Homeಕರ್ನಾಟಕದೇವೇಗೌಡರೂ ಬೆದರಿದರಾ ಮೋದಿ-ಶಾ ಜೋಡಿಯ ‘ಅರೆಸ್ಟ್’ ರಾಜಕಾರಣಕ್ಕೆ?

ದೇವೇಗೌಡರೂ ಬೆದರಿದರಾ ಮೋದಿ-ಶಾ ಜೋಡಿಯ ‘ಅರೆಸ್ಟ್’ ರಾಜಕಾರಣಕ್ಕೆ?

- Advertisement -
- Advertisement -

ಮನಿ ಲಾಂಡರಿಂಗ್ ಕೇಸಿನಲ್ಲಿ ಕೇಂದ್ರ ಸರ್ಕಾರದ ಇಡಿ ಬಂಧಿಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರ ಮನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಹೋಗಿಬಂದಿದ್ದಾರೆ. ಡೀಕೆ ತಾಯಿ ಹೆಚ್ಡಿಕೆ ಮುಂದೆ ಗೋಳಾಡಿದ ವೀಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ಯಾರಾದರು ನಮ್ಮನ್ನಗಲಿದರೆ ಅಂತವರ ಮನೆಗೆ ಹೋಗಿ ಸಂಬಂಧಿಕರಿಗೆ ಸಾಂತ್ವನ ಹೇಳಿಬರೋದು ವಾಡಿಕೆ. ಆದರೆ ಪ್ರಕರಣವೊಂದರಲ್ಲಿ (ಅದು ಸರಿಯೋ, ತಪ್ಪೋ) ಆರೋಪಿಯಾಗಿ ಅರೆಸ್ಟಾದ ವ್ಯಕ್ತಿಯ, ಅದೂ ತನ್ನ ಎದುರಾಳಿ ರಾಜಕೀಯ ಮುಖಂಡನ ಮನೆಗೆ ಮಾಜಿ ಸಿಎಂ ಒಬ್ಬರು ಹೋಗಿಬಂದದ್ದು ಮೇಲ್ನೋಟಕ್ಕೆ ಕಾಣುವಷ್ಟು ‘ಸಾಂತ್ವನ’ದ ಪ್ರಸಂಗವಲ್ಲ. ಅದರ ಹಿಂದೆ ಸೋ ಕಾಲ್ಡ್ ಫೀನಿಕ್ಸ್ ರಾಜಕಾರಣಿ ದೇವೇಗೌಡರ ಸ್ಪಷ್ಟ ಲೆಕ್ಕಾಚಾರಗಳಿವೆ.

ಹೌದು, ದೇವೇಗೌಡರ ನೇರ ನಿರ್ದೇಶನಗಳಿಲ್ಲದೆ ಕುಮಾರಸ್ವಾಮಿ ಕನಕಪುರದ ಕೋಡಿಹಳ್ಳಿ ಮನೆಗೆ ಕಾಲಿಡಲು ಸಾಧ್ಯವೇ ಇಲ್ಲ. ಬಿಜೆಪಿಯ ಅಧಿಕಾರ ದುರ್ಬಳಕೆಯನ್ನು ವಿರೋಧಿಸಬೇಕೆನ್ನುವ ದಿಟ್ಟ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ತನ್ನ ಪಾರ್ಟಿಯ ಡಿ.ಕೆ.ಶಿವಕುಮಾರ್ ಪರವಾಗಿ ಗಟ್ಟಿ ದನಿ ಎತ್ತುತ್ತಿದೆಯಾದರು ಆ ಪಕ್ಷದ ಯಾರೂ ಶಿವಕುಮಾರ್ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಅಂತದ್ದರಲ್ಲಿ ಕುಮಾರಸ್ವಾಮಿ ಹೋಗಿ ಬಂದದ್ದನ್ನು ಅಷ್ಟು ಸಲೀಸಾಗಿ ನೋಡಲಾಗದು.

