ಕಾಶ್ಮೀರ ವಿಷಯದಲ್ಲಿ ಜವಹರಲಾಲ್ ನೆಹರು ಮಹಾ ತಪ್ಪು ಮಾಡಿದ್ದಾರೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ನಾಯಕನಿಗೆ ಇತಿಹಾಸದ ಅರಿವಿಲ್ಲ. ಅವರು ಇತಿಹಾಸವನ್ನು ತಿರುಚುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ.
ನೆಹರು ತಮ್ಮ ಜೀವನವನ್ನು ಈ ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು. ಹಲವಾರು ವರ್ಷ ಜೈಲುವಾಸ ಅನುಭವಿಸಿದ್ದರು. ಅಮಿತಾ ಶಾ ಅವರಿಗೆ ಇತಿಹಾಸದ ಅರಿವಿಲ್ಲ. ಅವರು ಇತಿಹಾಸ ತಿರುಚಿ ಬರೆಯುವಾಗ ತಿಳಿದುಕೊಳ್ಳುತ್ತಾರೆ ಎಂಬ ನಿರೀಕ್ಷೆಯೂ ನನಗಿಲ್ಲ ಎಂದಿದ್ದಾರೆ.
ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಲಾಗ್ತಿದೆ. ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಿಜೆಪಿಯವರಿಗೆ ಆಸಕ್ತಿಯಿಲ್ಲ. ಜನರ ಸಮಸ್ಯೆಗಳ ಕುರಿತು ಚರ್ಚಿಸಲು ಅವರು ಭಯ ಭೀತರಾಗಿದ್ದಾರೆ. ಹಾಗಾಗಿ, ಅದರಿಂದ ದೂರ ಹೋಗುತ್ತಿದ್ದಾರೆ. ಕಾಂಗ್ರೆಸ್ ಜನರ ಹಕ್ಕುಗಳಿಗಾಗಿ ಹೋರಾಡಲಿದೆ ಎಂದು ಸಂಸತ್ತಿನ ಹೊರಗೆ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯ ರದ್ದತಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ಶ್ಲಾಘಿಸಿದ್ದ ಅಮಿತ್ ಶಾ, 1948 ರಲ್ಲಿ ಪಾಕಿಸ್ತಾನಿ ಆಕ್ರಮಣಕಾರರಿಂದ ರಾಜ್ಯವನ್ನು ಭಾರತದ ವಶಕ್ಕೆ ತೆಗೆದುಕೊಳ್ಳುವ ಬದಲು ನೆಹರು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಿಕೊಂಡಿದ್ದರು. ಈ ಮೂಲಕ ಮಹಾ ತಪ್ಪು ಮಾಡಿದ್ದರು ಎಂದು ಲೋಕಸಭೆಯಲ್ಲಿ ಹೇಳಿದ್ದರು.
ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ರಾಷ್ಟ್ರಪತಿಗಳ ಆದೇಶವನ್ನು ಸೋಮವಾರ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ತೀರ್ಪು ಪ್ರಕಟಿಸುವ ವೇಳೆ ಸೆಪ್ಟೆಂಬರ್ 30, 2024 ರೊಳಗೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಇದನ್ನೂ ಓದಿ : Explained : 370ನೇ ವಿಧಿ ರದ್ದು; 1947ರಿಂದ ಇದುವರೆಗೆ ನಡೆದಿದ್ದೇನು?