Homeಚಳವಳಿಮೋದಿ ತನಿಖೆ ಮಾಡಿಸಲು ಸಿದ್ಧರೇ? ಪ್ರಧಾನಿಗೆ ಬಹಿರಂಗ ಸವಾಲು ಹಾಕಿದ ಮೇಧಾ ಪಾಟ್ಕರ್

ಮೋದಿ ತನಿಖೆ ಮಾಡಿಸಲು ಸಿದ್ಧರೇ? ಪ್ರಧಾನಿಗೆ ಬಹಿರಂಗ ಸವಾಲು ಹಾಕಿದ ಮೇಧಾ ಪಾಟ್ಕರ್

ಸರ್ದಾರ ಸರೋವರ ಅಣೆಕಟ್ಟಿನ ಕಾಮಗಾರಿಯಲ್ಲಿ ಆಗಿರುವ ಭ್ರಷ್ಟಾಚಾರದ ಕುರಿತು ಪ್ರಧಾನಮಂತ್ರಿಗಳಿಗೆ ನರ್ಮದಾ ಬಚಾವೋ ಆಂದೋಲನದ ಪರವಾಗಿ ಹೋರಾಟಗಾರ್ತಿ ಮೇಧಾ ಪಾಟ್ಕರ್‍ ಅವರ ಬಹಿರಂಗ ಪತ್ರ

- Advertisement -
- Advertisement -

ಮಹಾರಾಷ್ಟ್ರದ ಮೇಧಾ ವಿದ್ಯಾರ್ಥಿ ದೆಸೆಯಲ್ಲಿಯೇ ಸಾಮಾಜಿಕ ಚಳುವಳಿಗಳ ಬಗ್ಗೆ ಆಕರ್ಷಿತರಾದವರು. ‘ಟಾಟಾ ಇನ್ಸ್‍ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್’ (TISS) ನಲ್ಲಿ ಓದುವಾಗಲೇ ಹೋರಾಟದ ಕಣಕ್ಕಿಳಿದು, ಅತ್ಯಂತ ಶೋಷಿತ ಸಮುದಾಯಗಳೊಂದಿಗೆ, ಆದಿವಾಸಿಗಳು, ಸ್ಲಂನಿವಾಸಿಗಳು ಮತ್ತು ಇನ್ನಿತರ ಅಂಚಿಗೊತ್ತಲ್ಪಟ್ಟವರೊಂದಿಗೆ ಸೇರಿ ಅವರ ಹಕ್ಕುಗಳಿಗಾಗಿ ಹೋರಾಟಗಳಲ್ಲಿ ತೊಡಗಿದವರು.ಜನರ ಬದುಕು ಮತ್ತು ಪರಿಸರವನ್ನು ನಾಶಗೊಳಿಸಿ ನರ್ಮದಾ ಕಣಿವೆಯಲ್ಲಿ ಕಟ್ಟಲಾಗಿರುವ ಸರ್ದಾರ್ ಸರೋವರ ಆಣೆಕಟ್ಟಿನ ವಿರುದ್ಧ ಕಳೆದ 30 ವರ್ಷಗಳಿಂದ ಅಲ್ಲಿನ ಆದಿವಾಸಿಗಳ ಪರವಾಗಿ ‘ನರ್ಮದಾ ಬಚಾವ್ ಆಂದೋಲನ’ ಕಟ್ಟಿಕೊಂಡು ಸಂಘರ್ಷನಿರತರಾಗಿದ್ದಾರೆ. ನ್ಯಾಷನಲ್ ಅಲೆಯನ್ಸ್ ಆಫ್ ಪೀಪಲ್ಸ್ ಮೂವ್‌ಮೆಂಟ್ಸ್‌ನ ರಚನೆಯಲ್ಲೂ ಪಾತ್ರವಹಿಸಿದವರು. ಈ ಲೇಖನವನ್ನು ಮಲ್ಲಿಗೆ ಸಿರಿಮನೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ

ಮಾನ್ಯ ಪ್ರಧಾನಮಂತ್ರಿಯವರೇ,

ನಿಮಗೆ ಮತ್ತೊಮ್ಮೆ ಪತ್ರ ಬರೆಯುತ್ತಿದ್ದೇನೆ. ನೀವು ಅಥವಾ ನಿಮ್ಮ ಪಿಎಂಓ ಕಛೇರಿ ನಮ್ಮ ಪತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಆದ್ದರಿಂದಲೇ ಅವುಗಳಿಗೆ ಉತ್ತರಿಸುವ ತೊಂದರೆ ತೆಗೆದುಕೊಳ್ಳುವುದಿಲ್ಲ ಎಂಬುದು ಗೊತ್ತಿದ್ದರೂ, ಇನ್ನೊಮ್ಮೆ ನಿಮಗೆ ಪತ್ರ ಬರೆಯಬೇಕಾದ ಸಂದರ್ಭ ಬಂದಿದೆ. ಈ ಪತ್ರದ ಉದ್ದೇಶ ನರ್ಮದಾ ಕಣಿವೆಯ ಜನಸಾಮಾನ್ಯರ ದುಸ್ಥಿತಿಯನ್ನು ಮತ್ತು ಅಲ್ಲಿನ ವಾಸ್ತವಿಕತೆಯನ್ನು ನಿಮ್ಮ ಗಮನಕ್ಕೆ ತರುವುದು. ಏಕೆಂದರೆ, ಹಾಗೆ ಮಾಡದಿದ್ದರೆ ಮುಂದೆ ನೀವು ನಮ್ಮ ಮೇಲೆಯೇ ಆರೋಪ ಹೊರಿಸಬಹುದು- “ನರ್ಮದಾ ಕಣಿವೆಯ ಸಂತ್ರಸ್ತಲಾಗಲಿರುವ ಬಡಜನರ ನೈಜ ಪರಿಸ್ಥಿತಿಯನ್ನು ನಾವುಗಳು ನಿಮಗೆ ಸರಿಯಾಗಿ ತಿಳಿಸಲಿಲ್ಲ ಮತ್ತು ಮಾಹಿತಿಯ ಕೊರತೆಯಿಂದ ನಮ್ಮ ಸರ್ಕಾರ ಸಾವಿರಾರು ಆದಿವಾಸಿಗಳನ್ನೂ, ಬಡರೈತರನ್ನೂ ಯಾವುದೇ ಪುನರ್ವಸತಿಯನ್ನೂ ಕೊಡದೆ ಮುಳುಗಿಸಿಬಿಟ್ಟಿತು”- ಎಂದು. ಆ ಆರೋಪ ಬರಬಾರದೆಂದು ಈ ಪತ್ರ. ನನ್ನ ಮಾತುಗಳು ನಿಮಗೆ ಕಠೋರವೆನ್ನಿಸಬಹುದು; ಆದರೆ ನನ್ನ ಉದ್ದೇಶದಲ್ಲಿ ತಪ್ಪಿಲ್ಲ!