ಕೇಂದ್ರದ ಬಿಜೆಪಿ ಸರ್ಕಾರ, ನಿರ್ದಿಷ್ಟವಾಗಿ ಮೋದಿ-ಶಾ ಜೋಡಿ, ವಿರೋಧ ಪಕ್ಷಗಳನ್ನು ಮಟ್ಟಹಾಕಲು ಅಸ್ತ್ರವೊಂದನ್ನು ಅಣಿಗೊಳಿಸಿಕೊಂಡು ಕೂತಿದೆ. ಎದುರಾಳಿ ನಾಯಕರ ಮೇಲಿರುವ ಕೇಸುಗಳಿಗೆಲ್ಲ ಜೀವತುಂಬಿ ಬೆದರಿಸಿ, ಜೈಲುಭೀತಿ ಹುಟ್ಟಿಸಿ ಅವರನ್ನು ಒಂದೋ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳೋದು ಇಲ್ಲವೇ ಜೈಲಿಗೆ ತಳ್ಳಿ ಎದುರಾಳಿಗಳ ಬಲ ಕುಗ್ಗಿಸುವುದು ಈಗ ನಡೆಯುತ್ತಿರುವ ರಾಜಕೀಯ ಸರ್ಕಸ್ಸು. ಬೇರೆಬೇರೆ ಪಕ್ಷಗಳ ರಾಜಕಾರಣಿಗಳು ದಂಡಿಯಾಗಿ ಬಿಜೆಪಿಯತ್ತ ಗುಳೆ ಹೊರಟಿರೋದು ಈ ಅನುಮಾನವನ್ನು ದಟ್ಟವಾಗಿಸಿದರೆ, ಮಾಜಿ ಕೇಂದ್ರ ಮಂತ್ರಿ ಪಿ.ಚಿದಂಬರಂಗೆ ಆದ ಗತಿ ಇದನ್ನು ಒತ್ತಿ ಹೇಳುತ್ತೆ. ಕರ್ನಾಟಕದಲ್ಲೇ ತೆಗೆದುಕೊಂಡರೆ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರವನ್ನು ಅನಾಮತ್ತು ಅಡ್ಡಡ್ಡ ಮಲಗಿಸಿ ಮಹಾರಾಷ್ಟ್ರದ ರೆಸಾರ್ಟು ಸೇರಿಕೊಂಡ ಅತೃಪ್ತ ಕಂ ಅನರ್ಹ ಶಾಸಕರನ್ನು ಸೆಳೆದಿದ್ದೂ ಇದೇ ತಂತ್ರದಿಂದ ಎನ್ನುವುದು ದಿನೇದಿನೇ ದಟ್ಟವಾಗುತ್ತಿರುವ ಸಂಗತಿ.

