Homeಕರ್ನಾಟಕಶಾಂತಿ-ಸೌಹಾರ್ದತೆ ಉದ್ದೀಪಿಸಲು ಉಡುಪಿಯಲ್ಲಿ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶ

ಶಾಂತಿ-ಸೌಹಾರ್ದತೆ ಉದ್ದೀಪಿಸಲು ಉಡುಪಿಯಲ್ಲಿ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶ

- Advertisement -
- Advertisement -

ಮುಸ್ಲಿಂ ಹೆಣ್ಣು ಮಕ್ಕಳು ತರಗತಿ ಕೊಠಡಿಗಳಿಗೆ ಹಿಜಾಬ್ ಧರಿಸಿ ಬರಬಾರದೆಂಬ ವಿವಾದವನ್ನು ಉಡುಪಿಯಲ್ಲಿ ಹುಟ್ಟುಹಾಕಿದ ನಂತರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಆ ನಂತರ ಕಾಲೇಜುಗಳು ಮತ್ತೆ ಆರಂಭವಾದಾಗ ವಿವಿಧ ಮುಸ್ಲಿಮೇತರ ಸಮುದಾಯದ ಹೆಣ್ಣುಮಕ್ಕಳು ಹಿಜಾಬ್ ಧರಿಸಿದ ಮುಸ್ಲಿಂ ಬಾಲಕಿಯ ಕೈಹಿಡಿದು ಶಾಲೆ ಪ್ರವೇಶಿಸಿದ ಫೋಟೋವೊಂದು ವೈರಲ್ ಆಗಿತ್ತು. ಇರ್ಷಾದ್ ಮೊಹಮ್ಮದ್ ತೆಗೆದ ಆ ಚೆಂದದ ಫೋಟೋವನ್ನು ‘Unity in Diversity’ ಶೀರ್ಷಿಕೆಯಡಿ ಡೆಕ್ಕನ್ ಹೆರಾಲ್ಡ್ ಪ್ರಕಟಿಸಿತ್ತು. ಈ ಜಾತಿ ಧರ್ಮದ ದ್ವೇಷ ದೊಡ್ಡವರು ಮಾಡಬಹುದು, ಆದರೆ ನಾವು ಎಳೆಯರು, ನಾವು ಗೆಳೆಯರು ನಮ್ಮಲ್ಲಿ ಅದಕ್ಕೆ ಅವಕಾಶವಿಲ್ಲವೆಂಬ ಸಂದೇಶವನ್ನು ಆ ಪುಟ್ಟ ಮಕ್ಕಳು ಸಾರಿದ್ದರು. ’ಇದು ನನ್ನ ಭಾರತ’ ಎಂದು ಸಾವಿರಾರು ಜನರು ಆ ಫೋಟೊವನ್ನು ಹಂಚಿಕೊಂಡಿದ್ದರು.

