆ ನೀವು ಅವರನ್ನು ಅಂದರೆ ಒಂದಿಡೀ ಜನಾಂಗವನ್ನು ದ್ವೇಷಿಸಲು ಸಾಧ್ಯವಾಗುವುದಿಲ್ಲ’ ಎಂದು ಗೆಳೆಯರೊಬ್ಬರು ನನಗೆ ಹೇಳಿದ್ದರು. ಅದು ಅಕ್ಷರಶಃ ನಿಜ ಎಂಬುದು ನನ್ನ ಅನುಭವ ಮತ್ತು ಅಭಿಮತ. ಉಡುಪಿಯ ಸಾಮರಸ್ಯ ಸಮಾವೇಶದಲ್ಲಿ ಸರ್ವಧರ್ಮಿಯರು, ಸಕಲ ಸಮುದಾಯದವರು ಬೆರೆತು ದ್ವೇಷ ಬಿತ್ತುವವರನ್ನು ಹಿಮ್ಮೆಟ್ಟಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಪರಸ್ಪರ ಒಡನಾಟವನ್ನು ಹೆಚ್ಚಿಸುವ ಇರಾದೆ ಕೂಡ ಈ ಸಮಾವೇಶಕ್ಕಿದೆ.

ಉಡುಪಿಯ ಅಜ್ಜರಕಾಡು ಹುತಾತ್ಮ ಚೌಕದಿಂದ ಮೇ 14ರ ಶನಿವಾರ ಮಧ್ಯಾಹ್ನ 2 ಗಂಟೆಗೆ ಸಾಮರಸ್ಯ ನಡಿಗೆ ಆರಂಭವಾಗಲಿದೆ. ಸಂಜೆ 4 ಗಂಟೆಗೆ ಕ್ರಿಶ್ಚಿಯನ್ ಶಾಲೆ ಮೈದಾನದಲ್ಲಿ ಸಹಬಾಳ್ವೆ ಸಮಾವೇಶ ನಡೆಯಲಿದೆ. ಸರ್ವಧರ್ಮಗಳ ಧರ್ಮಗುರುಗಳು ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಂ.ಡಿ ಪಲ್ಲವಿ ಮತ್ತು ತಂಡದವರು ಸೌಹಾರ್ದ ಗೀತೆಗಳನ್ನು ಹಾಡಲಿದ್ದಾರೆ.

ಯೋಗೇಂದ್ರ ಯಾದವ್, ಡಾ. ರೊನಾಲ್ಡ್ ಕೊಲಾಸೊ, ಶಶಿಕಾಂತ್ ಸೆಂಥಿಲ್, ಮಾವಳ್ಳಿ ಶಂಕರ್, ಆರ್ ಮೋಹನ್ ರಾಜ್, ಹೆಚ್.ಆರ್ ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಕೆ.ನೀಲಾ, ಡಾ. ಬೆಳಗಾಮಿ ಮುಹಮ್ಮದ್ ಸಾದ್, ಸಬೀಹ ಫಾತಿಮ ಮತ್ತು ನಜ್ಮಾ ಚಿಕ್ಕನೇರಳೆ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅತಿಥಿಗಳ ಪಟ್ಟಿಯಲ್ಲಿ ವಿವಾದಾತ್ಮಕ ವ್ಯಕ್ತಿ: ತೀವ್ರ ಟೀಕೆ ನಂತರ ಕೈಬಿಟ್ಟ ಸಮಿತಿ

ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ ಸಮಾವೇಶಕ್ಕೆ ಆರ್ಯ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮಿಯನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಬಲಪಂಥೀಯ ವಿಚಾರಗಳನ್ನು ಉಗ್ರ ರೂಪದಲ್ಲಿ ಪ್ರತಿಪಾದಿಸಿದ್ದ ವಿವಾದಾತ್ಮಕ ವ್ಯಕ್ತಿ. ಈ ಹಿಂದೆ ಯೋಗೇಶ್ ಮಾಸ್ಟರ್‌ರವರು ಡುಂಢಿ ಕಾದಂಬರಿ ಬರೆದಾಗ ದೂರು ನೀಡಿದವರಲ್ಲಿ ಒಬ್ಬರಾಗಿ ಅಸಹಿಷ್ಣುತೆಯನ್ನು ತೋರ್ಪಡಿಸಿದ್ದವರು. ಗೋಡ್ಸೆ ಪ್ರತಿಮೆ ನಿರ್ಮಾಣಕ್ಕೆ ಕರೆ ನೀಡಿದ್ದರು. ಹಿಂದೂ ಧರ್ಮದ ಉದ್ಧಾರಕ್ಕೆ ಮಹಿಳೆಯರು ಹತ್ತು ಮಕ್ಕಳು ಹೇರಬೇಕು ಎಂಬೆಲ್ಲಾ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಆರ್ಯ ಈಡಿಗ ಸಮುದಾಯವೇ ಅವರನ್ನು ತಮ್ಮ ಸ್ವಾಮಿಯೆಂದು ಒಪ್ಪಿಕೊಳ್ಳುವುದಿಲ್ಲ, ಅವರಿಂದ ಎಂತಹ ಸಹಬಾಳ್ವೆ ಭಾಷಣ ಕೇಳುವುದು ಎಂಬ ತೀಕ್ಷ್ಣ ಟೀಕೆಗಳು ಕೇಳಿಬಂದವು.