ಈ ಭಯವೇ ದೇವೇಗೌಡರಿಗೆ ಕಾಡಲು ಶುರುವಾಗಿದೆಯಾ? ಇಂಥಾ ಡರ್ಟಿ ರಾಜಕಾರಣಕ್ಕೆ ಕೌಂಟರ್ ಕೊಡಲೆಂದೇ ಅವರು ತಮ್ಮ ವೆರಿ ಓಲ್ಡ್ ‘ಒಕ್ಕಲಿಗ’ಜಾತಿ ಅಸ್ತ್ರವನ್ನು ಮೊನಚು ಮಾಡಿಕೊಳ್ಳುತ್ತಿದ್ದಾರಾ? ಎಂಬೆಲ್ಲ ಅನುಮಾನಗಳು ಎಚ್ಡಿಕೆ ಹೋಗಿ ಡೀಕೆ ತಾಯಿಯನ್ನು ಭೇಟಿ ಮಾಡಿ ಬಂದದ್ದರ ಸುತ್ತ ತಲೆ ಎತ್ತುತ್ತಿವೆ. ಅಜಮಾಸು ಅರ್ಧ ಶತಮಾನಗಳ ಕಾಲ ರಾಜ್ಯ ಮತ್ತು ದೇಶ ರಾಜಕಾರಣದಲ್ಲಿ ಸರಿದಾಡಿದ ಗೌಡರ ಕುಟುಂಬದ ಬೆನ್ನಿಗೆ ದೊಡ್ಡ ಸಂಖ್ಯೆಗಳಲ್ಲಿ ಹಗರಣಗಳು ಮೆತ್ತಿಕೊಂಡಿಲ್ಲ ಎನ್ನುವುದು ನಿಜವೇ ಆದರು ಕ್ಲೀನ್‌ಚಿಟ್ ಪಡೆದು ಬೀಗುವಷ್ಟು ಪಾರದರ್ಶಕವಾಗೇನೂ ಅವರ ವ್ಯವಹಾರಗಳಿಲ್ಲ. ಅದರಲ್ಲೂ ತೀರಾ ಇತ್ತೀಚೆಗಿನ ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣ, ಫೋನ್ ಕದ್ದಾಲಿಕೆ ಹಗರಣ, ಮುಖ್ಯವಾಗಿ ಐಎಂಎ ವಂಚನೆ ಕೇಸುಗಳು ಕುಮಾರಸ್ವಾಮಿಯ ಮಗ್ಗುಲ ಮುಳ್ಳಾಗುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಸಮನ್ಸ್ ಕೂಡಾ ಜಾರಿಯಾಗಿದೆ. ಜೊತೆಗೆ ಅವರ ಕುಟುಂಬದಿಂದ ಸ್ಪರ್ಧಿಸಿದ್ದ ಮೂವರು ಹುರಿಯಾಳುಗಳಲ್ಲಿ ಗೆದ್ದ ಏಕೈಕ ಸಂಸದ ಪ್ರಜ್ವಲ್ ರೇವಣ್ಣರ ಆಯ್ಕೆ ಅನೂರ್ಜಿತಗೊಳಿಸಬೇಕೆಂದು ಬಿಜೆಪಿಯ ಎ.ಮಂಜು ಕೊಟ್ಟ ಕೇಸ್ ಕೂಡಾ ಹೈಕೋರ್ಟ್‌ನಲ್ಲಿ ಲಗುಬಗೆಯಿಂದ ವಿಚಾರಣೆಗೆ ಒಳಪಟ್ಟಿದೆ. ಇಷ್ಟು ಸಾಕಲ್ಲವೇ ಮೋ-ಶಾ ಜೋಡಿಗೆ ದೇವೇಗೌಡರ ಕುಟುಂಬವನ್ನು ಮಟ್ಟಹಾಕಲು.