ಮೋದಿಯವರೇ, ನೀವು ಭಾರತದ ಪ್ರಜಾತಾಂತ್ರಿಕ ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿ ಬಂದ ಪ್ರಧಾನಮಂತ್ರಿಯಾಗಿದ್ದೀರಿ. ಆದ್ದರಿಂದ, ನರ್ಮದಾ ಕಣಿವೆಯ ಜನರ ಮಾತುಗಳನ್ನು ನಿಮಗೆ ತಲುಪಿಸುವುದಕ್ಕಾಗಿ ನಿಮ್ಮ ಭೇಟಿಗೆ ಸಮಯ ನಿಗದಿಪಡಿಸಿ ತಿಳಿಸಲು ಕೋರಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ಈ ವಿಚಾರದಲ್ಲಿ ನಿಮ್ಮ ‘ಮನದ ಮಾತು (ಮನ್ ಕಿ ಬಾತ್)’ ಏನೆಂಬುದನ್ನು ನನಗೆ ಈಗಲೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಇಷ್ಟಂತೂ ಅರ್ಥವಾಯಿತು- ನಿಮ್ಮನ್ನು ಬಿಟ್ಟು ಈ ಹಿಂದಿನ ಎಲ್ಲ ಪ್ರಧಾನಮಂತ್ರಿಗಳ ಜೊತೆ ಮಾತುಕತೆ ಸಾಧ್ಯವಾಗಿತ್ತು, ಶ್ರೀ ವಾಜಪೇಯಿಯವರನ್ನೂ ಒಳಗೊಂಡು; ಆದರೆ ನಿಮ್ಮೊಂದಿಗೆ ಅದು ಸಾಧ್ಯವಿಲ್ಲ ಎಂದು. ಒಂದು ವೇಳೆ ನೀವು ನಮ್ಮ ಮಾತುಗಳನ್ನು ಕೇಳಿದ್ದರೆ, ನೀವು ಘೋಷಿಸಲು ಹೊರಟಿರುವ ಸರ್ದಾರ್ ಸರೋವರ ಅಣೆಕಟ್ಟಿನ ಯಶಸ್ಸಿನ ಬಾಜಾಬಜಂತ್ರಿ ಢೋಲು ವಾದ್ಯಗಳ ನಾದದ ಬದಲು, ಅಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಳ್ಳುತ್ತಿರುವ ನರ್ಮದಾ ಕಣಿವೆಯ ಮೂಲನಿವಾಸಿಗಳ ಆಕ್ರಂದನ ನಿಮ್ಮ ಕಿವಿತುಂಬುವ ಸಾಧ್ಯತೆಯಿತ್ತು. ಅಲ್ಲಿ ಮುಳುಗಡೆಯಾಗುತ್ತಿರುವ ಪ್ರತಿ ಮರ, ಪ್ರತಿ ಚದರ ಕಾಡು, ನರ್ಮದಾ ನದಿಯ ವಾಹನವಾದ ಮೊಸಳೆಗಳು, ಅಲ್ಲಿನ ಪ್ರತಿ ಜೀವಿಜಂತುಗಳು ಮತ್ತು ಅವುಗಳೊಂದಿಗೇನೆ ಪ್ರತಿ ನಿಮಿಷವೂ ಕೂಡಿ ಬದುಕುತ್ತಿರುವ ಆದಿವಾಸಿಗಳ ಧ್ವನಿ ಖಂಡಿತವಾಗಿ ನಿಮಗೆ ಕೇಳಿಬರುತ್ತಿತ್ತು.

ಸರ್ದಾರ್ ವಲ್ಲಭಾಯಿ ಪಟೇಲರ ಪ್ರತಿಮೆಗೆ ಬೆಟ್ಟಗುಡಗಳಲ್ಲಿ ಬದುಕುವ ನಾಲ್ಕು ಆದಿವಾಸಿ ಮಹಿಳೆಯರಿಂದ ಹಾರ ಹಾಕಿಸಿ ತೆಗೆಯಲಾದ ಫೋಟೋ ಇತ್ತೀಚೆಗೆ ನಮ್ಮ ಕಣ್ಣಿಗೆ ಬಿತ್ತು. ಹಾಗೆಯೇ, ಸರ್ದಾರ್ ಸರೋವರ ಅಣೆಕಟ್ಟಿನ ಗೇಟುಗಳಿಂದ ಹರಿಯುತ್ತಿರುವ ನೀರನ್ನು ಅದು ಪ್ರಾಕೃತಿಕ ಜಲಪಾತವೇನೋ ಎಂಬಂತೆ ‘ಬಹಳ ಸುಂದರವಾಗಿದೆ’ ಎಂದು ಹೊಗಳುತ್ತಾ ನೀವು ಆಡಿದ ಮಾತುಗಳೂ ಕಿವಿಗೆ ಬಿದ್ದವು. ಆದರೆ, ಇದೇ ಅಣೆಕಟ್ಟಿನ ಗೇಟುಗಳನ್ನು ಪೂರ್ಣ ತೆರೆದಾಗ ಸದ್ಯದಲ್ಲೇ ಮುಳುಗಡೆಯಾಗಲಿರುವ ಉತ್ತರ ಮತ್ತು ದತ್ತಾತ್ರೇಯ ಕ್ಷೇತ್ರದ ಮೇಲ್ಭಾಗದ ಗುಜರಾತ್, ಪಶ್ಚಿಮ ಮಹಾರಾಷ್ಟ್ರ, ಮಧ್ಯಪ್ರದೇಶದ ಒಂದು ಭಾಗ-ಇವೇ ಮೊದಲಾದೆಡೆಯ ಇಲ್ಲಿನ ಮೂಲನಿವಾಸಿಗಳ ಬದುಕು ಹೇಗಿರಬಹುದು? ಇದನ್ನು ವರ್ಣಿಸಿ ನೀವಾಡಿದ ಯಾವ ಮಾತುಗಳೂ ನಮಗೆ ಕೇಳಿಬರಲಿಲ್ಲ. ಅದು ನಿಮ್ಮ ಕಣ್ಣಿಗೆ ಕಾಣಲೆಂದೇ ನಾನು ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ.

