ಕೊರೊನಾ ವೈರಸ್ ಏಕಾಏಕಿ ವ್ಯಾಪಕವಾಗಿ ಹರಡಿದ್ದರಿಂದ ಮತ್ತು ಲಾಕ್ಡೌನ್ ವಿಧಿಸಿದ್ದರಿಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ವಿಳಂಬವಾಗಿದ್ದು, ಶೀಘ್ರದಲ್ಲೇ ಅದನ್ನು ಜಾರಿಗೆ ತರಲಾಗುವುದು ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜಗತ್ ಪ್ರಕಾಶ್ ನಡ್ಡಾ ಸೋಮವಾರ ಹೇಳಿದ್ದಾರೆ.
ಜೆ.ಪಿ.ನಡ್ಡಾ ಮಾತನಾಡಿದ ಪ್ರಮುಖ ಅಂಶಗಳು ಇಲ್ಲಿವೆ.
– ಬಿಜೆಪಿ ಮತ್ತು ಮೋದಿ ಜಿ ಅವರ ಮೂಲ ನೀತಿ ಒಳಗೊಳ್ಳುವಿಕೆಯಾಗಿದ್ದು, ಇದರ ಸಾಕಾರವೇ ಸಬ್ಕಾ ಸಾಥ್, ಸಬ್ಕಾ ವಿಕಾಸ್. ಆದರೆ ಇತರ ಪಕ್ಷಗಳ ನೀತಿ, ಸಮಾಜವನ್ನು ವಿಭಜಿಸಿ, ಅದನ್ನು ಪ್ರತ್ಯೇಕವಾಗಿರಿಸಿ ಆಳ್ವಿಕೆ ಮಾಡಿ ಎಂಬುದಾಗಿದೆ.
– ಮಮತಾ ಸರ್ಕಾರದ ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದೂ ಸಮುದಾಯಕ್ಕೆ ಸಾಕಷ್ಟು ಹೊಡೆತ ಬಿದ್ದಿರುವುದನ್ನು ನೀವು ನೋಡಿರಬಹುದು. ಈಗ ಇದನ್ನು ಅರಿತುಕೊಂಡಿರುವ ಅವರು, ಸಮಾಜದ ಪ್ರತಿಯೊಬ್ಬ ಸದಸ್ಯರನ್ನು ಒಳಗೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಇವರು ಮತ ಬ್ಯಾಂಕ್ ರಾಜಕೀಯವನ್ನು ಮಾತ್ರ ಮಾಡುತ್ತಿದ್ದು, ಅಧಿಕಾರದಲ್ಲಿರಲು ಮಾತ್ರ ರಾಜಕೀಯ ಮಾಡುತ್ತಾರೆ.
ಇದನ್ನೂ ಓದಿ: ಶಿರಾ ಉಪಚುನಾವಣೆ: ಮೂಲ VS ವಲಸೆ ಬಿಜೆಪಿಗರ ನಡುವೆ ಬಿರುಕು! ಯಾರ ಕೈಹಿಡಿಯಲಿದ್ದಾನೆ ಮತದಾರ
– ದೇಬೇಂದ್ರ ನಾಥ್ ರೇ ಘಟನೆಯಿಂದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೆ ನೋವುಂಟಾಗಿದೆ. ಅವರು ಸಾಮಾಜಿಕ ಪ್ರತಿನಿಧಿಯಾಗಿದ್ದರು. ಸರಿಯಾದ ತೀರ್ಮಾನಕ್ಕೆ ಬರಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ.
– ಪಶ್ಚಿಮ ಬಂಗಾಳದ ಸ್ಥಳೀಯ ಉತ್ಪನ್ನಗಳ ಪಟ್ಟಿಯನ್ನು ತಯಾರಿಸಲು, ಅವರಿಗೆ ಮಾರ್ಗಸೂಚಿ ಮತ್ತು ಯೋಜನೆಯನ್ನು ರೂಪಿಸಲು ನಾನು ನಮ್ಮ ಸಂಸದರಿಗೆ ಕರೆ ನೀಡುತ್ತೇನೆ. ಮೋದಿ ಸರ್ಕಾರವು ಅದನ್ನು ಸರಿಯಾಗಿ ಬ್ರಾಂಡ್ ಮಾಡಿ, ರಾಜ್ಯದ ಸ್ಥಳೀಯ ವ್ಯಾಪಾರಿಗಳಿಗೆ ಸರಿಯಾದ ಮಾರುಕಟ್ಟೆಯನ್ನು ತರುತ್ತದೆ.
– ಆತ್ಮ ನಿರ್ಭರ ಭಾರತ್ ಪ್ಯಾಕೇಜ್ ಅಡಿಯಲ್ಲಿ ಎಫ್ಪಿಒ ಮತ್ತು ಕೃಷಿ ಮೂಲಸೌಕರ್ಯಗಳಿಗಾಗಿ 1 ಲಕ್ಷ ಕೋಟಿ ರೂ. ಮೀಸಲಿಟ್ಟು, ನಮ್ಮ ರೈತರಿಗಾಗಿ ಕೋಲ್ಡ್ ಸ್ಟೋರೇಜ್ಗಳು ಮತ್ತು ಸಾಮಾನ್ಯ ಸ್ಟೋರೇಜ್ಗಳನ್ನು ನಿರ್ಮಿಸಲಾಗುವುದು.
– ಪಶ್ಚಿಮ ಬಂಗಾಳದಲ್ಲಿ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನುಷ್ಠಾನಕ್ಕೆ ಮಮತಾ ಸರ್ಕಾರ ಅವಕಾಶ ನೀಡಿಲ್ಲ. ನಾವು ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ರೈತರಿಗೆ ಈ ಯೋಜನೆಯನ್ನು ಜಾರಿ ಮಾಡುತ್ತೇವೆ.
ಇದನ್ನೂ ಓದಿ: ಯುಪಿ ಉಪಚುನಾವಣೆ: ಹೆಚ್ಚುತ್ತಿರುವ ಅಪರಾಧಗಳ ನೆರಳಲ್ಲಿ ಮತದಾರರು ಯಾರ ಕೈಹಿಡಿಯಲಿದ್ದಾರೆ?