ವೀರಶೈವ ಓಟ್‌ಬ್ಯಾಂಕ್ ಮೂಲಕ ಉತ್ತರ ಕರ್ನಾಟಕದಲ್ಲಿ ಭರ್ಜರಿ ಬೇರೂರಿರುವ ಬಿಜೆಪಿಯನ್ನು ಕರ್ನಾಟಕದಲ್ಲಿ ಗಟ್ಟಿ ನೆಲೆಗೊಳಿಸಬೇಕೆಂದರೆ ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಪ್ರಾಂತ್ಯದಲ್ಲೂ ಅಷ್ಟೇ ಆಳವಾಗಿ ಬೇರೂರಿಸಬೇಕು ಎಂಬ ಆಲೋಚನೆ ಬಿಜೆಪಿ ಹೈಕಮಾಂಡ್ ನದ್ದು. ಅದಕ್ಕೋಸ್ಕರ ಒಕ್ಕಲಿಗ ಲೀಡರುಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ತಂತ್ರಗಾರಿಕೆ ದೇವೇಗೌಡರ ಕಿವಿಗೂ ತಲುಪಿದೆ. ಈಗಾಗಲೇ ಡೀಕೆ ಮೇಲೆ ಮುರಕೊಂಡು ಬಿದ್ದಿರುವ ಮೋದಿ-ಶಾ ಜೋಡಿಯ ಮುಂದಿನ ಟಾರ್ಗೆಟ್ ತಮ್ಮ ಕುಟುಂಬ ಎನ್ನುವುದೂ ಅವರಿಗೆ ಚೆನ್ನಾಗಿ ಮನದಟ್ಟಾಗಿದೆ. ಅದರಲ್ಲೂ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಕರ್ನಾಟಕ ಪೊಲೀಸರು ದುಬೈಗೆ ಹೋಗಿ ಅರೆಸ್ಟು ಮಾಡಿ ಕರೆತರುತ್ತಿದ್ದ ಐಎಂಎ ಆರೋಪಿ ಮನ್ಸೂರ್ ಖಾನ್‌ನನ್ನು ಕೇಂದ್ರದ ಇಡಿ ಅಧಿಕಾರಿಗಳು ದೆಹಲಿಯಲ್ಲೇ ಅಡ್ಡಗಟ್ಟಿ ತಮ್ಮ ವಶಕ್ಕೆ ಪಡೆದಿದ್ದಂತೂ (ವಿಶ್ವಾಸಮತ ಹೈಡ್ರಾಮಾ ಅವಧಿಯಲ್ಲಿ ಸ್ವತಃ ಕುಮಾರಸ್ವಾಮಿ ಸದನದಲ್ಲೇ ಈ ಬಗ್ಗೆ ಹೇಳಿಕೊಂಡಿದ್ದರು) ಗೌಡರ ಕುಟುಂಬಕ್ಕೆ ದೊಡ್ಡ ಕಗ್ಗಂಟಾಗುವ ಸಾಧ್ಯತೆಯಿದೆ. ನೆನಪಿರಲಿ, ತನ್ನ ಮಗಳು ಶೀನಾ ಬೋರಾ ಮರ್ಡರ್ ಕೇಸಿನಲ್ಲಿ ಜೈಲುಹಕ್ಕಿಯಾಗಿರುವ ಇಂದ್ರಾಣಿ ಮುಖರ್ಜಿಯಿಂದ ಪಡೆದುಕೊಂಡ ಹೇಳಿಕೆಯನ್ನು ನೆಪವಾಗಿಟ್ಟುಕೊಂಡೇ ಪಿ.ಚಿದಂಬರಂ ಅವರನ್ನು ಅರೆಸ್ಟ್ ಮಾಡಿರೋದು. ಈಗ ಮನ್ಸೂರ್ ಖಾನನಿಂದಲೂ ಅಂತದ್ದೇ ಹೇಳಿಕೆ ಬರೆಸಿಕೊಳ್ಳೋದೇನು ಕಷ್ಟವಿಲ್ಲ. ಇನ್ನು ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿರೋದು ಕೂಡಾ ಗೌಡರ ಆತಂಕವನ್ನು ದುಪ್ಪಟ್ಟುಗೊಳಿಸಿರಲಿಕ್ಕೂ ಸಾಕು.