ಕೆ.ಎಲ್ ಅಶೋಕ್

ನಂತರ ಸಮಾವೇಶದ ಸಂಘಟನಾ ಸಮಿತಿಯು ಎಚ್ಚೆತ್ತುಕೊಂಡು ಸಭೆ ನಡೆಸಿ ಆ ವ್ಯಕ್ತಿಯನ್ನು ಅತಿಥಿಗಳ ಪಟ್ಟಿಯಿಂದ ಕೈಬಿಟ್ಟಿದ್ದಾರೆ. “ಕೂಲಂಕಷ ಚರ್ಚೆ ಮಾಡದೆ ಆಹ್ವಾನಿಸಿರುವ ತಪ್ಪು ಸಮಿತಿಯಿಂದ ನಡೆದಿರುವುದರಿಂದ, ಸಮಿತಿಯೇ ಕ್ಷಮೆ ಕೋರಿ, ವಿಷಾದ ವ್ಯಕ್ತಪಡಿಸಿ ಅವರನ್ನು ಸಮ್ಮೇಳನದಿಂದ ಕೈಬಿಡುತ್ತಿದೆ” ಎಂದು ಹೇಳಿಕೆ ನೀಡಿತು.

ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ

“ಸಾಮರಸ್ಯ-ಸಹಬಾಳ್ವೆ ಎಂಬುದು ಈ ನೆಲದ ಸಂಸ್ಕೃತಿ ಮತ್ತು ಪ್ರಕೃತಿಯ ಮೂಲಗುಣ. ತಮ್ಮದಲ್ಲದ ಧರ್ಮವನ್ನು ದ್ವೇಷಿಸುವುದು ಸಹಜವಲ್ಲ. ಅದನ್ನು ಉದ್ದೇಶಪೂರ್ವಕವಾಗಿ ಜನರ ಮನಸ್ಸಿನಲ್ಲಿ ಬಿತ್ತಲು ಪ್ರಯತ್ನಿಸಲಾಗುತ್ತಿದೆ. ಅದನ್ನು ಮೀರಿ ಎಲ್ಲಾ ಧರ್ಮಗಳ ಸಾರ ಪ್ರೀತಿ-ಕರುಣೆಯೊಂದೆ. ಅಲ್ಲದೆ ಯಾವುದೇ ಧರ್ಮ ಮೇಲಲ್ಲ, ಯಾವುದೂ ಕೀಳಲ್ಲ, ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಲ್ಲರೂ ಸಮಾನರು ಎಂಬುದನ್ನು ಸಾರಲು ಈ ಸಮಾವೇಶ ಹಮ್ಮಿಕೊಂಡಿದ್ದೇವೆ” ಎನ್ನುತ್ತಾರೆ ಸಮಾವೇಶದ ಸಂಘಟಕರಲ್ಲೊಬ್ಬರಾದ ಕೆ.ಎಲ್ ಅಶೋಕ್.

