Homeಮುಖಪುಟಮುದುಕರು ಎನೊ ಇದ್ದೀವಿ, ಮೂರ್ಖರು ಹೌದೊ ಅಲ್ಲವೋ ಅವರವರ ಗ್ರಹಿಕೆಗೆ ಬಿಟ್ಟದ್ದು ಅಂದಿದ್ದ ಬ್ರಿಟನ್ ನ್ಯಾಯಾಧೀಶ

ಮುದುಕರು ಎನೊ ಇದ್ದೀವಿ, ಮೂರ್ಖರು ಹೌದೊ ಅಲ್ಲವೋ ಅವರವರ ಗ್ರಹಿಕೆಗೆ ಬಿಟ್ಟದ್ದು ಅಂದಿದ್ದ ಬ್ರಿಟನ್ ನ್ಯಾಯಾಧೀಶ

ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಬರೀ ರಾಜಕಾರಣಿಗಳು ತುಂಬಿದಾರ. ಅದು ಬ್ಯಾಡ. ನಾವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದೋಣ ಅಂತ ಹೇಳಿ, ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಸಮಿತಿಯ ಇತರ ರಾಷ್ಟ್ರ ಪ್ರೇಮಿಗಳು ನಮಗ ಬೇರೆ ಪದ್ಧತಿ ಮಾಡಿಕೊಟ್ಟರು.

- Advertisement -
- Advertisement -

ಬ್ರಿಟನ್‌ನ ಪ್ರಜೆಗಳಿಗೆ 2009 ಅನ್ನುವುದು ಐತಿಹಾಸಿಕ ವರ್ಷ. ಅದು ಯಾಕ ಅಂದ್ರ, ಅಲ್ಲಿ ಒಂದು ಐತಿಹಾಸಿಕ ಘಟನೆ ನಡೀತು.

ಆ ವರ್ಷದ ಸುರುವಾತಿಗೆ ಅಲ್ಲಿನ ರಾಜ ವಂಶಸ್ಥ ರಾಜಕುಮಾರ ವಿಲಿಯಮ್ ಅವರು ತಮ್ಮ ಪದವಿ ಮುಗಿಸಿ ಬ್ರಿಟಿಷ್ ವಾಯುಸೇನೆ ಸೇರಿಕೊಂಡರು, ಅದರ ತುರ್ತು ಸೇವೆ ಹಾಗೂ ರಕ್ಷಣೆ ವಿಭಾಗದ ಹುಡುಕು- ಮತ್ತು – ಉಳಿಸು ವಿಭಾಗದ ಫ್ಲೈಟ್ ಲೆಫ್ಟ್ ನೆಂಟ್ ಆಗಿ ಕೆಲಸ ಮಾಡಿದರು.

ಆ ವರ್ಷದ ಕೊನೆಗೆ ಅವರು ತಮ್ಮ ಹೇರ್‌ಸ್ಟೈಲ್ ಬದಲಾಯಿಸಿಕೊಂಡರು.

ನಮ್ಮ ಧಾರವಾಡ ಕಡೆ ಇಂಥವುಕ್ಕೆಲ್ಲಾ ಯಾಕ ಐತಿಹಾಸಿಕ ಘಟನೆ ಅಂತೇವಿ ಅಂದ್ರ, ನಾವು ಆ ಕಾಲದ ಬಗ್ಗೆ ಮಾತಾಡೋವಾಗ, ನಾವು ಆ ಕಾಲಕ್ಕ ಹೋಗಿ- ನೋಡರೆಪಾ ಇದು ಹಿಂಗ ಐತಿ, ಅದು ಹಂಗ ಐತಿ ಅಂತ ಹೇಳತೇವಿ. ಅದಕ್ಕ ಅದು ಐತಿಹಾಸಿಕ.

ಆದರ ನಾ ಹೇಳ್ತಾ ಇರೋದು ಇಂಗ್ಲಂಡಿನ ಐತಿಹಾಸಿಕ ಘಟನೆ ವಿಲಿಯಮ್ ಅವರ ನೌಕರಿ ಅಥವಾ ತಲೆಗೂದಲು ಬಿಡುವ ಶೈಲಿಯ ಸುದ್ದಿ ಅಲ್ಲ.

ಅಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟು ಅನ್ನುವುದು ಶುರು ಆಯಿತು. ಹಂಗಅಂದ್ರ ಒಂದು ಸಾವಿರ ವರ್ಷ ಇತಿಹಾಸ ಇರೋ ಇಂಗ್ಲೀಷ್ ನ್ಯಾಯದಾನ ವ್ಯವಸ್ಥೆಗೆ ಮುಖ್ಯಸ್ಥರು ಅನ್ನುವವರು ಇರಲೇ ಇಲ್ಲೇನು? ಮೇಲ್ಮನವಿ ಅನ್ನೋ ಅವಕಾಶ ಇರಲೇ ಇಲ್ಲೇನು?

ವಿಪರೀತ ಶ್ರೇಣೀಕೃತ ನ್ಯಾಯಾಂಗ ವ್ಯವಸ್ಥೆಯ ಒಳಗೆ ಇರೋ ಭಾರತೀಯರಿಗೆ ಈ ಥರ ಸಂದೇಹ ಬರೋದು ಸಹಜ. ಅದರಾಗ ನಾವು ನಮ್ಮ ನ್ಯಾಯಾಂಗ ಬ್ರಿಟಿಷರ ಮಾದರಿಯನ್ನು ಆಧರಿಸಿದ್ದು ಅಂತ ಹೆಮ್ಮೆಯಿಂದ ಹೇಳಿಕೊಳ್ಳೋರು. ಹಂಗಾಗಿ ನಮಗ ಒಂದು ದಾರಿ ತೋರಿಸಿ ಅವರು ಇನ್ನೊಂದು ಹಿಡಿದರೇನಪ್ಪಾ? ಅಂತ ಅನ್ನಿಸಿಯೇ ಅನ್ನಿಸತದ.

ಮಜಾ ಏನು ಅಂದ್ರ, ಇವೆಲ್ಲಾ ಇತ್ತು. ಆದರ ಅದರ ಸ್ವರೂಪ ಬೇರೆ ಇತ್ತು. ಆಶ್ಚರ್ಯಕರ ಸಂಗತಿ ಏನು ಅಂದ್ರ 1065ಇಸವಿಯಲ್ಲಿ ಶುರು ಆದ ಬ್ರಿಟನ್ ನ್ಯಾಯದಾನ ವ್ಯವಸ್ಥೆ ಒಳಗ ಸುಪ್ರೀಂ ಕೋರ್ಟು ಅನ್ನೋ ಪ್ರತ್ಯೇಕ ಅಂಗ ಇರಲೇ ಇಲ್ಲ.

ಅಲ್ಲಿನ ಸಂಸತ್ತಿನ ಮೇಲ್ಮನೆ ಸದಸ್ಯರು ಅಲ್ಲಿನ ಸರ್ವೋಚ್ಚ ನ್ಯಾಯಾಧೀಶರಾಗಿದ್ದರು. ನ್ಯಾಯಾಂಗದ ಸ್ವಾತಂತ್ರ‍್ಯವನ್ನು ಹಾಗೂ ನಮ್ಮ ರಾಜ್ಯಸಭೆಗೆ ನೇಮಕವಾಗುವ ಪುಣ್ಯಾತ್ಮರ ನವರಂಗೀ ವ್ಯಕ್ತಿತ್ವಗಳನ್ನ ಕಂಡ ಭಾರತೀಯರಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟ.

‘ಎಂಪಿ ಆಗೋವಂತ ಮನುಷ್ಯರು ನ್ಯಾಯಾಧೀಶರಾಗುವುದು, ನ್ಯಾಯ ನಿರ್ಣಯ ಮಾಡುವುದು ಹೆಂಗ ಸಾಧ್ಯ’ ಅಂತ ನಾವು ತಲಿ ಕೆರಕೋತ ಕೂಡಬಹುದು.

ಆದರ ಅಲ್ಲಿ ಹಂಗ ಆತು. ಅಷ್ಟ ಅಲ್ಲ, ಅದು ಒಂದು ಸಾವಿರ ವರ್ಷ ನಡೀತು. ಹಂಗ ಅಂತ ಅಲ್ಲಿನ ನ್ಯಾಯಾಧೀಶರು ಆಯೋಗ್ಯರಾಗಿರಲಿಲ್ಲ. ಭಾರತದ ದಿಕ್ಕು ಬದಲಿಸಿದ ಅನೇಕ ತೀರ್ಪುಗಳು ಅಲ್ಲಿಂದ ಹೊರಗಬಿದ್ದವು.

