ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ಧ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ನಟ-ರಾಜಕಾರಣಿ ರಜನಿಕಾಂತ್ ಅಭಿನಂದಿಸಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು “ಕೃಷ್ಣ ಮತ್ತು ಅರ್ಜುನ” ಎಂದು ಶ್ಲಾಘಿಸಿದರು.
“ಮಿಷನ್ ಕಾಶ್ಮೀರಕ್ಕಾಗಿ ಅಮಿತ್ ಶಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಹ್ಯಾಟ್ಸ್ ಆಫ್” ಎಂದು ಚೆನ್ನೈನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಜನಿಕಾಂತ್ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಶ್ರೀಕೃಷ್ಣ ಮತ್ತು ಅರ್ಜುನರಂತೆ ಇದ್ದಾರೆ ಎಂದ ಅವರು ಅವರಲ್ಲಿ “ಕೃಷ್ಣ ಯಾರು ಮತ್ತು ಅರ್ಜುನ ಯಾರು ಎಂದು ನಮಗೆ ಗೊತ್ತಿಲ್ಲ ಎಂದಿದ್ದಾರೆ. ರಜಿನಿಕಾಂತ್ ಸದ್ಯಕ್ಕೆ ತಮಿಳುನಾಡಿನಲ್ಲಿ 2021 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ರಾಜಕೀಯ ಪಕ್ಷವನ್ನು ಸಂಘಟಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಕಾಶ್ಮೀರದ ಕುರಿತ ಕ್ರಮಕ್ಕೆ ತಮಿಳುನಾಡು ರಾಜ್ಯದಲ್ಲಿ ಆಡಳಿತದಲ್ಲಿರುವ AIADMK ಯಿಂದ ಬೆಂಬಲ ದೊರೆತಿದ್ದು, ಇದು ಸಂಸತ್ತಿನಲ್ಲಿ ಮಸೂದೆಗಳನ್ನು ಬೆಂಬಲಿಸಿದೆ, ಡಿಎಂಕೆ ಪಕ್ಷ ವಿರೋಧಿಸಿದೆ.
ಆದರೆ ತಮಿಳುನಾಡಿನ ಮತ್ತೊಬ್ಬ ನಟ ಕಮಲ್ ಹಾಸನ್ ಕೇಂದ್ರದ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ. ಕಳೆದ ವರ್ಷ ತಮಿಳುನಾಡಿನಲ್ಲಿ ತಮ್ಮ ಪಕ್ಷದ ಮಕ್ಕಲ್ ನೀಧಿ ಮಯ್ಯುಂ (ಎಂಎನ್ಎಂ) ಅನ್ನು ಪ್ರಾರಂಭಿಸಿದ ಕಮಲ್ ಹಾಸನ್, ಸರ್ಕಾರದ ಈ ಕ್ರಮವು “ಪ್ರಜಾಪ್ರಭುತ್ವದ ಮೇಲಿನ ಸ್ಪಷ್ಟ ಆಕ್ರಮಣ” ಎಂದು ಹೇಳಿದ್ದಾರೆ.
“ಇದು ಅತ್ಯಂತ ನಿರಂಕುಶಾಧಿಕಾರಿ ಕ್ರಮವಾಗಿದೆ. 370 ಮತ್ತು 35 ಎ ವಿಧಿಗಳು ಒಂದು ಮೂಲವನ್ನು ಹೊಂದಿವೆ. ಯಾವುದೇ ಬದಲಾವಣೆಯು ಸಮಾಲೋಚನಾ ರೀತಿಯಲ್ಲಿರಬೇಕು” ಎಂದು ಕಮಲ್ ಹಾಸನ್ ಹೇಳಿದ್ದಾರೆ.