ಈ ಬಾರಿ ದೆಹಲಿಯ ಗದ್ದುಗೆ ಹಿಡಿದ 17 ದಿನಗಳೊಳಗೆ ನೀವು ಸರ್ದಾರ್ ಸರೋವರ ಆಣೆಕಟ್ಟಿನ ಎತ್ತರವನ್ನು ಅದರ ಅತ್ಯಧಿಕ ಮಟ್ಟಕ್ಕೆ ಅಂದರೆ 308 ಮೀಟರ್-ಮುಟ್ಟಿಸುವ ನಿರ್ಧಾರ ಕೈಗೊಂಡಿರಿ. 2006ರಲ್ಲಿ ಸುಪ್ರೀಂ ಕೋರ್ಟ್ ಮನಮೋಹನ್ ಸಿಂಗ್ ಸರ್ಕಾರಕ್ಕೆ ‘ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವವರೆಗೂ ನಿಲ್ಲಿಸಬೇಕು’ ಎಂದು ಈ ಕೆಲಸಕ್ಕೆ ತಡೆಯಾಜ್ಞೆ ನೀಡಿದ್ದರೂ, ಅಷ್ಟೇಕೆ ನರ್ಮದಾ ಟ್ರಿಬ್ಯೂನಲ್ ಆದೇಶದ ಅವಕಾಶವನ್ನೂ ಕಾಲಡಿ ಹಾಕಿ ತುಳಿದು, ನೀವು ಅಣೆಕಟ್ಟಿನ ಎತ್ತರ ಹೆಚ್ಚಿಸಿ ಗೇಟು ಅಳವಡಿಸುವ ಕೆಲಸ ಮುಗಿಸಿಯೇ ಬಿಟ್ಟಿರಿ. ಅಷ್ಟು ಮಾತ್ರವಲ್ಲ, ಇತ್ತೀಚಿನ ನಿಮ್ಮ ಸಂಸದ್ ಭವನದ ಭಾಷಣದಲ್ಲಿ ಅದರ ಶ್ರೇಯಸ್ಸನ್ನೂ ಕೂಡಾ ನಿಮ್ಮದೇ ಎಂದು ಹೇಳಿದ್ದೀರಿ.

2005ರ ಚುನಾವಣೆಗಳ ಸಂದರ್ಭದಲ್ಲಿ ಸರ್ದಾರ್ ಸರೋವರ ಅಣೆಕಟ್ಟನ್ನು 110 ಅಡಿಗಳವರೆಗೇರಿಸಲು ಬೇಕಾದ ತಮ್ಮ ರಾಜ್ಯದ ಭಾಗದ ಜಮೀನನ್ನು ಮಧ್ಯಪ್ರದೇಶ ಸರ್ಕಾರ ಬಿಟ್ಟುಕೊಟ್ಟಿದ್ದೇ ಆದಲ್ಲಿ, ಇಡೀ ಮಧ್ಯಪ್ರದೇಶವನ್ನು ವಿದ್ಯುತ್ತಿನ ಬೆಳಕಿನಿಂದ ಫಳಫಳ ಹೊಳೆಸುವ ವಾಗ್ದಾನವನ್ನು ತಾವು ಮಾಡಿದ್ದನ್ನು ಮರೆತೇ ಬಿಟ್ಟೀದ್ದೀರೇನೋ…….! ಅಣೆಕಟ್ಟಿನ ಎತ್ತರ 110ರಿಂದ 120 ಮೀಟರುಗಳಿಗೆ, ಮತ್ತು ಅಲ್ಲಿಂದ ಹಲವು ಪಟ್ಟು ಹೆಚ್ಚುತ್ತಲೇ ಹೋಯಿತೇ ಹೊರತು, ವಾಸ್ತವದಲ್ಲಿ ಈ ಅಣೆಕಟ್ಟಿಗಾಗಿ ಹೆಚ್ಚು ‘ತ್ಯಾಗ’ ಮಾಡಿದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳೆರಡಕ್ಕೂ ತಮ್ಮ ಪಾಲಿನ ವಿದ್ಯುತ್ ಈ ತನಕ ಸಿಗಲಿಲ್ಲ. ನೀರೂ ಸಿಗಲಿಲ್ಲ. ಗುಜರಾತ್ ರಾಜ್ಯ ಈ ಯೋಜನೆಯಲ್ಲಿ ತನ್ನ ಪ್ರಾಥಮಿಕ ಪಾತ್ರವನ್ನು ಮುಂದುಮಾಡಿಕೊಂಡು ನೆರೆಹೊರೆ ರಾಜ್ಯಗಳಿಗೆ ಒಂದು ರೀತಿಯಲ್ಲಿ ಮೋಸವನ್ನೇ ಮಾಡಿತು.