ಮೂರು ನೂರು ವರ್ಷಗಳ ಅವಧಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಮಾಡಿದ ಅನೇಕ ಜನ ವಿರೋಧಿ ಆದೇಶಗಳನ್ನು ಪ್ರಿವಿ ಕೌನ್ಸಿಲ್ ತಳ್ಳಿಹಾಕಿತು. ಭಾರತೀಯರ ಮೇಲೆ ದಬ್ಬಾಳಿಕೆ ನಡೆಸಬೇಕು ಅಂತ ಬ್ರಿಟಿಷ್ ಸಂಸದರು ಪಾಸು ಮಾಡಿದ ಅನೇಕ ಕ್ರೂರ ಕಾನೂನುಗಳನ್ನ ಸ್ವಾಭಾವಿಕ ನ್ಯಾಯ ಹಾಗೂ ಸಿದ್ಧ ನ್ಯಾಯ ಪ್ರಕ್ರಿಯೆಯ ವಿರುದ್ಧವಾಗಿ ಇರೋ ಕಾರಣಗಳಿಗೆ ರದ್ದು ಮಾಡಿತು.

ಉದಾಹರಣೆಗೆ ರಾಜಾ ರಾಮ್ ಮೋಹನ್ ರಾಯ ಅವರು ಸತಿ ಪದ್ಧತಿ ನಿಷೇಧ ಮಾಡಲು ಹೋರಾಟ ನಡೆಸಿದಾಗ ಅಲ್ಲಿನ ‘ಪ್ರಿವಿ ಕೌನ್ಸಿಲ್’ ಅಂದ್ರ ಅಂದಿನ ಸುಪ್ರೀಂ ಕೋರ್ಟು, ನಿಷೇಧವನ್ನು ಎತ್ತಿ ಹಿಡಿಯಿತು. ರಾಮ್ ಮೋಹನ್ ರಾಯ ಅವರ ಬೆಂಬಲಕ್ಕ ನಿಂತುಕೊಂಡಿತು.

‘ಮೊಹರಿ ಬೀಬಿ ವಿ. ಧರ್ಮ ದಾಸ ಘೋಷ್’ ಎನ್ನುವ ಪ್ರಕರಣದಾಗ ವಯಸ್ಕರೊಂದಿಗೆ ಮಾತು ಕರಾರು ಸಾಧ್ಯ. ಚಿಕ್ಕ ಮಕ್ಕಳೊಂದಿಗೆ ಕರಾರು ಮಾಡಿಕೊಂಡರೆ ಅದು ಗೈರು ಕಾನೂನಿ ಅಂತ ಹೇಳಿತು. ಇಡೀ ಭಾರತೀಯ ಕರಾರು ಕಾನೂನು ಸಂಹಿತೆ ನಿಂತಿರೋದು ಈ ತೀರ್ಪಿನ ಮೇಲೆಯೇ.

ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಬರೀ ರಾಜಕಾರಣಿಗಳು ತುಂಬಿದಾರ. ಅದು ಬ್ಯಾಡ. ನಾವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದೋಣ ಅಂತ ಹೇಳಿ, ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಸಮಿತಿಯ ಇತರ ರಾಷ್ಟ್ರ ಪ್ರೇಮಿಗಳು ನಮಗ ಬೇರೆ ಪದ್ಧತಿ ಮಾಡಿಕೊಟ್ಟರು.

ನಮ್ಮಲ್ಲಿ ನ್ಯಾಯಾಧೀಶರು ನ್ಯಾಯಾಧೀಶರನ್ನ ನೇಮಿಸುತ್ತಾರೆ. ಅದು ಅಲ್ಲದೇ ನ್ಯ್ಯಾಯಾಧೀಶರ ವಿರುದ್ಧ ಏನಾದರೂ ದೂರು ಬಂದರೆ ಅದನ್ನ ಅವರೇ ವಿಚಾರಣೆ ಮಾಡಿ ಅವರೇ ತೀರ್ಪು ಕೊಡ್ತಾರ. ಇದು ಯಾಕ್ ಅಂದ್ರ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಆಡಳಿತ ವ್ಯವಸ್ಥೆಯ ನಿಯಂತ್ರಣ ಇರಬಾರದು. ಅವರು ತಮ್ಮ ಆತ್ಮ ನಿರೀಕ್ಷಣೆಯಿಂದ ತಾವೇ ತಮ್ಮನ್ನು ತಿದ್ದಿಕೊಳ್ಳಲಿ, ಅಂತ ಹೇಳಿ ಮಾಡಿರುವ ವ್ಯವಸ್ಥೆ.