ಬಹುಸಂಖ್ಯಾತರ ಹೆಸರಿನಲ್ಲಿ ಕೋಮು ರಾಜಕೀಯ ಮಾಡಲು ಬಿಡುವುದಿಲ್ಲ

“ಕಳೆದ 5 ತಿಂಗಳುಗಳಲ್ಲಿ ಕರಾವಳಿಯ ಊರುಕೇರಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರ ನಿತ್ಯ ಬದುಕಿನ ಮೇಲೆ ದಬ್ಬಾಳಿಕೆ ತೀವ್ರವಾಗಿದೆ. ಇದು ಕೋಮುವಾದ ಶಿಖರ ತಲುಪಿದೆ ಎನ್ನುವುದರ ಸಂಕೇತವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ, ನಾಡಿನ ಅಲ್ಪಸಂಖ್ಯಾತ ಸಮುದಾಯ ಸಮಾಜದಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದೆ. ಹಾಗಾಗಿ ಅಲ್ಪಸಂಖ್ಯಾತರ ಜೊತೆ ನಾವಿದ್ದೇವೆ ಮತ್ತು ಬಹುಸಂಖ್ಯಾತರ ಹೆಸರಿನಲ್ಲಿ ಕೋಮು ರಾಜಕೀಯ ಮಾಡಲು ಬಿಡುವುದಿಲ್ಲ ಎಂದು ಸಾರಲು ಈ ಸಹಬಾಳ್ವೆ ಸಮಾವೇಶ ಹಮ್ಮಿಕೊಂಡಿದ್ದೇವೆ. ಎಲ್ಲಾ ಅಲ್ಪಸಂಖ್ಯಾತರ ಜೊತೆ ನಿಲ್ಲುತ್ತೇವೆ ಮತ್ತು ಈ ನಾಡನ್ನು ಕೋಮುವಾದಿಗಳ ಬೀಡಾಗಲು ಬಿಡುವುದಿಲ್ಲ ಎಂದು ಸಂಕಲ್ಪ ಮಾಡಿದ್ದೇವೆ.

ಕೆ.ಫಣಿರಾಜ್

“ಈ ನಮ್ಮ ನಡಿಗೆಯಲ್ಲಿ ಎಲ್ಲರನ್ನು ಒಳಗೊಳ್ಳುವ, ಎಲ್ಲರನ್ನು ಗೌರವಿಸುವ ಕೆಲಸದಲ್ಲಿ ಕೆಲವು ತಪ್ಪುಗಳಾಗಿವೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಆ ತಪ್ಪುಗಳನ್ನು ನಾವು ಒಪ್ಪಿಕೊಂಡು ತಿದ್ದಿಕೊಳ್ಳುತ್ತೇವೆ. ಆದರೆ ಆ ತಪ್ಪನ್ನೆ ದೊಡ್ಡದು ಮಾಡಿ ಇಡೀ ಸಮಾವೇಶದ ಆಶಯವನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ಎಲ್ಲರಲ್ಲಿ ಪ್ರಾರ್ಥಿಸುತ್ತೇವೆ. ಈ ದುರಂತ ಕಾಲದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿರುವುದು ಅತ್ಯಂತ ಅನಿವಾರ್ಯವಾಗಿದ್ದು. ಈ ನಾಡಿನ ಎಲ್ಲಾ ಕಿರಿಯ, ಹಿರಿಯರು ಈ ಸಮಾವೇಶದಲ್ಲಿ ಭಾಗಿಯಾಗಬೇಕೆಂದು ಸಂಘಟನಾ ಸಮಿತಿಯ ಪರವಾಗಿ ಬೇಡಿಕೊಳ್ಳುತ್ತೇನೆ” ಎನ್ನುತ್ತಾರೆ ಸಹಬಾಳ್ವೆ ಸಮಾವೇಶದ ಸಂಚಾಲಕ ಸಮಿತಿ ಸದಸ್ಯರು ಮತ್ತು ಚಿಂತಕರಾದ ಕೆ.ಫಣಿರಾಜ್.

ಇವು ದೇಶ ಕಾಣುತ್ತಿರುವ ಕರಾಳ ದಿನಗಳು. ಈ ಕರಾಳತೆಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ನಡೆಯುವ ಯಾವ ಸಣ್ಣ ದೊಡ್ಡ ಕೆಲಸವಾಗಲೀ ಇಂದಿನ ಅಗತ್ಯ. ಆ ನಿಟ್ಟಿನಲ್ಲಿ ಈ ಸಮಾವೇಶದ ಗುರಿ ಈಡೇರಲಿ ಎಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ‘ಮುಸ್ಕಾನ್‌‌’ ಬಗ್ಗೆ ಸುಳ್ಳು ಹಬ್ಬಿಸುತ್ತಿರುವ ಕನ್ನಡ ಮಾಧ್ಯಮಗಳು: ಬೇಸರ ವ್ಯಕ್ತಪಡಿಸಿದ ಪೊಲೀಸರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...