ಹಾಗಂತ, ಬಿಜೆಪಿಯ ಈ ಅರೆಸ್ಟ್ ರಾಜಕಾರಣಕ್ಕೆ ದೇವೇಗೌಡರ ಮೊದಲ ಅಸ್ತ್ರ ಜಾತಿ ರಾಜಕಾರಣವಾಗಿರಲಿಲ್ಲ. ಮೈತ್ರಿ ಸರ್ಕಾರವನ್ನು ಬಿಜೆಪಿ ಬೀಳಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು ತಮ್ಮ ವಾಕ್ಚಾತುರ್ಯವನ್ನು ಖರ್ಚು ಮಾಡಿದ್ದು ಸಿದ್ದರಾಮಯ್ಯನನ್ನು ತೆಗೆಳುವುದಕ್ಕೇ ವಿನಾಃ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕಲ್ಲ. ಒಂದು ಹಂತದಲ್ಲಿ, ಒಂದಷ್ಟು ಜೆಡಿಎಸ್ ಶಾಸಕರು ದೇವೇಗೌಡರ ಮನೆಯಲ್ಲಿ ಕೂತು ಬಿಜೆಪಿ ಸರ್ಕಾರಕ್ಕೆ ಬೆಂಬಲ ಕೊಡಬೇಕೆನ್ನುವ ಮಾತುಗಳೂ ಕೇಳಿಬಂದವು. ಆ ರೀತಿಯಲ್ಲಿ ಬಿಜೆಪಿಯೊಂದಿಗೆ ಸನಿಹಗೊಳ್ಳಲು ಗೌಡರು ಯತ್ನಿಸಿದ್ದುಂಟು. ಆದರೆ ಗೌಡರ ವರಾತಗಳ ಬಗ್ಗೆ ಚೆನ್ನಾಗಿ ಅರಿವಿರುವ ಬಿಜೆಪಿ ಅದಕ್ಕೆ ಸೊಪ್ಪು ಹಾಕಲಿಲ್ಲ.

ಯಾವಾಗ ಡೀಕೆ ಬುಡಕ್ಕೇ ‘ಇಡಿ’ ನೆಪದಲ್ಲಿ ಮೋ-ಶಾ ಜೋಡಿ ಲಗ್ಗೆ ಇಟ್ಟಿತೊ ಆಗ ಗೌಡರಿಗೆ ಅನಿವಾರ್ಯವಾಗಿ ಉಳಿದದ್ದು ತಮ್ಮ ಹಳೇ ಅಸ್ತ್ರ. ಅದು ಜಾತಿ ರಾಜಕಾರಣ. ಡೀಕೆ ಬಂಧನ ವಿರೋಧಿಸಿ ಒಕ್ಕಲಿಗರ ಪ್ರಾಬಲ್ಯವಿರುವ ಸ್ಥಳಗಳಲ್ಲಿ (ಅಲ್ಲಿ ಸ್ವತಃ ಕಾಂಗ್ರೆಸ್ ಪಕ್ಷ ಬಲಾಢ್ಯವಾಗಿಲ್ಲವಾದರು) ದೊಡ್ಡದೊಡ್ಡ ಪ್ರತಿಭಟನೆಗಳು ನಡೆದಿವೆ, ವಿಶ್ವ ಒಕ್ಕಲಿಗರ ಸಂಘ ಕೇಂದ್ರದ ದ್ವೇಷ ರಾಜಕಾರಣದ ವಿರುದ್ಧ ಹೇಳಿಕೆ ಕೊಟ್ಟಿದೆ. ಇವೆಲ್ಲವುಗಳ ಹಿಂದೆ ದೇವೇಗೌಡರ ಮುತುವರ್ಜಿ ಇದೆ ಎನ್ನುವುದು ಲೇಟೆಸ್ಟ್ ವರ್ತಮಾನ. ಆ ಮೂಲಕ ಒಕ್ಕಲಿಗ ನಾಯಕರ ಮೇಲೆ (ತಮ್ಮ ಕುಟುಂಬದ ಮೇಲೆ) ಅಟ್ಯಾಕ್ ಮಾಡಿದರೆ ಇಡೀ ಒಕ್ಕಲಿಗ ಸಮುದಾಯವೇ ಬಿಜೆಪಿ ವಿರುದ್ಧ ತಿರುಗಿಬೀಳಲಿದೆ ಎಂಬ ಸಂದೇಶವನ್ನು ಡೀಕೆ ಪ್ರಕರಣದ ಮೂಲಕ ಬಿಜೆಪಿ ಹೈಕಮ್ಯಾಂಡ್‌ಗೆ ರವಾನಿಸಲು ಗೌಡರು ಯತ್ನಿಸುತ್ತಿದ್ದಾರೆ.