ಇದು ಸರ್ಕಾರದ ಮಟ್ಟದಲ್ಲೇ ನಡೆದ ಭ್ರಷ್ಟಾಚಾರವಲ್ಲವೇ? ಅದೇ ರೀತಿ ನಿರಾಶ್ರಿತರಾದವರ ಅಂಕಿ-ಸಂಖ್ಯೆ ಮತ್ತು ಅವರಿಗೆ ನೀಡಬೇಕಾದ ಪುನರ್ವಸತಿ-ಪರಿಹಾರದ ಮೊತ್ತದ ಬಗ್ಗೆಯೂ ಎಲ್ಲ ರಾಜ್ಯಗಳ ಅಧಿಕಾರಿಗಳು ತಪ್ಪು ತಪ್ಪು ಮಾಹಿತಿಯನ್ನೇ ನೀಡುತ್ತಾ ಹೋದರು. ಈ ಬಗ್ಗೆ ಸತತವಾಗಿ ನಿಮ್ಮದೇ ಸರ್ಕಾರದ ಭಾಗವಾಗಿರುವ ಬೇರೆ ಬೇರೆ ಮಂತ್ರಿಗಳು ಹಲವು ಸಂದರ್ಭಗಳಲ್ಲಿ ಮಾತನಾಡಿದರೂ ಇದನ್ನೆಲ್ಲ ತಡೆಯಲು ಏನೂ ಕ್ರಮ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಬರೆದ ಪತ್ರಕ್ಕೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆಯ ಉತ್ತರ ಅತ್ಯಂತ ಆಘಾತಕರವಾಗಿತ್ತು. 2014ರಲ್ಲಾಗಲೇ ಅಣೆಕಟ್ಟಿನ ಸಂಪೂರ್ಣ ಮಟ್ಟಕ್ಕೆ ನೀರು ತುಂಬಿದೆ ಮತ್ತು ಅದರಿಂದ ಸಂತ್ರಸ್ತರಾಗುವ ಎಲ್ಲರಿಗೂ ಪರಿಹಾರ-ಪುನರ್ವಸತಿಯನ್ನು ಕಲ್ಪಿಸಿಯೂ ಆಗಿದೆ ಎಂದು ಇಲಾಖೆ ಉತ್ತರ ನೀಡಿದೆ. ಇಲಾಖೆಗಿರುವ ಇವೇ ತಪ್ಪು ಅಂಕಿ- ಅಂಶ ಆಧಾರಿತ ಮಾಹಿತಿಯನ್ನೇ ಸರ್ವೋಚ್ಛ ನ್ಯಾಯಾಲಯಕ್ಕೂ ನೀಡುವ ಮೂಲಕ ಅದನ್ನೂ ಕೂಡಾ ದಿಕ್ಕುತಪ್ಪಿಸಲಾಗಿದೆ.