ಈ ರೀತಿಯ ಶಾಂತಿ ಸಹಬಾಳ್ವೆ ಸಾಮರಸ್ಯ ಸಾಮಾನ್ಯ ಜನರಲ್ಲಿ ಹಾಸುಹೊಕ್ಕಾಗಿದೆ. ಆದರೆ ದ್ವೇಷದ ಮೂಲಕ ರಾಜಕೀಯ ಲಾಭ ಪಡೆಯಲು ಹವಣಿಸುವವರು ಅಂತಹ ಸಾಮರಸ್ಯಕ್ಕೆ ಗಲಭೆಗಳ ಮೂಲಕ ಹುಳಿಹಿಂಡಲು ಪದೇಪದೇ ಪ್ರಯತ್ನಿಸುತ್ತಿದ್ದಾರೆ. ಅಧಿಕಾರದಲ್ಲಿರುವ ಸರ್ಕಾರವೇ ಅಂತಹ ಕೆಲಸಕ್ಕೆ ಕುಮ್ಮಕ್ಕು ನೀಡಿದರೆ ಏನಾಗಬಹುದು ಎಂಬುದಕ್ಕೆ ನಮ್ಮ ಕರ್ನಾಟಕ ಸಾಕ್ಷಿಯಾಗಿದೆ. ಉಡುಪಿಯ ಕಾಪುವಿನಲ್ಲಿ ಮಾರಿಗುಡಿ ಜಾತ್ರೆಯ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶವಿಲ್ಲ ಎಂಬ ಬ್ಯಾನರ್ ಹಾಕುವ ಮೂಲಕ ಬಿಜೆಪಿ ಬೆಂಬಲಿತ ಸಂಘಪರಿವಾರದ ಸಂಘಟನೆಗಳು ಕೋಮು ಧ್ರುವೀಕರಣ ಮತ್ತು ದ್ವೇಷ ಹುಟ್ಟುಹಾಕುವ ಪ್ರಕ್ರಿಯೆಗೆ ಮುಂದಾಗಿದ್ದವು. ಆದರೆ ಜಾತ್ರೆಗೆ ಬಂದಿದ್ದ ಭಕ್ತಾದಿಗಳು ಸಂಘಪರಿವಾರದ ಬೆದರಿಕೆಗಳಿಗೆ ಸೊಪ್ಪು ಹಾಕದೆ ಮುಸ್ಲಿಂ ವ್ಯಾಪಾರಿಗಳೊಂದಿಗೆ ವ್ಯಾಪಾರ ಮಾಡಿದರು. ಜಾತ್ರೆಯ ’ವಾಲಗ ಚಾಕರಿ’ಯನ್ನು ಸಂಪ್ರದಾಯದಂತೆ ಮುಸ್ಲಿಂ ಸಮುದಾಯದ ವ್ಯಕ್ತಿಗಳೆ ನಡೆಸಿಕೊಟ್ಟರು. ಎರಡು ದಿನವೂ ವಾಲಗ ಊದಿ ’ತುಳುನಾಡಿನ ಪರಂಪರೆ’ಯನ್ನು ಎತ್ತಿಹಿಡಿದರು.

ಈ ಎರಡು ಪ್ರಕರಣಗಳು ತೋರಿಸುವುದೇನೆಂದರೆ ಸರ್ಕಾರವೂ ಸೇರಿಕೊಂಡು, ಸಂಘಪರಿವಾರ, ಮುಖ್ಯವಾಹಿನಿ ಮಾಧ್ಯಮಗಳು ಎಷ್ಟೇ ದ್ವೇಷ ಹರಡಲು ಮುಂದಾದರೂ ಈ ನಾಡಿನ ಸಮುದಾಯಗಳ ಬಹುಸಂಖ್ಯೆಯ ಜನರಿಗೆ ಅದು ಬೇಕಾಗಿಲ್ಲ. ಏಕೆಂದರೆ ನಿತ್ಯವೂ ಅವರ ಬದುಕು ಬವಣೆ ನೂರಾರು ಜನರೊಂದಿಗೆ, ಹಲವು ಸಮುದಾಯಗಳೊಂದಿಗೆ ಹೆಣೆದುಕೊಂಡಿದೆ. ಹಾಗಾಗಿ ಅವರ ನಡುವೆ ಕೊಡುಕೊಳ್ಳುವಿಕೆ ಇಲ್ಲದೆ ಬದುಕು ಸಪ್ಪೆಯಾಗುತ್ತದೆ, ಮತ್ತು ಕೆಲವು ಕಡೆಗೆ ಅದು ವಿನಾಶಕ್ಕೂ ಎಡೆಮಾಡಿಕೊಡುತ್ತದೆ. ಕೊಡು-ಕೊಳ್ಳುವಿಕೆಯ ಸಂಪ್ರದಾಯದ ಪರಿಕಲ್ಪನೆಗಳಲ್ಲೀ ಸೌಹಾರ್ದತೆ-ಸಹಬಾಳ್ವೆಯೂ ಸೇರಿಕೊಂಡಿದೆ. ಆದನ್ನು ಮತ್ತಷ್ಟು ಉದ್ದೀಪನಗೊಳಿಸುವ ಪ್ರಯತ್ನದ ಭಾಗವಾಗಿ ಮೇ 14 ರಂದು ಉಡುಪಿಯಲ್ಲಿ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶ ನಡೆಯುತ್ತಿದೆ.