ಅವರನ್ನು ರಚನಾತ್ಮಕವಾಗಿ ಟೀಕೆ ಮಾಡಬಹುದು ಆದರೆ ಸಬೂತು ಇಲ್ಲದೇ ಟೀಕೆ ಮಾಡಬಾರದು. ಅವರ ಕೆಲಸದ ಬಗ್ಗೆ ಸದುದ್ದೇಶದ ಟಿಪ್ಪಣಿ ಮಾಡಬಹುದು, ದುರುದ್ದೇಶಪೂರಿತವಾಗಿ ಮಾಡಬಾರದು. ತೀರ್ಪು ಕೊಡುವವನ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ, ಪಟ್ಟಭದ್ರ ಹಿತಾಸಕ್ತಿಯಿಂದ ಅಥವಾ ವೃಥಾ ಹಗರಣ ಸೃಷ್ಟಿಸುವಂತೆ ನಿಂದೆ ಮಾಡಬಾರದು ಅನ್ನುವ ನಿಯಮ ಇದೆ.

ಬ್ರಿಟನ್ನಿನಲ್ಲಿ ಗಾರ್ಡಿಯನ್ ಪತ್ರಿಕೆ ಒಮ್ಮೆ ನ್ಯಾಯಾಧೀಶರನ್ನ ಮೂರ್ಖ ಮುದುಕರು ಅಂತ ಮೂದಲಿಸಿತು. ಅದಕ್ಕೆ ಅಲ್ಲಿನ ನ್ಯಾಯಾಧೀಶ ಲಾರ್ಡ್ ಟೆಂಪಲ್ಮ್ಯಾ ಅವರು ‘ನಾವು ಮುದುಕರು ಅನ್ನುವುದು ಸತ್ಯ. ಮೂರ್ಖರು ಹೌದೊ ಅಲ್ಲವೋ ಅನ್ನುವುದು ಅವರವರ ಗ್ರಹಿಕೆಗೆ ಬಿಟ್ಟ ವಿಷಯ’ ಅಂತ ಹೇಳಿದರು. ಸರಕಾರವೇ ದಾಖಲಿಸಿದ ನ್ಯಾಯಾಂಗನಿಂದನೆ ಪ್ರಕರಣವನ್ನು ಕೈ ಬಿಟ್ಟರು. ಗಾರ್ಡಿಯನ್ ಪ್ರಕರಣ 1987ರಲ್ಲಿ ನಡೆದಿತ್ತು.

ರಾಜಕಾರಣಿಗಳೇ ನ್ಯ್ಯಾಯಾಧೀಶರಾಗಿದ್ದ ಬ್ರಿಟಿಷ್ ಸುಪ್ರೀಂ ಕೋರ್ಟು ಅತ್ಯಂತ ನ್ಯಾಯ ನಿಷ್ಟುರವಾಗಿ ನಡೆದುಕೊಂಡಾಗ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಇರೋ ನಮ್ಮ ದೇಶದಾಗ ಯಾಕ ನಮ್ಮ ನ್ಯಾಯಾಧೀಶರು ಶೀಘ್ರ ಕೋಪದವರು ಇದ್ದಾರ?

