“ಮುಂದಿನ ಹಣಕಾಸು ವರ್ಷದಿಂದ (2023-24) ನಿರುದ್ಯೋಗಿ ಯುವಜನರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡಲಾಗುವುದು” ಎಂದು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಘೋಷಣೆ ಮಾಡಿದ್ದಾರೆ.
ಗುರುವಾರ ಗಣರಾಜ್ಯೋತ್ಸವದ ಅಂಗವಾಗಿ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, ಬಸ್ತಾರ್ ಜಿಲ್ಲೆಯ ಪ್ರಧಾನ ಕಛೇರಿ ಜಗದಲ್ಪುರದ ಲಾಲ್ಬಾಗ್ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಜನರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ, ರಾಯ್ಪುರ ವಿಮಾನ ನಿಲ್ದಾಣದ ಬಳಿ ಏರೋಸಿಟಿ, ವಸತಿಗೃಹ ಸ್ಥಾಪನೆ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದರು.
ಕಾರ್ಮಿಕರಿಗೆ ಸಹಾಯ ಯೋಜನೆ ಮತ್ತು ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಯೋಜನೆ ಹೀಗೆ ಅನೇಕ ಯೋಜನೆಗಳ ಬಗ್ಗೆ ಮಾತನಾಡಿದರು. ಇದು ಮುಂಬರುವ ವಿಧಾನಸಭೆ ಚುನಾವಣೆಯ ಉದ್ದೇಶಿತ ಮಾತುಗಳು ಎಂಬುದು ಸ್ಪಷ್ಟವಾಗಿ ಕಂಡುಬಂದಿತು.
ಇದನ್ನೂ ಓದಿ: ನಿರುದ್ಯೋಗದ ವಿರುದ್ಧ ಬೀದಿಗಿಳಿಯುತ್ತಿರುವ ರೈತರು: ದೆಹಲಿಯೆಲ್ಲೆಡೆ ಬಿಗಿ ಬಂದೋಬಸ್ತ್
“ಮುಂದಿನ ಹಣಕಾಸು ವರ್ಷದಿಂದ (2023-24) ನಿರುದ್ಯೋಗಿ ಯುವಜನರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಬಗ್ಗೆ ಸರ್ಕಾರ ನಿರ್ಧಾರ ಮಾಡಿದೆ. ಆದರೆ ಮೊತ್ತವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ನಮ್ಮ ಅಧಿಕಾರಿ ವರ್ಗ ಅದರ ಮೇಲೆ ಕಾರ್ಯನಿರ್ವಹಿಸುತ್ತಿದೆ” ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಮಹಿಳಾ ಗುಂಪುಗಳು, ಮಹಿಳಾ ಉದ್ಯಮಿಗಳು, ಮಹಿಳಾ ಉದ್ಯಮಿಗಳು ಮತ್ತು ಮಹಿಳಾ ನೇತೃತ್ವದ ಉದ್ಯಮಗಳನ್ನು ಉದ್ಯಮ ವಲಯದಲ್ಲಿ ಸ್ಥಾಪಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. ಪ್ರಯಾಣಿಕರಿಗೆ ಸೌಲಭ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ರಾಯಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದ ಬಳಿ ಏರೋಸಿಟಿಯನ್ನು ಅಭಿವೃದ್ಧಿಪಡಿಸಲಾಗುವುದು. ವಿಮಾನ ನಿಲ್ದಾಣದ ಪ್ರದೇಶದ ಅಭಿವೃದ್ಧಿ ಮತ್ತು ರಾಯ್ಪುರ ವಿಮಾನ ನಿಲ್ದಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲಾಗುತ್ತದೆ” ಎಂದು ಬಘೆಲ್ ಸರ್ಕಾರ ಭರವಸೆ ನೀಡಿದೆ.
ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸತತ ಮೂರು ವರ್ಷಗಳ ಕಾಲ ನೋಂದಣಿ ಮಾಡಿಕೊಂಡಿರುವ ಕಟ್ಟಡ ಕಾರ್ಮಿಕರಿಗೆ ₹ 50,000 ಆರ್ಥಿಕ ನೆರವು ನೀಡಲು ಮತ್ತೊಂದು ಯೋಜನೆಯನ್ನು ಪರಿಚಯಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.