’ಇದು ಬಹಳ ಮೇಲ್ಮಟ್ಟದ ಪರೀಕ್ಷೆ ಅಂದುಕೊಂಡರೂ, ಮುಸ್ಲಿಂ ಸಮುದಾಯವನ್ನು ದ್ವೇಷಿಸುವ ಯುವಕ-ಯುವತಿಯರೆ, ನಿಮಗೆ ವೈಯಕ್ತಿಕವಾಗಿ ಮೋಸ, ಅನ್ಯಾಯ ಮಾಡಿದ ಹತ್ತು ಜನರ ಹೆಸರು ಪಟ್ಟಿಮಾಡಿ ನೋಡಿ. ಅದರಲ್ಲಿ ಮುಸ್ಲಿಮರ ಹೆಸರು ಇರುವುದಕ್ಕಿಂತಲೂ, ನಿಮ್ಮದೆ ಧರ್ಮದ, ನಿಮ್ಮದೆ ಜಾತಿಯ ಜನರ ಹೆಸರುಗಳು ಹೆಚ್ಚು ಇರುತ್ತವೆ. ಹೀಗಿರುವಾಗ ಯಾರೋ ವಿಷ ಹರಡುವ ಇರಾದೆ ಹೊಂದಿರುವವರು ಹೇಳಿದ ಮಾತು ಕೇಳಿ ಮುಸ್ಲಿಮರನ್ನು ಏಕೆ ದ್ವೇಷಿಸುತ್ತೀರಿ? ಎಷ್ಟೋ ಬಾರಿ ನೀವು ಅವರೊಂದಿಗೆ ಒಡನಾಡಿಯಾಗಿರುವುದೇ ಇಲ್ಲ, ಅವರ ಆಚಾರ ವಿಚಾರದ ನೈಜ ದರ್ಶನ ನಿಮಗಾಗಿರುವುದಿಲ್ಲ. ಈ ಒಡನಾಟ ಸಾಧ್ಯವಾಗಿದ್ದರೆ ನೀವು ಅವರನ್ನು ಅಂದರೆ ಒಂದಿಡೀ ಜನಾಂಗವನ್ನು ದ್ವೇಷಿಸಲು ಸಾಧ್ಯವಾಗುವುದಿಲ್ಲ’ ಎಂದು ಗೆಳೆಯರೊಬ್ಬರು ನನಗೆ ಹೇಳಿದ್ದರು. ಅದು ಅಕ್ಷರಶಃ ನಿಜ ಎಂಬುದು ನನ್ನ ಅನುಭವ ಮತ್ತು ಅಭಿಮತ. ಉಡುಪಿಯ ಸಾಮರಸ್ಯ ಸಮಾವೇಶದಲ್ಲಿ ಸರ್ವಧರ್ಮಿಯರು, ಸಕಲ ಸಮುದಾಯದವರು ಬೆರೆತು ದ್ವೇಷ ಬಿತ್ತುವವರನ್ನು ಹಿಮ್ಮೆಟ್ಟಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಪರಸ್ಪರ ಒಡನಾಟವನ್ನು ಹೆಚ್ಚಿಸುವ ಇರಾದೆ ಕೂಡ ಈ ಸಮಾವೇಶಕ್ಕಿದೆ.