ಡೇಲಿ ಮಿರರ ಪತ್ರಿಕೆ ನ್ಯಾಯಾಧೀಶರನ್ನ ಪ್ರಜೆಗಳ ವಿರೋಧಿಗಳು ಅಂತ ಕರೆದಾಗ `ಅದನ್ನು ಜನ ನಿರ್ಧರಿಸುತ್ತಾರೆ’, ಅಂತ ನ್ಯಾಯಾಂಗ ನಿಂದನೆ ಕೈ ಬಿಟ್ಟರು. ಇದು ನಡೆದಿದ್ದು 2016ರಾಗ. ಅಂದ್ರ ಹೊಸ ಸುಪ್ರೀಂ ಕೋರ್ಟು ಅಸ್ತಿತ್ವಕ್ಕೆ ಬಂದ ಮ್ಯಾಲೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ ಅವರು ದಶಕಗಟ್ಟಲೆ ಜನಪರ ಹೋರಾಟ ಮಾಡಿದಾರು. ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಿ ಬೋಫೋರಸು ಹಗರಣದ ವಿಚಾರಣೆ ಬರುವಂತೆ ಮಾಡಿದರು. ಮೊನ್ನೆ ಮೊನ್ನೆ ಲೋಕಪಾಲ್ ಹೋರಾಟದಾಗ ಭಾಗಿ ಆದರು. ಅದರಿಂದ ಕಾಂಗ್ರೆಸ್ಸು ನಷ್ಟ ಅನುಭವಿಸುವಂತೆ ಆತು. ಆಮ್ ಆದಮಿ ಹಾಗೂ ಬಿಜೆಪಿ ಪಕ್ಷಗಳಿಗೆ ನೇರವಾಗಿ ಇಲ್ಲದಿದ್ದರೂ ಸುತ್ತು ಬಳಸಿ ಅನುಕೂಲವಾಗುವಂತೆ ಆತು. ಅದನ್ನು ಅವರು ರಾಜಕೀಯ ಕಾರಣ ಇಟ್ಟುಕೊಂಡು ಮಾಡಿಲ್ಲ ಅನ್ನೋದಕ್ಕೆ ಸಾಕ್ಷಿ ಏನು ಅಂದ್ರ ಅವರು ಕೇಜರಿವಾಲ್ ಪಕ್ಷ ಅಥವಾ ಸರಕಾರ ಸೇರಲಿಲ್ಲ. ಇನ್ನ ಇಂದಿನ ಸರಕಾರದ ಆಡಳಿತದ ವಿರುದ್ಧ ನಿರಂತರ ಹೋರಾಟ ಮಾಡಲಿಕ್ಕೆ ಹತ್ತ್ಯಾರ.

ಆಳುವ ಪಕ್ಷದ ವಿರೋಧಿಗಳು ನಮ್ಮ ವಿರೋಧಿಗಳು ಅಂತ ಎನರ ನ್ಯಾಯಾಂಗದವರು ತಿಳಕೋಂಡ್ರ ಅದು ಅವರ ತಪ್ಪಲ್ಲ. ನಮ್ಮ ತಪ್ಪು.

ಇದರಾಗ ಒಂದು ಸೂಕ್ಷ್ಮ ವಿಚಾರ ಐತಿ ನೋಡ್ರಿ.

ಅದು ಎನಪಾ ಅಂದ್ರ ಭಾರತದಲ್ಲಿ ಆಳುವ ಪಕ್ಷ, ವಿರೋಧ ಪಕ್ಷ ಅನ್ನೋ ಕಲ್ಪನೆ ಇಲ್ಲ. ಇಲ್ಲಿ ಇರೋದು ನಿನ್ನೆಯ ಆಳುವ ಪಕ್ಷ, ಇಂದಿನ ಆಳುವ ಪಕ್ಷ ಹಾಗೂ ನಾಳೆಯ ಆಳುವ ಪಕ್ಷ ಅಂತ ಪತ್ರಿಕೋದ್ಯಮ ತಜ್ಞ ಎಂ. ಎ. ಈಪನ್ ಅವರು ಹೇಳುತ್ತಿದ್ದರು. ನೀವು ನಿನ್ನೆಯ ಆಳುವ ಪಕ್ಷದ ವಿರೋಧ ಮಾಡರಿ, ಅಥವಾ ಇಂದಿನ ಆಳುವ ಪಕ್ಷದ ವಿರೋಧ ಮಾಡ್ರಿ, ನೀವು ಇಬ್ಬರಿಗೂ ವಿರೋಧಿಗಳೇ ಹೊರತು, ಯಾರಿಗೂ ಮಿತ್ರರಲ್ಲ. ಅದಕ್ಕೆ ಬಸವಣ್ಣ ಖಂಡಿತವಾದಿ, ಲೋಕ ವಿರೋಧಿ ಅಂತ ಹೇಳಿದ್ದು ಐತಿ ನೋಡ್ರಿಪಾ.

ಅಂದ ಹಂಗ ಇಲ್ಲೇ ನೋಡ್ರಿ ಮತ್ತೊಮ್ಮೆ `ಐತಿ’ ಅನ್ನೋದು ಬಂತು. ಇದೂ ಕೂಡ ಐತಿಹಾಸಿಕ ಆಗೋ ಲಕ್ಷಣ ಕಾಣಾಕ ಹತ್ಯಾವು. ಅಲ್ಲಾ!


ಇದನ್ನೂ ಓದಿ: ಭೂಷಣ್ ಪ್ರಕರಣ: ರಚನಾತ್ಮಕ ಟೀಕೆಯೊಂದನ್ನು ಸಹಿಸಲಾಗದಷ್ಟು ಸಂಕುಚಿತವೇ ಸುಪ್ರೀಮ್ ಭುಜಗಳು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...