ಪಶ್ಚಿಮ ಬಂಗಾಳದ ಜನರು ರವೀಂದ್ರನಾಥ್ ಠಾಗೋರ್ ಮತ್ತು ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಉತ್ತರಾಧಿಕಾರಿ ಎನಿಸಿಕೊಳ್ಳಲು, ಕೋಮುವಾದವನ್ನು ತಿರಸ್ಕರಿಸಬೇಕು ಎಂದು ನೋಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೋಮುವಾದವು ಹೆಡೆ ಎತ್ತದಂತೆ ನೋಡಿಕೊಳ್ಳುವಲ್ಲಿ ಆಡಳಿತರೂಢ ಟಿಎಂಸಿಗಿರುವಷ್ಟೆ ಜವಾಬ್ದಾರಿ, ಎಡ ಮತ್ತು ಇತರ ಜಾತ್ಯಾತೀತ ಪಕ್ಷಗಳಿಗೂ ಇರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಬಂಗಾಳದ ಜನರು ಜಾತ್ಯತೀತ ಶಕ್ತಿಗಳನ್ನು ತಿರಸ್ಕರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, “ಈ ಹಿಂದೆ ಬಂಗಾಳವು ಕೋಮುವಾದದಿಂದ ಬಹಳ ಕಷ್ಟ ಅನುಭವಿಸಿದೆ. ಪ್ರತಿಯೊಂದು ಪಕ್ಷವು ತಮ್ಮ ಗುರಿ ಸಾಧಿಸುವುದರೊಂದಿಗೆ, ಬಂಗಾಳವನ್ನು ಜಾತ್ಯತೀತವಾಗಿರಿಸುವ ಹಾಗೂ ಕೋಮುವಾದದಿಂದ ಮುಕ್ತವಾಗಿರಿಸುವ ಉದ್ದೇಶ ಮೊದಲು ಇರಬೇಕು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ.ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಬೆಂಬಲ: ಗೂರ್ಖಾ ಜನಮುಕ್ತಿ ಮೋರ್ಚಾ
“ರವೀಂದ್ರನಾಥ ಠಾಗೋರ್, ನೇತಾಜಿ ಸುಭಾಶ್ ಚಂದ್ರ ಬೋಸ್, ಈಶ್ವರ್ ಚಂದ್ರ ವಿದ್ಯಾಸಾಗರ್ ಮತ್ತು ಸ್ವಾಮಿ ವಿವೇಕಾನಂದ ಎಲ್ಲರೂ ಬಂಗಾಳಿ ಸಂಸ್ಕೃತಿಯನ್ನು ಬಯಸಿದ್ದರು. ಆದರೆ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಪ್ರಚೋದಿಸುವುದಾಗಲಿ ಅಥವಾ ಎತ್ತಿಕಟ್ಟುವುದಾಗಲಿ ಅವರ ಸಾಮಾಜಿಕ ಉದ್ದೇಶದಲ್ಲಿ ಇರಲಿಲ್ಲ. ಇದು ನಾವು ಮೆಚ್ಚುವ ಮತ್ತು ಬೆಂಬಲಿಸುವ ಬಂಗಾಳಿ ಸಂಸ್ಕೃತಿ” ಎಂದು ಅಮರ್ತ್ಯ ಸೇನ್ ಹೇಳಿದ್ದಾರೆ.
“ಹಿಂದೂ-ಮುಸ್ಲಿಮರ ನಡುವೆ ಕೋಮು ಭಾವನೆಗಳನ್ನು ಉಂಟು ಮಾಡುವ ಮತ್ತು ವಿಭಜಿಸುವ ಯಾವುದೆ ರಾಜಕೀಯ ಪಕ್ಷಗಳನ್ನು ಖಂಡಿತವಾಗಿಯೂ ಟೀಕಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.
294 ವಿಧಾನಸಭಾ ಸ್ಥಾನಗಳಿರುವ ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಪ.ಬಂಗಾಳದಲ್ಲಿ BJP ಎರಡಂಕಿ ದಾಟುವುದಿಲ್ಲ: ಒಂದು ವೇಳೆ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ- ಪ್ರಶಾಂತ್ ಕಿಶೋರ್