ಉಡುಪಿಯ ಅಜ್ಜರಕಾಡು ಹುತಾತ್ಮ ಚೌಕದಿಂದ ಮೇ 14ರ ಶನಿವಾರ ಮಧ್ಯಾಹ್ನ 2 ಗಂಟೆಗೆ ಸಾಮರಸ್ಯ ನಡಿಗೆ ಆರಂಭವಾಗಲಿದೆ. ಸಂಜೆ 4 ಗಂಟೆಗೆ ಕ್ರಿಶ್ಚಿಯನ್ ಶಾಲೆ ಮೈದಾನದಲ್ಲಿ ಸಹಬಾಳ್ವೆ ಸಮಾವೇಶ ನಡೆಯಲಿದೆ. ಸರ್ವಧರ್ಮಗಳ ಧರ್ಮಗುರುಗಳು ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಂ.ಡಿ ಪಲ್ಲವಿ ಮತ್ತು ತಂಡದವರು ಸೌಹಾರ್ದ ಗೀತೆಗಳನ್ನು ಹಾಡಲಿದ್ದಾರೆ.

ಯೋಗೇಂದ್ರ ಯಾದವ್, ಡಾ. ರೊನಾಲ್ಡ್ ಕೊಲಾಸೊ, ಶಶಿಕಾಂತ್ ಸೆಂಥಿಲ್, ಮಾವಳ್ಳಿ ಶಂಕರ್, ಆರ್ ಮೋಹನ್ ರಾಜ್, ಹೆಚ್.ಆರ್ ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಕೆ.ನೀಲಾ, ಡಾ. ಬೆಳಗಾಮಿ ಮುಹಮ್ಮದ್ ಸಾದ್, ಸಬೀಹ ಫಾತಿಮ ಮತ್ತು ನಜ್ಮಾ ಚಿಕ್ಕನೇರಳೆ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅತಿಥಿಗಳ ಪಟ್ಟಿಯಲ್ಲಿ ವಿವಾದಾತ್ಮಕ ವ್ಯಕ್ತಿ: ತೀವ್ರ ಟೀಕೆ ನಂತರ ಕೈಬಿಟ್ಟ ಸಮಿತಿ

ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ ಸಮಾವೇಶಕ್ಕೆ ಆರ್ಯ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮಿಯನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಬಲಪಂಥೀಯ ವಿಚಾರಗಳನ್ನು ಉಗ್ರ ರೂಪದಲ್ಲಿ ಪ್ರತಿಪಾದಿಸಿದ್ದ ವಿವಾದಾತ್ಮಕ ವ್ಯಕ್ತಿ. ಈ ಹಿಂದೆ ಯೋಗೇಶ್ ಮಾಸ್ಟರ್‌ರವರು ಡುಂಢಿ ಕಾದಂಬರಿ ಬರೆದಾಗ ದೂರು ನೀಡಿದವರಲ್ಲಿ ಒಬ್ಬರಾಗಿ ಅಸಹಿಷ್ಣುತೆಯನ್ನು ತೋರ್ಪಡಿಸಿದ್ದವರು. ಗೋಡ್ಸೆ ಪ್ರತಿಮೆ ನಿರ್ಮಾಣಕ್ಕೆ ಕರೆ ನೀಡಿದ್ದರು. ಹಿಂದೂ ಧರ್ಮದ ಉದ್ಧಾರಕ್ಕೆ ಮಹಿಳೆಯರು ಹತ್ತು ಮಕ್ಕಳು ಹೇರಬೇಕು ಎಂಬೆಲ್ಲಾ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಆರ್ಯ ಈಡಿಗ ಸಮುದಾಯವೇ ಅವರನ್ನು ತಮ್ಮ ಸ್ವಾಮಿಯೆಂದು ಒಪ್ಪಿಕೊಳ್ಳುವುದಿಲ್ಲ, ಅವರಿಂದ ಎಂತಹ ಸಹಬಾಳ್ವೆ ಭಾಷಣ ಕೇಳುವುದು ಎಂಬ ತೀಕ್ಷ್ಣ ಟೀಕೆಗಳು ಕೇಳಿಬಂದವು.

