“ಕರ್ನಾಟಕ ಪೊಲೀಸರ ಸಮವಸ್ತ್ರ ಬದಲಾಗಿದೆ. ಕೇಸರಿಧಾರಿಗಳಾಗಲು ಪೊಲೀಸರು ಸಿದ್ಧವಾಗಿದ್ದಾರೆ” ಎಂದು ಟೀಕೆಗಳು ವ್ಯಕ್ತವಾಗಿವೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಕೇಸರಿ ಶಾಲು ಧರಿಸಿ, ಬಿಳಿ ಟೋಪಿ, ಕುರ್ತಾ ಧರಿಸಿ ಆಯುಧಪೂಜೆ ಆಚರಿಸಿ, ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ. ಹಿಂದೂಗಳ ಹೆಸರಲ್ಲಿ ಮತೀಯವಾದ, ಮತೀಯ ಗೂಂಡಾಗಿರಿ ನಡೆಸುತ್ತಿರುವವರು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಕೇಸರಿ ಸಮವಸ್ತ್ರ ಧರಿಸಿ ತಮ್ಮ ಅಂತರಂಗವನ್ನು ಹೊರಹಾಕಿದ್ದಾರೆ ಎಂದು ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸಿದ್ದಾರೆ.
ಇಂತಹದ್ದೇ ಸಮವಸ್ತ್ರವನ್ನು ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯ ಪೊಲೀಸರೂ ಧರಿಸಿ ಹಬ್ಬ ಆಚರಿಸಿದ್ದಾರೆ. ‘ಕನ್ಯ್ಪೂಜ್ ಆಗಬೇಡಿ…! ಇದು ಹಿಂದೂ ಸಂಘಟನೆ ಬೈಟಕ್ ಅಲ್ಲ. ಇದು ನಮ್ಮ ಪೊಲೀಸರ ತಂಡ. ಜೈ ಶ್ರೀರಾಮ್…’ ಎಂದು ಜನರು ಟೀಕೆಗೆ ಒಳಪಡಿಸಿದ್ದಾರೆ.
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿ ಹಿಂದೂ ಸಂಘಟನೆಯ ಮುಖಂಡರಂತೆ ಧಿರಿಸು ತೊಟ್ಟಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ. “ಆಯುಧಪೂಜೆ ಅಂಗವಾಗಿ ಪೊಲೀಸ್ ಠಾಣೆಗಳಲ್ಲಿ ಮೊದಲಿನಿಂದಲೂ ಶಸ್ತ್ರಾಸ್ತ್ರ ಗಳಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಆ ಪ್ರಕಾರ ಅಂದು ಗ್ರಾಮೀಣ ಠಾಣೆಯಲ್ಲೂ ಪೂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಂಡಿದ್ದೇನೆ. ಇದರಲ್ಲಿ ತಪ್ಪೇನಿಲ್ಲ. ನಾಳೆ ಮುಸ್ಲಿಮರು ಕರೆದರೂ ಹೋಗುವೆ, ನಮಾಜ್ ಮಾಡುವೆ” ಎಂದು ಎಚ್.ಡಿ.ಆನಂದಕುಮಾರ್ ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಸರಣಿ ಟ್ವೀಟ್
ಸರಣಿ ಟ್ವೀಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪೊಲೀಸರ ಹೊಸ ಅವತಾರವನ್ನು ಸರಣಿ ಟ್ವೀಟ್ಗಳ ಮೂಲಕ ಖಂಡಿಸಿದ್ದಾರೆ.
ಕರ್ನಾಟಕದ
ಜನಪರವಾದ ಉತ್ತಮ
ಆಡಳಿತಕ್ಕೆ ಒಂದು
ಗೌರವದ ಪರಂಪರೆ ಇದೆ.ಇದು @myogiadityanath ಅವರ ಉತ್ತರಪ್ರದೇಶದ ಜಂಗಲ್ ರಾಜ್ ಅಲ್ಲ.
@BSBommai ಅವರೇ,
ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟು
ಪ್ರಜಾಪ್ರಭುತ್ವ ಉಳಿಸಿ.