ಮಧ್ಯಪ್ರದೇಶ ಸರ್ಕಾರವು ಪುನರ್ವಸತಿಯಲ್ಲಿ ಜಮೀನಿನ ಬದಲಿಗೆ ಅಕೌಂಟಿಗೆ ನಗದು ಹಾಕುವ ಯೋಜನೆ ಘೋಷಿಸಿದ ಕೂಡಲೇ, ದಿಢೀರನೇ 1600 ಸುಳ್ಳು ಫಲಾನುಭವಿಗಳ ರಿಜಿಸ್ಟ್ರೇಷನ್ ಅಧಿಕಾರಿಗಳ ಶಾಮೀಲುದಾರಿಕೆಯೊಂದಿಗೇ ನಡೆಯಿತು. ಈಗ ಅವರೆಲ್ಲರಿಗೂ ಪರಿಹಾರ ಕೊಡಬೇಕಾಗಿ ಬಂದುದಕ್ಕೆ ಕಾರಣರಾದ ಭ್ರಷ್ಟರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬಲ್ಲಿರೇ?

ಇಂತಹ ಭ್ರಷ್ಟಾಚಾರವೇ ಪುನರ್ವಸತಿಯ ಪ್ರತಿಯೊಂದು ಹೆಜ್ಜೆಯಲ್ಲಿ ಪ್ರತಿಯೊಂದು ನಿರ್ಮಾಣದಲ್ಲಿ ಅತಿದೊಡ್ಡ ಅಡ್ಡಿಯಾಗಿ ಪರಿವರ್ತನೆಯಾಗಿದೆ. ಬೇರೆಲ್ಲರ ಭ್ರಷ್ಟಾಚಾರದ ಬಗ್ಗೆ ದೊಡ್ಡ ಮಾತುಗಳಾಡುವ ನೀವು, ನಿಮ್ಮದೇ ಕಣ್ಣಳತೆಯಲ್ಲಿ ನಡೆದಿರುವ ಈ ಬ್ರಹ್ಮಾಂಡ ಭ್ರಷ್ಟತೆಯ ಕುರಿತು ಯಾಕೆ ಎಲ್ಲೂ ಪ್ರಸ್ತಾಪವನ್ನೂ ಮಾಡಿಲ್ಲ? ಈ ಬಗ್ಗೆ ತನಿಖೆ ನಡೆಸಲು ನೀವು ಆದೇಶ ನೀಡಬಲ್ಲಿರೇ? ನೀಡಿದ್ದೇ ಆದರೆ, ಸಾಕ್ಷ್ಯಾಧಾರ ಸಮೇತ ನಾವು ಅವನ್ನು ಸಾಬೀತುಮಾಡಲು ಸಿದ್ಧರಿದ್ದೇವೆ.

ಇಡೀ ಯೋಜನೆಯಲ್ಲಿ ಇಂತಹ ಭಾರೀ ಹುಳುಕುಗಳಿವೆ. ಸ್ವಲ್ಪ ತಡೆಯಿರಿ ಪ್ರಧಾನಮಂತ್ರಿಗಳೇ, ಬಡವರ ಬದುಕಿನ ಜೊತೆಗೆ ಈ ಎಲ್ಲ ದಾಖಲೆಗಳನ್ನೂ ಮುಳುಗಿಸಿಬಿಡಬೇಡಿ. ಪುನರ್ವಸತಿ ಪೂರ್ಣಪ್ರಮಾಣದಲ್ಲಿ ಆಗುವವರೆಗೆ ಅಣೆಕಟ್ಟಿನಲ್ಲಿ ಪೂರ್ತಿ ನೀರು ತುಂಬಿಸಬೇಡಿ. ಹೀಗೆ ನಿಮ್ಮನ್ನು ಒತ್ತಾಯಿಸುತ್ತಾ ಮಹಾರಾಷ್ಟ್ರ ಮಧ್ಯಪ್ರದೇಶಗಳಲ್ಲಿ ಮಾತ್ರವಲ್ಲ, ನಿಮ್ಮ ಸ್ವಂತ ರಾಜ್ಯ ಗುಜರಾತಿನಲ್ಲೂ ಆದಿವಾಸಿಗಳು ಹೋರಾಟದಲ್ಲಿ ತೊಡಗಿದ್ದಾರೆ. ಅದನ್ನೂ ಸ್ವಲ್ಪ ಕೇಳಿಸಿಕೊಳ್ಳಿ. ಇದಿಷ್ಟೇ ಹೇಳಲಿಕ್ಕಿರುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...