ಅದರ ಭಾಗವಾಗಿಯೇ ಕುಮಾರಸ್ವಾಮಿ, ಡಿಕೆಶಿಯವರ ಮನೆಗೆ ಹೋಗಿ ಅವರ ತಾಯಿ ಜೊತೆ ಮಾತನಾಡುವ ಭಾವನಾತ್ಮಕ ಎಪಿಸೋಡು ಕ್ರಿಯೇಟ್ ಆಗಿರೋದು. ಅಲ್ಲಿ ನಿಂತು ಆಡಿದ ಕುಮಾರಸ್ವಾಮಿಯವರ ಮಾತಿನಲ್ಲೂ ಜಾತಿಯನ್ನು ಎಳೆದು ತರುವ ಪ್ರಯತ್ನ ಜೋರಾಗಿಯೇ ನಡೆಯಿತು. ‘ನಾನು ೧೪ ತಿಂಗಳ ಕಾಲ ಮುಖ್ಯಮಂತ್ರಿ ಆಗಿದ್ದೆ. ಮನಸ್ಸು ಮಾಡಿದ್ದರೆ ಯಡಿಯೂರಪ್ಪ ಅವರ ಆಡಿಯೊ ಪ್ರಕರಣವನ್ನು ಇಟ್ಟುಕೊಂಡು ಕ್ರಮ ಕೈಗೊಳ್ಳಬಹುದಿತ್ತು. ಹಾಗೆ ಮಾಡಿದ್ದರೆ ವೀರಶೈವ ಸಮಾಜದ ಮುಖಂಡರ ಮೇಲೆ ಕುಮಾರಸ್ವಾಮಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ದೂರುತ್ತಿದ್ದರು. ಈಗಾಗಲೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐ.ಟಿ. ಅಧಿಕಾರಿಗಳು ಅವರನ್ನು ಬಲಿ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಶಿವಕುಮಾರ್‌ಗೆ ತೊಂದರೆ ಕೊಡುತ್ತಿದ್ದಾರೆ’ ಎನ್ನುವ ಕುಮಾರಸ್ವಾಮಿಯವರ ಮಾತಿನಲ್ಲಿ ಜಾತಿ ರಾಜಕಾರಣ ಎದ್ದು ಕಾಣುತ್ತದೆ. ಸಿದ್ಧಾರ್ಥ್ ಆತ್ಮಹತ್ಯೆ ಮತ್ತು ಡೀಕೆ ಬಂಧನ ಪ್ರಕರಣಗಳನ್ನು ಮುಂದೆ ಮಾಡಿ ಬಿಜೆಪಿಯ ಅಡ್ಡಹಾದಿಗೇ ಚೆಕ್‌ಪೋಸ್ಟ್ ಕಟ್ಟುವ ಪ್ರಯತ್ನ ಇದು. ಈ ಪ್ರಯತ್ನದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೊ ಕಾದುನೋಡಬೇಕು. ಒಟ್ಟಿನಲ್ಲಿ ಕುತಂತ್ರಗಳೇ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ನಾವಿರೋದು ದುರಂತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇಂದ್ರಾಣಿ ಮುಖರ್ಜಿಯ ಹೇಳಿಕೆಯ ಆಧಾರದ ಮೇಲೆ ಚಿದಂಬರಂರನ್ನು ಬಂಧಿಸಿರುವ ರೀತಿಯಲ್ಲಿಯೇ; ಡಿಕೆಶಿ ಬಾಯಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿಯವರ ಹೆಸರು ಹೇಳಿಸಿ, ಇವರಿಬ್ಬರ ವಿರುದ್ಧವೂ ಎಫ್. ಐ.ಆರ್ ಮತ್ತು ಆರೋಪ ಪಟ್ಟಿ ಸಲ್ಲಿಸುವ ಎಲ್ಲಾ ಸಾಧ್ಯತೆಗಳು ಇವೆ.

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...