ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪಕ್ಷದ ಶಾಸಕರನ್ನು ಖರೀದಿಸಲು ಬಿಜೆಪಿ ನಾಯಕರು ಯತ್ನಿಸಿದ್ದಾರೆಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇಂದು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗಿಯಾಗಿರುವುದು ಕಂಡುಬಂದರೆ ಅವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಹಿಂದೆ ದೆಹಲಿ, ಪಂಜಾಬ್ ಮತ್ತು ಇತರ ಎಂಟು ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡುವ ಪ್ರಯತ್ನಗಳನ್ನು ಬಿಜೆಪಿ ಮಾಡಿತ್ತು ಎಂದಿರುವ ಅವರು, “ಬಿಜೆಪಿ ಆಡುತ್ತಿರುವ ಕೆಟ್ಟ ಆಟವು (dirty game) ತೆಲಂಗಾಣದಲ್ಲಿ ಈ ಬಾರಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ” ಎಂದು ಕುಟುಕಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇತ್ತೀಚೆಗೆ ಭಾರತ್ ರಾಷ್ಟ್ರ ಸಮಿತಿ ಎಂದು ಮರುನಾಮಕರಣಗೊಂಡ ತೆಲಂಗಾಣ ರಾಷ್ಟ್ರ ಸಮಿತಿಗೆ ಸೇರಿದ ಕೆಲವು ಶಾಸಕರನ್ನು ಬಿಜೆಪಿಗೆ ಸೆಳೆಯುವುದಕ್ಕಾಗಿ ಲಂಚ ನೀಡಲು ಯತ್ನಿಸಲಾಗಿದೆ ಎಂಬ ಆರೋಪ ಬಂದಿದೆ. ಮೂವರು ವ್ಯಕ್ತಿಗಳ ನಡುವಿನ ಸಂಭಾಷಣೆಯನ್ನು ಹೊಂದಿರುವ ಆಡಿಯೊ ಕ್ಲಿಪ್ ವೈರಲ್ ಆಗಿದೆ.
ಆಡಿಯೊವನ್ನು ಉಲ್ಲೇಖಿಸಿರುವ ಸಿಸೋಡಿಯಾ, “‘ಶಾಹ್ ಜಿ’ ಎಂಬವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಿದ್ದರೆ, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಏಕೆಂದರೆ ಒಬ್ಬ ದಲ್ಲಾಳಿ, ಶಾಸಕನನ್ನು ಖರೀದಿಸಿ ಸಿಕ್ಕಿಬಿದ್ದರೆ ಮತ್ತು ದೇಶದ ಗೃಹ ಸಚಿವರ ಹೆಸರು ಅದರಲ್ಲಿ ಕೇಳಿಬಂದರೆ ಅದು ಇಡೀ ದೇಶಕ್ಕೆ ಅಪಾಯಕಾರಿ” ಎಂದು ಎಚ್ಚರಿಸಿದ್ದಾರೆ.
ಕಳೆದ ಬುಧವಾರ ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪಕ್ಷದ ಶಾಸಕರನ್ನು ಬಿಜೆಪಿಗೆ ಸೆಳೆಯುವ ಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿತ್ತು. ತಮ್ಮ ಕಸ್ಟಡಿಗೆ ನೀಡುವಂತೆ ಕೋರಿದ್ದ ಪೊಲೀಸರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರಿಂದ ಈ ಮೂವರು ಹೊರಬರಲು ಸಾಧ್ಯವಾಯಿತು.
ಆರೋಪಿಗಳನ್ನು ಹೈದರಾಬಾದ್ ಸಮೀಪದ ಫಾರ್ಮ್ಹೌಸ್ನಲ್ಲಿ ಬಂಧಿಸಲಾಗಿತ್ತು. ಟಿಆರ್ಎಸ್ನ ನಾಲ್ವರು ಶಾಸಕರನ್ನು ಬಿಜೆಪಿಗೆ ಸೆಳೆಯಲು ಲಂಚ ನೀಡುತ್ತಿದ್ದ ವೇಳೆ ಸಿಕ್ಕಿಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದರು.