ಕೆ.ಎಲ್ ಅಶೋಕ್

ನಂತರ ಸಮಾವೇಶದ ಸಂಘಟನಾ ಸಮಿತಿಯು ಎಚ್ಚೆತ್ತುಕೊಂಡು ಸಭೆ ನಡೆಸಿ ಆ ವ್ಯಕ್ತಿಯನ್ನು ಅತಿಥಿಗಳ ಪಟ್ಟಿಯಿಂದ ಕೈಬಿಟ್ಟಿದ್ದಾರೆ. “ಕೂಲಂಕಷ ಚರ್ಚೆ ಮಾಡದೆ ಆಹ್ವಾನಿಸಿರುವ ತಪ್ಪು ಸಮಿತಿಯಿಂದ ನಡೆದಿರುವುದರಿಂದ, ಸಮಿತಿಯೇ ಕ್ಷಮೆ ಕೋರಿ, ವಿಷಾದ ವ್ಯಕ್ತಪಡಿಸಿ ಅವರನ್ನು ಸಮ್ಮೇಳನದಿಂದ ಕೈಬಿಡುತ್ತಿದೆ” ಎಂದು ಹೇಳಿಕೆ ನೀಡಿತು.

ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ

“ಸಾಮರಸ್ಯ-ಸಹಬಾಳ್ವೆ ಎಂಬುದು ಈ ನೆಲದ ಸಂಸ್ಕೃತಿ ಮತ್ತು ಪ್ರಕೃತಿಯ ಮೂಲಗುಣ. ತಮ್ಮದಲ್ಲದ ಧರ್ಮವನ್ನು ದ್ವೇಷಿಸುವುದು ಸಹಜವಲ್ಲ. ಅದನ್ನು ಉದ್ದೇಶಪೂರ್ವಕವಾಗಿ ಜನರ ಮನಸ್ಸಿನಲ್ಲಿ ಬಿತ್ತಲು ಪ್ರಯತ್ನಿಸಲಾಗುತ್ತಿದೆ. ಅದನ್ನು ಮೀರಿ ಎಲ್ಲಾ ಧರ್ಮಗಳ ಸಾರ ಪ್ರೀತಿ-ಕರುಣೆಯೊಂದೆ. ಅಲ್ಲದೆ ಯಾವುದೇ ಧರ್ಮ ಮೇಲಲ್ಲ, ಯಾವುದೂ ಕೀಳಲ್ಲ, ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಲ್ಲರೂ ಸಮಾನರು ಎಂಬುದನ್ನು ಸಾರಲು ಈ ಸಮಾವೇಶ ಹಮ್ಮಿಕೊಂಡಿದ್ದೇವೆ” ಎನ್ನುತ್ತಾರೆ ಸಮಾವೇಶದ ಸಂಘಟಕರಲ್ಲೊಬ್ಬರಾದ ಕೆ.ಎಲ್ ಅಶೋಕ್.