4/4 pic.twitter.com/MhyU9Bn1T4— Siddaramaiah (@siddaramaiah) October 17, 2021
“ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದಿರಿ ಮುಖ್ಯಮಂತ್ರಿಯವರೇ, ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ ಕನಸು ನನಸಾಗಬಹುದು” ಎಂದಿದ್ದಾರೆ.
ಪೊಲೀಸರು ಕೇಸರಿಧಾರಿಗಳಾಗಿರುವ ಫೋಟೋಗಳೊಂದಿಗೆ ಟ್ವೀಟ್ ಮಾಡಿರುವ ಅವರು, “ಒಂದೆಡೆ ಅಮಾಯಕ ಯುವಕ-ಯುವತಿಯರ ಮೇಲೆ ಅನೈತಿಕ ಪೊಲೀಸ್ಗಿರಿಯ ದೌರ್ಜನ್ಯ…. ಇನ್ನೊಂದೆಡೆ ಶಾಸಕರಿಂದಲೇ ಠಾಣೆಗೆ ನುಗ್ಗಿ ಆರೋಪಿಗಳ ಬಿಡುಗಡೆ… ಮತ್ತೊಂದೆಡೆ ಬಹಿರಂಗವಾಗಿ ತ್ರಿಶೂಲ ಹಂಚಿ ಹಿಂಸಾಚಾರಕ್ಕೆ ಕರೆ…. ಇದಕ್ಕೆಲ್ಲ ರಾಜ್ಯದ ಮುಖ್ಯಮಂತ್ರಿಯವರ ಬಹಿರಂಗ ಬೆಂಬಲ.. ರಾಜ್ಯದಲ್ಲಿ ಸರ್ಕಾರ ಇದೆಯೇ” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿರಿ: ‘ಮುಖ್ಯಮಂತ್ರಿಯವರೇ ಮತೀಯ ಗೂಂಡಾಗಿರಿ ಸಮರ್ಥಿಸುವುದು ಅಪಾಯಕಾರಿ ಬೆಳವಣಿಗೆ’
“ಗೂಂಡಾಗಿರಿಯನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಸಮರ್ಥಿಸಿದ ರಾಜ್ಯದ ಮುಖ್ಯಮಂತ್ರಿಯವರ ಕರೆಗೆ ಓಗೊಟ್ಟು ಪೊಲೀಸರು ನೆಲದ ಕಾನೂನನ್ನು ಠಾಣೆಯೊಳಗೆ ಕೂಡಿ ಹಾಕಿ ಕಾಡಿನ ಕಾನೂನನ್ನು ಜಾರಿಗೆ ತರಲು ಬೀದಿಗಿಳಿದಂತಿದೆ. ನಾಡಿನ ಜನತೆ ತಮ್ಮ ಸುರಕ್ಷತೆಗಾಗಿ ಮನೆಯೊಳಗೆ ಇರುವುದು ಕ್ಷೇಮಕರ” ಎಂದು ಎಚ್ಚರಿಸಿದ್ದಾರೆ.
“ಕರ್ನಾಟಕದ ಜನಪರವಾದ ಉತ್ತಮ ಆಡಳಿತಕ್ಕೆ ಒಂದು ಗೌರವದ ಪರಂಪರೆ ಇದೆ. ಇದು ಯೋಗಿ ಆದಿತ್ಯನಾಥ ಅವರ ಉತ್ತರಪ್ರದೇಶದ ಜಂಗಲ್ ರಾಜ್ ಅಲ್ಲ. ಬೊಮ್ಮಾಯಿಯವರೇ, ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಿ” ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಖಂಡನೆ
ಲೇಖಕ ನಾಗೇಗೌಡ ಕೀಲಾರ ಶಿವಲಿಂಗಯ್ಯ ಅವರು, “ಪೊಲೀಸ್ ಸ್ಟೇಷನ್ ಮುಂದೆ ಹಿಂಗೇ ಫೋಟೋ ತೆಗೆಸಿಕೊಂಡಿರುವ ಈ ಗುಂಪಿನಲ್ಲಿ ಪೊಲೀಸಿನವರು ಇದ್ದರೆ ಅಂತಹ ಪೋಲಿಸರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಬೇಕು ಅಲ್ಲವೇ, ಕಾರ್ಯಾಂಗದೊಳಗೆ ಈ ರೀತಿಯ symbolism ಮತ್ತು ಮತಾಂಧತೆ ಇರುವುದು ಸಂವಿಧಾನಕ್ಕೆ ಮಾಡುವ ದ್ರೋಹ ಅಲ್ಲವೇ” ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.