ತೆಲಂಗಾಣದಲ್ಲಿ ಬಿಜೆಪಿ ನಡೆಸುತ್ತಿರುವ ‘ಆಪರೇಷನ್ ಕಮಲ’ವನ್ನು ಉಲ್ಲೇಖಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಸೋಡಿಯಾ, “ಅಕ್ಟೋಬರ್ 27ರಂದು ಸೈಬರಾಬಾದ್ನಲ್ಲಿ ದಾಳಿ ನಡೆಸಿದಾಗ ಮೂವರು ಪಿಂಪ್ಗಳು ₹ 100 ಕೋಟಿಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ನಿಮ್ಮಲ್ಲಿ ಕೆಲವರು ವರದಿ ಮಾಡಿದ್ದರು. ಈ ದಲ್ಲಾಳಿಗಳು ಬಿಜೆಪಿಯ ಆಪರೇಷನ್ ಕಮಲವನ್ನು ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಮೂವರು ಬ್ರೋಕರ್ಗಳು- ರಾಮಚಂದ್ರ ಭಾರತಿ, ಸಿಮಯ್ಯ ಮತ್ತು ನಂದ್ ಕುಮಾರ್” ಎಂದು ಮಾಹಿತಿ ನೀಡಿದ್ದಾರೆ.
ಬಂಧಿತ ಮೂವರು ವ್ಯಕ್ತಿಗಳು ಮತ್ತು ಟಿಆರ್ಎಸ್ನ ಕೆಲವು ಶಾಸಕರ ನಡುವಿನ ಸಂಭಾಷಣೆಗಳ ಆಡಿಯೊ ರೆಕಾರ್ಡಿಂಗ್ ಸಂಬಂಧಿಸಿದಂತೆ ಸಿಸೋಡಿಯಾ ಮಾತನಾಡಿ, “ಅಕ್ಟೋಬರ್ 28 ರಂದು, ಅವರ ಸಂಪೂರ್ಣ ಸಂಭಾಷಣೆಯ ಆಡಿಯೋ ಹೊರಬಂದಿದೆ” ಎಂದಿದ್ದಾರೆ.
ದೆಹಲಿಯಲ್ಲಿ ನಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ತನ್ನ ಶಾಸಕರಿಗೆ ₹ 20 ಕೋಟಿ ನೀಡಲು ಯತ್ನಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ನಾಯಕರು ಕಳೆದ ಆಗಸ್ಟ್ನಲ್ಲಿ ಆರೋಪಿಸಿದ್ದರು. ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿತ್ತು.
ಇದನ್ನೂ ಓದಿರಿ: ಫ್ಯಾಕ್ಟ್ಚೆಕ್: ಅಪ್ಪು ಬಗ್ಗೆ ಹಗುರವಾಗಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆಯೇ?
ಎಎಪಿಯ ದೆಹಲಿ ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತು ಎಂಬ ಆರೋಪವನ್ನು ಉಲ್ಲೇಖಿಸಿದ ಸಿಸೋಡಿಯಾ, “ಇಂದು ಎರಡನೇ ಆಡಿಯೋ ರೆಕಾರ್ಡಿಂಗ್ ಹೊರಬಿದ್ದಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಇಂದು ಹೊಸ ಆಡಿಯೋ ಹೊರಬಿದ್ದಿದೆ. ಇದು ತೆಲಂಗಾಣದ ಶಾಸಕರು ಮತ್ತು ಆಪರೇಷನ್ ಕಮಲದ ನಡುವಿನ ಸಂಭಾಷಣೆಯಾಗಿದೆ. ದೆಹಲಿಯಲ್ಲೂ ಇದಕ್ಕೆ ಪ್ರಯತ್ನಿಸಲಾಗಿದೆ ಎಂದು ಮೂವರಲ್ಲಿ ಒಬ್ಬರು ಬಹಿರಂಗಪಡಿಸಿದ್ದಾರೆ” ಎಂದು ಹೇಳಿದ್ದಾರೆ.
“ಈ ಶಾಸಕರನ್ನು ಖರೀದಿಸಲು ₹ 1,075 ಕೋಟಿ ವ್ಯವಸ್ಥೆ ಮಾಡಿದ್ದಾರೆಂಬುದು ಸದ್ಯದ ಪ್ರಶ್ನೆ, ಇದು ಯಾರ ಹಣ ಮತ್ತು ಎಲ್ಲಿಂದ ಬಂತು?” ಎಂದು ಸಿಸೋಡಿಯಾ ಪ್ರಶ್ನಿಸಿದ್ದಾರೆ.