ಬಹುಸಂಖ್ಯಾತರ ಹೆಸರಿನಲ್ಲಿ ಕೋಮು ರಾಜಕೀಯ ಮಾಡಲು ಬಿಡುವುದಿಲ್ಲ

“ಕಳೆದ 5 ತಿಂಗಳುಗಳಲ್ಲಿ ಕರಾವಳಿಯ ಊರುಕೇರಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರ ನಿತ್ಯ ಬದುಕಿನ ಮೇಲೆ ದಬ್ಬಾಳಿಕೆ ತೀವ್ರವಾಗಿದೆ. ಇದು ಕೋಮುವಾದ ಶಿಖರ ತಲುಪಿದೆ ಎನ್ನುವುದರ ಸಂಕೇತವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ, ನಾಡಿನ ಅಲ್ಪಸಂಖ್ಯಾತ ಸಮುದಾಯ ಸಮಾಜದಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದೆ. ಹಾಗಾಗಿ ಅಲ್ಪಸಂಖ್ಯಾತರ ಜೊತೆ ನಾವಿದ್ದೇವೆ ಮತ್ತು ಬಹುಸಂಖ್ಯಾತರ ಹೆಸರಿನಲ್ಲಿ ಕೋಮು ರಾಜಕೀಯ ಮಾಡಲು ಬಿಡುವುದಿಲ್ಲ ಎಂದು ಸಾರಲು ಈ ಸಹಬಾಳ್ವೆ ಸಮಾವೇಶ ಹಮ್ಮಿಕೊಂಡಿದ್ದೇವೆ. ಎಲ್ಲಾ ಅಲ್ಪಸಂಖ್ಯಾತರ ಜೊತೆ ನಿಲ್ಲುತ್ತೇವೆ ಮತ್ತು ಈ ನಾಡನ್ನು ಕೋಮುವಾದಿಗಳ ಬೀಡಾಗಲು ಬಿಡುವುದಿಲ್ಲ ಎಂದು ಸಂಕಲ್ಪ ಮಾಡಿದ್ದೇವೆ.

ಕೆ.ಫಣಿರಾಜ್

“ಈ ನಮ್ಮ ನಡಿಗೆಯಲ್ಲಿ ಎಲ್ಲರನ್ನು ಒಳಗೊಳ್ಳುವ, ಎಲ್ಲರನ್ನು ಗೌರವಿಸುವ ಕೆಲಸದಲ್ಲಿ ಕೆಲವು ತಪ್ಪುಗಳಾಗಿವೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಆ ತಪ್ಪುಗಳನ್ನು ನಾವು ಒಪ್ಪಿಕೊಂಡು ತಿದ್ದಿಕೊಳ್ಳುತ್ತೇವೆ. ಆದರೆ ಆ ತಪ್ಪನ್ನೆ ದೊಡ್ಡದು ಮಾಡಿ ಇಡೀ ಸಮಾವೇಶದ ಆಶಯವನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ಎಲ್ಲರಲ್ಲಿ ಪ್ರಾರ್ಥಿಸುತ್ತೇವೆ. ಈ ದುರಂತ ಕಾಲದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿರುವುದು ಅತ್ಯಂತ ಅನಿವಾರ್ಯವಾಗಿದ್ದು. ಈ ನಾಡಿನ ಎಲ್ಲಾ ಕಿರಿಯ, ಹಿರಿಯರು ಈ ಸಮಾವೇಶದಲ್ಲಿ ಭಾಗಿಯಾಗಬೇಕೆಂದು ಸಂಘಟನಾ ಸಮಿತಿಯ ಪರವಾಗಿ ಬೇಡಿಕೊಳ್ಳುತ್ತೇನೆ” ಎನ್ನುತ್ತಾರೆ ಸಹಬಾಳ್ವೆ ಸಮಾವೇಶದ ಸಂಚಾಲಕ ಸಮಿತಿ ಸದಸ್ಯರು ಮತ್ತು ಚಿಂತಕರಾದ ಕೆ.ಫಣಿರಾಜ್.

ಇವು ದೇಶ ಕಾಣುತ್ತಿರುವ ಕರಾಳ ದಿನಗಳು. ಈ ಕರಾಳತೆಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ನಡೆಯುವ ಯಾವ ಸಣ್ಣ ದೊಡ್ಡ ಕೆಲಸವಾಗಲೀ ಇಂದಿನ ಅಗತ್ಯ. ಆ ನಿಟ್ಟಿನಲ್ಲಿ ಈ ಸಮಾವೇಶದ ಗುರಿ ಈಡೇರಲಿ ಎಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ‘ಮುಸ್ಕಾನ್‌‌’ ಬಗ್ಗೆ ಸುಳ್ಳು ಹಬ್ಬಿಸುತ್ತಿರುವ ಕನ್ನಡ ಮಾಧ್ಯಮಗಳು: ಬೇಸರ ವ್ಯಕ್ತಪಡಿಸಿದ ಪೊಲೀಸರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....