“ಮುಖ್ಯಮಂತ್ರಿಗಳೇ ನೈತಿಕ ಪೊಲೀಸ್ ಗಿರಿ ಪರ ಇರುವಾಗ, ಪೊಲೀಸರು ಭಜರಂಗಿ ಯೂನಿಫಾರಂ ಹಾಕೋದರಲ್ಲಿ ತಪ್ಪೇನಿದೆ. ‘ಫಾಲೋ ದ ಬಾಸ್’ ಅಂದಿದಾರೆ ಅವರು ಅಷ್ಟೇ” ಎಂದು ಪತ್ರಕರ್ತ ಶಶಿ ಸಂಪಳ್ಳಿ ಕಮೆಂಟ್ ಮಾಡಿದ್ದಾರೆ.
“ನಾನೂ ಶೇಷಾದ್ರಿಪುರಂ ಪೋಲೀಸ್ ಸ್ಟೇಷನ್, ಉಪ್ಪಾರಪೇಟೆ ಮತ್ತು ಶ್ರೀ ರಾಂಪುರ ಪೋಲೀಸ್ ಸ್ಟೇಷನ್ ಮುಂದೆ ಹಾದು ಹೋಗುವಾಗ ಹೆಚ್ಚು ಕಡಿಮೆ ಇದೇ ಸಂಭ್ರಮ ಇತ್ತು ಅದರಲ್ಲೂ ಲೇಡಿ ಪೋಲಿಸಮ್ಮಂದಿರು ಸಾಕ್ಷಾತ್ ನವದುರ್ಗೆಯರ ಅವತಾರದಲ್ಲಿ ಕಂಗೊಳಿಸುತ್ತಿದ್ದರು…” ಎಂದು ಅನಿಲ್ಕುಮಾರ್ ಎಂ.ಎನ್. ಎಂಬವರು ಪ್ರತಿಕ್ರಿಯಿಸಿದ್ದಾರೆ.
“ಹಾಗೆಯೇ ರಮ್ಝಾನ್ ಬಕ್ರೀದ್ ಕ್ರಿಸ್ಮಸ್ ಹಬ್ಬಗಳು ಸರ್ಕಾರದ ಇಲಾಖೆಯಲ್ಲಿ ಆಚರಿಸೋಕೆ ಬಿಡ್ತಾರಾ?” ಎಂದು ಅಮಾನ್ ಸಾಗರ್ ಪ್ರಶ್ನಿಸಿದ್ದಾರೆ.
“ಇಷ್ಟು ದಿನ ಮನಸಿನಲ್ಲಿ ಮಾತ್ರ ಇತ್ತು. ಈಗ ದಿರಿಸಿನಲ್ಲೂ ಬಂತು. ಜೈ ಕರ್ನಾಟಕ ಪೊಲೀಸ್” ಎಂದು ಚಿಂತಕ ಶ್ರೀನಿವಾಸ ಕಾರ್ಕಳ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿರಿ: ಮಧ್ಯಪ್ರದೇಶ: ಗುಂಪಿನ ಮೇಲೆ ಕಾರು ಹತ್ತಿಸಿ ಅಪರಿಚಿತ ಪರಾರಿ
ಪೊಲೀಸರು ಈ ರೀತಿಯಲ್ಲಿ ಕೇಸರೀಕರಣಗೊಳ್ಳುತ್ತಿರುವುದು ಕಂಡನಾರ್ಹ.
ಜಾತಿ, ಮತ-ಪಂತ ಮೀರಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಕಾರ್ಯಾಂಗದ ಅಚ್ಚುಕಟ್ಟಿನ ಸ್ಥಳದಲ್ಲಿರುವ ಪೋಲಿಸರಿಗೆ ಹೀಗಿರಲು ಅವಕಾಶ ಇದೆಯೆ? ಇಲ್ಲ ಎಂದಾದರೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ? ಅಥವಾ ಇದು ಕೇಸರಿಬಾನ್ ಸರ್ಕಾರವೆ?